Jan 19, 2010

ಕನ್ನಡ ಚಿತ್ರರಂಗ 75 - ರೇಡಿಯೋ ಕಾರ್ಯಕ್ರಮ: ಮಧುಕಾಂತ್, ಪುಟ್ಟಸ್ವಾಮಿ

ಗೆಳೆಯ ಮಧುಕಾಂತ್ ಇಲ್ಲಿ ನಾಳೆ ಒಂದು ಒಳ್ಳೆಯ ರೇಡಿಯೊ ಕಾರ್ಯಕ್ರಮ ಕೊಡುತ್ತಿದ್ದಾರೆ. ಅದು ಕನ್ನಡ ಚಿತ್ರರಂಗದ 75 ವರ್ಷಗಳ ಕುರಿತಂತೆ.

ಲೇಖಕ ಕೆ. ಪುಟ್ಟಸ್ವಾಮಿಯವರು "ವಿಕ್ರಾಂತ ಕರ್ನಾಟಕ"ದಲ್ಲಿ ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸವನ್ನು ಕುರಿತು (ಏಪ್ರಿಲ್ 18, 2008 ರ ಸಂಚಿಕೆಯಿಂದ ಜುಲೈ 31,2009 ರ ಸಂಚಿಕೆಯ ತನಕ) ಬರೆದಿದ್ದರು. ಅದು ಕನ್ನಡ ಚಿತ್ರರಂಗದ ಬಗೆಗೆ ಮಾತ್ರವಲ್ಲದೆ, ಆ ಮೂಲಕ ಕನ್ನಡದ ಒಂದು ಕಾಲಘಟ್ಟದ ಸಾಂಸ್ಕೃತಿಕ ಚರಿತ್ರೆಯ ಕುರಿತಾದ ಅಪೂರ್ವ ಲೇಖನ ಸರಣಿಯೂ ಆಗಿತ್ತು. ಕನ್ನಡ ಚಿತ್ರರಂಗದ ಇತಿಹಾಸವನ್ನು ಅಭ್ಯಸಿಸುವವರಿಗೆ ಇನ್ನು ಮುಂದಕ್ಕೆ ಎಲ್ಲಾ ರೀತಿಯಿಂದಲೂ ಆಕರ ಮೂಲವಾಗುವ ಬರಹಗಳು ಅವು. ಇತ್ತೀಚೆಗೆ ತಾನೆ ಈ ಲೇಖನಗಳು "ಸಿನಿಮಾ ಯಾನ (ಕನ್ನಡ ಚಿತ್ರರಂಗ 75 : ಒಂದು ಫ್ಲಾಷ್‌ಬ್ಯಾಕ್)" ಎಂಬ ಪುಸ್ತಕ ರೂಪದಲ್ಲಿ ಬಂದಿದೆ.




ಈ ಪುಸ್ತಕಕ್ಕೆ ಎನ್.ಎಸ್. ಶಂಕರ್ ಬರೆದಿರುವ ಮುನ್ನುಡಿ ಇಲ್ಲಿದೆ.

"ಸಿನೆಮಾ ಯಾನ" ಬಿಡುಗಡೆಯ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.

ಈ ಪುಸ್ತಕದ ಹಿನ್ನೆಲೆಯಲ್ಲಿ, ಪುಟ್ಟಸ್ವಾಮಿಯವರೊಂದಿಗೆ ನೇರಪ್ರಸಾರದ ಸಂದರ್ಶನ ಮತ್ತು ಮಾತುಕತೆಯನ್ನು ಮಧುಕಾಂತ್ ತಮ್ಮ ನಾಳೆಯ ರೇಡಿಯೊ ಕಾರ್ಯಕ್ರಮದಲ್ಲಿ ನಡೆಸಿಕೊಡುತ್ತಿದ್ದಾರೆ. ಬೇ ಏರಿಯಾದಲ್ಲಿರುವ ಕೇಳುಗರು ಈ ಕಾರ್ಯಕ್ರಮವನ್ನು 90.1 FM ತರಂಗಾಂತರದಲ್ಲಿ ಕೇಳಬಹುದು. ಜೊತೆಗೆ, ಇಂಟರ್ನೆಟ್ ಸೌಲಭ್ಯ ಇರುವ ಎಲ್ಲರೂ ಎಲ್ಲಿಂದಲಾದರೂ ತಮ್ಮ ಕಂಪ್ಯೂಟರ್ ಮೂಲಕ ಆಲಿಸಬಹುದು. ತಮ್ಮ ಅಭಿಪ್ರಾಯಗಳನ್ನೂ ಈ ನೇರಪ್ರಸಾರದಲ್ಲಿ ಹಂಚಿಕೊಳ್ಳಬಹುದು.
ದಿನಾಂಕ: ಜನವರಿ 20, 2010 - ಬುಧವಾರ
ಸಮಯ: 7.30 AM to 8.30 AM (PST) / ರಾತ್ರಿ 9 ರಿಂದ 10 (ಭಾರತೀಯ ಕಾಲಮಾನ)

ಹೆಚ್ಚಿನ ವಿವರಗಳು ಮಧುಕಾಂತ್‌ರ ಬ್ಲಾಗ್‌ನಲ್ಲಿ ಇವೆ.

ಅಂದ ಹಾಗೆ, ಇಲ್ಲಿಯವರೆಗೆ ಇಂತಹ 19 ಕನ್ನಡ ಕಾರ್ಯಕ್ರಮಗಳನ್ನು ಕೊಟ್ಟಿರುವ ಮಧುಕಾಂತರಿಗೆ ಇದು 20 ನೇ ಕಾರ್ಯಕ್ರಮ. ಅವರ ಹಿಂದಿನ ಎಲ್ಲಾ ಕಾರ್ಯಕ್ರಮಗಳೂ ಈ ಕೆಳಗಿನ ಕೊಂಡಿಯಲ್ಲಿ ಕೇಳಲು ಲಭ್ಯವಿದೆ.
http://www.itsdiff.com/Kannada.html

ತಮ್ಮದೆ ನೆಲೆಯಲ್ಲಿ ಒಂದು ಒಳ್ಳೆಯ ಆರೋಗ್ಯವಂತ ಸಾಂಸ್ಕತಿಕ ಸಂದರ್ಭವನ್ನು ಸೃಷ್ಟಿಸಿಕೊಳ್ಳಲು ತವಕಿಸುವ ಮಧುಕಾಂತರಂತಹ ಪ್ರಯತ್ನಗಳು ಗಮನಾರ್ಹ ಮತ್ತು ಪ್ರಶಂಸನೀಯ.

No comments: