Aug 20, 2006

ಎಲ್ಲಾ ಹೆಣ್ಣು ಮಕ್ಕಳಿಗೂ ಸೈಕಲ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಪತ್ರಿಕೆಯ ಗುಂಗು ಗಂಭೀರವಾಗುವುದಕ್ಕಿಂತ ಮುಂಚೆ, ಸರಿಸುಮಾರು ಒಂದು ವರ್ಷದಿಂದಲೂ ಇನ್ನೊಂದು ಕನಸು ನನ್ನ ತಲೆಯುಲ್ಲಿ ಯಾವಾಗಲೂ ಅಲೆಯುತ್ತಿತ್ತು. ಅದೇನೆಂದರೆ, ನಮ್ಮ ಪಕ್ಕದ ಊರಿನ ಚಂದಾಪುರದ ಪ್ರೌಢಶಾಲೆಯಿಂದ ಪ್ರಾರಂಭಿಸಿ, ಸುತ್ತಮುತ್ತಲಿನ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿನಿಯರಿಗೆ ಸೈಕಲ್ ಕೊಡಿಸುವ ಯೋಜನೆ. ಮುಂದಿನ ಸಲ ಬೆಂಗಳೂರಿಗೆ ಬಂದ ತಕ್ಷಣ, ಊರಿನ ಸುತ್ತಮುತ್ತಲಿನ ಸ್ನೇಹಿತರನ್ನು, ಕಾಳಜಿಯುಳ್ಳ ಸ್ಥಿತಿವಂತರನ್ನು ಸೇರಿಸಿ, ಒಂದೆರಡು ಲಕ್ಷ ವಂತಿಗೆ ಶೇಖರಿಸಿ, ದಿಟ್ಟೆ ಎಂಬ ಮಹಿಳಾಪರ ಸಂಸ್ಥೆ ಪ್ರಾರಂಭಿಸಿ, ಬಾಲೆಗೊಂದು ಬೈಸಿಕಲ್ ಯೋಜನೆ ಆರಂಭಿಸಬೇಕು ಎಂದು ಆರೇಳು ತಿಂಗಳ ಹಿಂದೆಯೇ ಯೋಜನಾ ವರದಿ ಟೈಪ್ ಮಾಡಿ ಇಟ್ಟಿದ್ದೆ. ಯಾರ್‍ಯಾರನ್ನು ಎಲ್ಲೆಲ್ಲಿ ಭೇಟಿಯಾಗಬೇಕು, ಅವರನ್ನೆಲ್ಲ ಹೇಗೆ ಹುರಿದುಂಬಿಸಬೇಕು, ಯಾಕಾಗಿ ಇದನ್ನು ಮಾಡಬೇಕು ಎಂದೆಲ್ಲ ಬರೆದುಕೊಂಡಿದ್ದೆ. ಅದರ ಸಾಧ್ಯತೆಯ ಬಗ್ಗೆ ಸ್ವಲ್ಪ ವಿಶ್ವಾಸ ಮೂಡುತ್ತಿದ್ದಂತೆ ಪತ್ರಿಕೆಯ ಗುಂಗು ತಲೆಗೆ ಹೊಕ್ಕಿತು. ಈ ಸಲ ಬೆಂಗಳೂರಿಗೆ ಹೋದಾಗ ಬೈಸಿಕಲ್ ಮತ್ತು ಪತ್ರಿಕೆ, ಎರಡನ್ನೂ ಮಾಡಬೇಕು ಎಂದು ಮಾರ್ಚ್‌ನಲ್ಲಿಯೇ ತೀರ್ಮಾನಿಸಿದ್ದೆ.

ಆಗ ಬಂತು ಯಡಿಯೂರಪ್ಪನವರ ಬಡ್ಜೆಟ್. ಅದರಲ್ಲಿ ಎಲ್ಲಕ್ಕಿಂತ ನನ್ನ ಗಮನಸೆಳೆದದ್ದು ಬಾಲೆಯರಿಗೆ ಉಚಿತ ಬೈಸಿಕಲ್ ಯೋಜನೆ ಎಂಬುದು ನಿಮಗೆ ಈಗಾಗಲೆ ಗೊತ್ತಾಗಿರಬಹುದು. ಬಹಳ ಖುಷಿಯಾಯಿತು. ಇದು ಕೇವಲ ಬಡತನದ ರೇಖೆಗಿಂತ ಕೆಳಗಿರುವ, ೮ನೇ ತರಗತಿಯ ಬಾಲಕಿಯರಿಗೆ ಮಾತ್ರಎಂಬ ವಿವರಗಳನ್ನು ಓದುತ್ತಿದ್ದಂತೆ ಸ್ವಲ್ಪ ಅತೃಪ್ತಿಯೂ ಆಯಿತು. ಇರಲಿ. ಈಯೋಜನೆಯ ಕಾರ್ಯಸಾಧುಗಳನ್ನು, ಪರಿಣಾಮಗಳನ್ನು ತಿಳಿಯಲು ಇದೊಂದು ಉತ್ತಮ ಪ್ರಯೋಗ, ಹೆಜ್ಜೆ ಎನ್ನಿಸಿತು. ಈ ಯೋಜನೆಯಲ್ಲಿ ಬರದ ಮಿಕ್ಕವರಿಗೆ ನಾನು ಮಾಡಬೇಕು ಎಂದುಕೊಂಡಿದ್ದನ್ನು ಮಾಡಬೇಕು ಎಂದುಕೊಂಡೆ. ಅಂದುಕೊಂಡಿದ್ದಕ್ಕಿಂತ ಸಂಕೀರ್ಣವಾಗಿಬಿಟ್ಟ ಪತ್ರಿಕೆಯ ಕೆಲಸಗಳಿಂದಾಗಿ ನಮ್ಮ ಪಕ್ಕದ ಊರಿನ ಜನಪ್ರಿಯು ವೈದ್ಯ, ಮಹಾತ್ಮಾ ಶಾಲೆಯ ಡಾ. ಮುನಿರೆಡ್ಡಿಯವರಲ್ಲಿ ಇದನ್ನು ಒಮ್ಮೆ ಪ್ರಸ್ತಾಪಿಸಿದ್ದು ಬಿಟ್ಟರೆ ಮತ್ತೇನೂ ಮಾಡಲಾಗಲಿಲ್ಲ. ಆದರೆ, ನಮ್ಮ ಪತ್ರಿಕೆ ಬಿಡುಗಡೆಯಾದ ಮಾರನೆಯ ದಿನವೇ, ಆಗಸ್ಟ್ ೧೮ರಂದು, ಸರ್ಕಾರದ ಬಾಲೆಯರಿಗೆ ಉಚಿತಬೈಸಿಕಲ್ ಯೋಜನೆ ಅನಿರೀಕ್ಷಿತವಾಗಿ ಜಾರಿಗೆ ಬಂತು. ಅದನ್ನು ಓದಿ, ಎರಡನೆಯ ದಿನವೂ ಬಂಪರ್ ಸಂತೋಷ ಮುಂದುವರಿಯಿತು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅನೇಕ ತರಹದ ಅನಾನುಕೂಲತೆಗಳಿವೆ. ಅನೇಕ ಸಾರಿ ತಾರತಮ್ಯ ಎನ್ನುವುದು ಮನೆಯಿಂದಲೇ ಪ್ರಾರಂಭವಾಗಿರುತ್ತದೆ. ತೀವ್ರಸ್ವರೂಪದ ಸಂಪ್ರದಾಯ ಹೇರಿಕೆ ಮತ್ತು ಸಮಾಜ ಸೃಷ್ಟಿಸುವ ಕೀಳರಿಮೆ ಆ ಹೆಣ್ಣುಮಕ್ಕಳಲ್ಲಿ ಸ್ವತಂತ್ರ ಮನೋಭಾವವನ್ನು ಉತ್ತೇಜಿಸುವುದಿಲ್ಲ. ಇದು ಬಹುಪಾಲು ಗ್ರಾಮೀಣ ಬಾಲಕಿಯರನ್ನು ಹಳ್ಳಿಗಳಲ್ಲಿನ ದೈನಂದಿನ ಕೆಲಸಕ್ಕೆ ಮಾತ್ರ ಲಾಯಕ್ಕಾಗುವಂತೆ ಮಾಡಿಬಿಡುತ್ತದೆ. ವರ್ತಮಾನದ ಜಾಗತೀಕರಣದಲ್ಲಿ ಅವರು ಎಲ್ಲಿಯು ಸ್ಪರ್ಧಿಸಲು ಸಾಧ್ಯವಾಗದಂತೆ, ವಿದೇಶದ ಸ್ತ್ರೀಯರ ಜೊತೆ ಹಾಗಿರಲಿ, ನಮ್ಮದೇ ನಗರಗಳ ಹೆಣ್ಣುಮಕ್ಕಳ ಮುಂದೆ ಎರಡನೇ ದರ್ಜೆಯ ನಾಗರೀಕರನ್ನಾಗಿ ಪರಿವರ್ತಿಸುತ್ತದೆ. ದೇಶದ ಬಹುಸಂಖ್ಯಾತ ಹೆಣ್ಣುಮಕ್ಕಳ ಸ್ಥಿತಿಗತಿ ಹೀಗೆಯೇ ಇದ್ದಲ್ಲಿ, ನಮ್ಮ

ಸಮಾಜ ಆರ್ಥಿಕವಾಗಿ ಮುಂದುವರಿದರೂ, ಸಾಮಾಜಿಕವಾಗಿ ಮುಂದುವರಿಯುವುದು, ತಲೆ ಎತ್ತಿ ನಡೆಯುವುದಾದರೂ ಹೇಗೆ? ಹಾಗಾಗಿ, ನನ್ನ ಪ್ರಕಾರ ಹೆಣ್ಣುಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸೈಕಲ್ ಕೊಡಿಸುವುದರಿಂದ ಅವರಲ್ಲಿ ಪರೋಕ್ಷವಾಗಿ ಸ್ಥೈರ್ಯ, ಆತ್ಮವಿಶ್ವಾಸ, ಸ್ವತಂತ್ರ ಮನೋಭಾವವನ್ನು ಹಾಗೂ ಅವಲಂಬನೆಯನ್ನು ನಿರಾಕರಿಸುವ ಧಾರ್ಷ್ಟ್ಯವನ್ನು ಬೆಳೆಸುತ್ತದೆ, ಉತ್ತೇಜಿಸುತ್ತದೆ. ಇದು ದೂರಗಾಮಿಯಾದ, ಸದ್ದಿಲ್ಲದೆ, ಮೌನವಾಗಿ ನಡೆಯುವ ಮಾನಸಿಕ ಸಬಲೀಕರಣ. ಸದ್ಯದ ಪರಿಸ್ಥಿತಿಯುಲ್ಲಿ ನಮ್ಮ ಹಳ್ಳಿಯು ಹೆಣ್ಣುಮಕ್ಕಳಿಗೆ ಅತ್ಯವಶ್ಯಕವಾಗಿ ಬೇಕಾದ ಸಹಾಯಸಾಧನ. ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ಯಕಃಶ್ಚಿತ್ ಸಾರಿಗೆ ಸಾಧನವಲ್ಲ!

ಹಾಗಾದರೆ, ಎಲ್ಲಾ ತೊಂದರೆಗಳನ್ನೂ ಮೀರಿ ಹಳ್ಳಿಯ ಹುಡುಗಿಯರಲ್ಲಿಯಾರೂ ಉನ್ನತ ಸಾಧನೆಗಳನ್ನು ಮಾಡಿಲ್ಲವೆ? ಮಾಡಿದ್ದಾರೆ. ಆದರೆ ಇದನ್ನು ಪಟ್ಟಣಗಳ, ಸ್ಥಿತಿವಂತ ಕುಟುಂಬಗಳ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಮುಖ್ಯ. ನನ್ನಲ್ಲಿ ಅಂಕಿಅಂಶಗಳಿಲ್ಲ. ಆದರೆ, ಅವರ ಸಾಧನೆಗಳ ಶೇಕಡಾವಾರು ಪ್ರಮಾಣ ಪಟ್ಟಣದವರಿಗಿಂತ ಎಷ್ಟೋ ಪಾಲು ಕಮ್ಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈಗ ಕರ್ನಾಟಕ ಸರ್ಕಾರಕ್ಕೆ ಬೇರೆ ಬೇರೆ ಮೂಲಗಳಿಂದ ಒಳ್ಳೆಯು ಆದಾಯಗಳು ಇರುವುದರಿಂದ, ಬಹುಪಾಲು ಖೋತಾರಹಿತ ಬಡ್ಜೆಟ್ ಮಂಡಿಸುತ್ತಿರುವುದರಿಂದ, ಈ ಯೋಜನೆಯನ್ನು ಎಲ್ಲಾ ಪ್ರೌಢಶಾಲಾ ಬಾಲಕಿಯರಿಗೆ ವಿಸ್ತರಿಸುವುದು ಕಷ್ಟವೇನಲ್ಲ. ಮುಂದಿನ ವರ್ಷಕ್ಕೆ ಸೈಕಲ್ ಇಲ್ಲದ ಪ್ರೌಢಶಾಲೆಯ ಬಡ ವಿದ್ಯಾರ್ಥಿನಿಯರು ಕೇವ ಎಂಟನೇ ಮತ್ತು ಹತ್ತನೇ ತರಗತಿಯವರು ಮಾತ್ರ ಆಗಿರುತ್ತಾರೆ. ಈ ಒಂದು ಸಾರಿ ಅವರಿಬ್ಬರಿಗೂ ಹಂಚಿಬಿಟ್ಟರೆ, ಅದರ ಮರುವರ್ಷದಿಂದ ಕೇವಲ ಎಂಟನೇ ತರಗತಿಯವರಿಗೆ ಮಾತ್ರ ಕೊಡಬೇಕಾಗುತ್ತದೆ. ನಾನು ತಿಂಗಳ ಹಿಂದೆ ಅಮೆರಿಕಕ್ಕೆ ವಾಪಸು ಬರುತ್ತಿದ್ದಾಗ, ಬೈಸಿಕಲ್ ಯೋಜನೆಯಲ್ಲಿ ಬರದ ಬಾಲೆಯರಿಗೆ ಏನೂ ಮಾಡಲಾಗಲಿಲ್ಲವಲ್ಲ ಎಂಬ ಕೊರಗು ಮನಸ್ಸಿನಲ್ಲಿಯೆ ಉಳಿದಿತ್ತು; ಉಳಿದಿದೆ. ಆ ಕೊರಗಿನ ಅವಶ್ಯಕತೆಯಿಲ್ಲ,ಎಂದು ಮುಂದಿನ ಬಡ್ಜೆಟ್ ಮಂಡಿಸಲಿರುವ ಆಗಿನ ಹಣಕಾಸು ಸಚಿವರು (?) ಸಾಧ್ಯ ಮಾಡಿ ತೋರಿಸುತ್ತಾರೆ ಎಂದು ಪರಮ ಆಶಾವಾದಿಯಾಗಿ ಆಶಿಸುತ್ತೇನೆ.

No comments: