Jan 16, 2009

ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು- ಭಾಗ. 2 - ಹಸುವಿನ ಹೂಸು...



2008 ರ ಕೊನೆಯ ದಿನ ನಾನು "ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು" ಎಂಬ ಬ್ಲಾಗ್ ನೋಟ್ ಮಾಡಿದಾಗ ಈ ಮಾರ್ಕ್ ಬಿಟ್ಟ್‌ಮನ್‌ನ ಹೆಸರನ್ನೇ ಕೇಳಿರಲಿಲ್ಲ. ಬ್ಲಾಗ್‌ನಲ್ಲಿ ಅದನ್ನು ಬರೆದ ನಂತರ ನನ್ನ ಈ ಸಸ್ಯಾಹಾರದ ಬಗೆಗಿನ ಚಿಂತನೆಯನ್ನು ಅವತ್ತು ಗೆಳೆಯ ಪ್ರೊ. ಪೃಥ್ವಿ ಜೊತೆ ಹಂಚಿಕೊಂಡಾಗ ಅವರು ತಕ್ಷಣ ನನಗೆ ಬಿಟ್ಟ್‌ಮನ್‌ನ ವಿಡಿಯೋದ ಲಿಂಕ್ ಕಳುಹಿಸಿದರು. ಎಲ್ಲೋ ಒಂದು ಗಂಟೆ ಇದೆ, ಬಿಡುವಾದಾಗ ನೋಡೋಣ ಎಂದುಕೊಂಡವನು ಅವತ್ತಿನಿಂದ ಇವತ್ತಿನ ತನಕ ಅದನ್ನು ನೋಡಿರಲಿಲ್ಲ. ಈಗ ತಾನೆ ನೋಡಿದೆ (ಕೇವಲ ಇಪ್ಪತ್ತು ನಿಮಿಷಗಳ ವಿಡಿಯೊ). ಹಾಗೆಯೆ ಈ ಬಿಟ್ಟ್‌ಮನ್ ಯಾರೂ ಅಂತಲೂ ವಿಕಿಪೀಡಿಯದಲ್ಲಿ ಓದಿದೆ.

ಮುಖ್ಯವಾದ ವಿಷಯ ಏನೆಂದರೆ, ನಾನು ನನ್ನ ಮೊದಲ ನೋಟ್ಸ್‌ನಲ್ಲಿ ಹೇಳಿದ್ದ ಬಹುತೇಕ ಪಾಯಿಂಟ್‌ಗಳು ಈಗಾಗಲೆ ಬಿಟ್ಟ್‌ಮನ್ ಮತ್ತಿತರರಿಂದ ಹೇಳಲ್ಪಟ್ಟಿವೆ. ಆತನ ವಿಡಿಯೊವನ್ನು ಮುಂಚೆಯೆ ನೋಡಿರುವ ಯಾರಾದರೂ ನನ್ನ ನೋಟ್ಸ್‌ಗಳನ್ನು ನಂತರ ನೋಡಿದರೆ, 'ರವಿ ಅದನ್ನು ನೋಡಿಯೇ ಬರೆದಿದ್ದಾನೆ,' ಎನ್ನುವ ಸಾಧ್ಯತೆಯಿದೆ. ಅದು ಹೇಗೆ ಇರಲಿ, ಒಂದು ಸಮಸ್ಯೆಯ ಬಗ್ಗೆ ಬೇರೆಬೇರೆ ಜನ ಚಿಂತನೆ ಮಾಡಲು ಆರಂಭಿಸಿದಾಗ ಅವರಿಗೆ ದೊರಕುವ ಪರಿಹಾರಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುತ್ತವೆ ಎನ್ನುವುದನ್ನು ಇದು ನಿರೂಪಿಸುತ್ತದೆ. ನನ್ನಂತೆ ವಾರದ ಸಂತೆಯಿಂದ ಮನೆಗೆ ಬೇಕಾದ ತರಕಾರಿಗಳನ್ನು ತರುತ್ತಿದ್ದ ಅನುಭವ, ರೈತಾಪಿ ಹಿನ್ನೆಲೆ, ಮತ್ತು ಇಲ್ಲಿ ಅಮೆರಿಕದಲ್ಲಿನ ಆಹಾರ ಪದಾರ್ಥಗಳು, ದೇಶವಿದೇಶಗಳಿಂದ ಅಮದಾಗುವ ರೀತಿ, ಅವುಗಳ ಸಾರಿಗೆ, ಜನರ ತಿಂಡಿಬಾಕತನ, ಜಾಗತಿಕ ತಾಪಮಾನ, ಮುಂತಾದವುಗಳನ್ನು ಕುರಿತು ಯೋಚಿಸಿದ್ದ ಹಿನ್ನೆಲೆ ಇರುವ ಯಾರು ಬೇಕಾದರೂ ಬಿಟ್ಟ್‌ಮನ್ ಹೇಳುವಂತಹುದೆ ಅಭಿಪ್ರಾಯಕ್ಕೆ ಬರುವುದರಲ್ಲಿ ಆಶ್ಚರ್ಯವಿಲ್ಲ. ಜನ ಬಹಳ ಹಿಂದೆಯೆ ಇದರ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ನನಗೆ ಹೊಸತು.

ಈ ವಿಡಿಯೋದಲ್ಲಿ ಆತ ಹೇಳುವ locavore ಬಗ್ಗೆ ಮತ್ತು ಪ್ರಾಣಿಸಾಕಣೆಯನ್ನು ಉದ್ಯಮವನ್ನಾಗಿ ಮಾಡುವ ಅಪಾಯದ ಬಗ್ಗೆ ಗಮನಿಸಿ. ಆತ ತಮಾಷೆಯಾಗಿ "ಹಸುವಿನ ಹೂಸಿನ" ಬಗ್ಗೆಯೂ ಮಾತನಾಡುತ್ತಾನೆ. ಬಹಳ ಗಂಭೀರವಾದ ವಿಷಯ!

ಬಿಟ್ಟ್‌ಮನ್ ಹೇಳಿರುವುದನ್ನು ಕನ್ನಡಕ್ಕೆ ಇಳಿಸಿದರೆ ಒಳ್ಳೆಯದು. ನಾನು ಸಮಯವಾದಾಗ ಮುಂದಿನ ಕಂತುಗಳಲ್ಲಿ ಬುಲ್ಲೆಟ್ ಪಾಯಿಂಟ್ಸ್ ಹಾಕುತ್ತೇನೆ.

ಡಿಸೆಂಬರ್ 31, 2008 ರಂದು ಬರೆದದ್ದು:

ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಚಿತ್ರಣವಿದೆ. ದೊಡ್ಡವನಾದ ಮೇಲೆ ಚೆನ್ನಾಗಿ ಮಾಂಸ ತಿನ್ನಬೇಕು; ಮಾಂಸ ತಿಂದು ಗಟ್ಟಿಯಾದರಷ್ಟೆ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಸಾಧ್ಯ, ಎನ್ನುವ ಕಲ್ಪನೆಯೊಂದು ಗಾಂಧಿಯ ತಲೆ ಹೊಕ್ಕಿತ್ತು (ಹೇಳಬೇಕೆಂದರೆ, ಹೊಕ್ಕಿಸಲ್ಪಟ್ಟಿತ್ತು, ಅವರ ಬಾಲ್ಯ ಸ್ನೇಹಿತನೊಬ್ಬನಿಂದ). ಆದರೆ ತನ್ನ ತಾಯಿಗೆ (ಒತ್ತಾಯಪೂರ್ವಕವಾಗಿ) ಕೊಟ್ಟಿದ್ದ ವಚನದಿಂದಾಗಿ ಲಂಡನ್ನಿನಲ್ಲಿ ಸಸ್ಯಾಹಾರಿಯಾಗಿಯೇ ಕಾಲತಳ್ಳಬೇಕಿದ್ದ ಅಗತ್ಯ ಅಥವ ದರ್ದು ಗಾಂಧಿಗಿತ್ತು. ಆದರೆ ಗಾಂಧಿಯ ಮನಸ್ಸು ಅಲ್ಲಿ ವೈಚಾರಿಕ ಕಾರಣಗಳಿಗಾಗಿ ಬದಲಾಯಿತು. ಅಲ್ಲಿಯ ಬಿಳಿಯ ಸಸ್ಯಾಹಾರಿಗಳ ಜೊತೆ ಸೇರಿ, ಪುಸ್ತಕಗಳನ್ನು ಓದಿ, ಸಸ್ಯಾಹಾರವನ್ನು ಮನಃಪೂರ್ವಕವಾಗಿ ಜೀವನಪರ್ಯಂತ ಸ್ವೀಕರಿಸಿದರು. ಆದರೆ ಆ ವೈಚಾರಿಕ ಕಾರಣಗಳು ಮತ್ತು ಮಾಂಸಾಹಾರ ಮುಂದೆಂದೂ ಸೇವಿಸದಂತೆ ಗಾಂಧಿ ಮನಸ್ಸು ಬದಲಾಯಿಸಲು ಕಾರಣಗಳೇನಾಗಿದ್ದವು ಎನ್ನುವುದು ಮೊಮ್ಮಗನ ಪುಸ್ತಕದಲ್ಲಿ ದಾಖಲಾಗಿಲ್ಲ.

ಈಗ ಒಂದೆರಡು ವರ್ಷದಿಂದ ಗ್ಲೋಬಲ್ ವಾರ್ಮಿಂಗ್ ಮತ್ತು ಹವಾಮಾನ ವೈಪರೀತ್ಯಗಳ ಬಗ್ಗೆ ಓದಿ, ನೋಡಿ, ಕೇಳಿ, ನನಗೆ ನಿಜಕ್ಕೂ ಮನುಷ್ಯ ಅಥವ ಜೀವಸಂಕುಲದ ಉಳಿವಿನ ಬಗ್ಗೆಯೇ ಸಂದೇಹ ಬರುತ್ತಿದೆ. ಮನುಷ್ಯ ಪ್ರಕೃತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಅದು ಮನುಷ್ಯನಿಗೆ ಕರುಣೆ ತೋರಿಸುವ ಯಾವೊಂದು ಅವಕಾಶಗಳನ್ನೂ ಉಳಿಸುತ್ತಿಲ್ಲ. ಇದರ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಮನುಷ್ಯ ತನ್ನ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಮಾಂಸಾಹಾರದ ಮೇಲಿನ ಅವಲಂಬನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನಿಸುತ್ತದೆ.

ಇದರ ಬಗ್ಗೆ ಒಂದು ಲೇಖನ ಬರೆಯಬೇಕು ಎಂದು ನನಗೆ ಆರೇಳು ತಿಂಗಳಿನಿಂದ ಅನ್ನಿಸುತ್ತಿತ್ತು. ಆಗಲಿಲ್ಲ. ಕನಿಷ್ಠ ಈಗಲಾದರೂ ನನ್ನ ಆಲೋಚನೆಗಳನ್ನು ದಾಖಲಿಸೋಣ, ಆಮೇಲೆ ವಿಸ್ತೃತವಾಗಿ, ಬೇರೆಬೇರೆ ಕೋನಗಳಿಂದ ಅವಲೋಕಿಸಿ ಬರೆಯೋಣ ಎಂದುಕೊಂಡು ಇಲ್ಲಿ ಸದ್ಯಕ್ಕೆ ಕೆಲವನ್ನು ನೋಟ್ ಮಾಡುತ್ತಿದ್ದೇನೆ.

ಬಾಲ್ಯದಲ್ಲಿ ಕೆಲವೊಂದು ಹಬ್ಬಕ್ಕೊ, ಇಲ್ಲಾ ತಿಂಗಳಿಗೊ, ಇಲ್ಲಾ ನೆಂಟರು ಬಂದಾಗಲೊ ಅಥವ ನೆಂಟರ ಮನೆಗೆ ಹೋದಾಗಲೊ ಅಷ್ಟೇ ಮಾಂಸ ತಿನ್ನುವ ಅವಕಾಶ ಸಿಗುತ್ತಿದ್ದದ್ದು. ಆದರೆ ಕಾಲೇಜಿನ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ತಿನ್ನುತ್ತಿದೆ. ಅಂತಹುದೇ ದಿನಗಳಲ್ಲಿ ನನ್ನಪ್ಪ ಅಂದ ಮಾತಿನಿಂದಾಗಿ ಆಗಾಗ ಕೋಳಿಸಾರು ತಿನ್ನಬೇಕು ಎನ್ನುವ ಚಪಲವನ್ನು ನನ್ನ ವೀಕ್‌ನೆಸ್‌ಗೆ ಸಮೀಕರಿಸಿಕೊಂಡು ಸುಮಾರು ಎರಡೂವರೆ ವರ್ಷಗಳ ಕಾಲ ಪಕ್ಕಾ ಸಸ್ಯಾಹಾರಿಯಾಗಿ ಕಳೆದಿದ್ದೆ. ಕೇಕ್ ಸಹ ತಿಂದಿರಲಿಲ್ಲ. ಎಂದೂ ಅದರ ಬಗ್ಗೆ ವಿಷಾದವಾಗಲಿಲ್ಲ. ಬದಲಿಗೆ ನನಗೆ ನನ್ನ ಇಚ್ಚಾಶಕ್ತಿಯ ಬಗ್ಗೆ ಹೆಮ್ಮೆ ಆಗುತ್ತಿತ್ತು. ಆದರೆ ಮತ್ತೊಂದು ಸಂದರ್ಭದಲ್ಲಿ ಆ ಚಪಲ ಇನ್ನು ವೀಕ್‌ನೆಸ್ ಆಗಿ ಉಳಿದಿಲ್ಲ ಅನ್ನಿಸಿದ ಮೇಲೆ, ಹಾಗು ನಾನೆ ದುಡಿದು ತಿನ್ನಲಾರಂಭಿಸಿದ ಮೇಲೆ ಮತ್ತೆ ಮಾಂಸಾಹಾರಿಯಾದೆ. ವಿಸ್ಕಾನ್ಸಿನ್‌ನಲ್ಲಿ ಇದ್ದ ಆರಂಭದ ಸಂದರ್ಭದಲ್ಲಿ ಕಾರಿಲ್ಲದ್ದರಿಂದ ಮತ್ತು ಗುಜರಾತಿಯೊಬ್ಬರ ಊರ ಹೊರಗಿನ ಮೋಟೆಲ್ ಒಂದರಲ್ಲಿ ಇದ್ದ ಕಾರಣದಿಂದಾಗಿ ಸುಮಾರು ಮೂರು ತಿಂಗಳ ಕಾಲ ಪಕ್ಕದ ಪೆಟ್ರೋಲ್ ಬಂಕಿನ ಡೆಲಿಯಲ್ಲಿ ಕೇವಲ ಕರಿದ ಚಿಕನ್ ಮತ್ತು ಇತರ ಮಾಂಸವನ್ನೆ ತಿಂದು ಕಾಲ ಹಾಕಿದ್ದೆ. ಈಗ ಮತ್ತೆ ನಾಲಿಗೆ ರುಚಿ ಬೇಡುತ್ತಿದೆ.

ಇನ್ನು ಊರಿನಲ್ಲಿ ಮಾಂಸ ತಿನ್ನಲಾರದೆ ಇರಲು ಕೆಲವು ಆಪ್ತ ಕಾರಣಗಳೂ ಇವೆ. ನಾನು ಪಕ್ಕಾ ಸಸ್ಯಾಹಾರಿಯಾದರೆ ಕೆಲವೊಂದು ಪ್ರೀತಿಯ ನೆಂಟರ ಮತ್ತು ಸ್ನೇಹಿತರ ಜೊತೆ ಕುಳಿತು ಊಟವನ್ನು ಎಂಜಾಯ್ ಮಾಡುವ ಅವಕಾಶವನ್ನೆ ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನವರ ಪರಂಪರೆಯ ಮುಂದುವರಿಕೆಗಾದರೂ ಮಾಂಸಾಹಾರಿಯಾಗಿ ಮುಂದುವರೆಯಬೇಕು ಎನ್ನಿಸುತ್ತದೆ.

ಆದರೆ, ಮಾಂಸಾಹಾರಕ್ಕಾಗಿ ಮನುಷ್ಯ ಉಪಯೋಗಿಸುತ್ತಿರುವ ಶಕ್ತಿಮೂಲಗಳ ಮತ್ತು ಸಂಪನ್ಮೂಲಗಳ ಬಗ್ಗೆ ಯೋಚಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ನಾನು ನನ್ನ ಕಡೆಯಿಂದ ನನ್ನ ಈಗಿನ ಆಹಾರ ಪದ್ದತಿಯನ್ನೆ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎನ್ನಿಸುತ್ತದೆ. ಸುಮ್ಮನೆ ಕೆಲವೊಂದು ಪಾಯಿಂಟ್‌ಗಳನ್ನು ಇಲ್ಲಿ ಹೆಸರಿಸಿ ಇವತ್ತಿಗೆ ಇದನ್ನು ಮುಗಿಸುತ್ತೇನೆ. ಆದಾಗಲೆಲ್ಲ ಈ ಬ್ಲಾಗ್ ಪೋಸ್ಟನ್ನು ಅಪ್‌ಡೇಟ್ ಮಾಡಿಕೊಂಡರಾಯಿತು.
  • ಅದು ಇರುವ ಮನೆಗಳಲ್ಲಿ ೨೪ ಗಂಟೆಯೂ ವಿದ್ಯುತ್ ಬಳಸುವ ಉಪಕರಣ ಅಂದರೆ ರೆಫ್ರಿಜರೇಟರ್. ಅದರಲ್ಲಿ ಬಳಸುವ ರಾಸಾಯನಿಕಗಳಿಂದ ಪರಿಸರಕ್ಕೂ ಹಾನಿ. ಹಾಗಾಗಿ ಮನೆಗಳಲ್ಲಿ ರೆಫ್ರಿಜರೇಟರ್ ಇಟ್ಟುಕೊಳ್ಳುವುದನ್ನು discourage ಮಾಡಬೇಕು.
  • ಮನುಷ್ಯ ಆದಷ್ಟು ತನ್ನ ಸುತ್ತಮುತ್ತಲ ಪರಿಸರದಲ್ಲಿ ಬೆಳೆದದ್ದನ್ನೆ ತಿನ್ನಬೇಕು - ಸಸ್ಯಾಹಾರವಾಗಲಿ, ಮಾಂಸಾಹಾರವಾಗಲಿ.
  • ಆದಷ್ಟು ತಾಜಾ ತರಕಾರಿಗಳನ್ನು ಮತ್ತು ದೀರ್ಘಕಾಲ ರೂಮ್ ವಾತಾಂಶದಲ್ಲಿ ಶೇಖರಿಸಬಹುದಾದ ಧವಸ ಧಾನ್ಯಗಳನ್ನೆ ತಿನ್ನಬೇಕು
  • ಆಹಾರ ಪದಾರ್ಥಗಳ ರಫ್ತನ್ನು ನಿಷೇಧಿಸಬೇಕು. ಒಂದು ಸುತ್ತಳತೆಯ ಮಟ್ಟದಲ್ಲಿಯೇ ಧವಸಧಾನ್ಯಗಳ ವ್ಯಾಪಾರವಾಗಬೇಕು. ಎಲ್ಲಿ ಪ್ರತಿಕೂಲ ಹವಾಮಾನಗಳಿಂದಾಗಿ ಬೆಳೆ ಬೆಳೆಯಲು ಸಾಧ್ಯವಿಲ್ಲವೊ ಅಲ್ಲಿಗೆ ಮಾತ್ರ ರಫ್ತಿನ ಅವಕಾಶ ಇರಬೇಕು. ಬೇರೆ ಕಡೆಗಳಿಂದ ಬರುವ ಆಹಾರ ಸಾಮಗ್ರಿಗಳಿಗೆ ಜಾಸ್ತಿಯೆ ಎನ್ನಿಸುವಷ್ಟು ತೆರಿಗೆ ಹಾಕಬೇಕು. ಇದು ಆಹಾರ ಪದಾರ್ಥಗಳ ಸಾರಿಗೆ ಮತ್ತು ಅದರಿಂದ ಖರ್ಚಾಗುವ ತೈಲ ಮತ್ತು ಎಮಿಷನ್ ಅನ್ನು ತಡೆಯುತ್ತದಷ್ಟೆ ಅಲ್ಲದೆ ಎಲ್ಲಾ ದೇಶಗಳೂ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಗುವಂತೆ ಮಾಡುತ್ತವೆ. ರೈತನಿಗೂ ತನ್ನ ಬೆಳೆಗೆ ಎಷ್ಟು ಮಾರುಕಟ್ಟೆ ಇರುತ್ತದೆ ಎನ್ನುವ ಒಂದು ಪಕ್ಕಾ ತಿಳಿವೂ ಆಗ ಇರುತ್ತದೆ.
  • ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಜನರು ಅಲ್ಲಿಯ ಸ್ಥಳೀಯ ಆಹಾರವನ್ನು ತೆಗೆದುಕೊಳ್ಳುವ ಮನೋಭಾವ ಮತ್ತು ಅದೇ ನೈತಿಕವಾದದ್ದು ಎನ್ನುವ ನಂಬಿಕೆ ಬೆಳೆಸಬೇಕು.
  • ಮಾಂಸಾಹಾರಕ್ಕಾಗಿ ಉದ್ದಿಮೆಯ ಮಟ್ಟದಲ್ಲಿ ಪ್ರಾಣಿಗಳನ್ನು ಸಾಕುವುದು ನಿಲ್ಲಬೇಕು.
  • ಮಾಂಸವನ್ನು ತಾಜಾ ಆಗಿಯೆ ಶೇಖರಿಸಿಡಲು ರೇಫ್ರಿಜರೇಟರ್‌ನ ಅವಶ್ಯಕತೆ ಇರುವುದರಿಂದ ಅಂತಹ ಆಹಾರಸೇವನೆಯನ್ನು ತ್ಯಜಿಸಬೇಕು, ಇಲ್ಲವೆ ವಿಶೇಷ ಸಂದರ್ಭಕ್ಕೆ ಮಾತ್ರ ಇಟ್ಟುಕೊಳ್ಳಬೇಕು. ಆಗಾಲೂ ಅಂಗಡಿಗೆ ಹೋಗಿ ಅಂದು ಕಡಿದ ಮಾಂಸವನ್ನೆ ತರಬೇಕು.
  • ಸಮುದ್ರದಲ್ಲಿ ಮಾಡಿದ ಮೀನುಗಾರಿಕೆಯೂ ಕರಾವಳಿಯಲ್ಲಿಯೇ ಮಾರುವಂತಿರಬೇಕು. ಅದರ ರಪ್ತನ್ನೂ, ಐಸ್‌ನಲ್ಲಿ ಹಾಕಿ ಒಳಊರುಗಳಿಗೆ ಸಾಗಿಸುವುದನ್ನೂ ನಿಲ್ಲಿಸಬೇಕು. ಇವೆಲ್ಲವನ್ನೂ ಒಂದು ಉದ್ದಿಮೆಯಾಗಿ ಪ್ರೋತ್ಸಾಹಿಸಬಾರದು.
  • ...
  • ...(ಬೆಳೆಯುತ್ತದೆ)


ಗಾಂಧಿ ಯಾಕೆ ಸಸ್ಯಾಹಾರದ ಪರ ಇದ್ದರು ಎನ್ನುವುದಾಗಲಿ, ಅಥವ ಮಾಂಸಾಹಾರಿಗಳು ಹಾಗೆಹೀಗೆ ಎನ್ನುವ ವಾದಗಳಾಗಲಿ ನನಗೆ ಅನಗತ್ಯ. ಆದರೆ ಈ ಪರಿ ಜನಸಂಖ್ಯೆ ಇರುವ ಇವತ್ತಿನ ಸಂದರ್ಭಕ್ಕೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳದಿದ್ದರೆ, ಅವನು ಪ್ರಕೃತಿಗೆ ಮಾಡುತ್ತಿರುವ ಅಪಚಾರ ಇಡೀ ಜೀವಸಂಕುಲಕ್ಕೆ ನೋವಿನ ದಿನಗಳನ್ನು ತರಲಿದೆ ಎಂದು ನನಗೆ ಅನ್ನಿಸುತ್ತಿರುವುದರಿಂದ, ಅದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನೆ ಹಾಕಿಕೊಂಡಿರುವುದರಿಂದ, ಬರಲಿರುವ ದಿನಗಳಲ್ಲಿ ನನ್ನ ಜೀವನಪದ್ಧತಿ ಮತ್ತು ಆಹಾರ ಪದ್ಧತಿಗಳೂ ಬದಲಾಗಲಿವೆ. ಇಲ್ಲದಿದ್ದರೆ, I will be feeling sorry all the time. ನಾನು ಮತ್ತೊಮ್ಮೆ ಸಸ್ಯಾಹಾರಿಯಾಗಬೇಕಿದೆ ಮತ್ತು ಸ್ಥಳೀಯವಾದದ್ದನ್ನೆ ತಿನ್ನುವ ಅಥವ ಬೆಳೆದುಕೊಳ್ಳುವ ಬಗ್ಗೆ ಯೋಚಿಸಬೇಕಿದೆ.

ಇದರ ಜೊತೆಗೆ, ಇದನ್ನು ಯಾಕೆ ಮತ್ತು ಹೇಗೆ ಸಮುದಾಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಈಗಾಗಲೆ ತೆಗೆದುಕೊಂಡು ಹೋಗಿರುವವರು ಬಳಸುತ್ತಿರುವ ಮಾರ್ಗಗಳು ಏನು, ಅವುಗಳ ಪರಿಣಾಮ ಏನು ಎನ್ನುವುದು ನನ್ನ ಮುಂದಿನ ದಿನಗಳ ಒಂದು ಪಾಲು ಸಮಯವನ್ನು ತೆಗೆದುಕೊಳ್ಳುತ್ತದೆ.

ಇದನ್ನು ಓದುವ ಓದುಗರು, ತಮ್ಮ ತಿಳುವಳಿಕೆ, ಅಭಿಪ್ರಾಯ, ಪರವಿರೋಧಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಎಲ್ಲವನ್ನೂ ಓದುತ್ತೇನೆ. ಅಗತ್ಯವಾದಲ್ಲಿ ನನ್ನ ಪ್ರತಿಕ್ರಿಯೆ ಬರೆಯುತ್ತೇನೆ.

4 comments:

ತಿಳಿಗಣ್ಣ said...

ಅವರು ಹೇಳುವ ಅಂಶಗಳೆಲ್ಲ ಸರಿ. ಆದರೆ ಅದೇ ತೆರವಾದ ತೊಂದರೆಗಳು ಇಂದಿ ಆಧುನಿಕ ಬೇಸಾಯ ಪದ್ದತಿಗಳಲ್ಲೂ ಇವೆ.

ಆದರೆ ಇಂದು ಕೃಷಿ ಎಂಬುದು ಉದ್ಯಮ. ಕೃಷಿಯಿಂದಲೂ ಮಾಲಿನ್ಯ, ನೆಲದ ಬರಡಾಗುವಿಕೆ ಮುಂತಾದ ತೊಂದರೆಗಳಿವೆ.

ಹಾಗೇ ಹೇಗೆ ಕೃತಕವಾಗಿ ಮದ್ದಗಳನ್ನು ತಿನ್ನಿಸಿ ತಳಿ ಮಾಡಿದ ಪ್ರಾಣಿಗಳನ್ನು ತಿನ್ನುವುದರಿಂದ ಆಗುವ ಆರೋಗ್ಯದ ತೊಂದರೆಗಳೂ ಕೂಡ, ಹಾಗೇ ರಸಗೊಬ್ಬರ, ಹೈಬ್ರೀಡ್ ತಳಿಗಳು ಹಾಗು ರಾಸಾಯನಿಕಗಳನ್ನು ಸಿಂಪಡಿಸಿದ ಗಿಡಗಳನ್ನು ತಿನ್ನುವುದರಿಂದಲೂ ಆಗುವುದು.

Ashok Uchangi said...

ಪ್ರಿಯರೆ
ನಿಮ್ಮ ವಿದ್ವತ್ಪೂರ್ಣ ಬರಹಗಳು ಸದಾ ಆಸಕ್ತಿದಾಯಕವಾಗಿರುತ್ತವೆ.ಅಮೇರಿಕೆಯಲ್ಲಿದ್ದುಕೊಂಡು ಸಸ್ಯಾಹಾರದ ಬಗ್ಗೆ ಮಾತನಾಡುವ ನೀವು ಅಲ್ಲಿ ಸಂಪೂರ್ಣ ಸಸ್ಯಹಾರಿಗಳಾಗಿರಲು ಸಾಧ್ಯವೇ? ತಿಳಿಸಿ.
ಸಸ್ಯಹಾರದ ಮಹತ್ವ ಕುರಿತಾದ ಬ್ಲಾಗ್ ಒಂದರ ಲಿಂಕ್ ಇಲ್ಲಿದೆ.ಬಿಡುವಾದಾಗ ನೋಡಿ.
http://speaktonature.blogspot.com/

ವಿಶ್ವಾಸವಿರಲಿ
ಅಶೋಕ ಉಚ್ಚಂಗಿ
http://mysoremallige01.blogspot.com/

Anonymous said...

Ravi,
I don't think its logical to say fridge is used to keep non-vegetarian food/meat. Most of the time, we do not keep meat/ non-vegetarian food and still continue to use fridge.
Don't you use fridge, Ravi?

-Bala

ಸುಪ್ತದೀಪ್ತಿ suptadeepti said...

ರವಿ, ನಿಮ್ಮ ಮೊದಲಿನ ಲೇಖನವನ್ನೂ ಓದಿದ್ದೆ. ಇದೀಗ ಎರಡನೇದ್ದು...
ಇದೇ ಸಾಲಿನಲ್ಲಿ ನಾನು ಹಿಂದೊಮ್ಮೆ ಬರೆದಿದ್ದ, ನನ್ನ ಬ್ಲಾಗಿನಲ್ಲಿ ಹಾಕಿದ್ದ ಕವನದ ಲಿಂಕ್ ಕೊಡುತ್ತಿದ್ದೇನೆ; ಓದಿ ನಕ್ಕುಬಿಡಿ.
http://harivalahari.blogspot.com/2008/07/blog-post_27.html