Jan 4, 2009

ಕರ್ನಾಟಕದ ನಕ್ಸಲ ನಾಯಕರಿಗೆ ಒಂದು ಪತ್ರ

ಪ್ರಿಯ ಗಂಗಾಧರ್,

"ಆತ್ಮೀಯ ರೈತ-ಕೂಲಿಕಾರ್ಮಿಕರೇ,ಮಹಿಳೆಯರಿಗೆ" ನೀವು ಸಂಬೋಧಿಸಿ ಬರೆದ "ಪೊಲೀಸ್‌ ಮಾಹಿತಿದಾರ, ಕ್ರೂರ ಭೂಮಾಲಿಕ, ಕೋಮುವಾದಿ, ಅತ್ಯಾಚಾರಿ, ಜನ ದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಪ್ರಜಾ ಹೋರಾಟವನ್ನು ತೀವ್ರಗೊಳಿಸೋಣ !"
ಎಂಬ ಇಮೇಯ್ಲ್‌ಗೆ ಪ್ರತಿಕ್ರಿಯೆಯಾಗಿ ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರೈತ ಹಿನ್ನೆಲೆಯಿಂದ ಬಂದಿರುವುದು, ಜೊತೆಗೆ ಈಗ ಕಾರ್ಮಿಕನಾಗಿ ನನ್ನ ಊಟ ಸಂಪಾದಿಸಿಕೊಳ್ಳುತ್ತಿರುವುದು, ಮತ್ತು ನನಗೆ ಪ್ರೀತಿ ಮತ್ತು ಸ್ನೇಹವನ್ನು ಕೊಡುತ್ತಿರುವವರಲ್ಲಿ ಮಹಿಳೆಯರೂ (ಮುಗ್ಧ ಹೆಣ್ಣುಮಕ್ಕಳೂ ಮತ್ತು ದುಡಿದೇ ತಿನ್ನುವ ವಯಸ್ಕರು) ಇರುವುದು, ತಮಗೆ ಈ ಪತ್ರ ಬರೆಯಲು ಇರುವ ಮುಖ್ಯಕಾರಣಗಳು. ಅಷ್ಟೇ ಮುಖ್ಯವಾದದ್ದು ಮಾನವ ಸಮಾಜ ಸಮಾನತೆ-ಸರ್ವೋದಯವನ್ನು ಸಾಧಿಸಬೇಕೆಂಬ ನನ್ನ ಆಶಾವಾದ, ಮತ್ತು (ಹೇಡಿತನವಲ್ಲದ) ಅಹಿಂಸಾತ್ಮಕ ಹೋರಾಟದಲ್ಲಿಯ ನನ್ನ ನಂಬಿಕೆಗಳು.

ಕರ್ನಾಟಕದ ಹಲವಾರು ಲೇಖಕರಿಗೆ, ಮಾಧ್ಯಮ ಕಚೇರಿಗಳಿಗೆ ಮತ್ತು ಪತ್ರಕರ್ತರಿಗೆ ನೀವು ಕಳುಹಿಸಿರುವ ಈ ಇಮೇಯ್ಲ್ ಇಂದು ನನಗೂ ಬಂದಿದೆ. ನಿಮ್ಮ ಈ ಪತ್ರ ಬಂದ ಈ ಸಮಯದಲ್ಲಿ ನಾನು ಗಾಂಧೀಜಿಯ ಮೊಮ್ಮಗ ರಾಜ್‍ಮೋಹನ್ ಗಾಂಧಿ ಬರೆದಿರುವ "Gandhi - The Man, His People, and the Empire" ಪುಸ್ತಕ ಓದುತ್ತ ಕುಳಿತಿದ್ದೆ. ಕಾಕತಾಳೀಯವೆಂಬಂತೆ ಈಗ ನಾನು ಓದುತ್ತಿರುವ ಪುಟಗಳು ಗಾಂಧಿ ಭಗತ್‌ಸಿಂಗ್ ಕುರಿತು ಬರೆದ ಪತ್ರಗಳ ಉಲ್ಲೇಖದ್ದಾಗಿತ್ತು. ಅದರ ಓದು ಮುಂದುವರೆಸಿದಾಗ ನಿಮ್ಮ ಪತ್ರವೂ ಹಿನ್ನೆಲೆಯಲ್ಲಿ ಕಾಡಿ, ಈ ಪತ್ರವನ್ನು ಬರೆಯಲೇ ಬೇಕು ಎಂಬ ಒತ್ತಡವಾಗಿ, ಹಾಗೆ ಮಾಡುವುದು ಸಹ ಗಾಂಧೀ ಮಾರ್ಗವೆ ಎಂದು ಆತ್ಮಸಾಕ್ಷಿಗೆ ಅನ್ನಿಸಿದ್ದರಿಂದ ಕೂಡಲೆ ಬರೆಯುತ್ತಿದ್ದೇನೆ.

(1930 ರಲ್ಲಿ) ಆಗತಾನೆ "ಉಪ್ಪಿನ ಸತ್ಯಾಗ್ರಹ"ವನ್ನು ಅಹಿಂಸಾತ್ಮಕವಾಗಿ ಸಂಘಟಿಸಿ, ಹಿಂಸೆ ಉಂಟುಮಾಡುವ ಯಾವೊಂದು ಆಯುಧವನ್ನೂ ಬಳಸದೆ, ಕೇವಲ ಸತ್ಯ ಮತ್ತು ಪ್ರೀತಿ ಎಂಬ ಆಯುಧಗಳನ್ನೆ ಬಳಸಿ, ಗಾಂಧಿ ಮತು ಅವರ ಹಿಂಬಾಲಕರು ಒಂದು ಬಲಿಷ್ಠವಾದ ಸಾಮ್ರಾಜ್ಯವನ್ನು ಮಣಿಸಿದ್ದರು. ಇದೇ ಸಮಯದಲ್ಲಿ ಭಾರತದ ಬ್ರಿಟಿಷ್ ಸರ್ಕಾರ ಭಗತ್‍ಸಿಂಗ್, ಸುಖ್‍ದೇವ್ ಮತ್ತು ರಾಜಗುರುಗಳಿಗೆ ಅವರು ಮಾಡಿದ್ದ ಹಿಂಸಾತ್ಮಕ ಘಟನೆಗಳಿಗೆ ಪ್ರತಿಯಾಗಿ ಗಲ್ಲನ್ನು ವಿಧಿಸಿತ್ತು. ಗಾಂಧಿ-ಇರ್ವಿನ್ ಒಪ್ಪಂದದ ಸಮಯದಲ್ಲಿ ಗಾಂಧಿ ಈ ಕ್ರಾಂತಿಕಾರಿಗಳ ಕೃತ್ಯ ಮತ್ತು ವಿಧಾನಗಳಿಗೆ ತಮ್ಮ ಸಮ್ಮತಿ ಇಲ್ಲದಿದ್ದರೂ ಅವರಿಗೆ ಬ್ರಿಟಿಷರಿಂದ ಕ್ಷಮಾದಾನವನ್ನೂ ಕೇಳಿದ್ದರು. ಆದರೆ ಕ್ರಾಂತಿಕಾರಿಗಳಿಗೆ "ಪಾಠ ಕಲಿಸಬೇಕೆಂದು" ತೀರ್ಮಾನಿಸಿದ್ದ ಬ್ರಿಟಿಷರು ಗಾಂಧಿಯ ಮತ್ತು ದೇಶದ ಬಹುಪಾಲು ಯುವಜನತೆಯ ಆಗ್ರಹವನ್ನು ಗಣನೆಗೆ ತೆಗೆದುಕೊಳ್ಳದೆ ಭಗತ್ ಸಿಂಗ್ ಮತ್ತವರ ಸ್ನೇಹಿತರನ್ನು (ಮಾರ್ಚ್ 23, 1931) ಗಲ್ಲಿಗೇರಿಸಿಯೇ ತೀರುತ್ತಾರೆ. ಇದು ಬಹುಶಃ ನಿಮಗೂ ತಿಳಿದಿರುವ ಇತಿಹಾಸ.

ಈಗ ನಾನು ತಮಗೆ ನೆನಪಿಸಬೇಕು ಎಂದುಕೊಂಡ ವಿಚಾರಕ್ಕೆ ಬರುತ್ತೇನೆ.

ಭಗತ್ ಸಿಂಗ್ ಮತ್ತವರ ಸಹೋದ್ಯೋಗಿಗಳ ಗಲ್ಲು ಆದ ನಂತರ ಗಾಂಧಿ ಅವರ ಬಗ್ಗೆ (ಮಾರ್ಚ್ 26, 1931) ಹೀಗೆ ಹೇಳುತ್ತಾರೆ: "ಭಗತ್ ಸಿಂಗ್‌ರ ಶೌರ್ಯ ಮತ್ತು ತ್ಯಾಗದ ಮುಂದೆ ಯಾರ ತಲೆಯೂ ಬಾಗುತ್ತದೆ." ಆದರೆ ನಮಗೆ ಅಷ್ಟೆ ಮುಖ್ಯವಾದದ್ದು ಅದೇ ದಿನ ಕರಾಚಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಮಾಡಿದ ಭಾಷಣ:

"ಆದರೆ, ಭಗತ್ ಸಿಂಗ್‍ರ ತಪ್ಪೂ ಸಹ ನಿಮಗೆ ಅರ್ಥವಾಗಬೇಕು ಅನ್ನುವುದು ನನ್ನ ಬಯಕೆ.... ಹಸಿವಿನಿಂದ ಬಳಲುತ್ತಿರುವ ನಮ್ಮ ಕೋಟ್ಯಾಂತರ ಜನರಿಗೆ, ನಮ್ಮ ಕಿವುಡರಿಗೆ ಮತ್ತು ಮೂಗರಿಗೆ, ನಮ್ಮಲ್ಲಿಯ ಕುಂಟರಿಗೆ ಮತ್ತು ಹೆಳವರಿಗೆ, ಕತ್ತಿಯ ಮೂಲಕ ನಾವು ಸ್ವರಾಜ್ಯವನ್ನು ಗೆದ್ದುತರಲು ಸಾಧ್ಯವಿಲ್ಲ ಎಂದು ಘೋಷಿಸುತ್ತೇನೆ. ಆ ದೇವರೆ ನನ್ನ ಸಾಕ್ಷಿಯಾಗಿ ನಾನು ಈ ಸತ್ಯವನ್ನು ಘೋಷಿಸಲು ಬಯಸುತ್ತೇನೆ.

"ನಾವು ಹಿಂಸೆಯ ಹಾದಿಯನ್ನು ಹಿಡಿದಿದ್ದೇ ಆದರೆ ಕಳೆದ ಚಳವಳಿಯಲ್ಲಿ ತಮ್ಮನ್ನು ತಾವೆ ಕೀರ್ತಿಯಲ್ಲಿ ಆವರಿಸಿಕೊಂಡ ಆ ಎಲ್ಲಾ ಹೆಂಗಸರು ಮತ್ತು ಮಕ್ಕಳು ಹಾಗೆ ಕೀರ್ತಿ-ಯಶಸ್ಸಿನಿಂದ ಆವರಿಸಿಕೊಳ್ಳಲು ಸಾಧ್ಯವಿತ್ತು ಎಂದು ನೀವು ತಿಳಿಯುತ್ತೀರಾ? ನಮ್ಮ ಹೋರಾಟದಲ್ಲಿ ಹಿಂಸೆ ಇದ್ದಿದ್ದೆ ಆದರೆ ಈ ನಮ್ಮ ಸ್ತ್ರೀಯರು, ಪ್ರಪಂಚದಲ್ಲಿಯೆ ಅತಿ ವಿನೀತರೆಂದು (meekest) ಹೆಸರಾದ ನಮ್ಮ ಹೆಂಗಸರು, ತನ್ನ ಬಿಳಿಯ ಸೀರೆ ರಕ್ತದಲ್ಲಿ ತೋಯ್ದು ಹೋಗುವಷ್ಟು ಹೊತ್ತೂ ಲಾಠಿ ಏಟುಗಳನ್ನು ಸಹಿಸಿಕೊಂಡ ಗಂಗಾಬೆಹನ್‌ನಂತಹ ಹೆಂಗಸರು, ತಾವು ಮಾಡಿದಂತಹ ಅದ್ವಿತೀಯವಾದ ಸೇವೆ ಮಾಡಲು ಸಾಧ್ಯವಿತ್ತೆ?

"ಇನ್ನು ನಮ್ಮ ಮಕ್ಕಳು - ನಮ್ಮ ವಾನರಸೇನೆ. ತಮ್ಮ ಆಟದ ಸಾಮಾನುಗಳನ್ನೆಲ್ಲ, ತಮ್ಮ ಗಾಳಿಪಟಗಳನ್ನೆಲ್ಲ, ತಮ್ಮ ಚಿನಕುರುಳಿ ಪಟಾಕಿಗಳನ್ನೆಲ್ಲ ತೊರೆದು, ಸ್ವರಾಜ್ಯದ ಸೈನಿಕರಾಗಿ ಸೇರಿಕೊಂಡ ಈ ಮುಗ್ಧರನ್ನು - ಅದು ಹೇಗೆ ನೀವು ಹಿಂಸಾತ್ಮಕ ಹೋರಾಟಕ್ಕೆ ಸೇರಿಸಿಕೊಳ್ಳುತ್ತೀರ? ನಾವು ಅಹಿಂಸೆಗೆ ವಚನಬದ್ಧರಾಗಿದ್ದರಿಂದಲೆ ಲಕ್ಷಾಂತರ ಗಂಡಸರನ್ನು, ಹೆಂಗಸರನ್ನು, ಮತ್ತು ಮಕ್ಕಳನ್ನು ನಾವು ಸೈನಿಕರನ್ನಾಗಿ ಸೇರಿಸಿಕೊಳ್ಳಲು ಸಾಧ್ಯವಾಗಿದ್ದು."

ನಂತರ ಮಾರ್ಚ್ 29, 1931 ರಂದು ಗಾಂಧೀಜಿ 'ನವಜೀವನ್'ನಲ್ಲಿ ಹೀಗೆ ಬರೆಯುತ್ತಾರೆ:
"ಕೊಲೆಗಳನ್ನು ಮಾಡುವ ಮೂಲಕವೆ ನ್ಯಾಯವನ್ನು ಪಡೆದುಕೊಳ್ಳುವ ಅಭ್ಯಾಸ ನಮ್ಮಲ್ಲಿ ಪ್ರತಿಷ್ಠಾಪಿತವಾದರೆ, ನಾವು ಏನನ್ನು ನ್ಯಾಯ ಎಂದು ಭಾವಿಸುತ್ತೇವೆಯೊ ಅದಕ್ಕಾಗಿ ಒಬ್ಬರನ್ನೊಬ್ಬರು ಕೊಲ್ಲಲು ಆರಂಭಿಸಿಬಿಡುತ್ತೇವೆ. ಕೋಟ್ಯಾಂತರ ನಿರ್ಗತಿಕರೂ, ಹೆಳವರೂ ಇರುವ ಈ ನಾಡಿನಲ್ಲಿ ಅದು ಬಹಳ ಭಯಾನಕವಾದ ಸ್ಥಿತಿಯಾಗುತ್ತದೆ."
[ಪುಟ 326- 'Gandhi - The Man, His People, and the Empire']

ನಾನು ಗಾಂಧೀಜಿಯ ಈ ಮಾತುಗಳನ್ನು ಉಲ್ಲೇಖಿಸುವ ಮೂಲಕ ತಮ್ಮ ಹಿಂಸಾತ್ಮಕ ಹೋರಾಟಕ್ಕೆ ನನಗಿರುವ ಭಿನ್ನಾಭಿಪ್ರಾಯ ಮತ್ತು ಇಲ್ಲದಿರುವ ಒಪ್ಪಿಗೆ/ಬೆಂಬಲವನ್ನು ಸೂಚಿಸುತ್ತೇನೆ. ಇದರ ಬಗ್ಗೆ ಇನ್ನೂ ಬರೆಯಬಹುದು. ಆದರೆ, ಗಾಂಧೀಜಿಯ ಮೇಲಿನ ಮಾತುಗಳು ನಮ್ಮ (ನನ್ನ ಮತ್ತು ಬಹುಶಃ ನನ್ನ ಸಮಾನಮನಸ್ಕರ) ಬಹುಪಾಲು ಅಭಿಪ್ರಾಯಗಳನ್ನು ಬಿಂಬಿಸುವುದರಿಂದ ಅದನ್ನು ಮತ್ತಷ್ಟು ವಾಚ್ಯ ಮಾಡಲು ಹೋಗುವುದಿಲ್ಲ.

ಕೋಮುವಾದ ಮತ್ತು ಜಾತಿವಾದ ತನ್ನ ಕಬಂಧ ಬಾಹುಗಳನ್ನು ಬಿಗಿಸುತ್ತಿರುವ ಈ ಸಮಯದಲ್ಲಿ, ದೈಹಿಕ ದುಡಿಮೆಗೆ ಬೆಲೆ ಇಲ್ಲದೆ ಹೋಗುತ್ತಿರುವ ಈ ಸಮಯದಲ್ಲಿ, ಹಣದ ಮದ ಮತ್ತು ಸ್ವಾರ್ಥ ಎಲ್ಲಾ ತರಹದ ಸಜ್ಜನ ವ್ಯವಸ್ಥೆಯನ್ನೂ ಹಾಳು ಮಾಡುತ್ತ ಧಾಪುಗಾಲಿಡುತ್ತಿರುವ ಈ ಸಮಯದಲ್ಲಿ, ಈ ಎಲ್ಲಾ ದುಷ್ಟಮನಸ್ಥಿತಿಯ ಅಗ್ನಿಕುಂಡಗಳಿಗೆ ತಾವು ಉರುವಲು ಆಗದೆ, ಜನಪರವಾದ ಹೋರಾಟದಲ್ಲಿ ಅಹಿಂಸಾತ್ಮಕವಾಗಿ, ಬಹಿರಂಗವಾಗಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಪಾಲ್ಗೊಳ್ಳಿ ಎಂದಷ್ಟೆ ವಿನಂತಿಸುತ್ತೇನೆ. ನಿಮ್ಮ ಯಾವುದೇ ತರಹದ concerns ಅನ್ನೂ ಕೇಳಿಸಿಕೊಳ್ಳುವಂತಹ, ಪ್ರಾಮಾಣಿಕವಾಗಿ ಸ್ಪಂದಿಸುವಂತಹ, ತಮ್ಮ ಕೈಲಾದುದನ್ನು ಮಾಡುವಂತಹ ಮಾನವಪ್ರೇಮಿ, ಸತ್ಯನಿಷ್ಠ ಜನರು ಕರ್ನಾಟಕದಲ್ಲಿ ಇದ್ದಾರೆ ಎಂದೂ, ತಾವು ಕಾಣುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅವರೊಡನೆಯೂ ಮತ್ತು ಪ್ರಜೆಗಳ ಸರ್ಕಾರದೊಡನೆಯೂ ನೇರವಾಗಿ ಸಂವಾದಿಸುವ ಪ್ರಯತ್ನಕ್ಕೆ ತಾವು ಮುಂದಾಗಬೇಕೆಂತಲೂ, ಕೇಳಿಕೊಳ್ಳುತ್ತೇನೆ.

ಅಹಿಂಸೆಯಲ್ಲಿ, ಸತ್ಯದಲ್ಲಿ, ಶ್ರಮದಲ್ಲಿ, ಪ್ರಜಾಪ್ರಭುತ್ವದಲ್ಲಿ, ಮಾನವತೆಯಲ್ಲಿ, ನಂಬಿಕೆಯಿರುವ
ತಮ್ಮವ,
ರವಿ...

ganga_dhara2007@rediffmail.com ಎಂಬ ಐಡಿಯಿಂದ "c p i (maoist) karnataka. leaflet about the action on keshava yadiyaal" ಎಂಬ ವಿಷಯದ ಮೇಲೆ ಬಂದಿರುವ ಪತ್ರದ ಪೂರ್ಣಪಾಠ:

ಪೊಲೀಸ್‌ ಮಾಹಿತಿದಾರ, ಕ್ರೂರಭೂಮಾಲಿಕ, ಕೋಮುವಾದಿ,ಅತ್ಯಾಚಾರಿ,ಜನ ದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಜಾ ಹೋರಾಟವನ್ನು ತೀವ್ರಗೊಳಿಸೋಣ !

ಆತ್ಮೀಯ ರೈತ-ಕೂಲಿಕಾರ್ಮಿಕರೇ,ಮಹಿಳೆಯರೇ,

ಕ್ರೂರ ಭೂಮಾಲಿಕ,ಪೊಲೀಸ್ ಮಾಹಿತಿದಾರ ಕೇಶವ ಯಡಿಯಾಳನು ನಮ್ಮ ಪಕ್ಷದ ವಿರುದ್ದ,ವರಾಹಿದಳದ ಕಾರ್ಯಚಟುವಟಿಕೆಯ ಆರಂಭದಿಂದಲೂ ಪೊಲೀಸರಿಗೆ ಮಾಹಿತಿ ನೀಡುತ್ತಾ ಬಂದಿದ್ದಾನೆ. ನಮ್ಮ ದಳವು ದಿನಾಂಕ ೨೩-೬-೨೦೦೫ ರ ಬೆಳಿಗ್ಗೆ ದೇವರ ಬಾಳುವಿನ ಕಡೆಗೆ ಚಲಿಸುತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿನೀಡಿದ್ದಲ್ಲದೆ ಪೊಲೀಸರನ್ನು ಅರ್ಧದಾರಿಯಲ್ಲೇ ಭೇಟಿಮಾಡಿ ವಿವರವಾದ ಮಾಹಿತಿ ನೀಡಿದ್ದನು. ಇದರಿಂದಾಗಿ ನಮ್ಮ ವರಾಹಿ ದಳದ ಸಂಗಾತಿಗಳಾದ ಕಾ||ಉಮೇಶ್(ಕಿರಣ್) ಕಾ||ಅಜೀತ್ ಕುಸುಬಿ(ಆಕಾಶ್) ರವರು ದೇವರಬಾಳುವಿನ ರಾಮನಹಕ್ಲು ಮನೆಗೆ ಸುರಿಯುವ ಮಳೆಯಲ್ಲೇ ಜನರನ್ನು ಭೇಟಿಮಾಡಲು ಹೋದಾಗ ಕೇಶವ ಯಡಿಯಾಳನು ನೀಡಿದ್ದ ಖಚಿತಮಾಹಿತಿಯನ್ನು ಆಧರಿಸಿ ಈ ಊರಿನ ಬೇರೆ ಬೇರೆ ಮನೆಗಳಲಿ ಹೊಂಚುಹಾಕಿ ಕುಳಿತಿದ್ದ ಪೊಲೀಸರು ನಮ್ಮ ಸಂಗಾತಿಗಳನ್ನು ಸುಳ್ಳು ಎನ್‌ಕೌಂಟರ್‌ನಲ್ಲಿ ಕಗ್ಗೊಲೆಗೈದರು, ಇದಕ್ಕೆ ಈತನೇ ಪ್ರಮುಖ ಕಾರಣನಾಗಿದ್ದನು. ಅಲ್ಲದೆ ಈತನು ಆ ಇಬ್ಬರು ಸಂಗಾತಿಗಳ ಶವಗಳನ್ನು ಎತ್ತಲು ತನ್ನ ಮನೆಯಿಮದಲೇ ಛಾಪೆಗಳನ್ನು ತಂದು ತಾನೇ ಸುತ್ತಿದ್ದಲ್ಲದೆ ಜೇಪಿಗೆ ಹಾಕುವವರೆಗೂ ಪೊಲೀಸರಿಗೆ ಸಹಕರಿಸಿದ್ದನು.

ಈತನೊಬ್ಬ ಕೃರಭೂಮಾಲಿಕನಾಗಿದ್ದು ವಿವಿದೆಡೆ ಸುಮಾರು ೫೦ ಎಕರೆಯಷ್ಟು ಜಮೀನು ಹೊಂದಿದ್ದರೂ ಕೂಲಿ-ಕಾರ್ಮಿಕರನ್ನು ಅತೀ ಕಡಿಮೆ ಕೂಲಿಗೆ ಅಂದರೆ ೨೦-೨೫ ರೂಪಾಯಿಗೆ ದಿನವಿಡೀ ಬೆಳಿಗ್ಗೆ ೮-೦೦ ರಿಂದ ೫.೩೦-೬-೦೦ ಗಂಟೆವರಗೆ ಜೀತದ ರೀತಿ ಅಮಾನುಷವಾಗಿ ದುಡಿಸಿ ಕೊಳ್ಳುತ್ತಿದ್ದ ಶೋಷಕ ಭೂಮಾಲಿಕ.

ಆದರೆ ಜನರು ಕೊಳ್ಳುವ ಪ್ರತಿಯೊಂದು ವಸ್ತುವಿನ ಬೆಲೆಗಳೂ ಗಗನಕ್ಕೇರುತ್ತಿರುವ ಇವತ್ತಿನ ಸಂದರ್ಭದಲ್ಲಿ ಇವನು ಕೊಡುವ ಬಿಡಿಗಾಸಿನ ಕೂಲಿ ಒಂದೊತ್ತಿನ ಊಟಕ್ಕೂ ಸಾಕಾಗದಿರುವಾಗ ಇವನಿಂದ ತೆಗೆದುಕೊಂಡ ಸಾವಿರಾರು ರೂಪಾಯಿ ಸಾಲ ತೀರಿಸುವುದಾದರು ಹೇಗೆ? ಸಾಲಕ್ಕೆ ಬಡ್ಡಿ-ಚಕ್ರಬಡ್ಡಿ ಬೇರೆ ಹಾಕಿ ಜೀವನ ಪೂರ್ತಿ ತನ್ನ ಮನೆಯಲ್ಲೇ ಜೀತ ಮಾಡಿ ಬದುಕುವಂತೆ ಬಂಧಿಸಿಟ್ಟಿದ್ದ ಕೃರ ಭೂಮಾಲೀಕ. ಇ?ಇಔಲ್ಲಾ ಸಾಲದೆಂಬಂತೆ ಈತನು ಬಡ-ಮದ್ಯಮ ರೈತರಿಂದ ಅತೀಕಡಿಮೆ ಬೆಲೆಗೆ ಅಡಿಕೆಯನ್ನು ಖರೀದಿಸಿ ದುಪ್ಪಟ್ಟು ಲಾಭಕ್ಕಾಗಿ ಜನರನ್ನು ಮೋಸಗೋಳಿಸುತ್ತಾ ಬಂದ ದಲ್ಲಾಳಿಯೂ ಆಗಿದ್ದನು.

ಕೇಶವ ಯಡಿಯಾಳನು ಮನುಧರ್ಮದ ಕಟ್ಟಾ ಪ್ರತಿಪಾದಕನೂ ಆಗಿದ್ದು,ದಲಿತ ಹಾಗು ಹಿಂದುಳಿದ ಜಾತಿಯ ದುಡಿಯುವ ಜನರನ್ನು ಜಾತಿಯ ಆಧಾರದಲ್ಲಿ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದ ಬ್ರಾಹ್ಮಣಶಾಹಿ ಪ್ರತಿಪಾದಕನೂ ಆಗಿದ್ದನು. ಮಹಿಳೆಯರನ್ನು ಬೋಗದ ವಸ್ತುವಿನಂತೆ ಲೈಂಗಿಕ ದೃಷ್ಠಿಯಲ್ಲಿ ಅಗೌರವದಿಂದ ನೋಡುತ್ತಿದ್ದನಲ್ಲದೆ ಕೆಲವು ಮಹಿಳೆಯರನ್ನು ತನ್ನ ಕಾಮತೃಷೆಗಾಗಿ ಹಣ ಇತ್ಯಾದಿ ಆಮಿಷ ಒಡ್ಡಿ, ಮಹಿಳೆಯರ ಸಾಮಾಜಿಕ ಅಭದ್ರತೆಯನ್ನೇ ಬಂಡವಾಳ ಮಾಡಿಕೊಂಡು ಬೆದರಿಕೆ ಮೂಲಕ ಕೂಡ ಅತ್ಯಾಚಾರ ನಡೆಸುತ್ತಾ ಬಂದವನು. ಕೆಲವು ಮಹಿಳೆಯರ ಜೊತೆ ಅನೃತಿಕ ಸಂಬಂಧ ಹೊಂದಿದ್ದ ಲಂಪಟನಿವನು. ಇವನ ಈ ನೀಚ ಕೆಲಸಕ್ಕೆ ಹೋಗುವಾಗ ನಾಯಿಗಳು ಬೋಗಳುತಿದ್ದವೆಂದು ವಿಷ ಹಾಕಿ ಕೊಂದ ಕ್ರೂರಿಯಾಗಿದ್ದನು.

ದೇವರ ಬಾಳುವಿನ ರೈತರೊಬ್ಬರ ತೋಟದಲ್ಲಿ ಅಡಿಕೆ ಮರಗಳಿಗೆ ಸಿಂಪಡಿಸಲೆಂದು ಔಷಧಿ ಹಾಕಿಟ್ಟಿದ್ದ ಬ್ಯಾರಲ್‌ನಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ತಾನೇ ಕಳೆನಾಶಕ ಬೆರೆಸಿದ್ದರಿಂದಾಗಿ ಸುಮಾರು ೩ ಎಕರೆಯಷ್ಟು ಅಡಿಕೆ ಬೆಳೆ ನಾಶವಾಗಿದೆ. ಇವನ ಈ ದುಷ್ಟ ಕೃತ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಇದು ನಕ್ಸಲೀಯರು ಮಾಡಿರುವುದೆಂದು ಅಪಪ್ರಚಾರ ಕೂಡ ಮಾಡಿದ್ದನು. ಆದರೆ ಇದು ಕೇಶವ ಯಡಿಯಾಳನೇ ಮಾಡಿದ್ದೆಂದು ಜನತೆಗೆ ಬಹಿರಂಗಗೊಂಡಿತು.

ಈತನೊಬ್ಬ ಹಿಂದು ಫ್ಯಾಸಿಸ್ಟ್ ಬಿ.ಜೆ.ಪಿ ಪಕ್ಷದ ಸಕ್ರೀಯ ಮುಖಂಡನಾಗಿದ್ದುಕೊಂಡು ನಮ್ಮ ಪಕ್ಷದ ವಿರುದ್ದ ನಿರಂತರ ಅಪಪ್ರಚಾರ ಮಾಡುತ್ತಾ ದುಡಿಯುವ ಜನರನ್ನು ಭೂಮಾಲೀಕರ ಅಮಾನುಷ ಶೋಷಣೆಯನ್ನು ಅರ್ಥಮಾಡಿಕೊಂಡು ಕ್ರಾಂತಿಕಾರಿ ಚಳುವಳಿಯಲ್ಲಿ ಒಗ್ಗೂಡದಂತೆ ದಿಕ್ಕು ತಪ್ಪಿಸಲು ನಿರಂತರ ಪ್ರಯತ್ನ ಮಾಡುತ್ತಾ ಬಂದವನು. ಪೊಲೀಸರು ಕರೆದಿದ್ದ ಜನಸಂಪರ್ಕ ಸಭೆಯೊಂದರಲ್ಲಿ ನಮ್ಮ ಪಕ್ಷದ ದಳಗಳಿಗೆ ಜನರ್‍ಯಾರು ಊಟ ಕೊಡಬಾರದು, ಸಹಕರಿಸಬಾರದೆಂದು ಮತ್ತು ನಮ್ಮ ದಳ ಕಂಡಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಜನರಿಗೆ ತಾಕೀತುಮಾಡಿ,ಗೊಂದಲ ಹಾಗೂ ಭಯದ ವಾತಾವರಣ ಉಂಡುಮಾಡಲು ಪ್ರಯತ್ನಿಸಿದನು, ಆದರೆ ಇವನ ಈ ಜನವಿರೋಧಿ ಕೃತ್ಯಗಳನ್ನು ಪ್ರಶ್ನೆಮಾಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಜನದ್ರೋಹಿ ಹಾಗೂ ಕ್ರಾಂತಿದ್ರೋಹಿ ಕಾರಣದಿಂದಾಗಿ ಜನ ಹೋರಾಟಕ್ಕೆ ಕಂಟಕನಾದ ಪೊಲೀಸ್ ಮಾಹಿತಿದಾರ, ಕ್ರೂರ ಭೂಮಾಲೀಕ ಕೇಶವಯಡಿಯಾಳನಿಗೆ ಜನಾದೇಶ ಮೇರೆಗೆ ಮರಣದಂಡನೆ ಶಿಕ್ಷೆಯನ್ನು ನಮ್ಮ ಪಕ್ಷದ ಪಿ.ಎಲ್.ಜಿ.ಎ.ಜಾರಿಗೋಳಿಸಿತು. ಈ ಕ್ರಮವನ್ನು ನಾಡಿನ ಎಲ್ಲಾ ಜನತೆ ಎತ್ತಿಹಿಡಿದು, ಪೊಲೀಸ್ ಮಾಹಿತಿದಾರರನ್ನು ಗುರುತಿಸಿ ಶಿಕ್ಷಿಸುತ್ತಾ ಭೂಮಾಲೀಕ ಶೋಷಣೆಯ ವಿರುದ್ಧ ರಾಜಿರಹಿತ ಹೋರಾಟಗಳನ್ನು ನಡೆಸಬೇಕೆಂದು ಮನವಿಮಾಡುತಿದ್ದೇವೆ.

"ಉಳುವವನಿಗೆ ಭೂಮಿ" ಎಂಬ ಘೋಷಣೆಯಡಿ ವ್ಯವಸಾಯಕ್ರಾಂತಿಯನ್ನು ಸಾಕಾರಗೊಳಿಸಲು,ಜನತೆಯ ನಿಜವಾದ ಪ್ರಜಾತಾಂತ್ರಿಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಪಕ್ಷ ಜನರ ಹೆಗಲಿಗೆ ಹೆಗಲಾಗಿ ನಿಂತು ಹೋರಾಡುತ್ತದೆ.ನಾಡಿನ ಎಲ್ಲಾ ಜನಸಾಮಾನ್ಯರು ಹಾಗೂ ಪ್ರಜಾತಂತ್ರವಾದಿಗಳು ಇದರಲ್ಲಿ ಹೆಚ್ಚು ಹೆಚ್ಚು ಪಾಲ್ಗೋಳ್ಳಬೇಕೆಂದು ಕೋರುತ್ತಿದ್ದೇವೆ.

- ಕಾ|| ಉಮೇಶ್(ಕಿರಣ್),ಕಾ||ಅಜಿತ್ ಕುಸುಬಿ(ಆಕಾಶ್)ರವರ ಕಗ್ಗೊಲೆಗೆ ಕಾರಣನಾದ ಪೊಲೀಸ್ ಮಾಹಿತಿದಾರ ಕೇಶವ ಯಡಿಯಾಳನಿಗೆ ನೀಡಿರುವ ಶಿಕ್ಷೆಯನ್ನು ಎತ್ತಿಹಿಡಿಯೋಣ!
- ಕಾ||ಉಮೇಶ್,ಕಾ||ಅಜಿತ್ ಕುಸುಬಿಯವರ ಆಶಯಗಳನ್ನು ಈಡೇರಿಸೋಣ!
- ಎಲ್ಲಾಜನದ್ರೋಹಿ,ಕ್ರೂರಭೂಮಾಲೀಕರು ಹಾಗೂ ಪೊಲೀಸ್ ಮಾಹಿತಿದಾರರಿಗೆ ತಕ್ಕ ಪಾಠ ಕಲಿಸೋಣ!
- ರೈತ,ಕೂಲಿ-ಕಾರ್ಮಿಕರೆಲ್ಲಾ ಒಂದಾಗೋಣ "ಉಳುವವರಿಗೆ ಭೂಮಿ" ಗಾಗಿ ಹೋರಾಡೋಣ!
- ನೂತನ ಪ್ರಜಾತಾಂತ್ರಿಕ ಕ್ರಾಂತಿಯನ್ನು ಯಶಸ್ವಿ ಗೋಳಿಸೋಣ!
- ಸಿ.ಪಿ.ಐ (ಮಾವೋವಾದಿ)ಜಿಂದಾಬಾದ್!

ಸಿ.ಪಿ.ಐ(ಮಾವೋವಾದಿ)
ದೃಕ್ಪಥ ಪ್ರದೇಶ
ಕರ್ನಾಟಕ.
ನವಂಬರ್ ೨೦೦೮

1 comment:

Anonymous said...

ದೃಕ್ಪಥ

what it mean