Nov 30, 2010

ಬೊಮ್ಮಸಂದ್ರದಿಂದ...

ಈಗ ವಾಸ್ತವ್ಯ ಬದಲಾಗಿದೆ (ಪೂರ್ತಿ ಅಲ್ಲದಿದ್ದರೂ ಬಹುಪಾಲು.) ಇನ್ನೊಂದಷ್ಟು ದಿನಗಳಲ್ಲಿ ಇನ್ನೊಂದು ಜಾಗಕ್ಕೆ/ಮನೆಗೆ ಬದಲಾಯಿಸಬಹುದು. ಊರಿನಿಂದ ದೂರ ಏನಲ್ಲ.

ನಿಧಾನಕ್ಕೆ ಕರ್ನಾಟಕದ ಮತ್ತು ಭಾರತದ ದೈನಂದಿನ ಜೀವನದ ಗೋಳು ತಟ್ಟುತ್ತಿದೆ. ಈಗ ತಾನೆ RTO ಕಛೇರಿಗೆ ಹೋಗಿ ಬಂದೆ. ಮುಗ್ದರು, ಅಮಾಯಕರು, ಪ್ರಾಮಾಣಿಕರು ಎಲ್ಲರೂ ಇಲ್ಲಿ ಅಸಹಾಯಕರು. ಅಂತಹ ಅಸಹಾಯಕರಿಗೆ ಮಾತ್ರ ಕಾನೂನು ಅನ್ವಯವಾಗುತ್ತದೆ. ಮತ್ತು ಅವರಿಗೆ ನ್ಯಾಯ ದಕ್ಕುತ್ತಿಲ್ಲ.
ನಮ್ಮ ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರವನ್ನು ನೋಡಿ ಥೊರೋ ಮತ್ತು ಗಾಂಧಿ ಮಾಡಿದ ಕಾನೂನು ಉಲ್ಲಂಘನೆಯೇ ಈಗಿನ ನಮ್ಮ ಸಂದರ್ಭದ ನಮ್ಮದೇ ಸ್ವತಂತ್ರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ನೈತಿಕವಾಗಿಯೂ ಸರಿಯೇನೊ ಎನ್ನಿಸುತ್ತಿದೆ. ಥೊರೋ ತೆರಿಗೆ ಕಟ್ಟಬೇಕಾದ ಕಾನೂನು ಕಟ್ಟುಪಾಡನ್ನು ಉಲ್ಲಂಘಿಸಿದ. ನನಗೆ ತೆರಿಗೆ ಕಟ್ಟಲು ಅಭ್ಯಂತರವಿಲ್ಲ. ಆದರೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದಕ್ಕಿಂತ ಕಾನೂನು ಉಲ್ಲಂಘಿಸಿ ದಂಡ ಹಾಕಿಸಿಕೊಳ್ಳುವುದೇ ನೈತಿಕತೆ ಮತ್ತು ಮೌಲ್ಯವನ್ನು ಕಾಪಾಡುತ್ತದೆ ಎನ್ನಿಸಿತ್ತದೆ.

ಜಾಗ ಬದಲಾವಣೆಯೊಂದಿಗೆ ಹಲವಾರು ಕೆಲಸಗಳು ಜವಾಬ್ದಾರಿಗಳು ಮುಂದಿವೆ. ಒಂದೊಂದನ್ನೇ ಮಾಡುತ್ತ ಹೋಗುತ್ತೇನೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಮತ್ತು ಪ್ರಜಾಪ್ರಭುತ್ವವಾದಿ ವಿಷಯಗಳಿಗೆ ಸಕ್ರಿಯನಾಗುತ್ತೇನೆ. ನಾನು ತೊಡಗಿಸಿಕೊಳ್ಳಬಹುದಾದ ವಿಷಯಗಳಿದ್ದಲ್ಲಿ ಸ್ನೇಹಿತರು ಅದನ್ನು ನನ್ನ ಗಮನಕ್ಕೆ ತಂದರೆ ಅವರಿಗೆ ನಾನು ಆಭಾರಿ. (ನನ್ನ ದೂರವಾಣಿ ಸಂಖ್ಯೆ: ೯೬೮೬೦೮೦೦೦೫)

ನಮಸ್ಕಾರ,
ರವಿ...