Dec 16, 2006

ಸಾಹಿತ್ಯ ಗೋಷ್ಠಿ ಮತ್ತು ಮರ್ಕ್ಯುರಿ ನ್ಯೂಸ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ವಿಶ್ವನಾಥ್ ಹುಲಿಕಲ್‌ನವರು ನಮ್ಮ ಸಾಲುಮರದ ತಿಮ್ಮಕ್ಕನವರ ಊರಾದ ಹುಲಿಕಲ್‌ನವರು. ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿ ಕನ್ನಡದ ಸಾಹಿತ್ಯ ಪರಿಚಾರಕರಲ್ಲಿ ಪ್ರಮುಖವಾದ ಹೆಸರು ವಿಶ್ವನಾಥ್‌ರವರದು. ಇಲ್ಲಿನ ಕೆಲವು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಸೇರಿ, 2001 ರ ನವೆಂಬರ್‌ನಲ್ಲಿ ಹುಲಿಕಲ್ ದಂಪತಿಗಳು ಕನ್ನಡ ಸಾಹಿತ್ಯ ಸಂಬಂಧಿ ಚರ್ಚೆಗೆಂದು ಹುಟ್ಟು ಹಾಕಿದ್ದು 'ಸಾಹಿತ್ಯ ಗೋಷ್ಠಿ'. ಅಲ್ಲಿಂದ ಇಲ್ಲಿಯವರೆಗೂ ನಿಯಮಿತವಾಗಿ ತಿಂಗಳಿಗೊಂದು ಕಾರ್ಯಕ್ರಮದಂತೆ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಜನ್ನ, ಕುಮಾರವ್ಯಾಸ, ಕುವೆಂಪುರವರಿಂದ ಹಿಡಿದು ಅಡಿಗ, ಭೈರಪ್ಪ, ದಲಿತಕವಿ ಸಿದ್ದಲಿಂಗಯ್ಯನವರವರೆಗೂ ಎಲ್ಲಾ ಪಂಥ-ಪ್ರಕಾರಗಳ ಕನ್ನಡ ಸಾಹಿತ್ಯ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ ಉಪನ್ಯಾಸಗಳು ಇಲ್ಲಿ ನಡೆದಿವೆ. ಸ್ಥಳೀಯ ಸಾಹಿತ್ಯಾಸಕ್ತರೇ ಅಲ್ಲದೆ, ಅಮೇರಿಕವನ್ನು ಸಂದರ್ಶಿಸುವ ಕನ್ನಡದ ಪ್ರಸಿದ್ಧ ಸಾಹಿತಿಗಳೂ ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗ್ಠೋಯ ದಿನದಂದು ತಪ್ಪಿಸಿಕೊಳ್ಳದೆ ಹಾಜರಾಗುವ ಒಂದು ಗುಂಪೇ ಸಿಲಿಕಾನ್ ಕಣಿವೆಯಲ್ಲಿದೆ. ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ನಡೆದಿರುವ ಮತ್ತೊಂದು ಉಲ್ಲೇಖನೀಯ ಕಾರ್ಯವೆಂದರೆ, ಜಯಂತ ಕಾಣಿಯವರ ಪ್ರಸಿದ್ಧ ಕಥಾಸಂಕಲನವಾದ 'ಅಮೃತಬಳ್ಳಿ ಕಷಾಯ'ವನ್ನು ಇಂಗ್ಲಿಷಿಗೆ ಭಾಷಾಂತರಿಸಿ "Dots and Lines" ಹೆಸರಿನಲ್ಲಿ ಪ್ರಕಟಿಸಿರುವುದು.

ಸಾಹಿತ್ಯ ಗೋಷ್ಠಿಯ ಐದನೆ ವಾರ್ಷಿಕೋತ್ಸವದ ಕಾರ್ಯಕ್ರಮ ಮೂರು ವಾರದ ಹಿಂದೆ ನಡೆತು. ಎರಡು ಉಪನ್ಯಾಸಗಳ ನಡುವಿನ ತಿಂಡಿತೀರ್ಥದ ಬಿಡುವಿನ ಸಮಯದಲ್ಲಿ ವ್ಯಂಗ್ಯಚಿತ್ರಕಾರ ಸ್ನೇಹಿತರಾದ ಜನಾರ್ಧನ ಸ್ವಾಮಿಯವರೊಡನೆ ಮಾತನಾಡುತ್ತ ಒಂದು ಮೂಲೆಯಲ್ಲಿ ನಿಂತಿದ್ದೆ. ಆಗ ಇನ್ನೊಂದು ಮೂಲೆಯಲ್ಲಿದ್ದ ನಮ್ಮ ಪತ್ರಿಕೆಯ ಹಿತೈಷಿಗಳೂ, ಹಿರಿಯ ಸ್ನೇಹಿತರೂ ಆದ ಕಾತ್ಯಾಯಿನಿ ಸತ್ಯರವವರು ನನ್ನನ್ನು ನೋಡಿ ಏನನ್ನೊ ಜ್ಞಾಪಿಸಿಕೊಂಡವರಂತೆ ಹತ್ತಿರ ಬಂದರು. ಬಂದದ್ದೆ, "ರವಿ, ಈವತ್ತಿನ ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪೇಪರ್ ನೋಡಿದೆಯೇನಪ್ಪ?" ಎಂದರು. ನಾನು ನೋಡಿರಲಿಲ್ಲ. "ಹಾಗಿದ್ದರೆ ತಕ್ಷಣ ಹೋಗಿ ನೋಡು," ಎಂದರು. ನನಗೆ ಕುತೂಹಲವಾತು. ಸ್ವಾಮಿಯವರು, "ಹೌದು, ಫ್ರಂಟ್‌ಪೇಜ್‌ನಲ್ಲಿಯೆ ಎಷ್ಟು ದೊಡ್ಡದಾಗಿ ಬಂದಿದೆ ಅಲ್ಲವಾ?" ಎಂದು, ಏನು ಬಂದಿದೆ ಎಂದು ವಿವರಿಸ ಹೊರಟರು. ತಕ್ಷಣ ಕಾತ್ಯಾನಿಯವರು, "ಹೇಳಬೇಡಿ, ರವೀನೆ ಹೋಗಿ ನೋಡಲಿ. ನೀನು ಇಂತಹ ವಿಷಯಗಳನ್ನೆಲ್ಲ ಫಾಲ್ಲೊ ಮಾಡ್ತಿರ್ತೀಯ ಅಂತಲೆ ನಿನಗೆ ಹೇಳೋಣ ಅಂತ ಬಂದೆ. ಮುಂದಿನ ನಾಲ್ಕು ದಿನವೂ ಆ ಪತ್ರಿಕೆಯನ್ನು ತಗೊಳ್ಳೋದು ಮರೀಬೇಡಪ್ಪ," ಎಂದರು. ಅಷ್ಟಾದರೂ ಕಾತ್ಯಾಯಿನಿ ಮತ್ತು ಸ್ವಾಮಿಯವರ ಮಾತಿನ ನಡುವೆ ಅದು ಭಾರತಕ್ಕೆ ಸಂಬಂಧಿಸಿದ ವಿಷಯ, ಮರ್ಕ್ಯುರಿ ನ್ಯೂಸ್‌ನಂತಹ ಪ್ರಸಿದ್ಧ ಪತ್ರಿಕೆ ಭಾರತದ ಬಗ್ಗೆ ಎಷ್ಟೊಂದು ದೊಡ್ಡ ಫ್ಯೂಚರ್ ಮಾಡಿದೆ ಎಂಬ ಹೆಮ್ಮೆ ಇಣುಕಾಡುತ್ತಿದ್ದದ್ದು ಗೊತ್ತಾಯಿತು. ಮುಂದಿನ ನಾಲ್ಕು ದಿನವೂ ನಾನು ತಪ್ಪದೆ ಆ ಪತ್ರಿಕೆ ಕೊಂಡುಕೊಂಡೆ.

ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪತ್ರಿಕೆಯ ಪ್ರತಿದಿನದ ಪ್ರಸಾರ ಸುಮಾರು ಎರಡೂ ಮುಕ್ಕಾಲು ಲಕ್ಷ. ಹೆಸರೆ ಹೇಳುವಂತೆ ಇದು ರಾಷ್ಟ್ರೀಯ ಪತ್ರಿಕೆಯೇನಲ್ಲ. ಸ್ಯಾನ್ ಫ್ರಾನ್ಸಿಸ್ಕೊ ಬೇ ವಲಯದ ದಕ್ಷಿಣ ಭಾಗವಾದ ಸಿಲಿಕಾನ್ ಕಣಿವೆಯಲ್ಲಿ ಮಾತ್ರ ಇದರ ಪ್ರಸಾರ. ಆದರೆ ಸಿಲಿಕಾನ್ ಕಣಿವೆಯಲ್ಲಂತೂ ಇದೇ ನಂಬರ್ 1 ಹಾಗೂ ಪ್ರಭಾವಶಾಲಿ ಕೂಡ. ಇಲ್ಲಿನ ಸಾಫ್ಟ್‌ವೇರ್ ಕಂಪನಿಗಳಲ್ಲಿನ ಭಾರತೀಯರ ಸಾಂದ್ರತೆ ಅಮೇರಿಕದಲ್ಲಿನ ಬೇರೆಲ್ಲ ಭಾಗಗಳಿಗಿಂತ ಹೆಚ್ಚಾಗಿರುವುದರಿಂದ, ಸ್ಥಳೀಯ ಭಾರತೀಯರಲ್ಲೂ ಮರ್ಕ್ಯುರಿ ನ್ಯೂಸ್ ಜನಪ್ರಿಯ. ಸ್ಥಳೀಯ ಭಾರತೀಯ ಲೇಖಕರೂ ಈ ಪತ್ರಿಕೆಗೆ ನಾನಾ ವಿಷಯಗಳ ಬಗ್ಗೆ ಬರೆಯುತ್ತಿರುತ್ತಾರೆ. ಈ ಪತ್ರಿಕೆಗೆ ಇಲ್ಲಿಯವರೆಗೆ ಎರಡು ಸಲ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ದೊರಕಿದೆ.

ಅಮೇರಿಕದಲ್ಲಿನ ಪತ್ರಿಕೆ-ರೇಡಿಯೊ-ಟಿವಿಗಳನ್ನು ಗಮನಿಸುವ ಭಾರತೀಯರಿಗೆ ಕಳೆದ ಎರಡು ಮೂರು ವರ್ಷಗಳಲ್ಲಿ ಈ ಸುದ್ದಿಮಾಧ್ಯಮಗಳಲ್ಲಿ ಭಾರತದ ಕುರಿತಾದ ವಿಷಯಗಳಿಗೆ ದೊರಕುತ್ತಿರುವ ಪ್ರಾಮುಖ್ಯ ಎದ್ದು ಕಾಣಿಸದೆ ಇರದು. ಅದಕ್ಕೂ ಮೊದಲು ಕೇವಲ ಪ್ರಕೃತಿ ವಿಕೋಪಗಳಂತಹ ವಿಷಯಗಳಿಗೆ ಮಾತ್ರ ಸುದ್ದಿಯಾಗುತ್ತಿದ್ದ ಭಾರತ ಈ ನಡುವೆ ಅಮೇರಿಕನ್ನರು ವಿಶೇಷ ಆಸಕ್ತಿ ತೋರಿಸುವ ಆರ್ಥಿಕ, ವಾಣಿಜ್ಯ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಇಲ್ಲಿನವರಿಗಿಂತ ಕಮ್ಮಿ ಸಂಬಳಕ್ಕೆ ಕೊರತೆಲ್ಲದಂತೆ ಸಿಗುವ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞರು, ಔಟ್‌ಸೋರ್ಸ್ ಮಾಡಿದರೆ ಪ್ರತಿವರ್ಷ ಉಳಿತಾಯವಾಗುವ ಕೋಟ್ಯಾಂತರ ಡಾಲರ್‌ಗಳು, ಭಾರತದಲ್ಲಿ ಕೊಳ್ಳುವ ತಾಕತ್ತಿರುವ ಕೋಟ್ಯಾಂತರ ಜನಸಂಖ್ಯೆಯ ಮಧ್ಯಮವರ್ಗದವರ ಮಾರುಕಟ್ಟೆ, ಶರವೇಗದಲ್ಲಿ ಏರುತ್ತಿರುವ ಶೇರು ಮಾರುಕಟ್ಟೆ, ಇವೆಲ್ಲವೂ ಅಮೇರಿಕದ ಬ್ಯುಸಿನೆಸ್ ಪ್ರಪಂಚಕ್ಕೆ ಪ್ರೀತಿಪಾತ್ರವಾದವು! ಈ ಹಿನ್ನೆಲೆಯಲ್ಲಿ ಪತ್ರಕರ್ತ ಜಾನ್ ಬೌಡ್ರ್ಯು ಡಿಸೆಂಬರ್ 3 ರಿಂದ 6 ರ ವರೆಗೆ India 2.0 ಎಂಬ ಅಗ್ರ ಲೇಖನಮಾಲೆಯಲ್ಲಿ ಭಾರತದಲ್ಲಿ ಆಗುತ್ತಿರುವ ಆರ್ಥಿಕಾಭಿವೃದ್ಧಿ, ಬದಲಾಗುತ್ತಿರುವ ಜೀವನಶೈಲಿ, ಹೆಚ್ಚಾಗುತ್ತಿರುವ ಉದ್ಯಮಶೀಲತೆ, ನವಶ್ರೀಮಂತರು ಸಮಾಜಸೇವೆಯಲ್ಲಿ ತೊಡಗಿಸುತ್ತಿರುವ ಹಣ ಮತ್ತು ಸಮಯ, ಮುಂತಾದ ವಿಷಯಗಳ ಬಗ್ಗೆ ಭಾರತವನ್ನು ಸಂದರ್ಶಿಸಿ, ಒಳ್ಳೆಯ ಸಂಶೋಧನೆ ಮಾಡಿ, ಸಾಕಷ್ಟು ವಸ್ತುನಿಷ್ಠವಾಗಿಯೆ ಬರೆದಿದ್ದಾರೆ.

ಇಲ್ಲಿನ ಮಾಧ್ಯಮಗಳಲ್ಲಿ ಭಾರತದ ಬಗೆಗಿನ ಈ ಪರಿಯ ಆಸಕ್ತಿಯನ್ನು, ಸಂಶೋಧನೆಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಹಾಲಿವುಡ್‌ನಿಂದ ಹಿಡಿದು ಸೌರವಿಜ್ಞಾನದವರೆಗೂ ವಿಶ್ವದಾದ್ಯಂತದ ಉದ್ಯಮಶೀಲ ವಣಿಕರು ಭಾರತದತ್ತ ಮುಖ ಮಾಡುತ್ತಾರೆ ಎಂದರೆ, ಅದೇನೂ ಜ್ಯೋತಿಷ್ಯ ಹೇಳಿದಂತಾಗುವುದಿಲ್ಲ!



ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಮಾಡುವ ದೈತ್ಯ ಬಹುರಾಷ್ಟ್ರೀಯ ಕಂಪನಿ ಹ್ಯೂಲೆಟ್-ಪ್ಯಾಕರ್ಡ್ ಪ್ರಾರಂಭವಾಗಿದ್ದು ಗ್ಯಾರೇಜಿನಲ್ಲಿ. ಗೂಗ್ಲ್ ಕಂಪನಿ ಸಹ ಪ್ರಾರಂಭವಾಗಿದ್ದು ಹೀಗೆಯೆ. ಇವತ್ತು ಎಚ್.ಪಿ. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 5000 ಶತಕೋಟಿ ರೂಪಾಯಿಗಳು! ಪ್ರಾರಂಭವಾಗಿ ಕೇವಲ 8 ವರ್ಷವಾಗಿರುವ ಗೂಗ್ಲ್‌ನ ಮಾರುಕಟ್ಟೆ ಮೌಲ್ಯ ಸುಮಾರು 6600 ಶತಕೋಟಿ ರೂಪಾಯಿಗಳು. ಹಾಗಾಗಿಯೆ, ಸಣ್ಣ ಮೊತ್ತದ ಬಂಡವಾಳ ಹಾಗು ಅಪ್ರತಿಮ ಐಡಿಯಾಗಳಿಂದ ಹೊಸದಾಗಿ ಪ್ರಾರಂಭವಾಗುವ ಕಂಪನಿಗಳ ಬಗ್ಗೆ ಇಲ್ಲಿನವರಿಗೆ ಬಹಳ ಗೌರವ ಉಂಟು. ಅವರಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ, ರಿಸೆಪ್ಷನಿಸ್ಟ್ ಇದಾರಾ, ಮತ್ತೊಂದು ಮಗದೊಂದು ಇದೆಯ ಎನ್ನುವುದಕ್ಕಿಂತ ಅವರಲ್ಲಿರುವ ಐಡಿಯ ಮಾರುಕಟ್ಟೆಯಲ್ಲಿ ಗೆಲ್ಲುತ್ತದಾ ಎಂದಷ್ಟೆ ಬಂಡವಾಳ ಹೂಡುವವರು ನೋಡುವುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈಗೀಗ ಇಂತಹ ಗರಾಜುಗಳಲ್ಲಿ ಆರಂಭವಾಗುತ್ತಿರುವ ಸ್ಟಾರ್ಟ್-ಅಪ್ ಕಂಪನಿಗಳ ಕುರಿತಾದ "The new garage culture – STARTING UP" ಎಂಬ ದೀರ್ಘ ಲೇಖನ ಬಹಳ ಚೆನ್ನಾಗಿದೆ. ಹಾಗೆಯೆ ಅಜೀಮ್ ಪ್ರೇಮ್‍‌ಜಿಯವರ ಸಂದರ್ಶನ ಇದೆ. ಬೆಂಗಳೂರು, ಮುಂಬು, ಹೈದರಾಬಾದ್, ನಿಜಾಮಾಬಾದ್, ಚೆನ್ನೈ, ಶ್ರೀಪೆರಂಬದೂರು ಇಲ್ಲೆಲ್ಲ ಸುತ್ತಾಡಿ ಮಾಡಿರುವ ಈ ಲೇಖನಮಾಲೆ ಓದಿದರೆ ಇಲ್ಲಿನ ಪತ್ರಕರ್ತರ ದುಡಿಮೆ, ಅವರ ಸಂಶೋಧನಾ ಪ್ರವೃತ್ತಿ, ಪ್ರೊಫ್ರೆೆಷನಾಲಿಸಂ ಬಗ್ಗೆ ಅಭಿಮಾನವುಂಟಾಗದೆ ಇರದು.

No comments: