Nov 17, 2009

ದುಡ್ಡು-ಸಮಯ-ಪ್ರಭಾವ ಇಲ್ಲದಿದ್ದರೆ ನ್ಯಾಯ ಕೇಳಬಾರದು. ಎಲ್ಲೂ...

ನ್ಯಾಯ ಪಡೆದುಕೊಳ್ಳುವ ಬಗ್ಗೆ ಇನ್ನೊಂದು ಮಾತು.

ಹಣ-ಅಧಿಕಾರ-ಪ್ರಭಾವ-ವಶೀಲಿಗಳ ಮೇಲೆ ನಡೆಯುತ್ತಿರುವ ಸಮಾಜಗಳಲ್ಲಿ ಇವು ಇಲ್ಲದ ವ್ಯಕ್ತಿಗಳು ನ್ಯಾಯ ಕೇಳಬಾರದು. ಅವು ದಕ್ಕುವುದಿಲ್ಲ. ಅನ್ಯಾಯಕ್ಕೆ ಒಳಗಾಗುವ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಮನೆ-ಮಕ್ಕಳು ಸುತ್ತ ಓಡಾಡುವುದೆ ಕ್ಷೇಮ. ಅನ್ಯಾಯ ಎಸಗಿದವರು ನಿಮಗಿಂತ ಕಮ್ಮಿ ಬಲಿಷ್ಠರಾಗಿದ್ದರೆ ಮಾತ್ರ ನ್ಯಾಯ ಪಡೆಯಲು ಅವಕಾಶ ಉಂಟು.

ಓಪ್ರಾ ವಿನ್‍ಫ್ರೇ ಒಮ್ಮೆ ತನ್ನ ಶೋನಲ್ಲಿ ನಾನು ಬರ್ಗರ್ ತಿನ್ನುವುದಿಲ್ಲ ಎನ್ನುವಂತಹ ಮಾತನ್ನು ಆಡಿದ್ದಕ್ಕೆ ಮಾಂಸಕ್ಕಾಗಿ ದನ ಸಾಕುವ ಅಮೆರಿಕದ ದೊಡ್ಡ ರೈತರುಗಳು ಆಕೆಯನ್ನು ಕೋರ್ಟಿಗೆ ಎಳೆದಿದ್ದರು. ಓಪ್ರಾ ಮೂರು ಸಲ ಸಾಕ್ಷಿಕಟ್ಟೆಯಲ್ಲಿ ನಿಂತು ವಿಚಾರಣೆಗೆ ಉತ್ತರಿಸಬೇಕಾಯಿತು. ಮೂರ್ನಾಲ್ಕು ವರ್ಷಗಳ ನಂತರ ನ್ಯಾಯಲಯ ಆಕೆ ದನದ ಮಾಂಸವನ್ನು ಹೀನಾಯಿಸಲಿಲ್ಲ ಎಂದು ಆಕೆಯ ಪರವಾಗಿ ತೀರ್ಪು ನೀಡಿತು. ಓಪ್ರಾ ಗಟ್ಟಿಗಿತ್ತಿ-ಎಲ್ಲಾ ತರದಲ್ಲೂ.

ಮೋ ಪಾರ್ರ್ ಎನ್ನುವ ಅಮೆರಿಕದ ಅರೆ ರೈತ ತನ್ನ ನೆರೆಯ ರೈತರಿಗೆ ಬೀಜ ಸಂಸ್ಕರಣೆ ಮಾಡಿಕೊಡುವಾತ. ಆತನ ಕೆಲಸದಿಂದ ತಮಗೆ ನಷ್ಟವಾಗುತ್ತಿದೆ ಮತ್ತು ಮೋಸವಾಗುತ್ತಿದೆ ಎಂದು ಮೊನ್ಸಾಂಟೊ ಬೀಜಕಂಪನಿ ಆತನ ಮೇಲೆ ದಾವೆ ಹಾಕಿತು. ಆತನೂ ವಕೀಲರನ್ನಿಟ್ಟ. ಕಾನೂನು ವೆಚ್ಚಗಳನ್ನು ಭರಿಸಲಾರದೆ ಒಂದಷ್ಟು ದಿನಗಳ ನಂತರ ಮೊನ್ಸಾಂಟೋ ಕಂಪನಿಯ ಷರತ್ತುಗಳಿಗೆ ಶರಣಾದ. ಆತನಿಗೂ ಹಣ-ಸಮಯ ಇದ್ದಿದ್ದರೆ ಆತನೂ ಗೆಲ್ಲುತ್ತಿದ್ದನೇನೊ! ಆದರೆ ಮೊನ್ಸಾಂಟೊ ಅವನಿಗಿಂತಲೂ ಬಲಿಷ್ಠ ಶಕ್ತಿ-ಎಲ್ಲಾ ವಿಧದಲ್ಲೂ.



ಪರಿಸ್ಥಿತಿ ಹೆಚ್ಚುಕಮ್ಮಿ ಎಲ್ಲಾ ಕಡೆಯೂ ಹಾಗೆಯೆ. ಹೇಡಿ ತನಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳಲಾರ. ಜಾಣರೂ. ಅದೇ ಒಂದು ಸಾಮಾಜಿಕ ಮೌಲ್ಯ.

1 comment:

bhadravathi said...

sir, this is mahanthesh.(akhada prgm) lankesh patrike ya t.k.thyagaraj avra blog shuruvagide. www.teekaytippani.blogspot. sadhya adre check madi, response madi.