May 22, 2009

ಅನಾಮಿಕತೆ ಮತ್ತು ಅಮಲಿನಲ್ಲಿ ಕೆಂಡಸಂಪಿಗೆ...

ಹಿಂದೊಮ್ಮೆ ಕೆಂಡಸಂಪಿಗೆಯ ಬಗ್ಗೆ ಬರೆದಿದ್ದೆ. ಕನ್ನಡದ ಅಂತರ್ಜಾಲದಿಂದ ಹೊರಗಿದ್ದ ಅನೇಕ ಅರ್ಹರನ್ನು ಅದು ಪ್ರೀತಿಯಿಂದ ಎಳೆದೆಳೆದುಕೊಂಡು ಬಂದು ಕನ್ನಡ ಅಂತರ್ಜಾಲದಲ್ಲಿ ಕೂರಿಸಿದೆ. ಕೂರಿಸುತ್ತಿದೆ. ಆ ಮೂಲಕ, ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಇಲ್ಲದೆ ಹೋಗಿದ್ದ ಒಂದು ಕರ್ನಾಟಕದ ಪ್ರತಿಬಿಂಬವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ. ಅದನ್ನು ದುಡ್ಡು ಹಾಕಿ ನಡೆಸುತ್ತಿರುವವರು ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಅವರು ಹೂಡುತ್ತಿರುವ ದುಡ್ಡಿಗೆ ಅಲ್ಲಿಂದ ಯಾವ ರೀತಿಯ ಹಣಕಾಸಿನ Returns ಇಲ್ಲ ಎಂದು ಮಾತ್ರ ಖಂಡಿತವಾಗಿ ಹೇಳಬಹುದು. ಕನ್ನಡ ಸೈಟುಗಳಿಗೆ ಜಾಹಿರಾತುಗಳು ಸಿಗುತ್ತವೊ ಇಲ್ಲವೊ. ಸಿಕ್ಕರೂ ಅವುಗಳ ಆದಾಯ ಯಾವ ಖರ್ಚಿಗೂ ಸಾಲುವುದಿಲ್ಲ. ಕೆಂಡಸಂಪಿಗೆಯಲ್ಲಂತೂ ಜಾಹಿರಾತುಗಳೇ ಇಲ್ಲ. ಹೀಗಿರುವಾಗ, ಅದನ್ನು ನಡೆಸುತ್ತಿರುವವರು ಯಾವೊಂದು ಆದಾಯದ ನಿರೀಕ್ಷೆಯಿಲ್ಲದೆ ತಮ್ಮ ಸ್ವಂತ ದುಡ್ಡನ್ನು ಕಳೆದುಕೊಳ್ಳುತ್ತಲೆ ಅದನ್ನು ನಡೆಸುತ್ತಿದ್ದಾರೆ ಎಂತಲೇ ಹೇಳಬೇಕು. ಬಹುಶಃ ಅದು ಅವರ ಜೀವನಪರ/ಕನ್ನಡಪರ ಕಾಳಜಿಗಳಿಂದ ಬಂದದ್ದಾಗಿರಬೇಕು. ಅವರು ಯಾರು ಮತ್ತು ಅವರ ಒಲವುನಿಲುವುಗಳೇನು ಎಂದು ಗೊತ್ತಾಗುವ ತನಕ ಯಾವುದನ್ನೂ ನಿಖರವಾಗಿ ಹೇಳಲಾಗುವುದಿಲ್ಲ. ಬಹುಶ: ಆಮೇಲೆಯೂ ಸಹ. ಆದರೆ ಆ ನಂತರದ ಅಭಿಪ್ರಾಯಕ್ಕೆ ತೀರಾ ವೈಯಕ್ತಿಕವಾದ ಅಭಿಪ್ರಾಯಗಳೂ ಸೇರಿಕೊಳ್ಳುತ್ತವೆ.

ಅಬ್ದುಲ್ ರಶೀದ್ ಸಂಪಾದಕತ್ವದಲ್ಲಿ ಬರುತ್ತಿರುವ ಕೆಂಡಸಂಪಿಗೆಗೆ ನಾಗರಾಜ್ ವಸ್ತಾರೆ ಎಂಬ ಕತೆಗಾರ-ಕವಿ-ಲೇಖಕ ಈ ತಿಂಗಳು ಅತಿಥಿ ಸಂಪಾದಕರಾಗಿದ್ದಾರೆ. ಅವರ ಯಾವ ಕತೆಗಳನ್ನು ಓದಿದ್ದೇನೆ ಎಂದು ನೆನಪಿಲ್ಲ. ಓದಿರಬಹುದು. ಇಲ್ಲದೆಯೂ ಇರಬಹುದು. ಒಂದಷ್ಟು ಸಾಹಿತ್ಯವನ್ನು ಓದುವ, ಬಹಳಷ್ಟನ್ನು (ಸಿನೆಮಾ) ನೋಡುವ, ಇನ್ನೂ ಬಹಳಷ್ಟು ಅದೂಇದನ್ನು ಅಂತರ್ಜಾಲದಲ್ಲಿ ಓದುವ ನನಗೆ ಓದಿದ ಸಣ್ಣಕತೆಗಳು ಬಹಳ ದಿನ ಜ್ಞಾಪಕ ಇರುವುದಿಲ್ಲ. ಆದರೆ ಲೇಖಕರ ಹೆಸರು, ಅವರದನ್ನು ಓದಿಲ್ಲದಿದ್ದರೂ, ಸುಮಾರಾಗಿ ಗೊತ್ತಿರುತ್ತದೆ. ಎರಡು-ಮೂರು ಕನ್ನಡ ಪೇಪರ್‌ಗಳನ್ನು ಮತ್ತು ಹಲವು ಕನ್ನಡ ಬ್ಲಾಗ್‌ಗಗಳನ್ನು ಜಾಲಾಡುವ ಅಭ್ಯಾಸವಿರುವ ನನಗೆ ವಸ್ತಾರೆ ಎಂಬ ಹೆಸರು ಇತ್ತೀಚಿನ ವರ್ಷಗಳಲ್ಲಿ ಹಲವು ಸಲ ಕಾಣಿಸಿದೆ. ಜೊತೆಗೆ ಈಗ ಅವರು ಕೆಂಡಸಂಪಿಗೆಗೆ ಅತಿಥಿ ಸಂಪಾದಕರಾಗಿರುವುದು ಇತ್ತೀಚಿನ ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಪ್ರಾಮುಖ್ಯವನ್ನೂ ತೋರಿಸುತ್ತಿದೆ.

ಬೆಂಗಳೂರಿನಲ್ಲಿರುವ ಕನ್ನಡ ಲೇಖಕರು; ಅವರಲ್ಲಿಯ Socialites ಮತ್ತು Socialists; ಅವರಿಗೆ ಸಿಗುವ ಪ್ರಚಾರಗಳು; ಪರಸ್ಪರ ಮಾಡಿಕೊಳ್ಳುವ ಪ್ರಸ್ತಾಪಗಳು; ಬೆಂಗಳೂರಿನಿಂದ ಹೊರಗಿರುವ ಪ್ರತಿಭಾವಂತ ಅನಾಮಿಕರು; ಪುಸ್ತಕ ಪ್ರಕಟಿಸುವುದಿರಲಿ, ಜೀವನೋಪಾಯಕ್ಕೂ ತೊಳಲಾಡುವವರು; ಅವರಿಗೆ ದಕ್ಕದ ಅವಕಾಶಗಳು, ಪ್ರಚಾರಗಳು; ಹೀಗೆ ಇಲ್ಲಿ ಇನ್ನೂ ಒಂದಷ್ಟು ಬರೆಯುವ ಮನಸ್ಸಾಗುತ್ತದೆ. ಆದರೆ, ಹೀಗೆ ಬಿಡಿಬಿಡಿಯಾಗಿ ಹೇಳಿ ಹಾಗೆಯೆ ಬಿಡುತ್ತೇನೆ! ಅದು ನಮ್ಮ ಸಮಾಜದಲ್ಲಿನ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ, ಇವತ್ತಿನ ವಾಸ್ತವ ಮತ್ತು ಮೌಲ್ಯಗಳಿಗೆ ಸಂಬಂಧಪಟ್ಟದ್ದು.

ಈಗ ಮತ್ತೆ ವಸ್ತಾರೆಯಯವರ ವಿಷಯಕ್ಕೆ ಬರುತ್ತೇನೆ. ಸಾಧ್ಯವಾದರೆ ನಾನು ಪ್ರತಿದಿನವೂ ಒಂದು ಸಲ ನೋಡುವ ಕನ್ನಡ ಸೈಟುಗಳಲ್ಲಿ ಕೆಂಡಸಂಪಿಗೆಯೂ ಒಂದು. ಒಂದಷ್ಟು ಓದುತ್ತೇನೆ. ಒಂದಷ್ಟು ಇಲ್ಲ. ನಾಗರಾಜ್ ವಸ್ತಾರೆಯವರು ಅತಿಥಿ-ಸಂಪಾದಕರಾಗಿರುವುದರಿಂದ ಅವರ ಮೊದಲ ಎರಡು ಸಂಪಾದಕೀಯಗಳನ್ನೂ ಓದಿದೆ. ಅದು ಹೆಚ್ಚಾಗಿ ಅನಾಮಿಕ ಪ್ರತಿಕ್ರಿಯೆಕಾರರ ಬಗ್ಗೆ ಇತ್ತು. ಬಯಲಿನಲ್ಲಿ ನಿಂತವರು, ಅಂದರೆ ಸಾರ್ವಜನಿಕ ಜೀವನದಲ್ಲಿ ಇರುವವರು, ತಮ್ಮ ಕೃತಿ-ಅಭಿಪ್ರಾಯವನ್ನು ಬಯಲಿನಲ್ಲಿ ಅನಾವರಣಗೊಳಿಸುವ ಸಾಹಿತಿ-ಕಲಾವಿದರು, ಎಲ್ಲಾ ತರಹದ ಪ್ರತಿಕ್ರಿಯೆಗಳಿಗೆ ಸಿದ್ಧವಾಗಿರಬೇಕಾಗುತ್ತದೆ. ಅಪಪ್ರಚಾರಗಳಿಗೂ ಸಹ. ಅನಾಮಿಕವಾಗಿ ಬರುವುದಕ್ಕೂ ಸಹ. ಇನ್ನು ಅಂತರ್ಜಾಲವಂತೂ ಅನಾಮಿಕವಾಗಿ ಪ್ರತಿಕ್ರಿಯಿಸ ಬಯಸುವವರಿಗೆ ಸ್ವಚ್ಛಂದ-ಸ್ವೇಚ್ಚಾಚಾರದ ಸ್ವರ್ಗ. ಇಂತಹ ಅನಾಮಿಕತೆಯ ಸುತ್ತಲೆ ವಸ್ತಾರೆ ಎರಡು ಬಾರಿ ಸಂಪಾದಕೀಯ ಬರೆದರು. ನನಗೆ ಅದರ ಬಗ್ಗೆ ತಕರಾರಿಲ್ಲ. ಆದರೆ ಅವರ ಎರಡನೆಯ ಲೇಖನದಲ್ಲಿ ಕೆಲವೊಂದು ಅಂಶಗಳು ನನಗೆ ಸರಿ ಕಾಣಲಿಲ್ಲ.

ಬೆಂಗಳೂರಿನಿಂದ ಹೊರಗಿರುವ ನನಗೆ ನನ್ನ ಹಲವು ವಾರಿಗೆಯ ಲೇಖಕರನ್ನು ಮಾತು-ಸ್ನೇಹ-ಪರಿಚಯದಲ್ಲಿ ತೊಡಗಿಸಿಕೊಳ್ಳಬೇಕು, ಆ ಮೂಲಕ ಇವತ್ತಿನ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು, ಮತ್ತು ಸಮಾನಮನಸ್ಕರನ್ನು ಗುರುತಿಸಿಕೊಳ್ಳಬೇಕು ಎಂದು ಅನ್ನಿಸುತ್ತದೆ. ಆದರೆ, ಪದೆಪದೆ ಸಣ್ಣಪುಟ್ಟದ್ದಕ್ಕೆಲ್ಲ ಇಮೇಲ್ ಮಾಡುವ ಅಭ್ಯಾಸವಾಗಲಿ, ಹಪಹಪಿಯಾಗಲಿ ಇಲ್ಲದವನು ನಾನು. ತಮಾಷೆ ಮತ್ತು ಮಾತಿನ ಹರಟೆಯಲ್ಲಿ ಎಷ್ಟು ಕಾಲ ಬೇಕಾದರೂ ತಳ್ಳಬಲ್ಲೆ. ಆದರೆ ಬೌದ್ಧಿಕವಾಗಿಲ್ಲದ ಯಾವೊಂದು ಬರವಣಿಗೆಯೂ, ಅದು ಒಂದೆರಡು ಸಾಲುಗಳೇ ಆಗಿರಲಿ, ಬಹಳ ಕಷ್ಟ. ಹೀಗಾಗಿಯೆ ಅನೇಕ ಸಲ ಸೌಜನ್ಯದ ಪತ್ರಗಳಿಗೂ ಉತ್ತರಿಸುವುದನ್ನು ಮುಂದಕ್ಕೆ ಹಾಕಿರುತ್ತೇನೆ ಅಥವ ಮರೆತುಬಿಟ್ಟಿರುತ್ತೇನೆ. ಹಾಗಾಗಿಯೆ ಅನೇಕ ವಾರಿಗೆಯವರೊಂದಿಗೆ ನನ್ನ ಪತ್ರವ್ಯವಹಾರ ಇಲ್ಲ.

ಆದರೂ, ಅಂತಹವರ ಲೇಖನ-ಕತೆಗಳು ಅವುಗಳಿಗೆ ಸ್ಪಂದಿಸುವಂತಹ ವಿಚಾರಗಳನ್ನು ಹೊಂದಿದ್ದರೆ ಅಂತಹ ಸಂವಾದದಲ್ಲಿ ತೊಡಗಿಸಿಕೊಳ್ಳುವ ಮನಸ್ಸಾಗುತ್ತದೆ. ಆ ಮೂಲಕವಾದರೂ ಅವರೊಡನೆ ವಿಚಾರ-ವಿನಿಮಯ ಸಾಧ್ಯವಾದರೆ ಆಗಲಿ ಎಂದುಕೊಳ್ಳುತ್ತೇನೆ. ಅಂತಹ ಯೋಚನೆಯ ಭಾಗವಾಗಿಯೆ, ಜೊತೆಗೆ ವಸ್ತಾರೆಯವರ ಕೆಲವು ಪ್ರಸ್ತಾಪಗಳು ಕಿರಿಕಿರಿ ಮಾಡಿದ್ದರಿಂದ ಅವರಿಗೆ ಮತ್ತು ಕೆಂಡಸಂಪಿಗೆಗೆ ಈ ಪತ್ರ ಬರೆದೆ. ಆದರೆ ಸಂವಾದದ ರೂಪದಲ್ಲಿ ಪ್ರಕಟಿಸಿ ಎಂದೂ ಕೋರಿದ್ದೆ. ಅದಕ್ಕೆ ವಸ್ತಾರೆ, "ಇದೊಂದು ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಕೆಂಡಸಂಪಿಗೆಯಲ್ಲಿ ಹಾಕಲಾಗುವುದಿಲ್ಲ," ಎಂದರು. ಆದರೆ, ಒಮ್ಮೆ ಯೋಚಿಸಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅದು ಯಾವುದೇ ತಿರುವು ತೆಗೆದುಕೊಳ್ಳಲಿ ಬಹಿರಂಗಗೊಳಿಸದೆ ಬಿಡದ, ಆ ಮೂಲಕ ನನ್ನನ್ನೆ ಪರೀಕ್ಷೆಗೆ ಮತ್ತು ವಿಮರ್ಶೆಗೆ ಒಡ್ಡಿಕೊಳ್ಳುವ ನಾನು ಈಗ ಆ ಪತ್ರವನ್ನು ಇಲ್ಲಿ ಹಾಕುತ್ತಿದ್ದೇನೆ. (ಇದನ್ನು ಮೂರು ದಿನದ ಹಿಂದೆಯೆ ಹಾಕಬೇಕಿತ್ತು. ಆದರೆ ವಸ್ತಾರೆಯವರ ಮಾರುತ್ತರ ಬಂದ ದಿನವೆ ಇನ್ನೊಂದು ಬ್ಲಾಗ್‌ಪೋಸ್ಟ್ ಬರೆದಿದ್ದೆನಾದ್ದರಿಂದ ಒಂದೆರಡು ದಿನ ಅಂತರವಿರಲಿ ಎಂದು ಇಂದು ಹಾಕುತ್ತಿದ್ದೇನೆ.) ಇದನ್ನು ಚರ್ಚೆಗೆ ಎತ್ತಿಕೊಳ್ಳಬಯಸುವವರು ಎತ್ತಿಕೊಳ್ಳಬಹುದು ಅಥವ ಮೇಯ್ಲ್ ಮಾಡಬಹುದು. ನನ್ನ ಅಭಿಪ್ರಾಯಗಳೂ ಅವುಗಳ ಆಧಾರದ ಮೇಲೆ ಬದಲಾದರೂ ಆಗಬಹುದು. ಬೇರೆಯವರದೂ ಸಹ. ಆ ಬದಲಾವಣೆಗಳ ಬಗ್ಗೆ ಕಾಲ ಮಾತ್ರ ಏನಾದರೂ ಹೇಳಬಹುದು.

ಪ್ರೀತಿಯ ನಾಗರಾಜ್,

ನಿಮ್ಮ "ಐನೂರು ಚದರಗಳ ಅನಾಮಿಕತೆಯ ಬಿಕ್ಕಟ್ಟು" ಲೇಖನ ಓದಿ, ಒಂದೆರಡು ವಿಷಯಗಳಿಗೆ ಪ್ರತಿಕ್ರಿಯಿಸಬೇಕು ಎನ್ನಿಸಿತು. ಬ್ಲಾಗ್ ಅಥವ ವೆಬ್‌ಸೈಟುಗಳಲ್ಲಿ ಪ್ರತಿಕ್ರಿಯಿಸುವ ಅಭ್ಯಾಸ ನನಗಿಲ್ಲದಿರುವುದರಿಂದ, ಹಾಗೂ ಈ ಲೇಖನ-ಪತ್ರ ಸ್ವಲ್ಪ ವಿಸ್ತೃತವಾಗಿರುವುದರಿಂದ ಬೇರೆಯಾಗಿಯೆ ಬರೆಯುತ್ತಿದ್ದೇನೆ.

ನಿಮ್ಮ ಲೇಖನದಲ್ಲಿನ ಎರಡು ವಿಷಯಗಳ ಬಗ್ಗೆ ನನ್ನ ಪ್ರತಿಕ್ರಿಯೆ. ಮೊದಲನೆಯದು, ನೆರೆರಾಜ್ಯದ ಮುಖ್ಯಮಂತ್ರಿಯೊಬ್ಬರ ಬಗ್ಗೆ ಬರೆದಿದ್ದೀರಿ. ಅಲ್ಲಿ ಪ್ರಸ್ತಾಪಿಸಿರುವ ಕೆಲವೊಂದು ವಿಷಯಗಳು ನಮ್ಮಲ್ಲಿನ ರಾಜಕೀಯ ಮತ್ತು ಪ್ರಜಾಪ್ರಭುತ್ವದ ಗತಿಯನ್ನು ಗಮನಿಸುವ ನನ್ನಂತಹವನಿಗೆ ಬಹಳ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಆ ಮುಖ್ಯಮಂತ್ರಿ ಯಾರು ಎಂದು ಹೇಳಿದ್ದರೆ, ಅಥವ ಆತನ ಹೆಸರು ಹೇಳದೆ ಇರುವ ಬಯಕೆ ನಿಮ್ಮದಾಗಿದ್ದಲ್ಲಿ ಕನಿಷ್ಠ ಒಂದಷ್ಟು ಖಚಿತ ಸುಳಿವುಗಳನ್ನಾದರೂ ನೀಡಿದ್ದಲ್ಲಿ ಒಳ್ಳೆಯದಾಗುತ್ತಿತ್ತು. ಆತನ "ಅರಮನೆ" ಮತ್ತು ಅದಕ್ಕೆ ತಗುಲಿರುವ ನೂರೈವತ್ತು ಕೋಟಿ ಮೊತ್ತದ ಬಗ್ಗೆ ನಾನು ಸಂಶಯ ಪಡುತ್ತಿಲ್ಲ. ಆದರೆ, ಆತ ಯಾರು ಎನ್ನುವುದರ ಬಗ್ಗೆ, ಮತ್ತು ಆತ ಅಷ್ಟು ದುಡ್ಡನ್ನು ಹೇಗೆ ಮಾಡಿರಬಹುದು ಎನ್ನುವುದರ ಬಗ್ಗೆ ಒಬ್ಬ ಪ್ರಜೆಯಾಗಿ ನನ್ನ ಸಂಶಯ ಮತ್ತು ಕುತೂಹಲವಿದೆ. ಖಚಿತ ಮಾಹಿತಿಗಳಿರುವ ನಿಮ್ಮಂತಹವರು ಹೀಗೆ ಜನಪ್ರತಿನಿಧಿಗಳ ಬಗ್ಗೆ ಹೆಸರು ಹೇಳದೆ ಅವರನ್ನು ಅನಾಮಿಕವಾಗಿಡುವುದು ಒಳ್ಳೆಯದಲ್ಲ. ಅಂತಹ ಲಕ್ಷುರಿಯನ್ನು ಸಾಹಿತ್ಯ ಅಥವ ಪ್ರಬಂಧ ಎನ್ನುವ "ಸಾಹಿತ್ಯದ ಸವಲತ್ತಿ"ನ ಆಧಾರದ ಮೇಲೆ ಪರಿಗಣಿಸುವುದು ನನ್ನಂತಹವರಿಗೆ ಕಷ್ಟ.

ಈ ವಿಷಯ ಯಾಕೆ ಮುಖ್ಯ ಎನ್ನಲು ಇನ್ನೂ ಸ್ವಲ್ಪ ವಿವರಣೆ ಕೊಡುತ್ತೇನೆ. ಆ ಮುಖ್ಯಮಂತ್ರಿ ನಾಸ್ತಿಕ ಕರುಣಾನಿಧಿಯೆ? ಅವರಿಗೆ ಅಷ್ಟೆಲ್ಲ ಆರೋಗ್ಯವಿರುವ ಹಾಗೆ ಕಾಣಿಸುತ್ತಿಲ್ಲ. ಕೇರಳದ ಎಡರಂಗದ ಮುಖ್ಯಮಂತ್ರಿಗಳಂತೂ ಅಷ್ಟು ಶ್ರೀಮಂತಿಕೆ ಗಳಿಸಿಕೊಳ್ಳುವುದು ಅಸಾಧ್ಯ. ಇನ್ನು ಉಳಿದವರು ಅಶೋಕ್ ಚವಾಣ್ ಅಥವ ರಾಜಶೇಖರ ರೆಡ್ಡಿ. ನಿಮ್ಮ ಲೇಖನದಲ್ಲಿರುವ ಕೆಲವೊಂದು ವಿವರಗಳ ಆಧಾರದ ಮೇಲೆ, ಆ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಇರಬಹುದು; ಈ ವಿವರಗಳು ಅವರಿಗೇ ಹೆಚ್ಚು ಹೋಲುತ್ತಿದೆ, ಎನ್ನುವ ಅಭಿಪ್ರಾಯಕ್ಕೆ ನಾನು ಬಂದಿದ್ದೇನೆ. ಅದು ಅಲ್ಲವಾದಲ್ಲಿ ನಿಮ್ಮ ಲೇಖನ ಹುಟ್ಟಿಸುವ ಸಂಶಯಗಳು ಸಾರ್ವಜನಿಕ ಜೀವನದಲ್ಲಿ ಯಾವ ರೀತಿ ಅನಾರೋಗ್ಯಕರ ಎನ್ನುವುದನ್ನು ನಿರೂಪಿಸುತ್ತದೆ. ಈಗ ಅದು ರಾಜಶೇಖರ್ ರೆಡ್ಡಿಯೇ ಆಗಿದ್ದಲ್ಲಿ, ಮಲಗುವ ಕೋಣೆಯಿಂದ ಗೋಪುರ ಕಾಣಿಸಬಾರದು ಎನ್ನುವ ಹಠಕ್ಕೆ ಕಾರಣ ಏನಿರಬಹುದು ಎಂದು ನಾನು ಯೋಚಿಸುತ್ತೇನೆ. ಅದಕ್ಕೆ ಮತೀಯ ಕಾರಣವಿದೆಯೆ ಅಥವ ಇನ್ಯಾವ ತರಹದ ಅಸಹನೆಯಿಂದ ಅದು ಹುಟ್ಟಿದೆ? ಅದಕ್ಕೆ ಮತೀಯ ಕಾರಣವೆ ಇದ್ದಲ್ಲಿ ಅದು ಒಬ್ಬ ಜನಪ್ರತಿನಿಧಿಯ ಮತಸಹಿಷ್ಣುತೆಯ ಬಗ್ಗೆ ಹಲವಾರು ಒಳನೋಟ ನೀಡುತ್ತದೆ. ಇನ್ನು ನಾವು ಆಂಧ್ರದ ವಿರೋಧ ಪಕ್ಷಗಳಿಂದ ಕೇಳುವ ಭ್ರಷ್ಟಾಚಾರದ ಆಕ್ಷೇಪಗಳಿಗೂ ಅದು ತಾರ್ಕಿಕ-ಪುಷ್ಟಿ ಕೊಡುತ್ತದೆ. ಹಾಗಾಗಿ, ಇಂತಹ ವಿಷಯಗಳ ಬಗ್ಗೆ ಗಂಭೀರವಾಗಿ ಬರೆಯುವಾಗ ಹಾಗೂ ಸಾಮಾಜಿಕ ಕಾಮೆಂಟರಿ ಮಾಡುವಾಗ ಯಾರನ್ನೇ ಆಗಲಿ ಅನಾಮಿಕರನ್ನಾಗಿಡುವುದು, ಹಾಗೆ ಇಡಲೇಬೇಕಾಗಿ ಬಂದಾಗ ಕನಿಷ್ಟ ಕೆಲವಾದರೂ ಸುಳಿವುಗಳನ್ನು ನೀಡದಿರುವುದು ನಮ್ಮ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ಸಾಹಿತ್ಯ ಮತ್ತು ಅದರ ಪ್ರಭಾವವನ್ನು ನಾನು ಅರ್ಥ ಮಾಡಿಕೊಂಡಿರುವ ರೀತಿಯನ್ನು ಬರೆದು ಮುಂದಿನ ವಿಷಯ ಪ್ರಸ್ತಾಪಿಸುತ್ತೇನೆ. ಕೆಲವರಿಗೆ ಸಾಹಿತ್ಯ ಬಹಳ ವೈಯಕ್ತಿಕವಾದದ್ದು. ರಸಾಸ್ವಾದನೆ ಮಾಡಲಷ್ಟೆ ಅರ್ಹವಾದದ್ದು. ಅದೊಂದು ಮನರಂಜನೆಯ ವಸ್ತು. ಆದರೆ ನನ್ನ ಪ್ರಕಾರ ಸಾಹಿತ್ಯ ವೈಚಾರಿಕತೆ-ಜ್ಞಾನ-ಸಂತಸಗಳನ್ನಷ್ಟೆ ಅಲ್ಲದೆ, ಹಲವಾರು ಸಂದರ್ಭಗಳಲ್ಲಿ ಉತ್ತಮವಾದ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ ಬದಲಾವಣೆಗಳನ್ನು ತರಬಲ್ಲದು. ಬದಲಾವಣೆಯ ತುರ್ತನ್ನೂ, ಅಂತಹ ಸಂದರ್ಭವನ್ನು ಸೃಷ್ಟಿಸುವ ಕೆಲಸವನ್ನೂ ಸಾಹಿತ್ಯ ಪರೋಕ್ಷವಾಗಿ ಮಾಡುತ್ತಿರುತ್ತದೆ. ಹಾಗಾಗಿಯೆ ಸಾಹಿತ್ಯ ಮತ್ತು ಸಾಮಾಜಿಕ ಸಾಹಿತಿಗಳಲ್ಲಿ ಎಲ್ಲರಿಗಿಂತ ಹೆಚ್ಚಿನ ಜವಾಬ್ದಾರಿ ಮತ್ತು ಬದ್ಧತೆಯನ್ನು ನಾನು ಬಯಸುತ್ತೇನೆ.

ಎರಡನೆಯ ವಿಷಯ, ನೀವು ಚಿರಂಜೀವಿಯ ಬಗ್ಗೆ ಹೇಳಿರುವ "ಚಿರಂಜೀವಿ ಎಂಬ ಚಿತ್ರರಂಗದ ಧೀಮಂತ ರಾಜಕೀಯಕ್ಕೆ ಇಳಿದಿರುವುದೂ ಇದೇ ಅಮಲಿನಿಂದ ತಾನೆ? ಇಷ್ಟು ವರ್ಷಗಳ ಪರಿಶ್ರಮದಿಂದ ಅವನು ಕೂಡಿಟ್ಟ ಹಣದ ಮುಪ್ಪಟ್ಟು ಮೊತ್ತವನ್ನು ಆತ ಬರೇ ಪಕ್ಷ ಕಟ್ಟಿ ಮಾಡಿಕೊಂಡನಂತೆ!" ಎಂಬ ಆ ಎರಡು ವಾಕ್ಯಗಳ ಬಗ್ಗೆ. "ಚಿರಂಜೀವಿಯ ಅಮಲಿ"ನಿಂದಾಚೆಗೆ ನಿಮಗೆ ಏನೂ ಕಾಣಿಸದೆ ಹೋಗಿರುವುದರ ಬಗ್ಗೆ ನನ್ನ ತಕರಾರು. ಆಂಧ್ರದಂತಹ ಒಂದು ದೊಡ್ಡ ರಾಜ್ಯದಲ್ಲಿ ಕೇವಲ ಮೇಲ್ವರ್ಗದ ಜನರೆ ತಮ್ಮ ಜನ್ಮಜಾತ ಹಕ್ಕಾಗಿ ರಾಜಕೀಯ ನಾಯಕತ್ವ ಅನುಭವಿಸುತ್ತಿರುವುದು ತಮಗೆ ಗೊತ್ತಿಲ್ಲದೆ ಇರಬಹುದು. ಚಿರಂಜೀವಿ ಈ ಸಲ ಚುನಾವಣೆಗೆ ನಿಂತ ಒಂದೇ ಕಾರಣದಿಂದಾಗಿ ಅಲ್ಲಿ ಈ ಸಲ ಅಲ್ಲಿಯ ಬಲಿಷ್ಠ ಜಾತಿಗಳು ಅಲ್ಲಿಯ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಜೊತೆಗೆ ನ್ಯಾಯವಾಗಿಯೆ ಅಧಿಕಾರ ಹಂಚಿಕೊಳ್ಳಲು ಸಿದ್ಧವಾಗಿದ್ದಾರೆ. ಈಗ ಚಿರಂಜೀವಿ ಅಧಿಕಾರಕ್ಕೆ ಬಂದಿಲ್ಲದಿರಬಹುದು. ಆದರೆ ಆತ ಸಕಾರಣವಾಗಿಯೆ ಎತ್ತಿದ ಸಾಮಾಜಿಕ ನ್ಯಾಯದ ಪ್ರಶ್ನೆಯಿಂದಾಗಿ, ಈ ಸಲ ಸರಳ ಬಹುಮತ ಪಡೆದುಕೊಂಡರೂ ಅಲ್ಲಿಯ ಹಾಲಿ ಮುಖ್ಯಮಂತ್ರಿ ಆ ರಾಜ್ಯದ ಸಾಮಾಜಿಕ ಅಸಮಾನತೆಯನ್ನು ಗಣನೆಗೆ ತೆಗೆದುಕೊಂಡು ಈ ಸಲದ ಮಂತ್ರಿಮಂಡಲದಲ್ಲಿ ಹಿಂದುಳಿದವರಿಗೆ ಶೇ. ೫೦ ರಷ್ಟು ಸ್ಥಾನಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಚಿರಂಜೀವಿಯ ಸಾಧನೆ ಎಂದು ಪರಿಗಣಿಸುತ್ತೇನೆ. ಚಿರಂಜೀವಿಯೆಂಬ ನಟನೂ, ಆತನ ಪ್ರಭಾವವೂ, ಆತ ರಾಜಕೀಯಕ್ಕೆ ಇಳಿದು ದುಡ್ಡು ಮಾಡಿಕೊಂಡಿರುವುದು(?), ಇವೆಲ್ಲ ತಮಗೆ ತಿಳಿದಿದೆ. ಆದರೆ ಆತನ ರಾಜಕೀಯ ಪ್ರವೇಶದಿಂದಾಗಿ ಅಲ್ಲಿ ನಡೆಯುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳು, ಆಗಬೇಕಿರುವ ಸುಧಾರಣೆಗಳು ತಮಗೆ ಗೊತ್ತಾಗುತ್ತಿಲ್ಲ. ಈ ಎಲ್ಲಾ ವಿಷಯಗಳನ್ನು "ಅಮಲು" ಎಂದು ಹೇಳಿ ತಾವು ನಗಣ್ಯ ಮಾಡುತ್ತಿರುವುದು ಮತ್ತು ಆ ಮೂಲಕ ಅವೆಲ್ಲವನ್ನೂ ನಿರಾಕರಿಸುತ್ತಿರುವುದನ್ನು ಅಪಾಯಕಾರಿ ಎಂದು ಭಾವಿಸುತ್ತೇನೆ. ಸಾಹಿತ್ಯದ ಅಥವ ಲಘು-ಬರವಣಿಗೆಯ ಹೆಸರಿನಲ್ಲಿ ತೋರಿಸುವ ಸಾಮಾಜಿಕ ಬೇಜವಾಬ್ದಾರಿ ಎಂತಲೂ ಭಾವಿಸುತ್ತೇನೆ.

ನಮಸ್ಕಾರ,
ರವಿ...

May 18, 2009

ಲೋಕ್‌ ಸತ್ತಾದ ಜೇಪಿ, ಚಿತ್ರದುರ್ಗದ ಜನಾರ್ಧನ ಸ್ವಾಮಿ...

ಸರಿಯಾಗಿ ಎರಡು ವರ್ಷದ ಹಿಂದೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಸುಮಾರು ನೂರು ಜನ ಸೇರಿದ್ದ ಸಭೆಯಲ್ಲಿ ಅವರಿಗೆ ಒಂದು ಪ್ರಶ್ನೆ ಕೇಳಿದೆ. ಅದು ನೇರವಾಗಿತ್ತು. ಅವರ ಇಡೀ ಆಶಾವಾದವನ್ನೆ, ಆದರ್ಶವನ್ನೆ, ವಾಸ್ತವದ ಹೆಸರಿನಲ್ಲಿ Undermine ಮಾಡುವ ರೀತಿಯಲ್ಲೂ ಇತ್ತು. ಆ ಪ್ರಶ್ನೆ ಚುಡಾಯಿಸುವ, ಹಂಗಿಸುವ ರೀತಿಯಲ್ಲಿ ಇರಬಾರದು ಎಂದುಕೊಂಡೆ ಸಾಕಷ್ಟು ಹುಷಾರಿನಲ್ಲಿ ಕೇಳಿದೆ. ಅದು ಅವರಿಗೆ ಮುಜಗರ ಉಂಟು ಮಾಡಿದ್ದನ್ನು ಅವರ ಉತ್ತರ ಹೇಳುತ್ತಿತ್ತು. ನನ್ನನ್ನು ಸ್ವಲ್ಪ ಜಾಡಿಸುವ ರೀತಿಯಲ್ಲಿ, ಒಳ್ಳೆಯದನ್ನು ಕಾಣದ ಅವಿವೇಕಿಯನ್ನು ಬೈಯ್ಯುವ, insult ಮಾಡುವ ರೀತಿಯಲ್ಲಿ ಉತ್ತರಿಸಿದರು. ನನಗೆ ಏನೇನೂ ಬೇಜಾರಾಗಲಿಲ್ಲ. ಅವರ ಆದರ್ಶ ಮತ್ತು ಆಶಾವಾದವನ್ನೆ ನಾನೂ ಹಂಚಿಕೊಳ್ಳುತ್ತಿದ್ದಿದ್ದರಿಂದ, ಅವರ ಒತ್ತಡಗಳು ಮತ್ತು ಕಾಳಜಿಗಳು ನನಗೂ ಅರ್ಥವಾಗಿದ್ದರಿಂದ ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸುಮ್ಮನಾದೆ. ಆ ಮನುಷ್ಯನ ಎಡೆಗಿನ ನನ್ನ ಗೌರವ ಕುಗ್ಗಲಿಲ್ಲ.

ಆತ ಆಂಧ್ರದ ಮಾಜಿ ಐಎಎಸ್ ಅಧಿಕಾರಿ ಮತ್ತು ಹಾಲಿ ಶಾಸಕ, ಲೋಕಸತ್ತಾ ಪಕ್ಷದ ಡಾ. ಜಯಪ್ರಕಾಶ್ ನಾರಾಯಣ್. "2009 ರಲ್ಲಿ ಆಂಧ್ರ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಲೋಕಸತ್ತಾ ಪಕ್ಷ ಹಣ-ಹೆಂಡ ಹಂಚದೆ, ಜಾತಿ ರಾಜಕೀಯ ಮಾಡದೆ, ಚುನಾವಣಾ ಆಯೋಗ ನಿಗದಿಪಡಿಸಿರುವ ಮೊತ್ತವನ್ನಷ್ಟೆ ಖರ್ಚು ಮಾಡಿ, ಬಹುಮತ ಪಡೆದುಕೊಂಡು ಆಂಧ್ರದಲ್ಲಿ ಅಧಿಕಾರಕ್ಕೆ ಬರುತ್ತದೆ." ಎಂದು ಅವತ್ತು ಅವರು ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಮಾತನಾಡಿದ್ದರು. ಅಲ್ಲಿದ್ದ ಬಹುಪಾಲು ಜನ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಅವರು ಮಾಡುತ್ತಿರುವ "ನಿಶ್ಯಬ್ದ ಕ್ರಾಂತಿ"ಯ ಬಗ್ಗೆ, ಆ ಪ್ರಾಮಾಣಿಕತೆ ಮತ್ತು ಆದರ್ಶದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನ್ನೊಬ್ಬನದೆ ಸ್ವಲ್ಪ ಉಲ್ಟಾ ಎನಿಸುವ ಪ್ರಶ್ನೆ. ನಾನು ಕೇಳಿದ್ದೂ ಸಹ, "ಆಂಧ್ರದ ಜನತೆ ವ್ಯಕ್ತಿ ಆರಾಧನೆಯನ್ನು ಇಷ್ಟಪಡುವ ಮನಸ್ಥಿತಿಯವರು. ಸಿನಿಮಾ ರಂಗದ ಜನರನ್ನು ವಿಪರೀತ ಆರಾಧಿಸುವವರು. ಅವರನ್ನೆ ಆದರ್ಶ ಮಾಡಿಕೊಂಡಂತವರು. ಇಂತಹುದರಲ್ಲಿ ಯಾವುದೆ ಸಾಂಸ್ಕೃತಿಕ ಹಿನ್ನೆಲೆಯಿಲ್ಲದವರು ಅಲ್ಲಿ ಜಯಿಸಲು ಸಾಧ್ಯವೆ? ಆದರ್ಶ ಮತ್ತು ಪ್ರಜಾಪ್ರಭುತ್ವದ ಮಾತುಗಳು ಅಲ್ಲಿ ನಿಜಕ್ಕೂ ಎಲ್ಲರನ್ನೂ ಮುಟ್ಟುತ್ತದೆಯೆ?" ಎಂಬ ರೀತಿಯಲ್ಲಿ ಇತ್ತು ಎನಿಸುತ್ತದೆ. ಅದಕ್ಕೇ ಅವರು ಸ್ವಲ್ಪ ಸಿಟ್ಟಾಗಿದ್ದು. ಸಿಡುಕಿದ್ದು.

ಆಂಧ್ರದ ಜನತೆ ಮತ್ತೆ ಕಾಂಗ್ರೆಸ್ ಅನ್ನು ಆರಿಸಿದ್ದಾರೆ. ಚಂದ್ರಬಾಬು ನಾಯ್ಡುವಿನ ಮಹಾಕೂಟ ಸೋಲೊಪ್ಪಿದೆ. "ಕಿಂಗ್-ಮೇಕರ್ ಅಲ್ಲ, 160 ಸ್ಥಾನಗಳು ನಮ್ಮವು. ನಾನೆ ಮುಂದಿನ CM," ಎಂದಿದ್ದ ಮುಠಾಮೇಸ್ತ್ರಿ ಚಿರಂಜೀವಿ ತಾವು ಹೇಳಿಕೊಂಡ ಸ್ಥಾನಗಳಲ್ಲಿ ಸುಮಾರು ಶೇ. 10 ಮಾತ್ರ ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆ ಮುಂದಿನ ಸಲ ಆಂಧ್ರದಲ್ಲಿ ಕ್ರಾಂತಿಯಾಗುತ್ತದೆ, ಪ್ರಜಾಪ್ರಭುತ್ವದ ಪಟ್ಟಾಭಿಷೇಕವಾಗುತ್ತದೆ, ಆಗ ನಮ್ಮದೇ ಸರ್ಕಾರ, ಎಂದಿದ್ದ ಲೋಕ ಸತ್ತಾದ ಜಯಪ್ರಕಾಶ್ ನಾರಾಯಣ್ ಒಂದೇ ಒಂದು ಸ್ಥಾನ ಗೆದ್ದಿದ್ದಾರೆ.

ದೇಶದಾದ್ಯಂತ ನಡೆದ ಈ ಸಲದ ಚುನಾವಣೆಯಲ್ಲಿ ನನ್ನ ಮನಸ್ಸು ತುಂಬಿಬಂದಿರುವುದು ಆ ಒಂದೇ ಒಂದು ಸ್ಥಾನ ಪಡೆದ ಡಾ. ಜಯಪ್ರಕಾಶ್ ನಾರಾಯಣರ ವಿಜಯಕ್ಕೆ. ಬಹುಮತ ಪಡೆಯುತ್ತೇವೆ ಎಂದು ಘೋಷಿಸಿಕೊಂಡು ಓಡಾಡಿ ಒಂದೇ ಒಂದು ಸ್ಥಾನ ಪಡೆದ ಅವರ ಬಗ್ಗೆ ಕೀಟಲೆ ಮಾಡುವುದು, ಚುಡಾಯಿಸುವುದು, ಕೆಲವರಿಗೆ ಸಹಜವಾಗಬಹುದು. ಆದರೆ ನನ್ನಂತಹವರಿಗೆ ಅವರ ಕೆಲಸ ಮತ್ತು ಹೋರಾಟ ’ನಮ್ಮ ಹೋರಾಟ ಮತ್ತು ಸಾವು ಯಾವುದಕ್ಕಾಗಿರಬೇಕು?’ ಎನ್ನುವುದನ್ನು ಈ ಸಂದರ್ಭದಲ್ಲಿ ಮತ್ತೊಮ್ಮೆ ನೆನಪಿಸುತ್ತದೆ. ಇಡೀ ದೇಶದಾದ್ಯಂತ ಅತ್ಯಂತ ಸ್ವಚ್ಚ ಚುನಾವಣೆ ನಡೆಸಿ ಗೆದ್ದುಬಂದ ಡಾ. ಜಯಪ್ರಕಾಶ ನಾರಾಯಣರಿಗೆ ಅಭಿನಂದನೆಗಳು. ಅದಕ್ಕಿಂತ ಹೆಚ್ಚಾಗಿ, ಇಂತಹುದೊಂದನ್ನು ಸಾಧಿಸಿದ್ದಕ್ಕೆ ಭಾರತದ ಪ್ರಜೆಯಾಗಿ ಅವರಿಗೆ ಕೃತಜ್ಞತೆಗಳು.

[ಎರಡು ವರ್ಷಗಳ ಹಿಂದೆ ಬರೆದಿದ್ದ "ಆಂಧ್ರದ ಜಯಪ್ರಕಾಶ್ ನಾರಾಯಣ್" ಎಂಬ ಲೇಖನ ಇಲ್ಲಿದೆ. ಹಾಗೆಯೆ, ತಮ್ಮ ಗೆಲುವಿನ ನಂತರ ಡಾ. ಜೇಪಿ ಹೇಳಿರುವ ಮಾತುಗಳು ಇಲ್ಲಿವೆ. ಭಾರತದಲ್ಲಿ ಒಳ್ಳೆಯ ಪ್ರಬುದ್ಧ ಪ್ರಜಾಪ್ರಭುತ್ವ ಬಯಸುವವರಿಗೆ ಬೇಕಾದ ಮಾತುಗಳು.]



ಚಿತ್ರದುರ್ಗದ ಜನಾರ್ಧನ ಸ್ವಾಮಿ

ಈ ಸಲ ಕರ್ನಾಟಕದಿಂದ ಲೋಕಸಭೆಗೆ ನಿಂತಿದ್ದವರಲ್ಲಿ ಯಾರುಯಾರು ಎಷ್ಟು ಶ್ರೀಮಂತರು ಎಂಬ ಮಾಹಿತಿ ಕೊಡಲು ನಾವೆಲ್ಲರೂ ಅಶಕ್ತರು. ಎಲ್ಲಾ ಸ್ಪರ್ಧಿಗಳು ತಮ್ಮಲ್ಲಿರುವ ಬಿಳಿಹಣದ ಬಗ್ಗೆ, ಆಸ್ತಿಯ ಬಗ್ಗೆ , ನಾಮಪತ್ರ ಸಲ್ಲಿಸುವಾಗ Affidavit ಕೊಡಬೇಕು. ಅದರಲ್ಲಿ ಎಷ್ಟು ನಿಜವೊ, ಎಷ್ಟು ಸುಳ್ಳೊ ಹೇಳಲು ಬರುವುದಿಲ್ಲ. ಹಾಗಾಗಿ ನಾವು ಅದನ್ನು ನಂಬಲೂ ಬಾರದು. ಯಾರ ಬಗ್ಗೆ ಅಲ್ಲದಿದ್ದರೂ ಒಬ್ಬರ ಬಗ್ಗೆಯಂತೂ ಅವರು ಕೊಟ್ಟಿರುವ ಆಸ್ತಿಯೆ ಅವರ ಹತ್ತಿರ ಇರುವುದು ಎನ್ನುವುದನ್ನು ನಾನು ನಂಬಬಲ್ಲೆ. ಅದು ಚಿತ್ರದುರ್ಗದಿಂದ ಲೋಕಸಭೆಗೆ ಚುನಾಯಿತರಾಗಿರುವ ಜನಾರ್ಧನ ಸ್ವಾಮಿ.

ಕರ್ನಾಟಕದಿಂದ ಆರಿಸಿರುವ ಅಭ್ಯರ್ಥಿಗಳಲ್ಲಿ ಪ್ರಾಮಾಣಿಕವಾಗಿ ದುಡಿದ ಹಣವಿರುವ, ಹಾಗೆಯೆ ಕಮ್ಮಿ ದುಡ್ಡು ಖರ್ಚು ಮಾಡಿದ ಅಭ್ಯರ್ಥಿಗಳು ಬಹುಶಃ ಒಂದಿಬ್ಬರು ಇರಬಹುದು. ಅವರಲ್ಲಿ ಜನಾರ್ಧನ ಸ್ವಾಮಿಯೂ ಒಬ್ಬರಾಗಿರುತ್ತಾರೆ. ಚುನಾವಣೆಯಾಗುವುದಕ್ಕೆ ಮುನ್ನ ಕೇವಲ 2 ಅಥವ 3 ಸೈಟು ಇದ್ದ, ಕೇವಲ ಹತ್ತಿಪ್ಪತ್ತು ಲಕ್ಷ ದುಡ್ಡಿದ್ದ, ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳಲು ಪುರುಸೊತ್ತಿಲ್ಲದೆ ಬಾಡಿಗೆ ಮನೆಯಲ್ಲಿದ್ದ ಜನಾರ್ಧನ ಸ್ವಾಮಿ ಕರ್ನಾಟಕದ ಕ್ಷುದ್ರ ಚುನಾವಣೆ ವ್ಯವಸ್ಥೆಯಲ್ಲಿ ಗೆದ್ದಿರುವುದು ಸಾಮಾನ್ಯವೇನಲ್ಲ. ಕೆಲವು ಪತ್ರಕರ್ತ ಮಿತ್ರರು ಹೇಳಿದ ಹಾಗೆ ಈ ಚುನಾವಣೆಯಲ್ಲಿ ಇಡೀ ಕರ್ನಾಟಕದಲ್ಲಿ ಕಡಿಮೆ ಹಣದ ಸರಬರಾಜು ಕಂಡ ಕ್ಷೇತ್ರ ಚಿತ್ರದುರ್ಗವಂತೆ. ಹಾಗೆಂದು ಅಲ್ಲಿಯ ಚುನಾವಣೆ ಲಕ್ಷಗಳಲ್ಲಿ ಆಗಿಲ್ಲ. ಅಲ್ಲಿಯೂ ಕೋಟಿಗಳಲ್ಲಿ ನಡೆದಿದೆಯಂತೆ. ಚುನಾವಣಾ ಆಯೋಗ ನಿಗದಿಪಡಿಸಿರುವ ದುಡ್ಡಿಗಿಂತ ಹೆಚ್ಚಿಗೆ ವೆಚ್ಚ ಮಾಡುವ ಯಾವೊಂದು ಚುನಾವಣೆಯೂ ಅಕ್ರಮ ಮತ್ತು ಅನೈತಿಕ ಎಂದು ಭಾವಿಸುವವನು ನಾನು. ಹಾಗಿರುವಾಗ, ಮೇಲಿನ ಯಾವುದನ್ನು ಸರಿ, ಯಾವುದನ್ನು ತಪ್ಪು ಎನ್ನಬೇಕು? ನನ್ನಲ್ಲಿ ಗೊಂದಲಗಳಿಲ್ಲ.

ಜನಾರ್ಧನ ಸ್ವಾಮಿಯವರ ಜೊತೆಗಿನ ನನ್ನ ಸ್ನೇಹ ಸುಮಾರು ನಾಲ್ಕೈದು ವರ್ಷದ್ದು. ನಾನು ಎಂದೆಂದೂ ಒಪ್ಪಿಕೊಳ್ಳಲಾಗದ ಸಿದ್ಧಾಂತವನ್ನು ಹೊಂದಿರುವ ಪಕ್ಷದಿಂದ ಅವರು ಈಗ ಸಂಸದ. ಹಾಗಾಗಿ ನಮ್ಮ ಸ್ನೇಹ ಮತ್ತು ಮಾತುಕತೆಗಳು ಮುಂದುವರೆಯುತ್ತವೆ ಎಂದಾಗಲಿ ಅಥವ ಅವು ಮುಕ್ತವಾಗಿರುತ್ತವೆ ಎಂದಾಗಲಿ ನಾನು ಭಾವಿಸುತ್ತಿಲ್ಲ. ಕರ್ನಾಟಕದ ರಾಜಕೀಯ ಮತ್ತು ವ್ಯಕ್ತಿಗಳ ಬಗ್ಗೆ ಆಗಾಗ ಚರ್ಚಿಸುವ ಮತ್ತು ಬರೆಯುವ ನನಗೆ ಈಗ ಅವರೂ ಒಬ್ಬ ಜನಪ್ರತಿನಿಧಿ ಮತ್ತು ಅದೇ ಚರ್ಚೆಗೆ ಮತ್ತು ವಿಮರ್ಶೆಗೆ ಅರ್ಹರು. ಈಗಿನ ಕ್ಷುದ್ರ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸ್ನೇಹಿತರು ಮತ್ತು ಆದರ್ಶ-ಪ್ರಾಮಾಣಿಕತೆ-ಬದ್ಧತೆಯ ಹೆಸರಿನಲ್ಲಿ ಬೆಂಬಲಿಸಬಹುದಾದ ರಾಜಕೀಯ ನಾಯಕರು ಇಲ್ಲದಿರುವಾಗ ಸ್ವಾಮಿ ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂದು ಭಾವಿಸುತ್ತೇನೆ. ನನ್ನ ಜೀವನದ ಅನೇಕ ತಿರುವುಗಳಲ್ಲಿ ನಾನು ತಪ್ಪುಮಾಡಲು ಅವಕಾಶವಿಲ್ಲದಂತೆ ಪರಿಸ್ಥಿತಿ ಅಥವ ಆ ದೇವರು ನನ್ನ ಕೈಹಿಡಿದಿದ್ದಿದೆ. ಕೆಲವೊಮ್ಮೆ ಸ್ನೇಹಿತರೂ. ಅದೇ ಉದ್ದೇಶದಿಂದ ನಾನು ಸ್ವಾಮಿಯವರ ಬಗ್ಗೆ ಈ ಟಿಪ್ಪಣಿ ಬರೆದಿದ್ದೇನೆ. ಜೀವನ ಅನೇಕ ತಿರುವುಗಳಿಂದ ಕೂಡಿದೆ. ಮತ್ತೆ ನಮ್ಮಿಬ್ಬರದೂ ಇನ್ನೊಮ್ಮೆ ಎಲ್ಲಿಯೋ ಸಂಧಿಸಬಹುದು. ಇಲ್ಲದಿರಬಹುದು. ಹೀಗೆ ಆಗುತ್ತದೆ ಅನ್ನುವುದಕ್ಕೆ ಇಲ್ಲಿ ಯಾರೂ ಕಾಲಜ್ಞಾನಿಗಳಿಲ್ಲ. ಜನಾರ್ಧನ ಸ್ವಾಮಿ, ನಿಮಗೆ ಅಭಿನಂದನೆಗಳು.

ಇಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಿಸುವ ಮೂಲಕ ಈ ಟಿಪ್ಪಣಿ ಮುಗಿಸುತ್ತೇನೆ. ಜನಾರ್ಧನ ಸ್ವಾಮಿಯವರಿಗೆ ಚಿತ್ರದುರ್ಗದಿಂದ ಬಿಜೆಪಿ ಪಕ್ಷ ಸೀಟು ಕೊಟ್ಟಿರುವ ಸಂಗತಿ ನಾನು ಕಳೆದ ಮಾರ್ಚಿನಲ್ಲಿ ಬೆಂಗಳೂರಿನಲ್ಲಿದ್ದ ಸಮಯದಲ್ಲಿಯೆ ಘೋಷಣೆ ಆಯಿತು. ಆಗ ನಮ್ಮಿಬ್ಬರಿಗೂ ಪರಿಚಯ ಮತ್ತು ಸ್ನೇಹ ಇದ್ದುದ್ದನ್ನು ಬಲ್ಲ ಕೆಲ ಪ್ರಗತಿಪರ-ಜಾತ್ಯತೀತ ಮನೋಭಾವದ ಸ್ನೇಹಿತರು ನಾಲ್ಕೈದು ಕಡೆ ನನಗೆ ಈ ಪ್ರಶ್ನೆ ಕೇಳಿದರು. ನಾನು ಬಿಜೆಪಿ ಸಿದ್ಧಾಂತವನ್ನು ಒಪ್ಪದ್ದರಿಂದ ನನ್ನ ಸ್ನೇಹಿತರೂ ಹಾಗೆ ಇರುತ್ತಾರೆ ಎನ್ನುವ ನಂಬಿಕೆ ಅವರದಿತ್ತೇನೊ? "ಅವರು ಯಾಕೆ ಬಿಜೆಪಿಯಿಂದ ನಿಂತರು? ಕಾಂಗ್ರೆಸ್‌ನಿಂದ ನಿಲ್ಲಬಹುದಾಗಿತ್ತಲ್ಲ?" ಆಗೆಲ್ಲ ನಾನು ಅವರಿಗೆ ಹೇಳುತ್ತಿದ್ದ ಉತ್ತರ, "ಈ ತರಹ ಯಾರಾದರೂ ಬಂದು ಸೀಟು ಕೇಳಿದರೆ ನಮ್ಮ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಅಂತಹವರಿಗೆ ಸೀಟು ಕೊಡುವ ಪರಿಸ್ಥಿತಿ ಇದೆಯೆ? ಅಂತಹವರ ಮಾತನ್ನು ಸಂಯಮದಿಂದ ಕೇಳುವ ಅಥವ ಅಂತಹವರನ್ನು ಬಳಸಿಕೊಳ್ಳುವ ಪರಿಸ್ಥಿತಿ ಅಥವ ಮನಸ್ಥಿತಿ ನಿಜಕ್ಕೂ ಅಲ್ಲಿದೆಯೆ?" ಜನಾರ್ಧನ ಸ್ವಾಮಿ ಎರಡು ವರ್ಷದ ಹಿಂದೆ ಭಾರತಕ್ಕೆ ಹಿಂದಿರುಗಿದಾಗ ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ: "ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು." ಅದರಲ್ಲಿ ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದರ ಬಗ್ಗೆ ಬರೆಯುತ್ತ, ಪ್ರಜಾವಾಣಿ ಬಿಟ್ಟರೆ ಬೇರೆ ಯಾವ ದಿನಪತ್ರಿಕೆಯಲ್ಲಿಯೂ ಮಹಮ್ಮದರ ಧೋರಣೆ, ಆಲೋಚನೆ ಮತ್ತು ಮುಕ್ತತೆಗೆ ಸರಿಹೊಂದುವ ಪರಿಸ್ಥಿತಿ ಇಲ್ಲ ಎಂದಿದ್ದೆ. ಅದನ್ನು ಮಹಮ್ಮದರನ್ನು ಮೆಚ್ಚಿಕೊಳ್ಳುವ ಹಾಗು ಸ್ವತಃ ವ್ಯಂಗ್ಯಚಿತ್ರಕಾರರಾಗಿರುವ ಸ್ವಾಮಿಯವರ ವಿಷಯಕ್ಕೂ ಹೇಳಬಹುದು. ನಾವೆಲ್ಲ ಕೋಮುವಾದಿ ಮತ್ತು ಪ್ರತಿಗಾಮಿ ಎಂದು ಸಕಾರಣವಾಗಿಯೆ ವಿರೋಧಿಸುವ ಬಿಜೆಪಿ ಬಿಟ್ಟರೆ ಬೇರೆ ಇನ್ಯಾವ ಪಕ್ಷದಲ್ಲೂ ಅವರಿಗೆ ಸ್ಥಾನ ಸಿಗುತ್ತಿರಲಿಲ್ಲ.

ಇನ್ನೊಂದು ಪ್ರಶ್ನೆಯ ಮೂಲಕ ಇದನ್ನು ಮುಗಿಸುತ್ತೇನೆ. "ಅಕಸ್ಮಾತ್ ಅಂತಹವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಅವರನ್ನು ಇಷ್ಟು ಸುಲಭವಾಗಿ ಗೆಲ್ಲಿಸುವ ಪರಿಸ್ಥಿತಿ ಇದೆಯೆ? " ಇದನ್ನು ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿ ಕೃಷ್ಣ ಭೈರೇಗೌಡರು ಮತ್ತು ಅವರಿಗೆ ಲೀಡ್ ಕೊಡಿಸಲಾಗದ ಹಾಲಿ ಕಾಂಗ್ರೆಸ್ ಶಾಸಕರು, ಅಲ್ಲಿ ಟಿಕೆಟ್ ಪಡೆಯಲು ಬೇಕಾದ ಅರ್ಹತೆಗಳು, ಅಲ್ಲಿಯ "ರಾಜಕುಮಾರ"ರ "ಪ್ರಜಾ"ಪ್ರಭುತ್ವ, ಅಗಣಿತ ನಾಯಕರುಗಳು ಮತ್ತು ಸೈದ್ಧಾಂತಿಕ ಬದ್ಧತೆಯಿಲ್ಲದ ನಾಯಕ-ಕಾರ್ಯಕರ್ತ ಗಣ, ಎಲ್ಲವೂ ನನ್ನ ಮನಸ್ಸಿನಲ್ಲಿದೆ. ಕರ್ನಾಟಕದ ಜಾತ್ಯತೀತ ಪಕ್ಷಗಳ ಹಾಲಿ ಯೋಗ್ಯತೆಯನ್ನೂ ಇದು ತೋರಿಸುತ್ತದೆ. ಅಲ್ಲವೆ?

May 17, 2009

ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ... ಕ್ಷಮಿಸಿ...

ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ 'ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.' ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಸಾದಾ ಗ್ರಾಮೀಣ ಹಿನ್ನೆಲೆಯಿಂದ, ವಿಭಜನೆಯ ಸಮಯದಲ್ಲಿ ಇಡೀ ಕುಟುಂಬದ ಬೇರುಗಳನ್ನೆ ಕಿತ್ತು ಬೇರೆಡೆ ನೆಟ್ಟುಕೊಳ್ಳಬೇಕಾಗಿ ಬಂದ ಕುಟುಂಬದ, ತನ್ನ ಕಾರ್ಯಕ್ಷೇತ್ರದಲ್ಲಿ ತಜ್ಞತೆ ಪಡೆದುಕೊಂಡ, ಜಾತ್ಯಾತೀತ ನಿಲುವಿನ, ಕ್ಷುದ್ರ ರಾಜಕೀಯ ನಡೆಸದ, ಜೀವನದ ಅದ್ಭುತ ತಿರುವುಗಳಲ್ಲಿ ಭಾರತದ ಪ್ರಧಾನಿಯಾದ ಡಾ. ಸಿಂಗ್ ಇತ್ತೀಚಿನ ದಶಕಗಳಲ್ಲಿ ದೇಶ ಕಂಡ ನಿಸ್ವಾರ್ಥಿ ಮತ್ತು ಅತ್ಯುತ್ತಮ ಪ್ರಧಾನಿ. ಅನೇಕ ಕಾಂಗ್ರೆಸ್ ನಾಯಕರು ಅಧಿದೇವರುಗಳ ಮುಂದೆ ಮಂಡಿಯೂರುವ, ಸಾಷ್ಟಾಂಗ ಪ್ರಣಾಮ ಹಾಕುವ ಪರಿಸರದಲ್ಲೂ ತಮ್ಮ ಮತ್ತು ದೇಶದ Diginity ಉಳಿಸಿಕೊಂಡ ವ್ಯಕ್ತಿ. ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕಾದ ವಿಷಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಘನತೆಯಿಂದ ಕೂಡಿದ ನಡವಳಿಕೆ. ಯಾವುದೇ ಸಂದರ್ಭದಲ್ಲೂ ಪ್ರಧಾನಿಯ ಸ್ಥಾನಕ್ಕೆ ಅಗೌರವ ಬರುವಂತಹ ನಡವಳಿಕೆಯನ್ನು, ಧಾರ್ಷ್ಟ್ಯವನ್ನು ಅವರು ತೋರಿಸಿಲ್ಲ. ಕೊನೆಗೆ ಅವರ ಯುವ ಮಕ್ಕಳೂ ಅದನ್ನು ಮಾಡಲಿಲ್ಲ. ಅಹಂಕಾರ ಮತ್ತು ಠೇಂಕಾರವೆ ಅಧಿಕಾರ ಇರುವುದರ ಕುರುಹು ಎಂಬಂತೆ ಆಗಿಹೋಗಿರುವ ಭಾರತದ ಸಂದರ್ಭದಲ್ಲಿ (ಅದರಲ್ಲೂ ವಿಶೇಷವಾಗಿ "ರಾಜಕುಮಾರ'ರ ಪ್ರಜಾಪ್ರಭುತ್ವದಲ್ಲಿ) ಈ ಎಲ್ಲಾ ವಿಷಯಗಳು ನಮ್ಮ ಗಮನ ಸೆಳೆಯಬೇಕು.

2009 ರ ಚುನಾವಣೆಯ ಫಲಿತಾಂಶ ಬಂದಿದೆ. ಜಾತ್ಯಾತೀತ ಸರ್ಕಾರ ಬರಬೇಕು ಮತ್ತು ನಿಸ್ವಾರ್ಥಿ, ಅರ್ಹ, ಯೋಗ್ಯರಾದ, ಭಾರತ ಮುಂದೆಯೂ ಹೆಮ್ಮೆಪಟ್ಟುಕೊಳ್ಳಬಹುದಾದ ಡಾ. ಸಿಂಗ್ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನನ್ನಂತಹವರ ಆಶಾವಾದ ಒಂದು ರೀತಿಯಲ್ಲಿ ನೇರವೇರಿದೆ. ಇದು ಖಂಡಿತವಾಗಿಯೂ ಭಾರತದ ಜನ UPA ಅನ್ನು ಮತ್ತು ಡಾ. ಸಿಂಗ್‌ರನ್ನು ಪುರಸ್ಕರಿಸಿರುವ ರೀತಿ ಎಂದು ಭಾವಿಸಲು ನಾನು ಬಹುವಾಗಿಯೇ ಇಷ್ಟಪಡುತ್ತೇನೆ. I really like to believe that. ಆದರೆ ವಾಸ್ತವ ಹಾಗೆ ಆಗಿಲ್ಲ ಎಂದು ನನ್ನ ಸೀಮಿತ ಅವಲೋಕನದಲ್ಲಿ ನನಗೆ ಗಾಢವಾಗಿ ಅನ್ನಿಸುತ್ತಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಜನ ಮತಚಲಾಯಿಸಿರುವ ರೀತಿಯನ್ನು ನೋಡಿದರೆ, ಬಹುಪಾಲು ಕಡೆ ಚುನಾವಣೆ ಆಗಿರುವುದು ಸ್ಥಳೀಯ ವಿಷಯಗಳ ಮೇಲೆ ಮತ್ತು ಅಲ್ಲಿಯ ಪಕ್ಷಗಳ ಸಂಘಟನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ತಾಕತ್ತಿನ ಮೇಲೆ.

ಹಾಗಿದ್ದರೆ UPA ಗೆಲ್ಲಲು ಹೇಗೆ ಸಾಧ್ಯ? ಇವತ್ತಿಗೂ ಭಾರತದ ಬಹುಪಾಲು ಭಾಗದಲ್ಲಿ ಬೇರಿರುವ ಪಕ್ಷ ಎಂದರೆ ಕಾಂಗ್ರೆಸ್, ಮತ್ತು ಈ ಸಲ ಸ್ಥಳೀಯ Factors ಕಾಂಗ್ರೆಸ್‌ಗೆ ಪೂರಕವಾಗಿದ್ದವು. ಹಾಗಾಗಿ ಜನ ಸಹಜವಾಗಿಯೆ ಆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನಗೆ ಅನ್ನಿಸುವ ಪ್ರಕಾರ ಕಳೆದ 2004 ರ ಚುನಾವಣೆಯಲ್ಲಿ ಆಗಿದ್ದೂ ಇದೆ. ಇದು ಒಂದು ರಾಷ್ಟ್ರೀಯ ಚುನಾವಣೆ ನಡೆಯುವ ರೀತಿ ಅಲ್ಲ ಮತ್ತು ಅದು ಒಟ್ಟು ದೇಶದ ಹಿತಕ್ಕೆ ಒಳ್ಳೆಯದಲ್ಲ. ಜನ ಯಾವ ಕಾರಣಕ್ಕೆ ಚುನಾವಣೆ ನಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಯಾವ ಅಭ್ಯರ್ಥಿಯನ್ನು ಆರಿಸಬೇಕಿದೆ ಎಂಬ ಪ್ರಾಥಮಿಕ ತಿಳಿವಳಿಕೆ ಇಟ್ಟುಕೊಳ್ಳದೆ, ಬಹುಪಾಲು ಸ್ಥಳೀಯ ವಿಷಯ/ಚಿತಾವಣೆ/ಪ್ರಲೋಭನೆ/ಪ್ರಭಾವಗಳ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದಾರೆ. ಹಾಗೆ ಮಾಡದೆ, ಈ ಬಾರಿ ದೇಶದ ಜನತೆ ಕೇಂದ್ರ ಸರ್ಕಾರವನ್ನು ನಿರ್ಧರಿಸಿದ್ದೇ ಆಗಿದ್ದರೆ, UPA ಇನ್ನೂ ಹೆಚ್ಚಿನ ಸ್ಥಾನ ಪಡೆಯಬೇಕಿತ್ತು; ಹಲವಾರು ಜನ ಸುಲಭವಾಗಿ ಆರಿಸಿಬರಬೇಕಿತ್ತು; ಸೋತ ಹಲವರು ಗೆಲ್ಲಬೇಕಿತ್ತು; ಮತ್ತೊಂದಷ್ಟು ಗೆದ್ದವರು ಸೋಲಬೇಕಿತ್ತು.

ಕರ್ನಾಟಕದ ಉದಾಹರಣೆಯನ್ನೆ ತೆಗೆದುಕೊಳ್ಳಿ. ಇಡೀ ದೇಶದ ಬಹುಪಾಲು ಜನ UPA ಎಂದರೆ ಇಲ್ಲಿ ಬಿಜೆಪಿ ಎಂದಿದ್ದಾರೆ. ಹಾಗೆ ಆಗಲು ಕಾರಣ ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಇದ್ದ ಸಂಪನ್ಮೂಲಗಳು ಮತ್ತು ಸಂಘಟನೆ ಕಾರಣವೆ ಹೊರತು, ಜನರಿಗೆ ಇಲ್ಲಿ UPA ಯನ್ನು ಬೆಂಬಲಿಸಬಾರದು ಎಂಬ ಕಾರಣ ಅಲ್ಲವೆ ಅಲ್ಲ. ಚುನಾವಣೆಗಳಂತೂ ಈಗ ಒಂದು ವ್ಯವಸ್ಥಿತ ಆಟ. ಮೊದಲ ದಿನದಿಂದಲೆ ಹಣ ಹರಿಸಬೇಕು. ಚುನಾವನೆಯ ಹಿಂದಿನ ದಿನ ಪ್ರತಿ ಮತದಾರನ ಮನೆಗೆ ಆತನ ಕ್ರಮಸಂಖ್ಯೆಯ ಚೀಟಿ ಮುಟ್ಟಿಸಬೇಕು; ಪ್ರತಿ ಬೂತ್‌ನಲ್ಲೂ ಪೋಲಿಂಗ್ ಏಜೆಂಟ್‌ನ ವ್ಯವಸ್ಥೆ ಮಾಡಬೇಕು. ಬೂತಿನ ಹೊರಗಡೆ ಪಕ್ಷದ ವತಿಯಿಂದ ನಾಲ್ಕಾರು ಟೇಬಲ್ ಹಾಕಿಕೊಂಡು ಕೂತು ಮತ ಹಾಕಲು ಬರುವ ಮಂದಿಗೆ ಮತ್ತೊಮ್ಮೆ ಅವರ ಕ್ರಮಸಂಖ್ಯೆ ತೆಗೆದುಕೊಡಬೇಕು. ಮತ್ತೊಮ್ಮೆ ಪುಸಲಾಯಿಸಬೇಕು. ಕೆಲವೊಮ್ಮೆ ಮತದಾರರನ್ನು ಮನೆಗೇ ಹೋಗಿ ಕರೆದುಕೊಂಡು ಬರಬೇಕು. ಸಾಧ್ಯವಾದರೆ ಗುಂಪಿನ ನಾಯಕರಿಗೆ ಲಕ್ಷಾಂತರ ದುಡ್ಡು ಕೊಟ್ಟು ಮೊದಲೆ ಬುಕ್ ಮಾಡಿಕೊಳ್ಳಬೇಕು. ಒಂದೆರಡು ವಾರ ಒಂದಷ್ಟು ಜನರನ್ನು ಸಂತೃಪ್ತಿಯಿಂದ ಇಟ್ಟುಕೊಳ್ಳಬೇಕು. ಕಾರ್ಯಕರ್ತರನ್ನೊಳಗೊಂಡ ಪ್ರಚಾರದ ಇಡೀ Machinery ಯನ್ನು ಪ್ರಚಾರದ ಅಷ್ಟೂ ದಿನ ಹಣಕಾಸಿಗೆ ತೊಂದರೆ ಆಗದಂತೆ ನೊಡಿಕೊಳ್ಳಬೇಕು. ಮತ್ತೆ ಇದೆಲ್ಲದರಿಂದ ಹೊರತಾದದ್ದು ಜಾತಿ ಲೆಕ್ಕಾಚಾರಗಳು ಮತ್ತು ಹಣ/ಸಾರಾಯಿ/ವಸ್ತು ಹಂಚಿಕೆಗಳು. ಅಮೆರಿಕದ ಪುಟ್‌ಬಾಲ್ ಟೀಮಿನ ಕೋಚ್‌ಗಳು ಮಾಡುವ ಪ್ಲಾನಿಂಗ್‌ನಂತೆ ನಮ್ಮ ಚುನಾವಣೆಗಳನ್ನು ಎದುರಿಸುವವರೂ ಎಲ್ಲವನ್ನೂ ಪಕಡ್‌‍ಬಂಧಿಯಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಈ ಎಲ್ಲವನ್ನೂ ಬೇರೆ ಮಿಕ್ಕ ಪಕ್ಷಗಳಿಗಿಂತ ವ್ಯವಸ್ಥಿತವಾಗಿ ಮಾಡುವ ಮಟ್ಟ ಮುಟ್ಟಿಕೊಂಡಿದೆ. ಹಾಗಾಗಿ ಸುಲಭವಾಗಿ ಗೆದ್ದಿದೆ. ಇದು ರಾಜ್ಯ ಬಿಜೆಪಿ ಪರ ಎಂದಾಗಲಿ, ಗೆದ್ದವರು ಸೋತವರಿಗಿಂತ ಅರ್ಹರು ಎಂದಾಗಲಿ, ಕರ್ನಾಟಕದ ಜನತೆಗೆ (ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಧ್ಯಮವರ್ಗಕ್ಕೆ) UPA ಅಪಥ್ಯವಾಗಲಿ ಎಂತಲ್ಲ.

ಇದೇ ಪರಿಸ್ಥಿತಿ ದೂರದ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಿದೆ. ಅಲ್ಲಿ ಇತ್ತೀಚೆಗೆ ತಾನೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಹಜವಾಗಿ ಅಲ್ಲಿ ಇಲ್ಲಿಯ ಬಿಜೆಪಿ ತೊರಿಸಿರುವ ಸಾಧನೆಯನ್ನೆ ಅಲ್ಲಿಯ ಕಾಂಗ್ರೆಸ್ ಪಕ್ಷ ತೊರಿಸಿದೆ. ದೆಹಲಿಯೂ. ಇಲ್ಲೆಲ್ಲ ಅದು UPA ಗೆ ಪೂರಕವಾಗಿದೆ.

ಇನ್ನು ನೆರೆಯ ಆಂಧ್ರ, ತಮಿಳುನಾಡು, ಕೇರಳವನ್ನೆ ತೆಗೆದುಕೊಳ್ಳಿ. ಈ ಸಲ ಆಂಧ್ರದಲ್ಲಿ ಅಲ್ಲಿಯ ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧವಾಗಿ ಆಡಳಿತಾರೂಢ ವಿರೋಧಿ ಅಲೆ ಇರಲಿಲ್ಲ. ಇದ್ದದ್ದೆಲ್ಲ ಚಿರಂಜೀವಿಯ ಪಕ್ಷ ಕಾಂಗ್ರೆಸ್ ಓಟುಗಳನ್ನು ಒಡೆಯುತ್ತದೆಯೆ ಎನ್ನುವ ಸಂಶಯ. ಆದರೆ ಪ್ರಜಾರಾಜ್ಯಂ ಪಕ್ಷಕ್ಕೆ ಈಗಿನ ಚುನಾವಣೆಗಳನ್ನು ಎದುರಿಸಲು ಬೇಕಾದ (ಮೇಲೆ ಹೇಳಿದಂತಹ) ಸಂಘಟನೆ ಮತ್ತು ಕಾರ್ಯಕರ್ತರು ಇಲ್ಲದೆ ಅದು ಹಾಗೆ ಆಗಿಲ್ಲ. ಇನ್ನು ಅಲ್ಲಿಯ ಆಡಳಿತಾರೂಢ ಕಾಂಗ್ರೆಸ್‌ಗೆ ಇರುವ ಹಣದ ಸಂಪನ್ಮೂಲಗಳನ್ನು ಮಿಕ್ಕವರಿಗೆ ಸರಿಗಟ್ಟಲು ಆಗಿಲ್ಲ. (ಕಳೆದ ಸಾರಿಯ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹರಿದ ರಿಯಲ್ ಎಸ್ಟೇಟ್/ಗಣಿ ದುಡ್ಡು ನೆನಪಿಸಿಕೊಳ್ಳಿ. ಈ ಸಲ ಆಂಧ್ರದಲ್ಲಿ ಆಗಿರುವುದೂ ಅದೇ ರೀತಿ.) ಹಣ ಇದ್ದವರು, ಪಕ್ಷ ಸಂಘಟನೆ ಇದ್ದವರು, ಹಣ-ಅಧಿಕಾರ ಪ್ರಯೋಗಿಸಬಲ್ಲವರು ಗೆದ್ದಿದ್ದಾರೆ. ಹಾಗೆಯೆ ಗ್ರಾಮೀಣ ಮಟ್ಟದಲ್ಲಿ ಅಲ್ಲಿಯ ಸರ್ಕಾರ ನೀರಾವರಿ ಯೋಜನೆಗಳಿಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯವೂ ಕೆಲಸ ಮಾಡಿದೆ. ಹೀಗಾಗಿ ಅಲ್ಲಿಯ ಸ್ಥಳೀಯ ಕಾಂಗ್ರೆಸ್ ಗೆದ್ದಿದೆ. ಸಹಜವಾಗಿ ಕೇಂದ್ರದ UPA ಸಹ.

ತಮಿಳುನಾಡಿನಲ್ಲೂ ಸ್ಥಳೀಯ ವಿಷಯ, ಸಂಪನ್ಮೂಲಗಳೆ ಮುಖ್ಯವಾಗಿವೆ. ಅಲ್ಲಿಯೂ ಆಡಳಿತ ವಿರೋಧಿ ಅಲೆ ಇರಲಿಲ್ಲ. ಗುಜರಾತ್-ಚತ್ತೀಸ್‍ಗಡ್-ಜಾರ್ಖಂಡ್ ನಲ್ಲೂ ಹೀಗೆ ಆಗಿದೆ. ಬಿಹಾರದಲ್ಲಿ ಈ ವಿಷಯಗಳ ಜೊತೆಗೆ ನಿತೀಶ್ ಕುಮಾರರ ಆಡಳಿತವೂ ಅವರ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ತಂದುಕೊಟ್ಟಿದೆ. ಒರಿಸ್ಸಾದಲ್ಲಂತೂ ಪಟ್ನಾಯಿಕರ ಬಿಜೆಡಿ ವಿಧಾನಸಭೆಗೆ ಮೂರನೆ ಎರಡರ ಬಹುಮತ ಪಡೆದುಕೊಂಡಿದ್ದಷ್ಟೆ ಅಲ್ಲದೆ ಲೋಕಸಭೆಗೂ ತನ್ನವರನ್ನೆ ಹೆಚ್ಚಿಗೆ ಕಳುಹಿಸಿದೆ. ಇನ್ನು ನೆರೆಯ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಹಣ-ಹೆಂಡ ಹೆಚ್ಚಾಗಿ ಹರಿಯದ ದೂರದ ಪಶ್ಚಿಮ ಬಂಗಾಳದಲ್ಲೂ ಇದೇ ವಿಷಯ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಅಲ್ಲಿಯ ಪ್ರಮುಖ ನಾಲ್ಕು ಪಕ್ಷಗಳು ಹೆಚ್ಚುಕಮ್ಮಿ ಹಂಚಿಕೊಂಡಿವೆ.

ಹೀಗೆ ಯಾವ ರೀತಿ ನೋಡಿದರೂ ಸ್ಥಳೀಯ ವಿಷಯ/ಸಂಪನ್ಮೂಲ/ಸಂಘಟನೆ/ಬಲ ಮುಖ್ಯವಾಗಿದೆಯೆ ಹೊರತು ಇಡೀ ದೇಶ "ಇದು ಕೇಂದ್ರ ಸರ್ಕಾರವನ್ನು ಆರಿಸುವ ಚುನಾವಣೆ. ನಾವು ಅದೇ ರೀತಿ ಅದನ್ನು ನೋಡಬೇಕು," ಎಂದು ಭಾವಿಸಿಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಇಂತಹ ಮನೋಭಾವ ಜಾಸ್ತಿ ಆಗುತ್ತಿದೆ. ಅಕ್ಷರಸ್ಥರು ಹೆಚ್ಚಿಗೆ ಆಗುತ್ತಿರುವಾಗಲೂ, ಯುವಜನತೆ ನಿರ್ಣಾಯಕವಾಗುತ್ತಿರುವಾಗಲೂ, ಈಗಲೂ ಮುಂದುವರೆಯುತ್ತಿರುವ ಈ ವಿದ್ಯಾಮಾನ ಭಾರತದ ಪ್ರಜಾಪ್ರಭುತ್ವದ Maturity ಯನ್ನು ತೋರಿಸುತ್ತಿಲ್ಲ.

ಹೀಗೆ ಆಗದೆ, ದೇಶದ ಜನ ಡಾ. ಸಿಂಗ್‌ರನ್ನು ಅವರ ಕೆಲಸಕ್ಕಾಗಿ ಪುರಸ್ಕರಿಸಿದ್ದರೆ ಅದರ ಕತೆಯೆ ಬೇರೆ ಇರಬೇಕಿತ್ತು. ಉತ್ತಮವಾಗಬೇಕಿತ್ತು. ಸದ್ಯದಲ್ಲಿ ಇದು ಒಂದು ಒಳ್ಳೆಯ ಸಿದ್ಧಾಂತ ಮತ್ತು ವ್ಯಕ್ತಿಯನ್ನು ಬೆಂಬಲಿಸಿದಂತೆ ಕಾಣುತ್ತಿದ್ದರೂ ದೂರಗಾಮಿಯಾಗಿ ಯೋಚಿಸಿದಾಗ ಭಾರತ ಪ್ರತಿಸಲವೂ ಇದೇ ರೀತಿ Lucky ಆಗುತ್ತದೆ ಎಂದು ಅಂದುಕೊಳ್ಳಬೇಕಿಲ್ಲ. ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮಾತ್ರ ಇಲ್ಲಿ ವಿವೇಕವನ್ನು ಕಾಪಾಡಬಲ್ಲದು.