Dec 5, 2007

e-ಕನ್ನಡದ ಹೆಮ್ಮೆ ourkarnataka.com

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 14, 2007 ರ ಸಂಚಿಕೆಯಲ್ಲಿನ ಬರಹ)

1999. ಆಗಿನ್ನೂ ಕನ್ನಡ ಅಂತರ್ಜಾಲ ನಿಧಾನಕ್ಕೆ ಕಣ್ಣು ತೆರೆಯುತ್ತಿತ್ತು. ಇದ್ದದ್ದು ಬಹುಶಃ ಬೆರಳೆಣಿಕೆಯ ಕನ್ನಡ ವೆಬ್‌ಸೈಟುಗಳು. ಬರಹ ವಾಸುರವರು ಬರಹ ಕನ್ನಡ ಲಿಪಿ ತಂತ್ರಾಂಶವನ್ನು ಉಚಿತವಾಗಿ ಒದಗಿಸಲು ಆರಂಭಿಸಿದ್ದ ದಿನಗಳು ಅವು. ಅ ದಿನಗಳಲ್ಲಿ ದಕ್ಷಿಣಕನ್ನಡ ಮೂಲದ, ಕೊಂಕಣಿ ಮನೆಮಾತಿನ, ಮೈಸೂರಿನ ಯುವಕನೊಬ್ಬ ಜರ್ಮನಿಗೆ ಪ್ರಾಜೆಕ್ಟ್ ಒಂದಕ್ಕೆ ನಾಲ್ಕಾರು ತಿಂಗಳ ಕಾಲ ಹೋಗುತ್ತಾನೆ. ಅಲ್ಲಿ ಬಯಸಿದ್ದಕ್ಕಿಂತ ಹೆಚ್ಚಿನ ಬಿಡುವು. ಆ ಬಿಡುವಿನಲ್ಲಿ ಕನ್ನಡದ ವೆಬ್‌ಸೈಟು ಒಂದನ್ನು ಆರಂಭಿಸುವ ಯೋಚನೆ ಬರುತ್ತದೆ. ಸರಿ, ಜರ್ಮನಿಯಿಂದಲೆ ಆ ವೆಬ್‌ಸೈಟು ಶುರುವಾಯಿತು. ಮೊದಲಿಗೆ ಕನ್ನಡ ಚಲಚಿತ್ರಗೀತೆಗಳನ್ನು ಒದಗಿಸಲಾಗುತ್ತಿತ್ತು. ಆ ಯುವಕನ ತಮ್ಮ ಮೈಸೂರಿನಲ್ಲಿ ಇನ್ನೂ ಕಾಲೇಜು ಓದುತ್ತಿದ್ದ. ಆತ ಆಗಾಗ ಕನ್ನಡದಲ್ಲಿ ಬರೆಯುತ್ತಿದ್ದ. ಆತನ ಒಂದಷ್ಟು ಲೇಖನಗಳು ಪ್ರಕಟವಾದವು. ಇತರೆ ಸ್ನೇಹಿತರದು ಮತ್ತಷ್ಟು. ವೆಬ್‌ಸೈಟಿಗೆ ಭೇಟಿ ಕೊಟ್ಟ ಓದುಗರು ಬರೆದ ಲೇಖನಗಳು ಮಗದಷ್ಟು. ಆ ಮಧ್ಯೆ ಬರಹ ವಾಸು ಸೈಟನ್ನು ಮತ್ತಷ್ಟು ಸುಧಾರಿಸಲು ಕೆಲವು ಸಲಹೆ ಕೊಟ್ಟರು. ಓದುಗರು ಫಾಂಟ್ ಅನ್ನು ಇನ್ಸ್ಟಾಲ್ ಮಾಡುವ ಅಗತ್ಯವಿಲ್ಲದೆ ಪುಟ ನೋಡಬಹುದಾದ ವ್ಯವಸ್ಥೆ ಇರುವ ಡೈನಾಮಿಕ್ ಫಾಂಟ್ಸ್‌ನ ವ್ಯವಸ್ಥೆ ಮಾಡಿಕೊಟ್ಟರು. ಹೀಗೆ ವೆಬ್‌ಸೈಟು ಬೆಳೆಯುತ್ತಾ ಹೋಯಿತು. ಇವತ್ತು ಯಾವುದಾದರೂ ಒಂದು ಕನ್ನಡ ವೆಬ್‌ಸೈಟಿನಲ್ಲಿ ಎಲ್ಲಾ ತರಹದ ವಿಷಯ ಸಾಮಗ್ರಿ ಇದೆ ಅಂದರೆ, ಅದು ಆ ಯುವಕ ಜರ್ಮನಿಯಲ್ಲಿ ಪ್ರಾರಂಭಿಸಿದ ourkarnataka.com ದಲ್ಲಿ. ಆತ ಶೇಷಗಿರಿ ಶೆಣೈ.

ಇಲ್ಲಿ ನಾನು ಎಲ್ಲಾ ತರಹದ ಸಾಮಗ್ರಿ ಎಂದೆ. ಹೌದು, ಅದು ಕ್ಲೀಷೆಯಲ್ಲ. ಹೊಸದಿಗಂತ, ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಹಲವು ಅಂಕಣ ಲೇಖನಗಳು, ಮೈಸೂರಿನ ಸ್ಟಾರ್ ಆಫ್ ಮೈಸೂರ್ ಇಂಗ್ಲಿಷ್ ದಿನಪತ್ರಿಕೆಯ ಲೇಖನಗಳು, ಲಂಕೇಶ್ ಪತ್ರಿಕೆಯ ಹಲವಾರು ಲೇಖನಗಳು, ಗೌರಿ ಲಂಕೇಶ್ ಪತ್ರಿಕೆಯ ಲೇಖನಗಳು; ಇವೆಲ್ಲವೂ ಪ್ರಕಟವಾಗುವುದು ಅವರ್‌ಕರ್ನಾಟಕ.ಕಾಮ್‌ನಲ್ಲಿ. "ಮುಸ್ಲಿಮರನ್ನು ಭಾರತದಿಂದ ಓಡಿಸಬೇಕು, ಹಿಡಿಬಡಿಕೊಲ್ಲು," ಎನ್ನುವಂತಹ ಉಗ್ರ ಬಲಪಂಥೀಯ ಲೇಖನಗಳಿಂದ ಹಿಡಿದು, ಗೌರಿ ಲಂಕೇಶ್ ಮಲೆನಾಡಿನ ಅರಣ್ಯದಲ್ಲಿ ಸಾಕೇತ್ ರಾಜನ್ ಸಂದರ್ಶನ ಮಾಡಿದ ಉಗ್ರ ಎಡಪಂಥೀಯ ಲೇಖನಗಳೂ ಇವತ್ತು ಇದೊಂದೆ ವೇದಿಕೆಯಲ್ಲಿ ಸಮಾನವಾಗಿ ಸ್ಥಳ ಹಂಚಿಕೊಂಡಿವೆ. ಭಾರತದ ಪುರೋಹಿತಶಾಹಿಯನ್ನು ವಿಜೃಂಭಿಸುವ ಲೇಖನದ ಪಕ್ಕದಲ್ಲಿಯೇ, ಅವೆಲ್ಲವನ್ನೂ ನಿರಾಕರಿಸುವ, ತೆಗಳುವ, ಲೇವಡಿ ಮಾಡುವ, ತನ್ನದೇ ರೀತಿಯಲ್ಲಿ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ವಿಶ್ಲೇಷಿಸುವ ಬಿ. ಚಂದ್ರೇಗೌಡರ "ಕಟ್ಟೇಪುರಾಣ" ಪ್ರಕಟಗೊಳ್ಳುತ್ತಿದೆ.

ಅವರ್‌ಕರ್ನಾಟಕ.ಕಾಮಿನಲ್ಲಿ ಇಂತಹ ವಿಷಯದ ಬಗ್ಗೆ ಲೇಖನ ಇಲ್ಲ ಎನ್ನುವಂತಿಲ್ಲ. "ಕಡ್ಡಾಯವಾಗಿ ತುಂಟರಿಗಾಗಿ ಮಾತ್ರ" ಎನ್ನುವ ಟ್ಯಾಗ್‌ಲೈನಿನೊಂದಿಗೆ ಸುಮಾರು ಮೂರುನೂರಕ್ಕೂ ಹೆಚ್ಚಿನ ಜೋಕುಗಳು "Fiಟ್ಟಿಂgu" ಕಾಲಮ್ಮಿನಲ್ಲಿ ನಿಮಗೆ ಸಿಗುತ್ತವೆ. ಇನ್ಯಾವ ಕನ್ನಡದ ವೆಬ್‌ಸೈಟಿನಲ್ಲೂ ನಿಮಗೆ ಇಷ್ಟೊಂದು ಜೋಕುಗಳು ಒಂದೇ ಕಡೆ ಸಿಗುವುದಿಲ್ಲ. ಸಮಾಜದ ಭ್ರಷ್ಟರ ಕುರಿತು ವಿವಿಧ ಪತ್ರಿಕೆಗಳಲ್ಲಿ ಬಂದ ಲೇಖನಗಳನ್ನು, ಈ ವೆಬ್‌ಸೈಟಿಗೆಂದೇ ಓದುಗರು ಬರೆದ ಲೇಖನಗಳನ್ನು ಒಂದೆಡೆ ಪ್ರಕಟಿಸಿರುವ "ಥೂ ನಿಮ್ಮ" ವಿಭಾಗವಂತೂ ಹಲವಾರು ಪಟ್ಟಭದ್ರರ ಮುಖವನ್ನು ವಿಶ್ವದಾದ್ಯಂತದ ಕನ್ನಡ ಓದುಗರಿಗೆ ಬೇಕೆಂದಾಗ ತೋರಿಸುತ್ತದೆ. ಜ್ಯೋತಿಷ್ಯವೂ ಇದೆ; ಅದರ ಜೊತೆಯಲ್ಲಿಯೇ, ಪವಾಡಗಳ, ಜ್ಯೋತಿಷ್ಯಗಳ ಟೊಳ್ಳುತನವನ್ನು ಬಯಲು ಮಾಡುವ ವಿಚಾರವಾದಿ ಡಾ. ನರೇಂದ್ರ ನಾಯಕರ ಅನೇಕ ಲೇಖನಗಳಿವೆ. ಹಳೆಯಕಾಲದ ಗಾದೆಗಳಿಂದ ಹಿಡಿದು ಆಧುನಿಕ ಕಾಲದ ಗಾದೆಗಳ ತನಕ 2000 ಕ್ಕೂ ಹೆಚ್ಚಿನ ಕನ್ನಡ ಗಾದೆಗಳಿವೆ. 1800 ಕ್ಕೂ ಮೀರಿದ ಕನ್ನಡದ ಒಗಟುಗಳಿವೆ. "ಇಲ್ಲಿಯವರೆಗೂ ಹತ್ತು ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು ಹಿಡಿದಿದ್ದೇನೆ," ಎನ್ನುವ ಮೈಸೂರಿನ ಸ್ನೇಕ್‌ಶ್ಯಾಮ್‌ರ ಸರ್ಪಲೋಕವೂ ಇಲ್ಲಿದೆ. ಕೊತ್ವಾಲ್ ರಾಮಚಂದ್ರ, ಮುತ್ತಪ್ಪ ರೈ, ಹೆಸರು ಬದಲಾಯಿಸಿಕೊಂಡು ಇಂಗ್ಲಿಷಿನಲ್ಲಿ ತನ್ನ ಭೂಗತಲೋಕದ ಕತೆ ಬರೆದುಕೊಂಡಿರುವ ವ್ಯಕ್ತಿಯೊಬ್ಬನ ಕತೆಯೂ ಇಲ್ಲಿದೆ. ಭಗವದ್ಗೀತೆಯ ಹಲವಾರು ಅಧ್ಯಾಯಗಳ ಕನ್ನಡ ಅನುವಾದವಿದೆ; ಮುಸ್ಲಿಮ್ ಸಂಪ್ರದಾಯಗಳ ಲೇಖನಗಳೂ ಇವೆ. ಸಂಸ್ಕೃತ, ತುಳು, ಕೊಡವ, ಕೊಂಕಣಿ ಭಾಷೆಗಳನ್ನು ಕಲಿಯಲು ಆನ್‌ಲೈನ್ ಪಾಠಗಳೂ ಇವೆ.

ದಂಡಪಿಂಡಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ:

ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎಂಬ ಅಪ್ಪಟ ದಂಡಪಿಂಡಗಳ, ಸೂಟುಬೂಟುಧಾರಿಗಳ ಸರ್ಕಾರಿ ಇಲಾಖೆ ಒಂದಿದೆ. ಈ ಇಲಾಖೆ ಬೇರೆಬೇರೆ ವೇದಿಕೆಗಳಲ್ಲಿ ಏನು ಮಾಡುತ್ತದೆ ಎನ್ನುವುದರ ಬಗ್ಗೆ ನನಗೆ ಅಜ್ಞಾನ ಇರುವುದು ನಿಜವಾದರೂ, ಇಲ್ಲಿಯವರೆಗೂ ಇವರು ಕೈಗೊಂಡಿರುವ ಇಂಟರ್ನೆಟ್ ಯೋಜನೆಗಳೆಲ್ಲಾ ದೊಡ್ಡ ಫ್ಲಾಪ್ ಶೋಗಳು. ಬೇಜವಾಬ್ದಾರಿಯವು. ಹೇಳಬೇಕೆಂದರೆ ಅಂತರ್ಜಾಲದಲ್ಲಿನ ಕನ್ನಡ ದ್ರೋಹಿಗಳು ಇವರು. ಆದಿಕವಿ ಪಂಪನ ಪಂಪಭಾರತದಿಂದ ಹಿಡಿದು ಡಿವಿಜಿಯವರ ಮಂಕುತಿಮ್ಮನ ಕಗ್ಗದ ತನಕ ಅನೇಕ ಕನ್ನಡ ಕಾವ್ಯಗಳನ್ನು ಇವರು ಕನ್ನುಡಿ.ಆರ್ಗ್ ಎಂಬ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದರು. ಅದು ಬದುಕಿದ್ದದ್ದೆ ಒಂದೆರಡು ವರ್ಷ. ಹತ್ತಾರು ಲಕ್ಷ ಖರ್ಚು ಮಾಡಿ, ಸಮಗ್ರ ದಾಸ ಸಾಹಿತ್ಯವನ್ನು www.dasasahitya.org ಎಂಬ ಹೆಸರಿನಲ್ಲಿ ಬಹುಶಃ ಎರಡು ವರ್ಷದ ಹಿಂದೆ ಇಂಟರ್ನೆಟ್‌ನಲ್ಲಿ ಪ್ರಕಟಿಸಿದರು. ಇವತ್ತು ಅದರ ಡೊಮೈನ್ ಎಕ್ಸ್‌ಪೈರ್ ಆಗಿದೆ. ಸಮಗ್ರ ವಚನ ಸಾಹಿತ್ಯವನ್ನೂ ಹೀಗೆಯೇ ಲಕ್ಷಾಂತರ ಹಣ ವೆಚ್ಚ ಮಾಡಿ, ಕೇವಲ ಏಳೆಂಟು ತಿಂಗಳ ಹಿಂದೆ www.vachanasahitya.org ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇಂದು ಅದರ ಡೊಮೈನೂ ಎಕ್ಸ್‌ಪೈರ್ ಆಗಿದೆ. ನಿಮಗಿದು ಗೊತ್ತಿರಲಿ, ಒಂದು ಡೊಮೈನ್‌ಗೆ ಒಂದು ವರ್ಷಕ್ಕೆ ತಗಲುವ ಖರ್ಚು ಕೇವಲ 400 ರೂಪಾಯಿಗಳು. ಎಲ್ಲಾ ಕಂಟೆಂಟ್ ಸಿದ್ದಪಡಿಸಿ ಒಂದು ಸಲ ವೆಬ್‌ಸೈಟಿಗೆ ಅಪ್‌ಲೋಡ್ ಮಾಡಿಬಿಟ್ಟರೆ, ಅದಕ್ಕೆ ಇಡೀ ವರ್ಷಕ್ಕೆ ಕೊಡಬೇಕಾಗಿರುವ ಬಾಡಿಗೆ ಹಣ 4000 ರೂಪಾಯಿಗೂ ಕಮ್ಮಿ. ಹತ್ತಿಪ್ಪತ್ತು ಲಕ್ಷ ಖರ್ಚು ಮಾಡಿ, ಎಲ್ಲವನ್ನೂ ಸಿದ್ದಪಡಿಸಿ, ಕೇವಲ ವೆಬ್‌ಸೈಟ್ ಉದ್ಘಾಟನೆಗೆಂದೇ ಲಕ್ಷಾಂತರ ಹಣವನ್ನು ಖರ್ಚು ಮಾಡಿ, ಧಾಂಧೂಮ್ ಎಂದು ಆರಂಭಿಸುವ ಈ ಹೊಣೆಗೇಡಿಗಳು, ಕೇವಲ ಒಂದೇ ವರ್ಷದಲ್ಲಿ ನಾಲ್ಕೈದು ಸಾವಿರ ರೂಪಾಯಿಗಳ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡಲಾಗದೆ, ಕನ್ನಡದ ಕೆಲಸಕ್ಕೆ ಹೀಗೆ ಎಳ್ಳುನೀರು ಬಿಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ನಮಗೆ ಅವರ್‌ಕರ್ನಾಟಕ.ಕಾಮ್, ಅಂತರ್ಜಾಲದಲ್ಲಿ ಹೆಚ್ಚುಹೆಚ್ಚು ಪ್ರಸ್ತುತವಾಗುತ್ತದೆ. ಕನ್ನಡ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಯಾವುದನ್ನು ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಮಾಡಬೇಕಿದೆಯೊ ಅದನ್ನು ಅವರ್‌ಕರ್ನಾಟಕ.ಕಾಮ್ ಕಳೆದ ಏಳೆಂಟು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಇವತ್ತು ಕನ್ನಡ ಜ್ಞಾನಪೀಠ ಪುರಸ್ಕೃತರ ಬಗ್ಗೆ ಅಧಿಕೃತ ಮಹಿತಿ ನೀಡುವ ಒಂದು ಪುಟವನ್ನೂ ಕನ್ನಡ ಸಂಸ್ಕೃತಿ ಇಲಾಖೆ ಹೊಂದಿಲ್ಲ. ಆದರೆ, ಅವರ್‌ಕರ್ನಾಟಕ.ಕಾಮಿನಲ್ಲಿ ಕುವೆಂಪುರವರಿಂದ ಹಿಡಿದು ಅನಂತಮೂರ್ತಿಯವರ ತನಕ ಅವರ ವ್ಯಕ್ತಿಚಿತ್ರ, ಕೃತಿಪರಿಚಯ, ವಿಮರ್ಶೆಗಳಿವೆ. ನವೋದಯ, ನವ್ಯ, ಬಂಡಾಯ, ಜನಪದ, ಹೀಗೆ ಹಲವಾರು ಸಾಹಿತ್ಯ ಘಟ್ಟಗಳ ಕುರಿತ ವಿಸ್ತೃತ ಲೇಖನಗಳಿವೆ. ಬಹುಶಃ ಇಲ್ಲಿರುವಷ್ಟು ಕನ್ನಡ ಸಾಹಿತ್ಯ ಸಂಬಂಧಿ ಲೇಖನಗಳು, ಸಾಹಿತ್ಯಕ್ಕೇ ಮೀಸಲಾದ ಇತರ ವೆಬ್‌ಸೈಟುಗಳಲ್ಲಿ ಕಾಣಸಿಗುವುದೂ ಅಪರೂಪವೆ. ಹಾಗಾಗಿಯೇ ಇದೊಂದು ಕನ್ನಡ ಆನ್‌ಲೈನ್ ಲೈಬ್ರರಿ.

ಲೇಖನದ ವಿಡಿಯೊ ಪ್ರಸ್ತುತಿ

ಶೇಷಗಿರಿ ಶೆಣೈರವರ ಮನೆತನದ ಹಿರಿಯರು ಸ್ವಾತಂತ್ರ್ಯ ಹೋರಾಟದಲ್ಲಿಯೂ, ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿಯೂ ಪಾಲ್ಗೊಂಡಿದ್ದವರು. ಜನಸಂಘ ಮತ್ತು ಆರೆಸ್ಸೆಸ್ ವಿಚಾರಧಾರೆಯ ಹಿನ್ನೆಲೆ ಹೊಂದಿರುವ ಕುಟುಂಬ. ಶೇಷಗಿರಿ ಕಳೆದ ಆರೇಳು ವರ್ಷಗಳಿಂದ ಇಲ್ಲಿಯೇ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಇದ್ದಾರೆ. ಪ್ರತಿಯೊಂದನ್ನೂ ಇಲ್ಲಿನಿಂದಲೇ ನೋಡಿಕೊಳ್ಳುತ್ತಾರೆ. ಈಗ ವೆಬ್‌ಸೈಟನ್ನು ಯೂನಿಕೋಡ್‌ಗೆ ಬದಲಾಯಿಸುವುದು ಮುಂದಿರುವ ಯೋಜನೆ. ಇಲ್ಲಿಯ ತನಕ ವೆಬ್‌ಸೈಟಿಗಾಗಿ ಯಾರಿಂದಲೂ ಒಂದು ಪೈಸೆ ತೆಗೆದುಕೊಳ್ಳದೆ, ಆಗಾಗ ಬೇರೆಯವರ ಲೇಖನಗಳನ್ನು ಸ್ವತಃ ತಾವೆ ಟೈಪ್ ಮಾಡುತ್ತ, ಎಲ್ಲವನ್ನೂ ತಾವೇ ಭರಿಸುತ್ತ, ವೆಬ್‌ಸೈಟ್ ಯಾವ ಕಾರಣಕ್ಕೂ ನಿಲ್ಲದಂತೆ ನೋಡಿಕೊಳ್ಳುತ್ತ, ಕನ್ನಡದ ಕೆಲಸ ಮಾಡುತ್ತಿದ್ದಾರೆ. ಶೇಷಗಿರಿಯವರ ತಮ್ಮ ಸಂದೀಪ್ ಶೆಣೈ ಮೈಸೂರಿನಲ್ಲಿ ಕಾನೂನು ಪದವೀಧರರು. ಅವರೂ ಆಗಾಗ ಬರೆಯುತ್ತಾರೆ; ಬರೆಸುತ್ತಾರೆ; ಪ್ರಕಟಣೆಗೆ ಲೇಖಕರ ಒಪ್ಪಿಗೆ ಪಡೆದುಕೊಳ್ಳುತ್ತಾರೆ. ಚುರುಕಿನ, ಕುತೂಹಲದ ವ್ಯಕ್ತಿ. ಕಳೆದ ಏಪ್ರಿಲ್‌ನಲ್ಲಿ ನಮ್ಮ ಪತ್ರಿಕಾ ಬಳಗದೊಡನೆ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದೆ. ಅವರ ಐಡಿಯಾಲಜಿ ಬಗ್ಗೆ ಕೇಳಿದ್ದಕ್ಕೆ ಸಂದೀಪ್ ಎಂದಿದ್ದು: "ಸೌತ್ ಕೆನರಾ ಅಂದ ಮೇಲೆ ಮತೀಯ ಬಲಪಂಥೀಯತೆ ರಕ್ತದಲ್ಲೇ ಬಂದುಬಿಡುತ್ತೆ. ಹೌದು ನಾನು ಬಲಪಂಥೀಯ. ಆದರೆ, ಇತ್ತೀಚೆಗೆ ಲಂಕೇಶ ಬಳಗದಲ್ಲಿರುವ ದೂರದ ಸಂಬಂಧಿ ಸದಾಶಿವ್ ಶೆಣೈ, ಶಶಿಧರ್ ಭಟ್, ಇಂತಹವರ ಸಂಪರ್ಕ ಬಂದ ಮೇಲೆ ನಿಲುವುಗಳು ಸ್ವಲ್ಪಸ್ವಲ್ಪ ಬದಲಾಗಿವೆ. ಅಂದ ಹಾಗೆ, ಅಮೇರಿಕದಲ್ಲಿದ್ದರೂ ಅದು ಹೇಗೆ ನೀವು 'ಸೆಕ್ಯುಲರ್' ಆದಿರಿ??"

ತಮ್ಮ ಒಲವುನಿಲುವುಗಳನ್ನು ಮೀರಿ, ಪ್ರತಿಫಲಾಪೇಕ್ಷೆಯಿಲ್ಲದೆ ಕನ್ನಡದ ಕೆಲಸಕ್ಕೆ ತೊಡಗಿಕೊಂಡ ಕುಟುಂಬ ಇವರದು.

ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಎಂದ ಸಂಕೇಶ್ವರ್:

ಈ ವೆಬ್‌ಸೈಟಿನಲ್ಲಿ ಯಾವೊಂದು ವಿಚಾರಕ್ಕೂ ಮಡಿಮೈಲಿಗೆ ಇಲ್ಲ. ಹಾಗೆಯೆ, ಒಂದು ಸಲ ವೆಬ್‌ಸೈಟಿನಲ್ಲಿ ಹಾಕಿದ್ದನ್ನೂ ಮತ್ತೆ ತೆಗೆಯುವ ಪ್ರಶ್ನೆಯೇ ಇಲ್ಲ. ಒಮ್ಮೆ ಹೀಗಾಯಿತು: 2003 ರಲ್ಲಿ ಒಂದು ವಿಜಯ್ ಸಂಕೇಶ್ವರ್‌ರ ವಿಆರ್‌ಎಲ್ ಬಸ್ಸಿನಲ್ಲಿ ಶ್ರೀಮತಿ ಭಟ್ ಎನ್ನುವವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಆ ಹೈಟೆಕ್ ಬಸ್ಸಿನಲ್ಲಿನ ಸೇವೆ ಹೇಗಿತ್ತು ಎಂದರೆ, ಗಾಜು ಒಡೆದಿದ್ದ ಕಿಟಕಿಯ ಪಕ್ಕ ಆಕೆಯ ಸೀಟು! ಪ್ರತಿಭಟಿಸಿದ್ದಕ್ಕೆ ಪ್ಲಾಸ್ಟಿಕ್ ಪೇಪರ್‌ನಿಂದ ಕಿಟಕಿಯನ್ನು ಮುಚ್ಚಿದರಂತೆ. ಮಧ್ಯರಾತ್ರಿ ದೇಹಬಾಧೆಗೆ ನಿಲ್ಲಿಸಿದ ಜಾಗದಲ್ಲಿ ಟಾಯ್ಲೆಟ್ಟುಗಳೇ ಇಲ್ಲ. ದಾರಿಬದಿಯಲ್ಲಿ ಕತ್ತಲೆಯಲ್ಲಿ ಹೋಗಿ ಪೂರೈಸಿಕೊಂಡು ಬರಲು ಹೇಳಿದರಂತೆ. ಈ ಎಲ್ಲಾ ಅನುಭವವನ್ನೂ ಬರೆದು, ಆಕೆ ಕುಳಿತಿದ್ದ ಜಾಗದ ಫೋಟೋ ಸಮೇತವಾಗಿ ಆಕೆಯ ಗಂಡ ಅವರ್‍ಕರ್ನಾಟಕಕ್ಕೆ ಬರೆದರು. ಅದನ್ನು ಪ್ರಕಟಿಸಿದರು. ವಿಆರ್‌ಎಲ್ ನಿಂದ ಇದೇ ತರಹದ ಟ್ರೀಟ್‌ಮೆಂಟ್‌ಗೆ ಒಳಗಾಗಿದ್ದ ಅನೇಕರು ವೆಬ್‌ಸೈಟಿಗೆ ಪ್ರತಿಕ್ರಿಯಿಸಿ ಪತ್ರಬರೆದರು. ಇದು ವಿಆರ್‌ಎಲ್ ನವರ ಗಮನಕ್ಕೂ ಬಂತು. ಆ ಪುಟವನ್ನು ತೆಗೆದುಬಿಡಲು ಒತ್ತಡ ಹಾಕಿದರು. ಶೇಷಗಿರಿ ಒಪ್ಪಿಕೊಳ್ಳಲಿಲ್ಲ. ನಿಮ್ಮ ಅಭಿಪ್ರಾಯವನ್ನೊ, ಉತ್ತರವನ್ನೊ ಬರೆಯಿರಿ, ಅದನ್ನೂ ಪ್ರಕಟಿಸಿಸುತ್ತೇವೆ; ಆದರೆ ಒಂದು ಸಲ ಹಾಕಿದ್ದನ್ನು ತೆಗೆಯುವ ಪ್ರಶ್ನೆಯೇ ಇಲ್ಲ, ಎಂದರು. ಕೊನೆಗೆ ಸ್ವತಃ ವಿಜಯ್ ಸಂಕೇಶ್ವರರೇ, "ನಾನು ನನ್ನ ಹಣವನ್ನು ಇನ್ನೂ ಲಾಭದಾಯಕವಾದ ಉದ್ದಿಮೆಯಲ್ಲಿ ಬೇರೆಕಡೆ ತೊಡಗಿಸಬಹುದಿತ್ತು. ಅದರೆ ಈ ಕೆಲಸವನ್ನು ನಾನು ಸಮಾಜಕ್ಕಾಗಿ ಮಾಡುತ್ತಿದ್ದೇನೆ. ನಮ್ಮ ವಿ.ಅರ್.ಎಲ್. ಮಾತ್ರ ಅದು ಮಾಡುತ್ತಿದೆ, ಇದು ಮಾಡುತ್ತಿದೆ. ಭಾರತದಲ್ಲಿ ಯಾರೂ ಸರಿಯಾಗಿ ಬಸ್ಸುಗಳ ಬಾಡಿ ಬ್ಯುಲ್ಡ್ ಮಾಡುವುದಿಲ್ಲ. ಎಲ್ಲಾ ಭಾರತದಲ್ಲಿ ಸಿಗುವ (ಕಳಪೆ) ವಸ್ತುಗಳಿಂದಲೆ ಬಾಡಿ ಕಟ್ಟುತ್ತಾರೆ. ನಮ್ಮದು ಬೆಸ್ಟ್ ಅಂತ ಹೇಳುತ್ತಿಲ್ಲ. ಆದರೆ ನಾನು ನನ್ನ ಕೈಯಲ್ಲಿ ಎಷ್ಟು ಚೆನ್ನಾಗಿ ಮಾಡಬಹುದೊ ಅಷ್ಟು ಮಾಡುತ್ತಿದ್ದೇನೆ. ದಯವಿಟ್ಟು ಇನ್ನೊಮ್ಮೆ ಯೋಚಿಸಿ ಮತ್ತು ಈ ಪುಟವನ್ನು ತೆಗೆಯಿರಿ ಎಂದು ಕೇಳಿಕೊಳ್ಳುತ್ತೇನೆ." ಎಂದು ಬರೆದರು. ಅದನ್ನೂ ಪ್ರಕಟಿಸಿದರು. ಆದರೆ ಯಾವುದನ್ನೂ ತೆಗೆಯಲಿಲ್ಲ!
[http://www.ourkarnataka.com/issues/issues_vrl.htm]

3 comments:

ಕೃಷ್ಣಪ್ರಕಾಶ ಬೊಳುಂಬು said...

ಹೊಸದಿಗ೦ತದ ಒದುಗರ ಓಲೆಯಲ್ಲಿ ನಿಯಮಿತವಾಗಿ ಕಾಣಿಸುವ ಹೆಸರು ಪ್ರೊ|ಮುಮ್ತಾಜ್ ಅಲಿ ಖಾನರದ್ದು. ಇವರು ಮತೀಯವಾದಿಯಲ್ಲ. ನಿಮ್ಮ ದೃಷ್ಟಿಯಲ್ಲಿ 'ಹೊಡಿ, ಬಡಿ, ಕಡಿ' ಎ೦ದರೆ ಈ ಕೆಳಗಿನವುಗಳೇ ಇರಬೇಕು.
http://www.ourkarnataka.com/hosadigantha/learn07.htm
http://www.ourkarnataka.com/hosadigantha/desha07.htm
http://www.ourkarnataka.com/hosadigantha/rel07.htm
http://www.ourkarnataka.com/hosadigantha/ennada07.htm
http://www.ourkarnataka.com/hosadigantha/kasaragod07.htm
http://www.ourkarnataka.com/hosadigantha/explo.htm

http://www.ourkarnataka.com/issues/issues_vrl.htm ತಾಣದಲ್ಲಿ ಕನ್ನಡದಲ್ಲಿ ಕೊಟ್ಟ ಸೂಚನೆ ನಿಮ್ಮ ಕಣ್ಣಿಗೆ ಬಿದ್ದಿರಲಾರದು. ಅದು ನಿಮ್ಮ ಜಾಣತನ.

ಕೃಷ್ಣಪ್ರಕಾಶ ಬೊಳುಂಬು

Anonymous said...

ರವಿಕೃಷ್ಣಾ ರೆಡ್ಡಿ ಸಾರ್ ಈ ಕೆಳಗಿನಂತಹ ಸುದ್ದಿಗಳು ಯಾವ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗುವುದಿಲ್ಲ. ಅದರ ಬಗ್ಗೆ ನಿಮ್ಮಂತ ಯಾವ ಬುದ್ದಿಜೀವಿಯೂ ಕ್ಯಾರೇ ಅನ್ನುವುದಿಲ್ಲ. ಇಂತಹ ವಿಷಯ ಮಾತಾಡಿದ್ರೆ ಕೋಮುವಾದಿಗಳು ಚಡ್ಡಿಗಳು ಅಂತೀರ. ಅನ್ಯಾಯ ಎಲ್ಲೇ ಆದ್ರೂ ಯಾರೇ ಮಾಡಿದ್ರೂ ಖಂಡಿಸಬೇಕು. ಅದು ಬಿಟ್ಟು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಅನ್ನೋ ತರ ವರ್ತಿಸೋ ಮಾಧ್ಯಮಗಳು ಆಷಾಡಭೂತಿಗಳು.

-ಪಾಟೀಲ
=================
At Achalpur in Amaravati district (Maharashtra), recently fanatic Muslims started riots with stoning from a mosque at a procession of Sree Durga Devi all of a sudden. It is noteworthy that the riot started by Muslims was pre-planned. The pseudo-secular media has ignored this carnage of Hindus by just mentioning the word "RIOTS". Still our secular Government has just declared small financial aid. No serious legal action has been taken. The horrified Hindus have yet not dared to return to their homes & are staying in camps. Hence, it is important to bring the real truth of Achalpur to the common man because if we ignore it now, tomorrow these Jihadis will be at our doorstep.

Evidence of Muslim Terrorism: Post Riot Photos

http://www.hindujagruti.org/activities/campaigns/religious/achalpur-riots/
=================

ಉಉನಾಶೆ said...

ಅವರ್‍ಕರ್ನಾಟಕದ ಬಗ್ಗೆ ನಾನು ಹೇಳಬೇಕು ಅಂದುಕೊಂಡಿದ್ದನ್ನು ನೀವು ಹೇಳಿದ್ದೀರ.
ಶೇಷು ಮತ್ತು ಸಂದೀಪ್ - ಅಣ್ಣತಮ್ಮಂದಿರು ಅದನ್ನು ಇಷ್ಟೊಂದು ವರ್ಷಗಳ ಕಾಲ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ.
ತಮ್ಮ ಒಲವು-ನಿಲುವುಗಳನ್ನು ಮೀರಿದ/ವಿರೋಧಿಸುವ ವಿಚಾರಗಳನ್ನು ಪ್ರಕಟಿಸುವಲ್ಲಿ ಇವರದು ಮೊದಲನೆ ಸ್ಥಾನ. ಕನ್ನಡದಲ್ಲಿ ಈ ಬಗೆಯ ಮುಕ್ತತೆ ನಾನು ವೆಬ್ ಅಠವಾ ಮುದ್ರಣ ಪತ್ರಿಕೋದ್ಯಮದಲ್ಲಿ ಎಲ್ಲೂ ನೋಡಿಲ್ಲ. ಎಡವೂ ಅಷ್ಟೆ, ಬಲವೂ ಅಷ್ಟೆ.
ಇತೀ,
ಉಉನಾಶೆ