ಒಂದೆರಡು ವೈಯಕ್ತಿಕ ಕಾರಣಗಳಿಗೆ ಈಗ ಮನಸ್ಸು ಒಂದಷ್ಟು ಉಲ್ಲಸಿತವಾಗಿದೆ. ಅದೇ ಮನಸ್ಥಿತಿಯಲ್ಲಿ, ನಾನು ಆಗಾಗ ಹಾಜರಾಕುವ (ಕನ್ನಡದ ಬಹುತೇಕ) ಬ್ಲಾಗುಗಳಲ್ಲಿ ಅಲ್ಲೊಂದು ಇಲ್ಲೊಂದು, ಸರಿಯೆನಿಸಿದ ಕಡೆ ಕಾಮೆಂಟು ಬಿಡಬೇಕು ಹಾಗೂ ಒಂದಷ್ಟು ಸಹಬರಹಗಾರರನ್ನು ಪರಿಚಯ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇನೆ. ಇದನ್ನು ಕೇವಲ ಒಂದು ತಿಂಗಳು ಮಾತ್ರ ಮಾಡಬೇಕು, ಮುಂದಕ್ಕೆ ಶಿವನಿಚ್ಚೆ ಎಂದುಕೊಂಡಿದ್ದೇನೆ.
ನನ್ನ ಬ್ಲಾಗು ಬ್ಲಾಗ್ಸ್ಪಾಟ್ನಲ್ಲಿರುವುದರಿಂದ ಕಾಮೆಂಟು ಹಾಕುವ ಕಡೆಯಲ್ಲ ಲಾಗಿನ್ ಆಗಿ ಅಧಿಕೃತವಾಗಿಯೆ ಬಿಡಬಹುದು. ಆದರೆ, ವರ್ಡ್ಪ್ರೆಸ್ನಲ್ಲಿ ಇನ್ನೂ ಲಾಗಿನ್ ಕ್ರಿಯೇಟ್ ಮಾಡಿಲ್ಲ. ಮಾಡಬೇಕು. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಕೆಲವು ಪುಣ್ಯಾತ್ಮರು ಯಾರು ಯಾರೊ ಹೆಸರಿನಲ್ಲಿ ಎಲ್ಲೆಲ್ಲಿಯೊ ಕಾಮೆಂಟು ಬಿಟ್ಟುಬಿಡುತ್ತಾರೆ. (ಇದನ್ನು ಕಳೆದ ವರ್ಷದ ಇಂಟರ್ನೆಟ್ನಲ್ಲಿ ನವಗ್ರಹ ಕಾಟ!!! ಲೇಖನದಲ್ಲಿ ಪ್ರಸ್ತಾಪಿಸಿದ್ದೆ.) ಒಂದೆರಡು ಕಡೆ ನನ್ನದೆ ಹೆಸರಿನಲ್ಲಿ, ಕೆಲವೊಮ್ಮೆ ಅಧಿಕೃತ ಎನ್ನುವಂತೆ ತೋರಿಸಲು ಸೂಕ್ತ ಹೈಪರ್ಲಿಂಕ್ ಹಾಕಿ ಬರೆದಿದ್ದಾರೆ. ಇದರಿಂದ ತಲೆಹೋಗುವುದು ಏನೂ ಇಲ್ಲವಾದರೂ, ಆಗಾಗ ಆಗುವಂತೆ ಯಾರಾದರೂ ಕೇಳಿದರೆ ಬರೆದದ್ದು ನಾನಲ್ಲ ಎನ್ನುವ ಇಲ್ಲದ ತರಲೆ. ಈಗ ಆ ತರಲೆ ಸ್ವಲ್ಪ ಜಾಸ್ತಿಯೇ ಆಗಬಹುದು, ಆಗದೆಯೂ ಇರಬಹುದು. ಆದರೂ, ಕಾಮೆಂಟು ಬಿಡುವ ಕಡೆಯೆಲ್ಲ ಲಾಗಿನ್ ಆಗಿಯೇ ಕಾಮೆಂಟು ಬಿಡಬೇಕು.
ಮೊದಲ ಕಾಮೆಂಟನ್ನು ಸುಪ್ರೀತ್ ಎನ್ನುವ ಹುಡುಗ ಬರೆಯುವ "ಒಂಟಿ ಹಕ್ಕಿಯ ಹಾಡು" ಬ್ಲಾಗಿನಲ್ಲಿ ಬಿಡಬೇಕು ಎಂದುಕೊಂಡಿದ್ದೇನೆ. ಕಳೆದ ಐದಾರು ತಿಂಗಳಿನಿಂದ ಆಗೊಮ್ಮೆ ಈಗೊಮ್ಮೆ ಈ ಯುವಕನ ಬ್ಲಾಗ್ ನೋಡುತ್ತಿರುವ ನನಗೆ ಈ ಯುವಕನ ಚಿಂತನೆಯ transition ಕುತೂಹಲಕರವಾಗಿ ಕಂಡಿದೆ. ತನ್ನ ದಾರಿ ಮತ್ತು ಸ್ವತಂತ್ರ ಯೋಚನಾಕ್ರಮ ಕಂಡುಕೊಳ್ಳುವ ನಿಟ್ಟಿನಲ್ಲಿರುವ ಈ ತಮ್ಮನ ಪೊರೆಕಳಚಿಕೊಳ್ಳುವಿಕೆ ಹಿಂದೆ ನಾನೊಮ್ಮೆ ಬರೆದಿದ್ದ ಲೇಖನವನ್ನು ನೆನಪಿಸುತ್ತದೆ. ಅದು ಗಿರೀಶ ಮಟ್ಟೆಣ್ಣವರ್ ಎಂಬಾತನ ಬಗ್ಗೆ ಬರೆದಿದ್ದ "ದೇಶಭಕ್ತರು ಬಾಂಬ್ ಹಿಡಿಯಲೇಬೇಕೆ?" ಲೇಖನ. ಅದರಲ್ಲಿ ನಾವು ಚಂದಮಾಮ-ಸುಧಾ-ಆನಕೃ-ಲಂಕೇಶ್-ಭೈರಪ್ಪ-ಲಂಕೇಶ್-ಕಾರಂತ-ಕುವೆಂಪು ಹಾದಿಯಲ್ಲಿ transition ಆಗುವ ಬಗ್ಗೆ ಬರೆದಿದ್ದೆ. ಚಿಂತನೆಯ ಜಂಗಮ-ಸ್ಥಾವರಗಳ ಬಗೆಗಿನ ಆ ಲೇಖನ ಈ ಹುಡುಗನ ಈಗಿರುವ ಜಂಗಮ ಮನೋಸ್ಥಿತಿಯನ್ನು ನೆನಪಿಸುತ್ತಿದೆ.
"ಆದರೆ ಜೀವನ ಒಂದು ಜಂಗಮ ಕ್ರಿಯೆ. ವಯಸ್ಸು ಬೆಳೆದಂತೆ, ಓದು ವಿಸ್ತಾರವಾದಂತೆ, ಅನುಭವ ಪಕ್ವಗೊಂಡಂತೆ, ಗೆಲುವು ಮತ್ತು ಸೋಲುಗಳು ನೆಕ್ಕಿದಂತೆ, ಸತ್ಯ ಮತ್ತು ಆದರ್ಶವಂತರ ಸೋಲೂ ಕಣ್ಣಿಗೆ ಕಾಣಿಸಬೇಕು. ಇಲ್ಲದಿದ್ದಲ್ಲಿ ಬುದ್ಧಿ ಎಲ್ಲೋ ನಿಂತ ನೀರಾಗಿದೆ ಎಂದೇ ಅರ್ಥ. ಚಂದಮಾಮದ ಕಥೆಗಳನ್ನು ಬಾಲ್ಯದ ಮೂರ್ನಾಲ್ಕು ವರ್ಷಗಳು ಓದಿದ ನಂತರ ಸುಧಾ, ತರಂಗ, ರಾಗಸಂಗಮಗಳಿಗೆ ಬೆಳೆಯಬೇಕು. ಯಂಡಮೂರಿ, ಪತ್ತೇದಾರಿಗಳ ನಂತರ ಆನಕೃ, ತರಾಸು, ಭೈರಪ್ಪ, ಲಂಕೇಶ್, ಕಾರಂತ, ಕುವೆಂಪುಗಳಾಚೆ ವಿಸ್ತರಿಸುತ್ತಿರಬೇಕು. ಭಗತ್ಸಿಂಗ್ ಇಷ್ಟವಾಗಬೇಕು. ಆತನಿಗೆ ಗಲ್ಲು ತಪ್ಪಿಸದ ಗಾಂಧಿಯೂ ಇಷ್ಟವಾಗಬೇಕು. ಗಾಂಧಿಯಾಚೆಯೂ ದೃಷ್ಟಿ ನೆಡಬೇಕು. ಹರಿಯುವ ನೀರಿಗೆ ದೋಷವಿಲ್ಲ. ಈ ಪಯಣದಲ್ಲಿ ಯಾವುದೇ ಸ್ಥಳದಲ್ಲಿ ಗೂಟ ಬಡಿದುಕೊಂಡು ನಿಂತರೆ ಅದೇ ಸ್ಥಾವರ. ಆಗ ಬೆಳವಣಿಗೆ ನಿಂತ ನೀರಾಗಿ ಗಬ್ಬೇಳುತ್ತದೆ. ವ್ಯಕ್ತಿ, ದೇಶ ಹಿಂದುಳಿಯುತ್ತದೆ. ಮುಂದುವರಿದವರ ಅನಾಸ್ಥೆಯಲ್ಲಿ, ಮರುಕದಲ್ಲಿ, ಹೀಯಾಳಿಕೆಯಲ್ಲಿ, ಶೋಷಣೆಯಲ್ಲಿ ಕಾಲ ಗತಿಸುತ್ತದೆ."
(ಈ ಲೇಖನ ದಟ್ಸ್ಕನ್ನಡ.ಕಾಮ್ ನಲ್ಲಿ ಪ್ರಕಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ಆ ವೆಬ್ಸೈಟಿನಲ್ಲಾಗುತ್ತಿರುವ ಟೆಕ್ನಿಕಲ್ ಬದಲಾವಣೆಗಳಿಂದಾಗಿ ಇರಬಹುದು, ಅಲ್ಲಿ ಈ ಮೊದಲಿದ್ದ ಅನೇಕ ಲಿಂಕುಗಳು ಕೆಲಸ ಮಾಡುತ್ತಿಲ್ಲ. ಅದೇ ಕಾರಣಕ್ಕೆ ಈ ಮೇಲಿನ ಲೇಖನವನ್ನು ಇಲ್ಲಿಯೇ ಬ್ಲಾಗಿಗೆ ಸೇರಿಸಿದ್ದೇನೆ. http://amerikadimdaravi.blogspot.com/2003/11/blog-post.html)
ಹಾಗೆಯೆ, ಈ ಒಂದು ತಿಂಗಳಿನ ಸಕ್ರಿಯತೆ ಒಂದಷ್ಟು ಬಾಹ್ಯ ಮತ್ತು ಆಂತರಿಕ ಸಂವಾದಕ್ಕೆ ಹಾಗೂ ಒಂದಷ್ಟು ಹೊಸಪರಿಚಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದುಕೊಳ್ಳುತ್ತೇನೆ. ನೋಡೋಣ...
ರವಿಯವರೇ,
ReplyDeleteನಿಮ್ಮ ದೊಡ್ಡ ಮನಸ್ಸಿಗೆ, ಹೃದಯ ವೈಶಾಲ್ಯಕ್ಕೆ ನಾನು ಮೂಕ! ಒಂಟಿಯಾಗಿ ಹಾಡಿಕೊಂಡಿದ್ದ ಹಕ್ಕಿಗೆ ಇಷ್ಟರ ಮಟ್ಟಿಗೆ ಮನ್ನಣೆ ಸಿಕ್ಕುತ್ತಿರುವುದು ನಿಜಕ್ಕೂ ಉಲ್ಲಸಿತವಾಗುವಂತೆ ಮಾಡುತ್ತಿದೆ.
ಬ್ಲಾಗಿಗರ ತೋಟದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಮನಸ್ಸು ಮಾಡಿರುವುದು ನಿಜಕ್ಕೂ ಸಂತೋಷದ ಸಂಗತಿ. ನಿಮ್ಮಂತಹ ಹಿರಿಯರ, ಪ್ರಬುದ್ಧರ, ಜವಾಬ್ದಾರಿಯುತ ಬರಹಗಾರರ ಸಲಹೆ, ಆಸರೆ, ಅನುಭವ ನಮ್ಮಂಥ ಕುಡಿಗಳಿಗೆ ಶ್ರೀರಕ್ಷೆ.
ಧನ್ಯವಾದಗಳು