Dec 30, 2006

ಇಬ್ಬರು ರಾಷ್ಟ್ರಾಧ್ಯಕ್ಷರ ಮರಣ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 12, 2007 ರ ಸಂಚಿಕೆಯಲ್ಲಿನ ಅಂಕಣ ಲೇಖನ)

93 ವರ್ಷದ ತುಂಬು ಜೀವನ ನಡೆಸಿದ ಮುದುಕನೊಬ್ಬ ಕಳೆದ ವಾರ ಅಮೇರಿಕದಲ್ಲಿ ತೀರಿಕೊಂಡ. 93 ವರ್ಷದ ಹಿಂದೆ, ಆ ಮನುಷ್ಯ ಹುಟ್ಟಿದ 16 ದಿನಕ್ಕೆಲ್ಲ ಆ ಮಗುವಿನ ಅಮ್ಮ ತನ್ನ ಗಂಡನನ್ನು ಬಿಟ್ಟು ತನ್ನ ತಂದೆಯ ಮನೆ ಸೇರಿಕೊಂಡಳು. ಕಾರಣ? ಆ ಮಗುವಿನ ಅಪ್ಪ ಮಹಾ ಕುಡುಕನಾಗಿದ್ದ. ಹೆಂಡತಿಯನ್ನು ಗರ್ಭಿಣಿ, ಬಾಣಂತಿ ಎನ್ನದೆ ಹೊಡೆಯುತ್ತಿದ್ದ. "ಮಗುವನ್ನು, ನಿನ್ನನ್ನು ಸಾಸಿಬಿಡುತ್ತೇನೆ" ಎಂದು ಮಾಂಸ ಕಡಿಯುವ ಕತ್ತಿ ಹಿಡಿದು ಮಗು ಹುಟ್ಟಿದ ನಾಲ್ಕಾರು ದಿನಕ್ಕೆಲ್ಲ ಅಬ್ಬರಿಸಿದ್ದ. ಹೀಗಾಗಿ ತನ್ನ ಅಪ್ಪನ ಮನೆ ಸೇರಿಕೊಂಡ ಆ ಹೆಂಗಸು ತನ್ನ ಮಗುವಿನ ತಂದೆಯನ್ನು ವುಚ್ಚೇದಿಸಿ, ಆರೇಳು ತಿಂಗಳ ನಂತರ ಜೆರಾಲ್ಡ್ ಫೋರ್ಡ್ ಎನ್ನುವನನ್ನು ಮದುವೆಯಾದಳು. ತನ್ನ ಹೊಸ ಗಂಡನ ಮೇಲಿನ ಪ್ರೀತಿಂದ, ನಂಬಿಕೆಯಿಂದ ತನ್ನ ಮೊದಲ ಮಗುವನ್ನೂ ಜೆರಾಲ್ಡ್ ಫೋರ್ಡ್ ಜೂನಿಯರ್ ಎಂದು ಕರೆಯಲಾರಂಭಿಸಿದಳು. ಆ ತಾಯಿ ಮತ್ತು ಮಲತಂದೆ ಆ ಮಗುವನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ಅವನಿಗೆ 15 ವರ್ಷ ತುಂಬುವ ತನಕ ತನ್ನನ್ನು ಹುಟ್ಟಿಸಿದವನು ಬೇರೊಬ್ಬ ಎಂದೇ ಗೊತ್ತಿರಲಿಲ್ಲ.

ಕಾಲೇಜಿನಲ್ಲಿ ಓದುತ್ತಿದ್ದಾಗ ಫೋರ್ಡ್ ಒಳ್ಳೆಯ ಅಮೇರಿಕನ್ ಫುಟ್‌ಬಾಲ್ ಆಡುತ್ತಿದ್ದ. ನಂತರ ಯೇಲ್ ಲಾ ಸ್ಕೂಲ್‌ನಲ್ಲಿ ವಕೀಲಿಕೆ ಓದಲು ಆರಂಭಿಸಿದ. ಆಗ ಎರಡನೆ ವಿಶ್ವಯುದ್ದ ನಡೆಯುತ್ತಿತ್ತು. ಅಮೇರಿಕ ಅದರಲ್ಲಿ ಇನ್ನೂ ಭಾಗಿಯಾಗಿರಲಿಲ್ಲ. ಫೋರ್ಡ್ ತನ್ನ ಕೆಲವು ಸ್ನೇಹಿತರೊಡನೆ ಅಮೇರಿಕ ಯುದ್ದದಲ್ಲಿ ಭಾಗಿಯಾಗಬಾರದೆಂಬ ನಿವೇದನೆಯೊಂದಕ್ಕೆ ಸಹಿ ಹಾಕಿದ್ದ. ಆದರೆ ಯಾವಾಗ ಜಪಾನ್ ಅಮೇರಿಕಕ್ಕೆ ಸೇರಿದ ಹವಾಯಿ ದ್ವೀಪದ ಮುತ್ತಿನ ಬಂದರಿನ ಮೇಲೆ ದಾಳಿ ಮಾಡಿತೊ, ಅಮೇರಿಕದ ನೌಕಾದಳ ಸೇರಿಕೊಂಡ. ವಿಶ್ವಯುದ್ದದಲ್ಲಿ ಭಾಗಿಯಾಗಿ ತನ್ನ ಸೇವೆಗೆ ಅನೇಕ ಮೆಡಲ್‌ಗಳನ್ನು ಪಡೆದ.

ಯುದ್ದದಿಂದ ವಾಪಸ್ಸಾದ ಮೇಲೆ ಫೋರ್ಡ್ ರಾಷ್ಟ್ರೀಯ ಜನಪ್ರತಿನಿಧಿ ಸಭೆಗೆ ಸ್ಪರ್ಧಿಸಿದ. ಚುನಾವಣೆಯ ಸಮಯದಲ್ಲಿ, ತನ್ನನ್ನು ಆರಿಸಿದರೆ ನಿಮ್ಮ ಹೊಲಗಳಲ್ಲಿ ಬಂದು ದುಡಿಯುತ್ತೇನೆ ಮತ್ತು ನಿಮ್ಮ ಹಸುಗಳ ಹಾಲು ಕರೆಯುತ್ತೇನೆ ಎಂದು ತನ್ನ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿದ್ದ ರೈತರಿಗೆ ಆಶ್ವಾಸನೆ ಕೊಟ್ಟಿದ್ದ. ಗೆದ್ದ. ಎರಡು ವಾರಗಳ ಕಾಲ ರೈತರ ಮನೆಯಲ್ಲಿ ಹಾಲು ಕರೆದು ತನ್ನ ಮಾತು ಉಳಿಸಿಕೊಂಡ! 25 ವರ್ಷಗಳ ನಂತರ, ಅಮೇರಿಕದ ಇತಿಹಾಸದಲ್ಲಿ ಆಕಸ್ಮಿಕವೊಂದು ಸಂಭವಿಸುವ ತನಕ ಆ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿದ್ದ.

ಅದು 1973 ನೆ ಇಸವಿ. ನಿಕ್ಸನ್ ಆಗ ತಾನೆ ಎರಡನೆ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿದ್ದರು. ಆದರೆ ಆ ಮರುಚುನಾವಣೆಯ ಸಮಯದಲ್ಲಿ ಅಲ್ಲಿಯತನಕ ಯಾವ ಅಮೇರಿಕನ್ ರಾಷ್ಟ್ರಾಧ್ಯಕ್ಷನೂ ಮಾಡದ ಅಪರಾಧವನ್ನು ನಿಕ್ಸನ್ ಎಸಗಿದ್ದರು. ಅವರದು ರಿಪಬ್ಲಿಕನ್ ಪಕ್ಷ. ಡೆಮೊಕ್ರಾಟ್ ಪಕ್ಷ ಅವರ ವಿರೋಧ ಪಕ್ಷ. ಡೆಮೊಕ್ರಾಟರ ಮುಖ್ಯಕಚೇರಿಯಿದ್ದದ್ದು ವಾಷಿಂಗ್‌ಟನ್ನಿನ ವಾಟರ್‌ಗೇಟ್ ಕಟ್ಟಡದಲ್ಲಿ. ಡೆಮೊಕ್ರಾಟರ ಕಚೇರಿಯಲ್ಲಿ ಅವರ ತಂತ್ರಗಳನ್ನು ತಿಳಿದುಕೊಳ್ಳಲು ಕೆಲವು ನಿಕ್ಸನ್ ನಿಕಟವರ್ತಿಗಳು ಕದ್ದಾಲಿಕೆ ಯಂತ್ರಗಳನ್ನು ಅಳವಡಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡರು. ಇದ್ಯಾವುದೂ ತನಗೆ ಗೊತ್ತಿಲ್ಲ, ಅದರಲ್ಲಿ ತನ್ನ ಪಾತ್ರವಿಲ್ಲ ಎಂದ ನಿಕ್ಸನ್, ಮರುಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆದ್ದರು. ಆದರೆ ವಾಟರ್‌ಗೇಟ್ ಹಗರಣದಲ್ಲಿ ನಿಕ್ಸನ್ ಪಾತ್ರವಿದೆ ಎಂದು ಒಂದೊಂದೆ ಬಯಲಾಗುತ್ತ ಬರುತ್ತಿತ್ತು. ಅದೇ ಸಮಯದಲ್ಲಿ ನಿಕ್ಸನ್‌ರ ಉಪಾಧ್ಯಕ್ಷನಾಗಿದ್ದ ಸ್ಪೈರೊ ಆಗ್ನ್ಯೂ ಲಂಚ ಮತ್ತು ತೆರಿಗೆಕಳ್ಳತನದ ತಪ್ಪಿಗೆ ಸಿಕ್ಕಿಹಾಕಿಕೊಂಡು ರಾಜಿನಾಮೆ ಕೊಡಬೇಕಾತು. ಆಗ ಎರಡೂ ಪಕ್ಷಗಳವರು ಉಪಾಧ್ಯಕ್ಶ ಸ್ಥಾನಕ್ಕೆ ನಿಕ್ಸನ್‌ಗೆ ಸೂಚಿಸಿದ ಹೆಸರು, ಜೆರಾಲ್ಡ್ ಫೋರ್ಡ್. ಅಂತಹದೊಂದು ಘಟನೆ ಅಮೇರಿಕದ ಇತಿಹಾಸದಲ್ಲಿ ನಡೆದದ್ದು ಅದೇ ಮೊದಲು.

ಮುಂದಿನ ಹತ್ತು ತಿಂಗಳಿಗೆಲ್ಲ ವಾಟರ್‌ಗೇಟ್ ಹಗರಣದಲ್ಲಿ ಅವರ ಪಾತ್ರ ಮತ್ತು ಅದನ್ನು ಮುಚ್ಚಿಹಾಕಲು ಅವರು ಪ್ರಯತ್ನಿಸಿದ್ದೆಲ್ಲ ಬಯಲಾಗಿ ನಿಕ್ಸನ್ ರಾಜಿನಾಮೆ ನೀಡಬೇಕಾತು. ಸಂವಿಧಾನದ ಪ್ರಕಾರ ಉಪಾಧ್ಯಕ್ಷ ಫೋರ್ಡ್ ಅಮೇರಿಕದ 38 ನೆ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೂ ಸಹ ಅಮೇರಿಕದ ರಾಜಕೀಯ ಇತಿಹಾಸದಲ್ಲಿ ಆಕಸ್ಮಿಕ. ಯಾಕೆಂದರೆ ಯಾವುದೆ ರಾಷ್ಟ್ರೀಯ ಚುನಾವಣೆಗೆ, ಅಂದರೆ ಉಪಾಧ್ಯಕ್ಷ ಅಥವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನೇರವಾಗಿ ಜನರಿಂದ ಚುನಾಯಿತನಾಗದೆ ಫೋರ್ಡ್ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಎರಡೂ ಆಗಿಬಿಟ್ಟರು. ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅಮೇರಿಕನ್ ಜನರನ್ನುದ್ದೇಶಿಸಿ ಮಾತನಾಡಿದ ಫೋರ್ಡ್ ಆಗ ಹೇಳಿದ್ದು, "ನನ್ನ ಸಹನಾಗರಿಕರೆ, ನಮ್ಮ ಸುದೀರ್ಘ ರಾಷ್ಟ್ರೀಯ ದುಸ್ವಪ್ನ ಕೊನೆಯಾಗಿದೆ," ಎಂದು. ಹಾಗೆಂದು ಹೇಳಿದ ಫೋರ್ಡ್ ಕೆಲವು ತಿಂಗಳುಗಳ ನಂತರ ನಿಕ್ಸನ್‌ಗೆ ಕ್ಷಮಾದಾನ ನೀಡಿದರು. ಅಮೇರಿಕದ ಗಾಯವನ್ನು ವಾಸಿಮಾಡಲು ಪ್ರಯತ್ನಿಸಿದರು. ಆದರೆ ನಿಕ್ಸನ್‌ಗೆ ನೀಡಿದ ಕ್ಷಮಾದಾನವನ್ನು ಜನತೆ ಕ್ಷಮಿಸಲಿಲ್ಲ. ಎರಡೂವರೆ ವರ್ಷದ ನಂತರ ಬಂದ ಚುನಾವಣೆಯಲ್ಲಿ ಫೋರ್ಡ್‌ರನ್ನು ಸೋಲಿಸಿ ಜನ ಜಿಮ್ಮಿ ಕಾರ್ಟರ್‌ರನ್ನು ಗೆಲ್ಲಿಸಿದರು. ಫೋರ್ಡ್ ಕ್ಷಮಾದಾನ ನೀಡಲು ಮುಖ್ಯ ಕಾರಣ, ಪದೆಪದೆ ಆ ವಿಷಯವನ್ನು ಕೆದಕದೆ, ಅದಕ್ಕೆ ಪೂರ್ಣವಿಶ್ರಾಂತಿ ನೀಡಿದಂತಾಗುತ್ತದೆ, ತಾನು ಅಧ್ಯಕ್ಷನಾಗಿ ಸಾಮಾನ್ಯ ಜನತೆಗೆ ಮುಖ್ಯವಾದ ವಿಷಯಗಳತ್ತ ಗಮನ ಕೊಡಲು ಸಾಧ್ಯವಾಗುತ್ತದೆ, ಎಂದು. ಆಗ ಜನ ಅದನ್ನು ಒಪ್ಪದಿದ್ದರೂ ಈಗ ಅದನ್ನು ಬಹುಜನರು ಒಪ್ಪುತ್ತಾರೆ.

ಇದೇ ವಾರ, ಈಗ ಅಮೇರಿಕದ ಸರ್ಕಾರ ಪ್ರತಿಕ್ಷಣವೂ ಕನವರಿಸುವ 'ಇರಾಕ್' ದೇಶದ ಮಾಜಿ ರಾಷ್ಟ್ರಾಧ್ಯಕ್ಷನೂ ಸತ್ತ. ಆದರೆ ಅದು ಸಹಜ ಸಾವಾಗಿರಲಿಲ್ಲ. ಎರಡು ವರ್ಷದ ಹಿಂದಷ್ಟೆ ಆಸ್ತಿತ್ವಕ್ಕೆ ಬಂದ ಇರಾಕಿನ ಹೊಸ ಸಂವಿಧಾನ, ಸರ್ಕಾರ, ನ್ಯಾಯವ್ಯವಸ್ಥೆ, ಅಮೇರಿಕದ ಪ್ರಭಾವ, ಎಲ್ಲದರ ಪರಿಣಾಮವಾಗಿ, ಇರಾಕಿನ ವಿಶೇಷ ನ್ಯಾಯಾಲಯ ಸದ್ದಾಮ್ ಹುಸೇನ್‌ಗೆ ಗಲ್ಲು ಶಿಕ್ಷೆ ವಿಧಿಸಿತು. ಕಾರಣ? ಇರಾಕಿನ ಹಳ್ಳಿಯೊಂದರ 148 ಷಿಯಾ ಮುಸ್ಲಿಮರನ್ನು ಕಗ್ಗೊಲೆ ಮಾಡಲು ನೇರವಾಗಿ ಆದೇಶ ನೀಡಿದ ಎಂಬ ಆಪಾದನೆ ರುಜುವಾತಾದದ್ದು. ಆದರೆ, ತನ್ನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದವರನ್ನು ಯಮಸದನಕ್ಕೆ ಅಟ್ಟಲು ಹಾಗು ತನ್ನ ಮೇಲೆ ಎದ್ದ ದಂಗೆಗಳ ಹುಟ್ಟಡಗಿಸಲು ಸದ್ದಾಮ್ ಹುಸೇನರು ಕೊಂದದ್ದು ಕೇವಲ 148 ಜನ ಮಾತ್ರವಾಗಿರಲಿಲ್ಲ. ಬದಲಿಗೆ, ಇರಾಕಿನ ಲಕ್ಷಕ್ಕೂ ಮಿಗಿಲು ಖರ್ದಿಷ್ ಮತ್ತು ಷಿಯಾ ಮುಸ್ಲಿಮರನ್ನು. ಅಮೇರಿಕ ಇರಾಕಿನ ಮೇಲೆ ದಾಳಿ ಮಾಡಿದ್ದು ಸರಿಯೊ ತಪ್ಪೊ ಎನ್ನುವ ಪ್ರಶ್ನೆಯನ್ನು ಪಕ್ಕಕ್ಕಿಟ್ಟು ಯೋಚಿಸಿದರೆ ಸದ್ದಾಮರ ಹಿಂದಿನ ಪಾತಕಗಳಿಗೆ ಈಗ ಶಿಕ್ಷೆಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲದಿದ್ದರೆ ಸುಮ್ಮಸುಮ್ಮನೆ ಸಾವಿರಾರು ಜನ ಬಾಗ್ದಾದಿನ ಬೀದಿಗಳಲ್ಲಿ ಸದ್ದಾಮ್ ಸಾವನ್ನು ಸಂಭ್ರಮಿಸುತ್ತಿರಲಿಲ್ಲ. ಸದ್ದಾಮ್ ಕಾಲದಲ್ಲಿ ಇರಾಕಿನಲ್ಲಿ ಜನರಿಗೆ ಯಾವುದೆ ಮೂಲಭೂತ ಹಕ್ಕುಗಳಿರಲಿಲ್ಲ. ಇದ್ದಿದ್ದರೆ, ರಾಜದ್ರೋಹದ ಆಪಾದನೆಯ ಮೇಲೆ ಆ ಹಳ್ಳಿಯ ಜನರನ್ನು ಬಂಧಿಸಿ, ವಿಚಾರಣೆ ನಡೆಸಿ, ನಂತರ ಆಪಾದನೆ ರುಜುವಾತಾದರೆ ಗಲ್ಲಿಗೇರಿಸಬೇಕಿತ್ತೆ ಹೊರತು ನೇರವಾಗಿ ಅಧ್ಯಕ್ಷನೆ ಹೋಗಿ ಗುಂಡಿಟ್ಟು ಕೊಲ್ಲಿ ಎಂದು ಹೇಳುತ್ತಿರಲಿಲ್ಲ. ಪ್ರತಿ ವಿಷಯಕ್ಕೂ ಅಮೇರಿಕವನ್ನು ವಿರೋಧಿಸಬೇಕು ಎಂದುಕೊಳ್ಳುವವರು ಹಾಗು ಸದ್ದಾಮ್‌ರನ್ನು ಬೆಂಬಲಿಸಿದರೆ ಮುಸ್ಮಿಮರನ್ನು ಬೆಂಬಲಿಸಿದಂತೆ ಎಂದುಕೊಳ್ಳುವವರು ಈ ವಿಷಯವನ್ನು ಗಮನಿಸಬೇಕು. ಮೂಲಭೂತವಾದಿಗಳನ್ನು, ಸರ್ವಾಧಿಕಾರಿಗಳನ್ನು ಬೆಂಬಲಿಸಿದರೆ ಸಾಮಾನ್ಯ ಬಹುಸಂಖ್ಯಾತ ಮುಸ್ಲಿಮರನ್ನು ಬೆಂಬಲಿಸಿದಂತಾಗುವುದಿಲ್ಲ.
ಇಲ್ಲಿ, ನಿಕ್ಸನ್ ಮತ್ತು ಸದ್ದಾಮ್ ನಮ್ಮ ರಾಜಕಾರಣಿಗಳಿಗೂ ಒಂದು ಪಾಠ. ಅಧಿಕಾರವನ್ನು ಗಳಿಸಬೇಕೆಂಬ ಹಪಹಪಿಯಲ್ಲಿ, ಉಳಿಸಿಕೊಳ್ಳಬೇಕೆಂಬ ಹುಚ್ಚಿನಲ್ಲಿ ನಾವು ಮಾಡುವ ಅನ್ಯಾಯ, ಅಕ್ರಮಗಳನ್ನು ಯಾರೂ ಗಮನಿಸುವುದಿಲ್ಲ, ಎಂದಿಗೂ ಅದು ನಮ್ಮ ತಲೆಗೆ ಸುತ್ತಿಕೊಳ್ಳುವುದಿಲ್ಲ ಎಂದು ಯಾರೂ ಭಾವಿಸಬಾರದು. ಕಾಲ ಬದಲಾಗುತ್ತ ಇರುತ್ತದೆ. ಕಾನೂನು ಬದಲಾಗುತ್ತ ಇರುತ್ತದೆ. ಹೊಸಬರು ಬರುತ್ತಿರುತ್ತಾರೆ. ಹಳೆ ಪ್ರಕರಣಗಳನ್ನು ಯಾರೊ ಎಲ್ಲಿಯೊ ಧೂಳು ಹೊಡೆದು ಮೇಜಿನ ಮೇಲೆ ಇಡುತ್ತಾರೆ. ನಿಕ್ಸನ್, ಸದ್ದಾಮ್, ನರಸಿಂಹರಾವ್, ಶಿಬು ಸೊರೇನ್, ನವಜೋತ್ ಸಿದ್ಧು, ಜಯಲಲಿತ, ಇತ್ಯಾದಿಗಳು ಜೈಲು ಪಾಲಾಗುತ್ತಿರುತ್ತಾರೆ, ಇಲ್ಲವೆ ನೇಣಿಗೇರುತ್ತಿರುತ್ತಾರೆ, ಇಲ್ಲವೆ ಅವಮಾನದಲ್ಲಿ ಕೊಳೆಯುತ್ತ ಸಾಯುತ್ತಾರೆ. ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಅಪರಾಧ ದೊಡ್ಡದಿದ್ದರಂತೂ ಇನ್ನೂ ಕಷ್ಟ. ಇದು ಬುಷ್ ವಿಚಾರಕ್ಕೂ ನಿಜವಾಗಬಹುದು, ನಮ್ಮ ಅಧಿಕಾರಸ್ಥರಿಗೂ ನಿಜವಾಗಬಹುದು. ಬೀಸುವ ದೊಣ್ಣೆಯನ್ನು ಒಂದು ಸಾರಿ ತಪ್ಪಿಸಿಕೊಂಡ ಮಾತ್ರಕ್ಕೆ ಪ್ರತಿಸಾರಿಯೂ ತಪ್ಪಿಸಿಕೊಳ್ಳಬಹುದು ಎಂದುಕೊಳ್ಳುವುದು ಮೂರ್ಖತನ!

Dec 24, 2006

ಅಣ್ವಸ್ತ್ರ ಒಪ್ಪಂದಕ್ಕೆ ವಿರೋಧವೇಕೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 5, 2007 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇಬ್ಬರು ಬದ್ಧ ವಿರೋಧಿಗಳು ಒಂದು ವಿಷಯದ ಮೇಲೆ ಸಹಮತ ವ್ಯಕ್ತಪಡಿಸುವುದು ಬಹಳ ಅಪರೂಪ. ಅಮೇರಿಕದ ಸೆನೆಟ್ ಭಾರತದೊಂದಿಗಿನ ಹೊಸ ಅಣ್ವಸ್ತ್ರ ಒಪ್ಪಂದಕ್ಕೆ ಅನುಮೋದನೆ ನೀಡಿ, ಜಾರ್ಜ್ ಬುಷ್ ಅದಕ್ಕೆ ಸಹಿ ಹಾಕಿದ ನಂತರ ಭಾರತದಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಪಕ್ಷಗಳು ಹಾಗು ಬಲಪಂಥೀಯ ಬಿಜೆಪಿ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದವು. ಇಂತಹುದು ಅಪರೂಪವಾದರೂ ಇದರಲ್ಲಿ ಆಶ್ಚರ್ಯ ಪಡುವಂತಹುದು ಏನೂ ಇಲ್ಲ. ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿರುವ ಎಡಪಂಥೀಯರಿಗೆ ಅಮೇರಿಕವನ್ನು ವಿರೋಧಿಸುವುದೆ ಮುಖ್ಯ ಅಜೆಂಡ. ಕಾಳಜಿಯಿಂದ, ಭಾವೋನ್ಮಾದತೆಯಿಂದ, ಸಭೆ ಒಪ್ಪಿಕೊಳ್ಳುವಂತೆ ಮಾತನಾಡಲು ಕಮ್ಯುನಿಸ್ಟರಿಗೆ ಅಮೇರಿಕ ಮತ್ತು ಕಾರ್ಮಿಕರು ಬೇಕೆ ಬೇಕು. ಇನ್ನು ಅಮೇರಿಕದ ಅನೇಕ ವಿಚಾರಧಾರೆಗಳನ್ನು ಒಪ್ಪಿಕೊಳ್ಳುವ ಭಾಜಪ ಈಗ ವಿರೋಧ ಪಕ್ಷದ ಸ್ಥಾನದಲ್ಲಿದೆ. ಸರ್ಕಾರ ಮಾಡುವ ಪ್ರತಿಯೊಂದನ್ನೂ ಏನೋ ತಪ್ಪು ಹುಡುಕಿ ಟೀಕಿಸುವುದು ಅವರಿಗೆ ಆಸ್ತಿತ್ವದ ಪ್ರಶ್ನೆ. ಉತ್ತರ ಪ್ರದೇಶದ ಚುನಾವಣೆ ಹತ್ತಿರ ಬಂದಿರುವ ಈ ಸಮಯದಲ್ಲಿ ದೇಶಕ್ಕೆ ಹಾನಿ ಎಂದು ತಿರುಚಿಯೊ ಪರಚಿಯೊ ಹೇಳಬಹುದಾದ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಭಾರತ ಮೊಟ್ಟ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಸೆಪ್ಟೆಂಬರ್ 7, 1972 ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರದ ನೇತೃತ್ವದಲ್ಲಿ. ಇದಾದ ನಂತರ ಮತ್ತೊಂದು ಪರೀಕ್ಷೆ ನಡೆಸಲು ಸಾಧ್ಯವಾಗಿದ್ದು 26 ವರ್ಷಗಳ ನಂತರವೆ, 1998 ರಲ್ಲಿ. ಈ 26 ವರ್ಷಗಳ ನಡುviನ ಅವಧಿಯಲ್ಲಿ ಮತ್ತೊಂದು ಅಣು ಪರೀಕ್ಷೆ ನಡೆಸಲು ಭಾರತ ರಹಸ್ಯವಾಗಿ ಪ್ರಯತ್ನಿಸುತ್ತಲೆ ಇತ್ತು. 1982, 1995, ಹಾಗೂ 1997 ರಲ್ಲಿ ಪರೀಕ್ಷೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಮೇರಿಕದ CIA ಗೆ ಅದು ಉಪಗ್ರಹಗಳ ಮೂಲಕ ಗೊತ್ತಾಗಿ ಭಾರತ ಆ ಸಾಹಸಕ್ಕೆ ಕೈ ಹಾಕದಂತೆ ಪ್ರತಿಬಾರಿಯೂ ಅಮೇರಿಕ ತಡೆದಿತ್ತು.

ಹಿಂದಿನ ಈ ಎಲ್ಲಾ ಒತ್ತಡಗಳನ್ನು ತಿಳಿದಿದ್ದ ಭಾರತೀಯ ಸೇನೆ, ಭಾಭಾ ಅಣು ಸಂಶೋಧನಾ ಕೇಂದ್ರ ಮತ್ತು DRDO ದ ವಿಜ್ಞಾನಿಗಳು, ಅಮೇರಿಕದ ಹದ್ದಿನ ಕಣ್ಣನ್ನು ತಪ್ಪಿಸಿ ಪರೀಕ್ಷೆ ನಡೆಸುವ ಯೋಜನೆಯೊಂದಿಗೆ 1998 ರಲ್ಲಿ ಸಿದ್ದವಾದರು. ಆಗ ಇದ್ದದ್ದು ವಾಜಪೇಯವರ ಸರ್ಕಾರ. ಈ ಬಾರಿ ಎಲ್ಲ ರೀತಿಯಿಂದಲೂ ಅಮೇರಿಕದ ಗೂಢಾಚಾರಿ ಕಣ್ಣುಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾಗಿ ಯಾವುದೇ ಸುಳಿವು ನೀಡದಂತೆ ಮೇ 11, 1998 ರಂದು ಅಣ್ವಸ್ತ್ರ ಪರೀಕ್ಷೆ ನಡೆಸಿಯೇ ಬಿಟ್ಟರು. ಎರಡು ದಿನದ ನಂತರ, ಅಂದರೆ ಮೇ 13 ರಂದು ಮತ್ತೊಮ್ಮೆಯೂ ಭೂಮಿಯ ಒಳಗೆ ಅಣು ಬಾಂಬ್ ಸಿಡಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯತೆಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದ ಭಾಜಪದವರು ಇದು ತಮ್ಮದೇ ಸಾಧನೆ ಎಂದು ಸಾರಿಕೊಂಡರು. ಆದರೆ ಇದು ಒಂದು ಪಕ್ಷದ ಸರ್ಕಾರ ಮಾಡಿದ್ದು ಎನ್ನುವುದಕ್ಕಿಂತ ಭಾರತದ ಸರ್ಕಾರ ವರ್ಷಾನುಗಟ್ಟಲೆ ಚಾಲ್ತಿಯಲ್ಲಿಟ್ಟಿದ್ದ ಯೋಜನೆ ಇದಾಗಿದ್ದು, ಅದು ಯಶಸ್ವಿಯಾಗಿದ್ದು ಮಾತ್ರ 1998 ರಲ್ಲಿ ಎನ್ನುವುದಷ್ಟೆ ನಿಜ. ಇದನ್ನೆಲ್ಲ ಇಂಡಿಯಾ ಟುಡೆ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾದ ರಾಜ್ ಚೆಂಗಪ್ಪ "WEAPONS OF PEACE" ಎಂಬ ತಮ್ಮ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅಂದ ಹಾಗೆ, 1998 ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ DRDO ದ ಮುಖ್ಯಸ್ಥರಾಗಿದ್ದವರು ಹಾಗು ಆ ಪರೀಕ್ಷೆಯ ಸಮಯದಲ್ಲಿ ಉಸ್ತುವಾರಿ ಮಾಡುವಾಗ ಮಿಲಿಟರಿ ಸಮವಸ್ತ್ರ ಧರಿಸಿ ಪೋಖ್ರಾನ್ ಸಂದರ್ಶಿಸುತ್ತಿದ್ದವರು ಈಗಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಮ್‌ರು.

ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ 15 ದಿನಕ್ಕೆಲ್ಲ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಎರಡೂ ದೇಶಗಳ ಮೇಲೆ ಪಾಶ್ಚಾತ್ಯ ದೇಶಗಳು ಅನೇಕ ರೀತಿಯ ದಿಗ್ಬಂಧನಗಳನ್ನು ಹೇರಿದವು. ಅಣು ಸಂಬಂಧಿ ಸಂಶೋಧನೆ ಹೊರತು ಪಡಿಸಿ ಮಿಕ್ಕವುಗಳ ಮೇಲೆ ಈ ದಿಗ್ಬಂಧನಗಳು ಭಾರತದ ಮೇಲೆ ಮತ್ಯಾವ ದೊಡ್ಡ ಪರಿಣಾಮಗಳನ್ನೂ ಬೀರಲಿಲ್ಲ. ಅದಕ್ಕೆ ಕಾರಣ ಭಾರತದಲ್ಲಿ ಅಷ್ಟೊತ್ತಿಗೆ ಬೆಳವಣಿಗೆಯಲ್ಲಿದ್ದ ಉದಾರೀಕರಣ ಮತ್ತು ಆರ್ಥಿಕ ಅಭಿವೃದ್ಧಿ. ಭಾರತದಿಂದ ಲಾಭ ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಹುರಾಷ್ಟ್ರೀಯ ಕಂಪನಿಗಳು ಕಳೆದುಕೊಳ್ಳಲು ಇಷ್ಟ ಪಡದ ಕಾರಣದಿಂದ ಭಾರತಕ್ಕೂ ಲಾಭವಾಯಿತು. ಸಾಫ್ಟ್‌ವೇರ್, ಷೇರು ಮಾರುಕಟ್ಟೆ, ಮೂಲಭೂತ ಸೌಕರ್ಯ ಇಲ್ಲೆಲ್ಲ ವಿದೇಶಿ ಕಂಪನಿಗಳು ತೊಡಗಿಕೊಂಡವು. ಅಮೇರಿಕ ಒಂದೊಂದೆ ದಿಗ್ಬಂಧನವನ್ನು ತೆಗೆಯುತ್ತ ಬಂತು. ಆದರೆ ಅಣು ಸಂಶೋಧನೆಗೆ ಸಂಬಂಧಿಸಿದಂತೆ ತನ್ನ ನಿಲುವುಗಳನ್ನು ಸಡಿಲಿಸಲಿಲ್ಲ. ಹಾಗಾಗಿ ಆ ವಿಷಯದಲ್ಲಿ ಭಾರತಕ್ಕೆ ಅಪಾರ ಹಿನ್ನಡೆ, ನಷ್ಟವಾಗಿದ್ದು ನಿಜ. ಯಾಕೆಂದರೆ, ಅಣು ಸಂಶೋಧನೆಂದ ಕೇವಲ ಮಿಲಿಟರಿ ಅಸ್ತ್ರಗಳನ್ನು ಮಾತ್ರ ತಯಾರಿಸಲಾಗುವುದಿಲ್ಲ. ಬದಲಿಗೆ ಅದನ್ನು ವಿದ್ಯುತ್ ಉತ್ಪಾದನೆಯಂತಹ ಜನಸಾಮಾನ್ಯರ ಉಪಯೋಗಕ್ಕೂ ಬಳಸಬಹುದು. ಇದಕ್ಕೆಲ್ಲ ಬೇಕಾದಷ್ಟು ತಂತ್ರಜ್ಞಾನವಾಗಲಿ, ಬೃಹತ್ ಯಂತ್ರಗಳಾಗಲಿ, ಯುರೇನಿಯಮ್‌ನಂತಹ ಕಚ್ಚಾವಸ್ತುವಾಗಲಿ ಭಾರತದ ಬಳಿ ಇರಲಿಲ್ಲ. ದಿಗ್ಬಂಧನದ ಕಾರಣದಿಂದ ಇದನ್ನು ಅಂತರ್ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿಯೂ ಕೊಳ್ಳುವ ಹಾಗಿರಲಿಲ್ಲ. ಹೀಗಾಗಿ ಈ ದಿಗ್ಬಂಧನವನ್ನು ಕನಿಷ್ಠ ಸಿವಿಲ್ ಉದ್ದೇಶಗಳಿಗಾದರೂ ತೆರವು ಗೊಳಿಸುವುದು ಭಾರತಕ್ಕೆ ಅತ್ಯವಶ್ಯವಾಗಿತ್ತು.

ಈ ಮಧ್ಯೆ ಅಮೇರಿಕಕ್ಕೂ ಇದನ್ನು ತೆರವು ಮಾಡದೆ ವಿಧಿ ಇರಲಿಲ್ಲ. ಭಾರತ ಮತ್ತು ಚೀನಾದ ಆರ್ಥಿಕತೆ ಬೆಳೆಯುತ್ತಿರುವಂತೆ ಈ ದೇಶಗಳ ತೈಲ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಅದು ತೈಲದ ಬೆಲೆ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ಅಮೇರಿಕ ಮಧ್ಯಪ್ರಾಚ್ಯದ ಮುಸ್ಲಿಮ್ ರಾಷ್ಟ್ರಗಳ ಮೇಲಿನ ಅವಲಂಬನೆಯೂ ಹೆಚ್ಚಾಗುವಂತೆ ಮಾಡುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದಕತೆ ಮತ್ತು ಮುಸ್ಲಿಮ್ ಉಗ್ರವಾದವನ್ನು ಕಮ್ಮಿ ಮಾಡಿ, ಅಲ್ಲಿ ನಿಧಾನವಾಗಿ ಪ್ರಜಾಪ್ರಭುತ್ವವನ್ನು ಪೋಷಿಸಬೇಕೆಂಬ ಅಮೇರಿಕದ ದೂರಾಲೋಚನೆಗೂ ಇದು ಅಡ್ಡಗಾಲು ಹಾಕುತ್ತಿದೆ. ಇರಾನ್‌ನಂತಹ ಮೂಲಭೂತವಾದಿ ರಾಷ್ಟ್ರವನ್ನು ಸಹ ಎದುರು ಹಾಕಿಕೊಳ್ಳುವ ಕಂಫರ್ಟಬಲ್ ಸ್ಥಿತಿಯಲ್ಲಿ ಅಮೇರಿಕ ಇಲ್ಲ. ಹೀಗಾಗಿ, ಭಾರತದ ತೈಲದ ಮೇಲಿನ ಅವಲಂಬನೆ ಕಮ್ಮಿಯಾಗಿ, ಅದು ಅಣು ವಿಜ್ಞಾನವನ್ನು ಶಕ್ತಿಮೂಲಕ್ಕೆ ಬಳಸಿಕೊಳ್ಳುವುದಾದರೆ ಅದು ಅಮೇರಿಕಕ್ಕೂ ಅಪೇಕ್ಷಣೀಯ. ಅದರ ಜೊತೆಗೆ ಭಾರತಕ್ಕೆ ಬೇಕಾದ ಯುರೇನಿಯಮ್ ಮಾರಾಟದಿಂದ, ಯಂತ್ರ ಮತ್ತು ತಂತ್ರಜ್ಞಾನದ ಮಾರಾಟದಿಂದ ಅಮೇರಿಕದ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಶತಕೋಟಿಗಟ್ಟಲೆ ಡಾಲರ್‌ಗಳ ವ್ಯಾಪಾರ ಆಗಿಯೇ ತೀರುತ್ತದೆ. ಅದರಿಂದ ಅಮೇರಿಕದ ಆರ್ಥಿಕ ಬೆಳವಣಿಗೆಗೂ ಲಾಭ. ಅವರಿಗೆ ಈ ಒಪ್ಪಂದದಿಂದ ಕಳೆದುಕೊಳ್ಳುವುದು ಏನೂ ಇಲ್ಲ.

ಇನ್ನು ನಮಗೆ: ನಮಗೂ ಕಳೆದುಕೊಳ್ಳುವುದು ಏನೂ ಇಲ್ಲ ಎಂದೇ ಹೇಳಬೇಕು. ಈ ಒಪ್ಪಂದದ ಪ್ರಕಾರ ಸಿವಿಲ್ ಉದ್ದೇಶದ ಅಣುಕೇಂದ್ರಗಳನ್ನಷ್ಟೆ ಅಮೇರಿಕ ಸರ್ಕಾರ ಪರಿಶೀಲಿಸಲು ಸಾಧ್ಯ. ಪರಿಶೀಲನಾ ಪಟ್ಟಿಯಲ್ಲಿ ಭಾರತದ ಮಿಲಿಟರಿ ಪ್ಲಾಂಟ್‌ಗಳು ಸೇರಿಲ್ಲ. ಆ ಸಾರ್ವಭೌಮತೆಯನ್ನು ಸರ್ಕಾರ ಉಳಿಸಿಕೊಂಡಿದೆ. ಇನ್ನು, ನಾವು ಅಣು ಬಾಂಬ್ ಹೊಂದಿದ ಮಾತ್ರಕ್ಕೆ ಯಾರನ್ನು ಬೇಕಾದರೂ ಹೆದರಿಸಬಹುದು ಎನ್ನುವುದು ಬಾಲಿಶ ಚಿಂತನೆ. ಈ ಹೊಸ ಯುಗದಲ್ಲಿ ಒಂದು ಬಲಿಷ್ಠ ದೇಶ ಇನ್ನೊಂದು ದೇಶದ ಅಧಿಕಾರಸ್ಥರನ್ನು ಕೆಳಗಿಳಿಸಬಹುದೆ ಹೊರತು ಇಡೀ ದೇಶವನ್ನು ಅಲ್ಲಿನ ಜನರಿಗೆ ವಿರೋಧವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಭಾರತ ಈಗ ಮಾಡಬೇಕಿರುವುದು ಎಲ್ಲಾ ರೀತಿಂದಲೂ ತಾನು ಸ್ವಾವಲಂಬನೆ ಸಾಧಿಸುವುದು, ಜನರ ಜೀವನ ಮಟ್ಟ ಸುಧಾರಿಸಿ ಅವರಲ್ಲಿ ಇನ್ನೊಂದು ದೇಶಕ್ಕೆ ತಲೆಬಾಗದ ರಾಷ್ಟ್ರೀಯತೆ ಬೆಳೆಸುವುದು, ಹಾಗೂ ಕನಿಷ್ಠ ಕೆಲವಾದರೂ ದೇಶಗಳು ಆರ್ಥಿಕವಾಗಿ ತನ್ನ ಮೇಲೆ ಅವಲಂಬನೆ ಬೆಳೆಸಿಕೊಳ್ಳುವಂತೆ ಮಾಡುವುದು. ಆಗ ನಮ್ಮ ಯುದ್ಧವನ್ನು ಅವರೇ ಮಾಡುತ್ತಾರೆ. ಅಮೇರಿಕದ ಯುದ್ಧವನ್ನು ಇಂಗ್ಲೆಂಡ್, ಆಸ್ಟ್ರೇಲಿಯ, ಇಟಲಿ, ಕೆನಡ, ಮತ್ತಿತರ ನ್ಯಾಟೋ ರಾಷ್ಟ್ರಗಳು ಮಾಡುವಂತೆ!

ಅಂದ ಹಾಗೆ: ಇಂತಹ ರಾಷ್ಟ್ರೀಯ ವಿಷಯಗಳನ್ನೆಲ್ಲ ಗಂಭೀರವಾಗಿ ಚರ್ಚಿಸಬಲ್ಲಂತಹ ಒಬ್ಬರೇ ಒಬ್ಬ ಎಂ.ಪಿ.ಯನ್ನಾದರೂ ನಾವು ಕರ್ನಾಟಕದಿಂದ ಆರಿಸಿದ್ದೇವಾ? ಸಂದೇಹ! ಇಲ್ಲದಿದ್ದರೆ, What a shame!

Dec 16, 2006

ಸಾಹಿತ್ಯ ಗೋಷ್ಠಿ ಮತ್ತು ಮರ್ಕ್ಯುರಿ ನ್ಯೂಸ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ವಿಶ್ವನಾಥ್ ಹುಲಿಕಲ್‌ನವರು ನಮ್ಮ ಸಾಲುಮರದ ತಿಮ್ಮಕ್ಕನವರ ಊರಾದ ಹುಲಿಕಲ್‌ನವರು. ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿ ಕನ್ನಡದ ಸಾಹಿತ್ಯ ಪರಿಚಾರಕರಲ್ಲಿ ಪ್ರಮುಖವಾದ ಹೆಸರು ವಿಶ್ವನಾಥ್‌ರವರದು. ಇಲ್ಲಿನ ಕೆಲವು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಸೇರಿ, 2001 ರ ನವೆಂಬರ್‌ನಲ್ಲಿ ಹುಲಿಕಲ್ ದಂಪತಿಗಳು ಕನ್ನಡ ಸಾಹಿತ್ಯ ಸಂಬಂಧಿ ಚರ್ಚೆಗೆಂದು ಹುಟ್ಟು ಹಾಕಿದ್ದು 'ಸಾಹಿತ್ಯ ಗೋಷ್ಠಿ'. ಅಲ್ಲಿಂದ ಇಲ್ಲಿಯವರೆಗೂ ನಿಯಮಿತವಾಗಿ ತಿಂಗಳಿಗೊಂದು ಕಾರ್ಯಕ್ರಮದಂತೆ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಜನ್ನ, ಕುಮಾರವ್ಯಾಸ, ಕುವೆಂಪುರವರಿಂದ ಹಿಡಿದು ಅಡಿಗ, ಭೈರಪ್ಪ, ದಲಿತಕವಿ ಸಿದ್ದಲಿಂಗಯ್ಯನವರವರೆಗೂ ಎಲ್ಲಾ ಪಂಥ-ಪ್ರಕಾರಗಳ ಕನ್ನಡ ಸಾಹಿತ್ಯ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ ಉಪನ್ಯಾಸಗಳು ಇಲ್ಲಿ ನಡೆದಿವೆ. ಸ್ಥಳೀಯ ಸಾಹಿತ್ಯಾಸಕ್ತರೇ ಅಲ್ಲದೆ, ಅಮೇರಿಕವನ್ನು ಸಂದರ್ಶಿಸುವ ಕನ್ನಡದ ಪ್ರಸಿದ್ಧ ಸಾಹಿತಿಗಳೂ ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗ್ಠೋಯ ದಿನದಂದು ತಪ್ಪಿಸಿಕೊಳ್ಳದೆ ಹಾಜರಾಗುವ ಒಂದು ಗುಂಪೇ ಸಿಲಿಕಾನ್ ಕಣಿವೆಯಲ್ಲಿದೆ. ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ನಡೆದಿರುವ ಮತ್ತೊಂದು ಉಲ್ಲೇಖನೀಯ ಕಾರ್ಯವೆಂದರೆ, ಜಯಂತ ಕಾಣಿಯವರ ಪ್ರಸಿದ್ಧ ಕಥಾಸಂಕಲನವಾದ 'ಅಮೃತಬಳ್ಳಿ ಕಷಾಯ'ವನ್ನು ಇಂಗ್ಲಿಷಿಗೆ ಭಾಷಾಂತರಿಸಿ "Dots and Lines" ಹೆಸರಿನಲ್ಲಿ ಪ್ರಕಟಿಸಿರುವುದು.

ಸಾಹಿತ್ಯ ಗೋಷ್ಠಿಯ ಐದನೆ ವಾರ್ಷಿಕೋತ್ಸವದ ಕಾರ್ಯಕ್ರಮ ಮೂರು ವಾರದ ಹಿಂದೆ ನಡೆತು. ಎರಡು ಉಪನ್ಯಾಸಗಳ ನಡುವಿನ ತಿಂಡಿತೀರ್ಥದ ಬಿಡುವಿನ ಸಮಯದಲ್ಲಿ ವ್ಯಂಗ್ಯಚಿತ್ರಕಾರ ಸ್ನೇಹಿತರಾದ ಜನಾರ್ಧನ ಸ್ವಾಮಿಯವರೊಡನೆ ಮಾತನಾಡುತ್ತ ಒಂದು ಮೂಲೆಯಲ್ಲಿ ನಿಂತಿದ್ದೆ. ಆಗ ಇನ್ನೊಂದು ಮೂಲೆಯಲ್ಲಿದ್ದ ನಮ್ಮ ಪತ್ರಿಕೆಯ ಹಿತೈಷಿಗಳೂ, ಹಿರಿಯ ಸ್ನೇಹಿತರೂ ಆದ ಕಾತ್ಯಾಯಿನಿ ಸತ್ಯರವವರು ನನ್ನನ್ನು ನೋಡಿ ಏನನ್ನೊ ಜ್ಞಾಪಿಸಿಕೊಂಡವರಂತೆ ಹತ್ತಿರ ಬಂದರು. ಬಂದದ್ದೆ, "ರವಿ, ಈವತ್ತಿನ ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪೇಪರ್ ನೋಡಿದೆಯೇನಪ್ಪ?" ಎಂದರು. ನಾನು ನೋಡಿರಲಿಲ್ಲ. "ಹಾಗಿದ್ದರೆ ತಕ್ಷಣ ಹೋಗಿ ನೋಡು," ಎಂದರು. ನನಗೆ ಕುತೂಹಲವಾತು. ಸ್ವಾಮಿಯವರು, "ಹೌದು, ಫ್ರಂಟ್‌ಪೇಜ್‌ನಲ್ಲಿಯೆ ಎಷ್ಟು ದೊಡ್ಡದಾಗಿ ಬಂದಿದೆ ಅಲ್ಲವಾ?" ಎಂದು, ಏನು ಬಂದಿದೆ ಎಂದು ವಿವರಿಸ ಹೊರಟರು. ತಕ್ಷಣ ಕಾತ್ಯಾನಿಯವರು, "ಹೇಳಬೇಡಿ, ರವೀನೆ ಹೋಗಿ ನೋಡಲಿ. ನೀನು ಇಂತಹ ವಿಷಯಗಳನ್ನೆಲ್ಲ ಫಾಲ್ಲೊ ಮಾಡ್ತಿರ್ತೀಯ ಅಂತಲೆ ನಿನಗೆ ಹೇಳೋಣ ಅಂತ ಬಂದೆ. ಮುಂದಿನ ನಾಲ್ಕು ದಿನವೂ ಆ ಪತ್ರಿಕೆಯನ್ನು ತಗೊಳ್ಳೋದು ಮರೀಬೇಡಪ್ಪ," ಎಂದರು. ಅಷ್ಟಾದರೂ ಕಾತ್ಯಾಯಿನಿ ಮತ್ತು ಸ್ವಾಮಿಯವರ ಮಾತಿನ ನಡುವೆ ಅದು ಭಾರತಕ್ಕೆ ಸಂಬಂಧಿಸಿದ ವಿಷಯ, ಮರ್ಕ್ಯುರಿ ನ್ಯೂಸ್‌ನಂತಹ ಪ್ರಸಿದ್ಧ ಪತ್ರಿಕೆ ಭಾರತದ ಬಗ್ಗೆ ಎಷ್ಟೊಂದು ದೊಡ್ಡ ಫ್ಯೂಚರ್ ಮಾಡಿದೆ ಎಂಬ ಹೆಮ್ಮೆ ಇಣುಕಾಡುತ್ತಿದ್ದದ್ದು ಗೊತ್ತಾಯಿತು. ಮುಂದಿನ ನಾಲ್ಕು ದಿನವೂ ನಾನು ತಪ್ಪದೆ ಆ ಪತ್ರಿಕೆ ಕೊಂಡುಕೊಂಡೆ.

ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪತ್ರಿಕೆಯ ಪ್ರತಿದಿನದ ಪ್ರಸಾರ ಸುಮಾರು ಎರಡೂ ಮುಕ್ಕಾಲು ಲಕ್ಷ. ಹೆಸರೆ ಹೇಳುವಂತೆ ಇದು ರಾಷ್ಟ್ರೀಯ ಪತ್ರಿಕೆಯೇನಲ್ಲ. ಸ್ಯಾನ್ ಫ್ರಾನ್ಸಿಸ್ಕೊ ಬೇ ವಲಯದ ದಕ್ಷಿಣ ಭಾಗವಾದ ಸಿಲಿಕಾನ್ ಕಣಿವೆಯಲ್ಲಿ ಮಾತ್ರ ಇದರ ಪ್ರಸಾರ. ಆದರೆ ಸಿಲಿಕಾನ್ ಕಣಿವೆಯಲ್ಲಂತೂ ಇದೇ ನಂಬರ್ 1 ಹಾಗೂ ಪ್ರಭಾವಶಾಲಿ ಕೂಡ. ಇಲ್ಲಿನ ಸಾಫ್ಟ್‌ವೇರ್ ಕಂಪನಿಗಳಲ್ಲಿನ ಭಾರತೀಯರ ಸಾಂದ್ರತೆ ಅಮೇರಿಕದಲ್ಲಿನ ಬೇರೆಲ್ಲ ಭಾಗಗಳಿಗಿಂತ ಹೆಚ್ಚಾಗಿರುವುದರಿಂದ, ಸ್ಥಳೀಯ ಭಾರತೀಯರಲ್ಲೂ ಮರ್ಕ್ಯುರಿ ನ್ಯೂಸ್ ಜನಪ್ರಿಯ. ಸ್ಥಳೀಯ ಭಾರತೀಯ ಲೇಖಕರೂ ಈ ಪತ್ರಿಕೆಗೆ ನಾನಾ ವಿಷಯಗಳ ಬಗ್ಗೆ ಬರೆಯುತ್ತಿರುತ್ತಾರೆ. ಈ ಪತ್ರಿಕೆಗೆ ಇಲ್ಲಿಯವರೆಗೆ ಎರಡು ಸಲ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ದೊರಕಿದೆ.

ಅಮೇರಿಕದಲ್ಲಿನ ಪತ್ರಿಕೆ-ರೇಡಿಯೊ-ಟಿವಿಗಳನ್ನು ಗಮನಿಸುವ ಭಾರತೀಯರಿಗೆ ಕಳೆದ ಎರಡು ಮೂರು ವರ್ಷಗಳಲ್ಲಿ ಈ ಸುದ್ದಿಮಾಧ್ಯಮಗಳಲ್ಲಿ ಭಾರತದ ಕುರಿತಾದ ವಿಷಯಗಳಿಗೆ ದೊರಕುತ್ತಿರುವ ಪ್ರಾಮುಖ್ಯ ಎದ್ದು ಕಾಣಿಸದೆ ಇರದು. ಅದಕ್ಕೂ ಮೊದಲು ಕೇವಲ ಪ್ರಕೃತಿ ವಿಕೋಪಗಳಂತಹ ವಿಷಯಗಳಿಗೆ ಮಾತ್ರ ಸುದ್ದಿಯಾಗುತ್ತಿದ್ದ ಭಾರತ ಈ ನಡುವೆ ಅಮೇರಿಕನ್ನರು ವಿಶೇಷ ಆಸಕ್ತಿ ತೋರಿಸುವ ಆರ್ಥಿಕ, ವಾಣಿಜ್ಯ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಇಲ್ಲಿನವರಿಗಿಂತ ಕಮ್ಮಿ ಸಂಬಳಕ್ಕೆ ಕೊರತೆಲ್ಲದಂತೆ ಸಿಗುವ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞರು, ಔಟ್‌ಸೋರ್ಸ್ ಮಾಡಿದರೆ ಪ್ರತಿವರ್ಷ ಉಳಿತಾಯವಾಗುವ ಕೋಟ್ಯಾಂತರ ಡಾಲರ್‌ಗಳು, ಭಾರತದಲ್ಲಿ ಕೊಳ್ಳುವ ತಾಕತ್ತಿರುವ ಕೋಟ್ಯಾಂತರ ಜನಸಂಖ್ಯೆಯ ಮಧ್ಯಮವರ್ಗದವರ ಮಾರುಕಟ್ಟೆ, ಶರವೇಗದಲ್ಲಿ ಏರುತ್ತಿರುವ ಶೇರು ಮಾರುಕಟ್ಟೆ, ಇವೆಲ್ಲವೂ ಅಮೇರಿಕದ ಬ್ಯುಸಿನೆಸ್ ಪ್ರಪಂಚಕ್ಕೆ ಪ್ರೀತಿಪಾತ್ರವಾದವು! ಈ ಹಿನ್ನೆಲೆಯಲ್ಲಿ ಪತ್ರಕರ್ತ ಜಾನ್ ಬೌಡ್ರ್ಯು ಡಿಸೆಂಬರ್ 3 ರಿಂದ 6 ರ ವರೆಗೆ India 2.0 ಎಂಬ ಅಗ್ರ ಲೇಖನಮಾಲೆಯಲ್ಲಿ ಭಾರತದಲ್ಲಿ ಆಗುತ್ತಿರುವ ಆರ್ಥಿಕಾಭಿವೃದ್ಧಿ, ಬದಲಾಗುತ್ತಿರುವ ಜೀವನಶೈಲಿ, ಹೆಚ್ಚಾಗುತ್ತಿರುವ ಉದ್ಯಮಶೀಲತೆ, ನವಶ್ರೀಮಂತರು ಸಮಾಜಸೇವೆಯಲ್ಲಿ ತೊಡಗಿಸುತ್ತಿರುವ ಹಣ ಮತ್ತು ಸಮಯ, ಮುಂತಾದ ವಿಷಯಗಳ ಬಗ್ಗೆ ಭಾರತವನ್ನು ಸಂದರ್ಶಿಸಿ, ಒಳ್ಳೆಯ ಸಂಶೋಧನೆ ಮಾಡಿ, ಸಾಕಷ್ಟು ವಸ್ತುನಿಷ್ಠವಾಗಿಯೆ ಬರೆದಿದ್ದಾರೆ.

ಇಲ್ಲಿನ ಮಾಧ್ಯಮಗಳಲ್ಲಿ ಭಾರತದ ಬಗೆಗಿನ ಈ ಪರಿಯ ಆಸಕ್ತಿಯನ್ನು, ಸಂಶೋಧನೆಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಹಾಲಿವುಡ್‌ನಿಂದ ಹಿಡಿದು ಸೌರವಿಜ್ಞಾನದವರೆಗೂ ವಿಶ್ವದಾದ್ಯಂತದ ಉದ್ಯಮಶೀಲ ವಣಿಕರು ಭಾರತದತ್ತ ಮುಖ ಮಾಡುತ್ತಾರೆ ಎಂದರೆ, ಅದೇನೂ ಜ್ಯೋತಿಷ್ಯ ಹೇಳಿದಂತಾಗುವುದಿಲ್ಲ!



ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಮಾಡುವ ದೈತ್ಯ ಬಹುರಾಷ್ಟ್ರೀಯ ಕಂಪನಿ ಹ್ಯೂಲೆಟ್-ಪ್ಯಾಕರ್ಡ್ ಪ್ರಾರಂಭವಾಗಿದ್ದು ಗ್ಯಾರೇಜಿನಲ್ಲಿ. ಗೂಗ್ಲ್ ಕಂಪನಿ ಸಹ ಪ್ರಾರಂಭವಾಗಿದ್ದು ಹೀಗೆಯೆ. ಇವತ್ತು ಎಚ್.ಪಿ. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 5000 ಶತಕೋಟಿ ರೂಪಾಯಿಗಳು! ಪ್ರಾರಂಭವಾಗಿ ಕೇವಲ 8 ವರ್ಷವಾಗಿರುವ ಗೂಗ್ಲ್‌ನ ಮಾರುಕಟ್ಟೆ ಮೌಲ್ಯ ಸುಮಾರು 6600 ಶತಕೋಟಿ ರೂಪಾಯಿಗಳು. ಹಾಗಾಗಿಯೆ, ಸಣ್ಣ ಮೊತ್ತದ ಬಂಡವಾಳ ಹಾಗು ಅಪ್ರತಿಮ ಐಡಿಯಾಗಳಿಂದ ಹೊಸದಾಗಿ ಪ್ರಾರಂಭವಾಗುವ ಕಂಪನಿಗಳ ಬಗ್ಗೆ ಇಲ್ಲಿನವರಿಗೆ ಬಹಳ ಗೌರವ ಉಂಟು. ಅವರಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ, ರಿಸೆಪ್ಷನಿಸ್ಟ್ ಇದಾರಾ, ಮತ್ತೊಂದು ಮಗದೊಂದು ಇದೆಯ ಎನ್ನುವುದಕ್ಕಿಂತ ಅವರಲ್ಲಿರುವ ಐಡಿಯ ಮಾರುಕಟ್ಟೆಯಲ್ಲಿ ಗೆಲ್ಲುತ್ತದಾ ಎಂದಷ್ಟೆ ಬಂಡವಾಳ ಹೂಡುವವರು ನೋಡುವುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈಗೀಗ ಇಂತಹ ಗರಾಜುಗಳಲ್ಲಿ ಆರಂಭವಾಗುತ್ತಿರುವ ಸ್ಟಾರ್ಟ್-ಅಪ್ ಕಂಪನಿಗಳ ಕುರಿತಾದ "The new garage culture – STARTING UP" ಎಂಬ ದೀರ್ಘ ಲೇಖನ ಬಹಳ ಚೆನ್ನಾಗಿದೆ. ಹಾಗೆಯೆ ಅಜೀಮ್ ಪ್ರೇಮ್‍‌ಜಿಯವರ ಸಂದರ್ಶನ ಇದೆ. ಬೆಂಗಳೂರು, ಮುಂಬು, ಹೈದರಾಬಾದ್, ನಿಜಾಮಾಬಾದ್, ಚೆನ್ನೈ, ಶ್ರೀಪೆರಂಬದೂರು ಇಲ್ಲೆಲ್ಲ ಸುತ್ತಾಡಿ ಮಾಡಿರುವ ಈ ಲೇಖನಮಾಲೆ ಓದಿದರೆ ಇಲ್ಲಿನ ಪತ್ರಕರ್ತರ ದುಡಿಮೆ, ಅವರ ಸಂಶೋಧನಾ ಪ್ರವೃತ್ತಿ, ಪ್ರೊಫ್ರೆೆಷನಾಲಿಸಂ ಬಗ್ಗೆ ಅಭಿಮಾನವುಂಟಾಗದೆ ಇರದು.

Dec 7, 2006

ಅಮೇರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಮೂರು ವಾರದ ಹಿಂದೆ, ನವೆಂಬರ್ ಹದಿನಾಲ್ಕರಂದು ಮೈಕ್ರೊಸಾಫ್ಟ್ ಕಂಪನಿ Zune ಎಂಬ ಒಂದು ಹೊಸ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ ಅನ್ನು ಬಿಡುಗಡೆ ಮಾಡಿತು. ಆಪಲ್ ಕಂಪನಿಯ ಐಪಾಡ್‌ಗೆ ಉತ್ತರವಾಗಿ ಕಳೆದೆರಡು ವರ್ಷಗಳಿಂದ ಈ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ಸಿದ್ದಪಡಿಸುತ್ತಿತ್ತು. ಕಂಪ್ಯೂಟರ್ ಪ್ರಪಂಚದ ಆಗುಹೋಗುಗಳು ಬಹಳಷ್ಟು ಗೊತ್ತಿಲ್ಲದವರಿಗೆ ಗೊತ್ತಿರದೆ ಇರಬಹುದಾದ ವಿಚಾರ ಏನೆಂದರೆ, ಆಪಲ್ ಕಂಪನಿ ಕೆಲವರ ದ್ಟೃಯಲ್ಲಿ ಮೈಕ್ರೋಸಾಫ್ಟ್‌ನ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಿಂತ ಉತ್ಕೃಷ್ಟವಾದ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸುತ್ತದೆ ಎನ್ನುವುದು. ಆದರೆ ಮೈಕ್ರೊಸಾಫ್ಟ್ ಮಾಡದ ಒಂದನ್ನು ಹೆಚ್ಚುವರಿಯಾಗಿ ಆಪಲ್ ಮಾಡುತ್ತದೆ. ಅದೇನೆಂದರೆ, ತನ್ನ ಆಪರೇಟಿಂಗ್ ಸಿಸ್ಟಮ್ ತಂತ್ರಾಂಶವನ್ನು ಅದು ತಾನು ಸಿದ್ದಪಡಿಸಿದ ಕಂಪ್ಯೂಟರ್ ಹಾರ್ಡ್‌ವೇರ್‌ನೊಂದಿಗೆ ಮಾತ್ರ ಮಾರುತ್ತದೆ. ಮೈಕ್ರೋಸಾಫ್ಟ್‌ನ ವಿಂಡೋಸ್ ಅನ್ನು x86 ಪ್ರೊಸೆಸರ್ ಆಧಾರಿತವಾದ ಯಾವ ಕಂಪ್ಯೂಟರ್ ಮೇಲಾದರೂ ಉಪಯೋಗಿಸಬಹುದು. ನಮ್ಮಲ್ಲಿಯೆ ಎಚ್.ಸಿ.ಎಲ್, ವಿಪ್ರೊ, ಝೆೆನಿತ್, ಮುಂತಾದ ಹಾಗು ವಿದೇಶಗಳಲ್ಲಿ ಡೆಲ್, ಎಚ್.ಪಿ., ಟೊಷಿಬ, ಏಸರ್ ಮುಂತಾದ ಕಂಪನಿಗಳು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಹಾರ್ಡ್‌ವೇರ್ ಸಿದ್ಧಪಡಿಸಿ, ಅದಕ್ಕೆ ಮೈಕ್ರೋಸಾಫ್ಟ್‌ನ ವಿಂಡೋಸ್ ಅನುಸ್ಥಾಪಿಸಿ ಮಾರುತ್ತಾರೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ಸ್ ಡಿಪ್ಲೊಮ ಮಾಡಿರುವವವರೂ ಸಹ ಇದಕ್ಕೆ ಬೇಕಾದ ಮದರ್ ಬೋರ್ಡ್, ಮೆಮೊರಿ, ಮುಂತಾದವುಗಳನ್ನು ಬೆಂಗಳೂರಿನ ಎಸ್.ಪಿ. ರೋಡಿನಲ್ಲಿ ಕೊಂಡುಕೊಂಡು ತಾವೆ ಅಸೆಂಬ್ಲ್ ಮಾಡಿ, ವಿಂಡೋಸ್ ಅನ್ನು ಇನ್ಸ್‌ಟಾಲ್ ಮಾಡಬಹುದು. ಆದರೆ ಆಪಲ್‌ನ ಮ್ಯಾಕ್ ಕಂಪ್ಯೂಟರ್ ಆನು ಮಾಡುವುದು, ಮಾರುವುದು, ಆಪಲ್ ಕಂಪನಿ ಮಾತ್ರ.

ಆದರೂ ಹಲವಾರು ಕಾರಣಗಳಿಗೆ ಟೆಕ್ನಾಲಜಿ ಪ್ರಪಂಚದಲ್ಲಿ ಆಪಲ್‌ನ ಪ್ರಭಾವ ಮೈಕ್ರೋಸಾಫ್ಟ್‌ಗಿಂತ ಕಮ್ಮಿ ಇಲ್ಲ. ಯಾವುದೆ ಹಾಲಿವುಡ್ ಸಿನೆಮಾದಲ್ಲಿ ಕಂಪ್ಯೂಟರ್ ಅನ್ನು ಉಪಯೋಗಿಸುತ್ತಿರುವ ಸೀನ್ ಇದ್ದರೆ ಆ ಸೀನ್‌ನಲ್ಲಿಆಪಲ್ ಕಂಪ್ಯೂಟರ್ ಕಾಣಿಸುವ ಸಾಧ್ಯತೆಗಳೆ ಹೆಚ್ಚು. ಆದರೆ ಪರ್ಸನಲ್ ಕಂಪ್ಯೂಟರ್ ಉಪಯೋಗಿಸುವವರಲ್ಲಿ ಶೇ.90 ಕ್ಕೂ ಹೆಚ್ಚು ಜನ ಮೈಕ್ರೊಸಾಫ್ಟ್ ಬಳಸಿದರೆ, ಪ್ರಪಂಚದ ಕಂಪ್ಯೂಟರ್ ಬಳಕೆದಾರರಲ್ಲಿ ಆಪಲ್ ಬಳಸುವವರು ಶೇ. 2 ರಿಂದ 3 ಮಾತ್ರ. ಆದರೆ ಈ ಆಪಲ್ ಬಳಸುವ ಬಹುಪಾಲು ಜನರ ಆಪಲ್‌ನೆಡೆಗಿನ ನಿಷ್ಠೆ ಮತ್ತು ಮೈಕ್ರೋಸಾಫ್ಟ್‌ನೆಡೆಗಿನ ದ್ವೇಷ ವಿಶ್ವಪ್ರಸಿದ್ಧವಾದದ್ದು! ಇದೊಂದು ಕಲ್ಟ್ ಸಂಸ್ಕೃತಿ! ಐದಾರು ವರ್ಷಗಳ ಹಿಂದೆ ಈ ಆಪಲ್ ಕಂಪನಿ ಹೋಗಿಯೇ ಬಿಟ್ಟಿತು ಎಂದು ಎಲ್ಲರೂ ಬೊಬ್ಬೆಡುತ್ತಿದ್ದಾಗ ಅದರ ಸ್ಥಾಪಕ ಮತ್ತು ಸಿ.ಇ.ಒ. ಸ್ಟೀವ್ ಜಾಬ್ಸ್ ಬಯಲಿಗೆ ಬಿಟ್ಟ ಅಸ್ತ್ರ ಆಪಲ್ ಐಪಾಡ್ ಎಂಬ ಪುಟ್ಟ, ಮುದ್ದಾದ, ಡಿಜಿಟಲ್ ಮ್ಯೂಸಿಕ್ ಪ್ಲೇಯರ್. ಇದು ಆಪಲ್ ಕಂಪನಿಯನ್ನು ಮತ್ತೆ ಲಾಭಕ್ಕೆ ತಂದಿದ್ದೆ ಅಲ್ಲದೆ ಪರೋಕ್ಷವಾಗಿ ಆಪಲ್ ಕಂಪ್ಯೂಟರ್‌ನ ಮಾರಾಟ ಹೆಚ್ಚಾಗುವುದಕ್ಕೂ ಕಾರಣವಾತು. ಇಂದು ಐಪಾಡ್‌ನಷ್ಟು ಪ್ರಸಿದ್ಧವಾದ, ಲಾಭದಾಯಕವಾದ ಇನ್ನೊಂದು ಉತ್ಪನ್ನವಿಲ್ಲವೇನೊ! ಇಂತಹ ಉತ್ಪನ್ನಗಳನ್ನು ಬ್ಯುಸಿನೆಸ್ ಪರಿಭಾಷೆಯಲ್ಲಿ Killer Product ಎನ್ನುತ್ತಾರೆ.

ಮೈಕ್ರೊಸಾಫ್ಟ್‌ನವರು ಹೆಚ್ಚಾಗಿ ಹಾರ್ಡ್‌ವೇರ್ ತಯಾರಿಸುವುದಿಲ್ಲ. ಹಲವಾರು ವರ್ಷಗಳ ಹಿಂದಿನ ತನಕ ಮೌಸು, ಕೀಬೋರ್ಡ್ ನಂತಹ ಸಣ್ಣಪುಟ್ಟವನ್ನು ಮಾತ್ರ ಮಾಡುತ್ತಿದ್ದರು. ಹಾರ್ಡ್‌ವೇರ್ ಉತ್ಪನ್ನಗಳಲ್ಲಿ ಸ್ವಲ್ಪ ಗಂಭೀರವಾಗಿ ತೊಡಗಿಸಿಕೊಂಡಿದ್ದು ವಿಡಿಯೋ ಗೇಮ್ ಕನ್ಸೋಲ್ ಆದ XBox ತಯಾರಿಕೆಯಲ್ಲಿ ಮಾತ್ರ. ಇಲ್ಲಿ ಗಮನಿಸಬೇಕಾದ ಒಂದು ಅಂಶ ಇದೆ. ಎಕ್ಸ್-ಬಾಕ್ಸ್‌ನ ಹಾರ್ಡ್‌ವೇರ್ ಮಾರಾಟದಿಂದ ಮೈಕ್ರೊಸಾಫ್ಟ್‌ನವರಿಗೆ ಏನೇನೂ ಲಾಭವಿಲ್ಲ. ಅದಕ್ಕೆ ಬೀಳುವ ಖರ್ಚಿಗಿಂತ ಅರ್ಧಕ್ಕೂ ಕಮ್ಮಿ ಬೆಲೆಗೆ ಅದನ್ನು ಮಾರುತ್ತಾರೆ. ಆದರೆ ದುಡ್ಡಿರುವುದು ಸಾಫ್ಟ್‌ವೇರ್‌ನಲ್ಲಿ. ಅಂದರೆ ಎಕ್ಸ್-ಬಾಕ್ಸ್‌ಗೆಂದು ಮೈಕ್ರೋಸಾಫ್ಟ್ ಸಿದ್ದಪಡಿಸುವ ಗೇಮ್‌ಗಳಲ್ಲಿ. ಈ ಗೇಮ್‌ಗಳನ್ನು ಒಂದು ಸಲ ಡಿಸೈನ್ ಮಾಡಿ, ಡೆವಲಪ್ ಮಾಡಿದರೆ ಸಾಕು; ಆಮೇಲೆ ಒಂದೊಂದು ಕಾಪಿಗೆ ಬೀಳುವ ಖರ್ಚು ಹತ್ತಿಪ್ಪತ್ತು ರೂಪಾಯಿ ಮಾತ್ರ; ಸೀಡಿ ಅಥವ ಡಿವಿಡಿ ಬರ್ನ್ ಮಾಡಲಿಕ್ಕಾಗಿ ಹಾಗೂ ಅದನ್ನು ಪ್ಯಾಕ್ ಮಾಡಲಿಕ್ಕಾಗಿ. ಆದರೆ ಅದರ ಮಾರಾಟ ಬೆಲೆ ಮಾತ್ರ ಸಾವಿರ ರೂಪಾಯಿಂದ ಮೂರು ಸಾವಿರ ರೂಪಾಯಿ ತನಕ ಇರುತ್ತದೆ. ವಿಡಿಯೊ ಗೇಮ್ ಮಾರುಕಟ್ಟೆಯಲ್ಲಿ ಸೋನಿ ಕಂಪನಿಯ PlayStation ನ ಏಕಸ್ವಾಮ್ಯ ಮುರಿಯಲು ಹಾಗೂ ತನಗಾಗಿ ಮತ್ತೊಂದು ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ಮೈಕ್ರೊಸಾಫ್ಟ್ ಆ ರಂಗಕ್ಕೆ ಇಳಿತು. ಹೆಚ್ಚುಕಮ್ಮಿ ಅದೇ ಉದ್ದೇಶದಿಂದ ಆಪಲ್ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ Zune ಮ್ಯೂಸಿಕ್ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ತಿಂಗಳ ಹಿಂದೆ ಬಿಡುಗಡೆ ಮಾಡಿದ್ದು.

ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದಕ್ಕೆ ಮುಂಚೆ ಬಹಳ ಪ್ರಚಾರ ಮಾಡಲಾಗಿತ್ತು. ಹಾಗಾಗಿ ಜನರಲ್ಲಿಯೂ ಕುತೂಹಲವಿತ್ತು. CNETNews.com ಎನ್ನುವುದು ಟೆಕ್ನಾಲಜಿ ವಿಷಯಗಳಿಗೆ ಬಹಳ ಜನಪ್ರಿಯವಾದ ವೆಬ್‌ಸೈಟ್. ಆ ವೆಬ್‌ಸೈಟಿನಲ್ಲಿ ಇಂತಹ ಉತ್ಪನ್ನಗಳನ್ನು ಪರೀಕ್ಷಿಸಿ, ಒಂದೆರಡು ನಿಮಿಷಗಳ ರಿವ್ಯೂ ವಿಡಿಯೊ ಹಾಕುತ್ತಾರೆ. ಈ ಕಂಪನಿ ಇರುವುದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ. Zune ಮಾರುಕಟ್ಟೆಗೆ ಬರುವ ಎರಡು ವಾರಗಳ ಹಿಂದೆಯೆ ಅದನ್ನು ಪಡೆದುಕೊಂಡು, ಅದರ ಗುಣಾವಗುಣಗಳನ್ನು ವಿಶ್ಲೇಷಿಸಿ ಅದರ ವಿಡಿಯೊ ಅನ್ನು ಇದರ ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡಿದ್ದರು. ವಿಶ್ಲೇಷಿಸಿದಾತನ ಹೆಸರು ಜೇಮ್ಸ್ ಕಿಮ್. ಈತ ಇಂತಹ ಅತ್ಯಾಧುನಿಕ ಡಿಜಿಟಲ್ ಉತ್ಪನ್ನಗಳನ್ನು ವಿಶ್ಲೇಷಿಸುವ CNET ನ ಹಿರಿಯ ಸಂಪಾದಕ. Zune ನ ಬಗ್ಗೆ ಸಹಜವಾಗಿಯೆ ಕುತೂಹಲ ಬೆಳೆಸಿಕೊಂಡಿದ್ದ ನಾನು ಆ ವಿಡಿಯೋವನ್ನು ಮೊದಲ ವಾರವೆ ನೋಡಿದ್ದೆ.

ನವೆಂಬರ್‌ನ ನಾಲ್ಕನೆ ಗುರುವಾರವನ್ನು ಅಮೇರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನ ಎಂದು ಆಚರಿಸುತ್ತಾರೆ. ನಾಲ್ಕು ಶತಮಾನಗಳ ಹಿಂದೆ ಯೋರೋಪಿನಿಂದ ವಲಸೆ ಬಂದ ಕೆಲವು ಬಿಳಿಯರು ಇಲ್ಲಿನ ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿ, ರೋಗರುಜಿನಗಳಿಗೆ ತುತ್ತಾಗಿ ಊಟಕ್ಕಿಲ್ಲದೆ ಸಾಯುವಂತಹ ಸ್ಥಿತಿ ಕೆಲವು ಕಡೆ ಉದ್ಭವಿಸಿದಾಗ ರೆಡ್ ಇಂಡಿಯನ್ನರು, ಅಂದರೆ ಕೆಂಪಗಿರುವ ಭಾರತೀಯರು ಎಂದು ಕೊಲಂಬಸ್‌ನಿಂದ ಕರೆಸಿಕೊಂಡ ಇಲ್ಲಿನ ಮೂಲನಿವಾಸಿಗಳು ಅವರಿಗೆ ಆಹಾರ ಪದಾರ್ಥಗಳನ್ನು ಒದಗಿಸಿ ಸಹಾಯ ಮಾಡಿದರು. ಆ ಕಾರಣಕ್ಕಾಗಿ ಕೃತಜ್ಞತಾಪೂರ್ವಕವಾಗಿ ಆಚರಿಸುವ ಹಬ್ಬ ಥ್ಯಾಂಕ್ಸ್‌ಗಿವಿಂಗ್ ಡೆ. ಮಾರಾಟದ ಅಂಗಡಿಗಳನ್ನು ಬಿಟ್ಟು ಇನ್ನೆಲ್ಲರಿಗೂ ಶುಕ್ರವಾರವೂ ರಜಾ ಇರುತ್ತದೆ. ಹೇಗೂ ಇಲ್ಲಿ ಶನಿವಾರ, ಭಾನುವಾರ ರಜಾ ಇದ್ದೇ ಇರುತ್ತದೆ. ಹಾಗಾಗಿ ಬಹಳ ಜನ ಆ ಲಾಂಗ್ ವೀಕೆಂಡ್‌ನಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ವರ್ಷದಲ್ಲೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುವುದು ಈ ನಾಲ್ಕು ದಿನಗಳಲ್ಲಿಯೆ.

ಈ ಬಾರಿಯ ರಜಾದಲ್ಲಿ ಮೇಲೆ ಹೇಳಿದ CNET News.com ನ ಜೇಮ್ಸ್ ಕಿಮ್ ತನ್ನ ಹೆಂಡತಿ ಕೇಟಿ ಹಾಗು ತಮ್ಮ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊದಿಂದ ನಾಲ್ಕೈದು ನೂರು ಮೈಲಿ ದೂರ, ಉತ್ತರಕ್ಕೆ ಪ್ರವಾಸ ಹೊರಟ. ಒಂದೆರಡು ದಿನ ಒರೆಗಾನ್ ರಾಜ್ಯದಲ್ಲೆಲ್ಲ ಸುತ್ತಾಡಿಕೊಂಡು, ಹಿಮ ತುಂಬಿದ ದಟ್ಟ ಕಾಡುಬೆಟ್ಟಗಳ ರಸ್ತೆಯೊಂದರಲ್ಲಿ ಹೋಗುತ್ತಿದ್ದಾಗ ಆತನ ಕಾರು ಹಿಮದಲ್ಲಿ ಸಿಕ್ಕಿಹಾಕಿಕೊಂಡು ಹೂತು ಹೋಯಿತು. ಹಿಮ ಬೀಳುವ ಋತುವಿನಲ್ಲಿ ಆ ರಸ್ತೆಯಲ್ಲಿ ಸಂಚಾರ ಇರುವುದಿಲ್ಲ. ಅದು ಜೇಮ್ಸ್‌ಗೆ ಗೊತ್ತಿರಲಿಲ್ಲ. ಸೆಲ್ ಪೋನ್ ಸಿಗ್ನಲ್ ಬೇರೆ ಇರಲಿಲ್ಲ. ಕೇವಲ ಏಳು ತಿಂಗಳಾಗಿದ್ದ ಒಂದು ಪುಟ್ಟ ಮಗು, ನಾಲ್ಕು ವರ್ಷದ ಇನ್ನೊಂದು ಮಗು, ಮಗುವಿಗೆ ಹಾಲೂಡಿಸುತ್ತಿರುವ ತಾಯಿ ಹಾಗೂ ಜೇಮ್ಸ್ ಯಾರಾದರು ಆ ರಸ್ತೆಯಲ್ಲಿ ಬರುತ್ತಾರೆ ಎಂದು ಕಾಯಲಾರಂಭಿಸಿದರು. ಹೀಗಾಗುತ್ತದೆ ಎಂದು ಮೊದಲೆ ಊಹಿಸಿಲ್ಲದ ಕಾರಣವಾಗಿ ಕಾರಿನಲ್ಲಿ ಹೆಚ್ಚಿನ ನೀರಾಗಲಿ, ಆಹಾರವಾಗಲಿ ಇರಲಿಲ್ಲ. ಹೊರಗೆ ರಾತ್ರಿ ಹೊತ್ತು ನೀರು ಮಂಜುಗಡ್ಡೆಯಾಗುವಷ್ಟು ಚಳಿ. ಜನಸಂಪರ್ಕ ಸಾಧ್ಯವೆ ಇಲ್ಲದಷ್ಟು ದೂರ ಇವರು ಹೋಗಿಬಿಟ್ಟಿದ್ದಾರೆ.

ಹೀಗಾಗಿದ್ದೆ, ಪೆಟ್ರೋಲ್ ಮುಗಿಯುವ ತನಕವೂ ಕಾರನ್ನು ಆನ್ ಮಾಡಿಟ್ಟುಕೊಂಡು, ಅದರಲ್ಲಿನ ಹೀಟರ್ ಹಾಕಿಕೊಂಡು ಕಾಲ ಹಾಕಿದ್ದಾರೆ. ಪೆಟ್ರೋಲ್ ಒಂದು ದಿನಕ್ಕೆಲ್ಲ ಮುಗಿದಿರಬೇಕು. ಸಾಲದೆಂದು ಆಗಾಗ ಹಿಮ ಮತ್ತು ಮಳೆ ಬೀಳುತ್ತಲೆ ಇದೆ. ಎಲ್ಲಿಯೂ ಸಹಾಯದ ಸುಳಿವಿಲ್ಲ. ಆ ರಸ್ತೆಯಲ್ಲಿ ಯಾವ ವಾಹನವಾಗಲಿ, ನರಪಿಳ್ಳೆಯಾಗಲಿ ಸುಳಿಯಲಿಲ್ಲ. ಕಾರಿನಲ್ಲಿ ಇದ್ದಬದ್ದ ಸ್ನ್ಯಾಕ್ಸ್ ಎಲ್ಲ ಮುಗಿದವು. ಹೆಂಡತಿಗೆ, ಜೇಮ್ಸ್‌ಗೆ ಊಟವಿಲ್ಲ. ಬೇಬಿ ಪುಡ್ ಸಹ ಮುಗಿದ ಮೇಲೆ ತಾಯಿ ಏಳು ತಿಂಗಳ ಕೂಸಿನ ಜೊತೆಗೆ ನಾಲ್ಕು ವರ್ಷದ ಮಗಳಿಗೂ ಹಾಲೂಡಿಸಲು ಪ್ರಾರಂಭಿಸಿದಳು. ಬೆಚ್ಚಗಿರಲು ನಾಲ್ಕೂ ಜನ ತಬ್ಬಿಕೊಂಡು ಕಾರಿನಲ್ಲಿ ಮಲಗುತ್ತಿದ್ದರು. ತೀರಾ ಚಳಿಯಾದಾಗ ಕಾರಿನ ಒಂದೊಂದೆ ಚಕ್ರವನ್ನು ಕಳಚಿ ಅದರ ಟೈರನ್ನು ಸುಟ್ಟರು. ನಾಲ್ಕು ಚಕ್ರಗಳ ಜೊತೆಗೆ ಸ್ಪೇರ್ (ಹೆಚ್ಚುವರಿ) ಟೈರನ್ನೂ ಸುಟ್ಟರು. ಜೇಮ್ಸ್ ಸುತ್ತಮುತ್ತಲಿನ ಕಾಡುಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿದ. ಕೊನೆಕೊನೆಗೆ ಯಾವುದು ವಿಷ ಯಾವುದು ವಿಷವಲ್ಲ ಎಂಬುದು ಗೊತ್ತಾಗದ್ದರಿಂದಾಗಿ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದ. ರಾತ್ರಿ ಹಗಲುಗಳು ಉರುಳಿದವು. ಮೂರಾಯಿತು, ಐದಾಯಿತು, ಕೊನೆಗೆ ಏಳು ದಿನಗಳಾದವು! ಜೇಮ್ಸ್ ಧೈರ್ಯ ಮಾಡಿ, ಇದ್ದಬದ್ದ ಶಕ್ತಿಯೆನ್ನೆಲ್ಲ ಒಟ್ಟುಗೂಡಿಸಿಕೊಂಡು, ಹೆಂಡತಿಮಕ್ಕಳನ್ನು ಕಾರಿನಲ್ಲಿಯೆ ಬಿಟ್ಟು ಸಹಾಯ ತರುತ್ತೇನೆಂದು ಹೊರಟ.

ಜೇಮ್ಸ್ ಹೋಗಿ ಎರಡು ದಿನಗಳಾದರೂ ವಾಪಸು ಬರಲಿಲ್ಲ. ದಟ್ಟವಾದ ಕಾಡು. ಮೈಕೊರೆಯುವ ಚಳಿ. ಕೇಟಿಯ ಎರಡು ಕಾಲ್ಬೆರಳುಗಳು ಶೀತದಿಂದಾಗಿ ಪ್ರಾಸ್ಟ್‌ಬೈಟ್‌ಗೆ ತುತ್ತಾಗಿದ್ದವು. ತನ್ನ ಹೊಟ್ಟೆಗೆ ಏನಿಲ್ಲದಿದ್ದರೂ ಈ ತಾಯಿ ಎರಡೂ ಮಕ್ಕಳಿಗೆ ಎದೆ ಬಸಿದು ಹಾಲೂಡಿಸುತ್ತಿದ್ದಳು. ಒಂಬತ್ತನೆ ದಿನ ತಾವಿದ್ದ ಜಾಗದ ಮೇಲೆ ಹೆಲಿಕಾಪ್ಟರ್ ಒಂದು ಸುತ್ತು ಹಾಕುತ್ತಿರುವುದನ್ನು ಗಮನಿಸಿ ತಮ್ಮಲ್ಲಿದ್ದ ಕೊಡೆಯನ್ನು ಹಿಡಿದುಕೊಂಡು ಹೊರಗೆ ಬಂದು ಅದನ್ನು ಅತ್ತ ಇತ್ತ ಬೀಸಲಾರಂಭಿಸಿದಳು. ಆ ಹೆಲಿಕಾಪ್ಟರ್ ಸ್ಯಾನ್ ಫ್ರಾನ್ಸಿಸ್ಕೊದ ಜೇಮ್ಸ್‌ನ ಮನೆಯವರು ಅವರನ್ನು ಹುಡುಕಲು ಬಾಡಿಗೆಗೆ ಪಡೆದದ್ದಾಗಿತ್ತು. ಪೈಲಟ್ ಕಣ್ಣಿಗೆ ಕೊಡೆ ಬೀಸುತ್ತಿರುವುದು ಕಾಣಿಸಿತು. ಮುಂದಿನ ಒಂದೆರಡು ಗಂಟೆಗಳಲ್ಲಿ ತಾಯಿ ಮತ್ತು ಮಕ್ಕಳಿಬ್ಬರೂ ಸುರಕ್ಷಿತ ಸ್ಥಾನ ಸೇರಿಕೊಂಡರು.

ನಂತರ ಎರಡು ದಿನಗಳ ಕಾಲ ಕುದುರೆಗಳ ಮೇಲೆ, ಸ್ನೋಮೊಬೈಲ್‌ಗಳ ಮೇಲೆ, ಹೆಲಿಕಾಪ್ಟರ್ ಬಳಸಿ, ಕೊನೆಗೆ ಉಪಗ್ರಹಗಳನ್ನು ಸಹ ಬಳಸಿ ಜೇಮ್ಸ್‌ನನ್ನು ಹುಡುಕುವ ಕಾರ್ಯ ಮೊದಲಾಯಿತು. ನಾನಿರುವ ಸಿಲಿಕಾನ್ ಕಣಿವೆಯ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ಇಲ್ಲಿನವರು ಓದುವ ವೆಬ್‌ಸೈಟ್‌ಗಳಲ್ಲಿ ಇದೇ ಸುದ್ದಿ. ಕೊನೆಕೊನೆಗೆ ರಾಷ್ಟ್ರೀಯ ಸುದ್ದಿಯೂ ಆಗಿಬಿಟ್ಟಿತು. ಒಂದು ದಿನದ ನಂತರ ಜೇಮ್ಸ್‌ನ ಪ್ಯಾಂಟೊಂದು ಸಿಕ್ಕ ಸುದ್ದಿ ಬಂತು. ಇದು ಆತ ತಮ್ಮನ್ನು ಹುಡುಕುವವರಿಗಾಗಿ ಬಿಟ್ಟಿರುವ ಕ್ಲೂ ಇರಬಹುದು ಎಂದರು ಪೋಲಿಸರು. ಇನ್ನೊಂದು ದಿನ ಅಲ್ಲೆಲ್ಲ ಅಂಗುಲಂಗುಲ ಜಾಲಾಡಿಸಿದ ಮೇಲೆ ಕಡಿದಾದ ಆಳವಾದ, ದುರ್ಗಮವಾದ ಕಮರಿಯೊಂದರಲ್ಲಿ ಜೇಮ್ಸ್‌ನ ಶವ ಸಿಕ್ಕಿತು. ಜೇಮ್ಸ್‌ನ ಶವ ಸಿಕ್ಕಿದ ಜಾಗ ಆತನ ಕಾರು ಇದ್ದ ಸ್ಥಳದಿಂದ ಕೇವಲ ಅರ್ಧ ಮೈಲಿ ಮಾತ್ರ ದೂರವಿತ್ತು. ಆದರೂ, 40 ಕ್ಕಿಂತ ಹೆಚ್ಚು ಪೋಲಿಸರು ಆತನ ಹೆಂಡತಿಮಕ್ಕಳು ಸಿಕ್ಕ ಎರಡು ದಿನಗಳ ನಂತರ ಆತನನ್ನು ಹುಡುಕಲು ಸಾಧ್ಯವಾಯಿತು ಅಂದರೆ ಅ ಬೆಟ್ಟಗುಡ್ಡಗಳ ಕಾಡಿನ ದಟ್ಟತೆ, ಅಲ್ಲಿನ ಕಡಿದಾದ ಕಮರಿಗಳು, ಹಿಮ, ಇವೆಲ್ಲವನ್ನೂ ನಾವು ಊಹಿಸಿಕೊಳ್ಳಬಹುದು! ಆಷ್ಟೇ ದೂರದಲ್ಲಿ ಆತನ ಶವ ಸಿಕ್ಕರೂ, ಅಲ್ಲಿ ಹೆಣವಾಗಿ ಬೀಳುವುದಕ್ಕಿಂತ ಮೊದಲು ಜೇಮ್ಸ್ 17 ಕಿ.ಮಿ. ದೂರ ಹಿಮಾವೃತ ಬೆಟ್ಟಗುಡ್ಡಗಳನ್ನೆಲ್ಲ ಅಲೆದಿದ್ದನಂತೆ!

ಅಮೇರಿಕ ಎಂದ ತಕ್ಷಣ ಅದೊಂದು ಸಮೃದ್ಧವಾದ, ಅವಕಾಶಗಳು ಎಲ್ಲೆಂದರಲ್ಲಿ ಹುಡುಕಿಕೊಂಡು ಬರುವ, ಸುಲಭವಾಗಿ ಜೀವನ ಸಾಗಿಸಬಹುದಾದ ಶ್ರೀಮಂತ ದೇಶ ಎಂಬ ಕಲ್ಪನೆ ಹೊರಗಿನ ಬಹಳ ಜನರಿಗೆ ಇರುವುದು ಸುಳ್ಳಲ್ಲ. ಭಾರತಕ್ಕಿಂತ ಸುಮಾರು ಮೂರ್ನಾಲ್ಕು ಪಟ್ಟು ದೊಡ್ಡದಾದ ಈ ದೇಶದ ಕೆಲವು ಕಡೆಗಳಲ್ಲಿ ಜೀವನ ಬಹಳ ಸವಾಲಿನದ್ದು. ಇದು ಜನರೊಡ್ಡುವ ಅಪಾಯವಾಗಲಿ, ಸವಾಲಾಗಲಿ ಅಲ್ಲ್ಲ; ಪ್ರಕೃತಿ ಒಡ್ಡುವುದು. ನಮ್ಮಲ್ಲೆ ಯಾಕೆ, ಇಲ್ಲೂ ಸಹ ಪ್ರತಿ ವರ್ಷ ಬೇಸಿಗೆಯ ಕಡುಬಿಸಿಲಿಗೆ ಜನ ಸಾಯುತ್ತಿರುತ್ತಾರೆ. ಕೇವಲ 50 ಲಕ್ಷ ಜನಸಂಖ್ಯೆಯ ಅರಿಜೋನಾ ರಾಜ್ಯದಲ್ಲಿ ಕಡುಬಿಸಿಲಿನ ಝಳಕ್ಕೆ ಸಿಕ್ಕಿ ಪ್ರತಿ ವರ್ಷ 30 ರಿಂದ 50 ಜನ ಸಾಯುತ್ತಾರೆ. ಬೇಸಿಗೆ ಕೊನೆಯಾದ ತಕ್ಷಣ ಬರುವ ಟೊರ್ನೆಡೊಗಳು, ಅಂದರೆ ಭಯಂಕರ ಸುಂಟರಗಾಳಿಗಳು, ಊರೂರುಗಳನ್ನೆ ಬುಡಮೇಲು ಮಾಡಿ ಹತ್ತಾರು ಜನರ ಜೀವ ತೆಗೆಯುವುದಲ್ಲದೆ ಸಾವಿರಾರು ಜನರ ಜೀವಮಾನದ ದುಡಿಮೆಯನ್ನೆ ನಾಶ ಮಾಡುತ್ತವೆ. ಟೊರ್ನೆಡೋಗಳನ್ನು ಆಧರಿಸಿದ ಪ್ರಸಿದ್ಧ ಚಲನಚಿತ್ರ ಟ್ವಿಸ್ಟರ್‌ನಲ್ಲಿ ಬರುವ ದೃಶ್ಯಗಳು ಅವಾಸ್ತವಿಕವೇನಲ್ಲ! ಅದೇ ಸಮಯದಲ್ಲಿ ಪೂರ್ವದಲ್ಲಿ ಮತ್ತು ಆಗ್ನೇಯದ ಕರಾವಳಿಯಲ್ಲಿ ಅಪ್ಪಳಿಸುವ ಚಂಡಮಾರುತಗಳದ್ದು ಇನ್ನೂ ಭೀಕರ ಆಟಾಟೋಪ. ಜನ ಎದ್ದುಬಿದ್ದು ಮನೆಮಠ ತೊರೆದು ನೂರಾರು ಮೈಲಿ ಹೋಗುವ ಸ್ಥಿತಿ ಬಂದು ಬಿಡುತ್ತದೆ ಕೆಲವೊಮ್ಮೆ. ಕಳೆದ ವರ್ಷ ಅಪ್ಪಳಿಸಿದ ಕತ್ರೀನಾ ಅಮೇರಿಕವನ್ನು ಮೊಣಕಾಲ ಮೇಲೆ ನಿಲ್ಲಿಸಿದ್ದೆ ಇದಕ್ಕೆ ತಾಜಾ ಉದಾಹರಣೆ.

ಇನ್ನು ಹಿಮ ಬೀಳುವ ಕತೆ. ಉತ್ತರದ ಕಡೆಗಿರುವ ರಾಜ್ಯಗಳಲ್ಲಿ ಚಳಿಗಾಲದಲ್ಲಿ ಒಂದೆರಡು ಗಂಟೆಗಳಲ್ಲಿ ಒಂದೆರಡು ಅಡಿಯಷ್ಟು ಎತ್ತರದ ಹಿಮ ಬಿದ್ದು ಬಿಡುತ್ತದೆ. ಕೆಲವು ಸಲ ಮೂರ್ನಾಲ್ಕು ಅಡಿ ಬಿದ್ದು ಮನೆಯ ಬಾಗಿಲು ತೆರೆದು ಹೊರಬರಲಾಗದ ಹಾಗೆ ಮಾಡಿಬಿಡುತ್ತದೆ. ಕಾರಿನಲ್ಲಿ ಕುಳಿತಿದ್ದರೂ ಶೀತಚಳಿ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಅಂತಹ ಹಿಮದಲ್ಲಿ ಸಂಪೂರ್ಣವಾಗಿ ಅನೇಕ ಪದರುಗಳ ಬಟ್ಟೆಗಳನ್ನು ಧರಿಸಿ ಸಂಪೂರ್ಣವಾಗಿ ಮೈಮುಚ್ಚಿಕೊಳ್ಳದೆ ಹೊರಗೇನಾದರೂ ಬಂದರೆ ಹತ್ತಾರು ನಿಮಿಷಗಳಲ್ಲಿ frostbite ಬರುತ್ತದೆ. ಇದೇನೆಂದರೆ, ಶೀತಕ್ಕೆ ಸಿಕ್ಕಿದ ಭಾಗಕ್ಕೆ ರಕ್ತಚಲನೆ ಸ್ಥಗಿತಗೊಂಡು, ಆಮ್ಲಜನಕವಿಲ್ಲದೆ, ಅಲ್ಲಿನ ಜೀವಕೋಶಗಳೆಲ್ಲ ಸತ್ತು ಹೋಗಿ ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿ, ಸಂಪೂರ್ಣ ಸ್ವಾಧೀನತೆ ಕಳೆದುಕೊಳ್ಳುತ್ತದೆ. ಹಿಮದಲ್ಲಿ ಗಾಡಿ ಸಿಕ್ಕಿ ಹಾಕಿಕೊಂಡರೆ ನಮ್ಮಲ್ಲಿ ಹಳ್ಳಿಗಾಡಿನ ಕೆಸರಿನಲ್ಲಿ ತುಂಬಿದ ಲಾರಿ ಹೂತುಕೊಂಡ ಹಾಗೆ. ಸ್ಟ್ಯಾಂಡ್ ಹಾಕಿದ ಸೈಕಲ್‌ನ ಹಿಂದಿನ ಚಕ್ರ ತಿರುಗುವಷ್ಟು ಸರಾಗವಾಗಿ ಚಕ್ರಗಳು ತಿರುಗುತ್ತವೆ, ಅಷ್ಟೆ. ಮೇಲಕ್ಕೆಳೆಯಲು ಇನ್ನೊಂದು ಗಾಡಿಯೆ ಬರಬೇಕು. ಭೂಕಂಪವಾಗಿ ವಾರದ ಬಳಿಕವೂ ಬದುಕುಳಿದವರ ಕತೆಗಳಂತೆ ಹಿಮದಲ್ಲಿ ಎಲ್ಲೊ ಕಳೆದುಹೋಗಿ ಬದುಕಿದವರ, ಸತ್ತವರ ಕತೆಗಳು ಪ್ರತಿ ವರ್ಷವೂ ಇಲ್ಲಿ ಕೇಳಿಬರುತ್ತಿರುತ್ತವೆ.

ಇಂತಹ ಹಿಮ ಸುರಿಯುವ ವಿಸ್ಕಾನ್ಸಿನ್ ರಾಜ್ಯದಲ್ಲಿ ಒಂದು ಚಳಿಗಾಲವನ್ನು ನಾನು ಕಳೆದಿದ್ದೆ. ಆಗ ಅಲ್ಲಿದ್ದ ಅಮೇರಿಕನ್ ಸಹೋದ್ಯೋಗಿಗಳೆಲ್ಲರು ನನಗೆ ಒಂದು ಹಿತವಚನ ಹೇಳುತ್ತಿದ್ದರು: "ಕಾರಿನಲ್ಲಿ ಯಾವಾಗಲು ಒಂದು ಬ್ಲ್ಯಾಂಕೆಟ್ ಇಟ್ಟಿರು, ಲೈಟರ್ ಇಟ್ಟಿರು, ಒಂದಷ್ಟು ಸ್ನ್ಯಾಕ್ಸ್ ಮತ್ತು ಚಾಕೊಲೆಟ್ ಇಟ್ಟಿರು, ಯಾವಾಗ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೊ ಗೊತ್ತಿಲ್ಲ, ಎಲ್ಲಾದರು ಹೀಗೆ ಕಳೆದುಹೋದರೆ ಸಹಾಯ ಬರುವ ತನಕ ಕಾರಿನಲ್ಲೆ ಇರಬೇಕಾಗುತ್ತದೆ, ಮೊದಲೆ ಸಿದ್ಧವಾಗಿರುವುದು ಒಳ್ಳೆಯದು," ಇತ್ಯಾದಿ. ನಾನು ಇದ್ದದ್ದು ಕೇವಲ ಹತ್ತು ಸಾವಿರ ಜನಸಂಖ್ಯೆ ಇದ್ದ ಪಟ್ಟಣದಲ್ಲಿ. ಅಂತಹ ಊರುಗಳಿಂದ ಹತ್ತಾರು ಮೈಲಿ ದೂರ ಹೋದರೆ ಸಾಕು ಗಂಟೆಗಟ್ಟಲೆ ಜನ ಸಂಚಾರ ಕಾಣಿಸುವುದಿಲ್ಲ. ಕಾರು ಓಡಿಸುವಾಗ ಸ್ವಲ್ಪ ಯಾಮಾರಿ ಬದಿಯಲ್ಲಿರುವ ಹಿಮದ ಮೇಲೇನಾದರು ಚಕ್ರ ಹತ್ತಿದರೆ ಕಾರು ಕಂಟ್ರೋಲಿಗೆ ಸಿಗುವುದಿಲ್ಲ. ಕಾರಿನ ಚಕ್ರಗಳು ಸ್ನೋಟೈರ್ ಆಗಿಲ್ಲದಿದ್ದಲ್ಲಿ, ಅವುಗಳಿಗೆ ಸ್ಟೀಲ್ ಚೈನ್ಸ್ ಹಾಕಿಲ್ಲದಿದ್ದಲ್ಲಿ, ಅಥವ ಆ ಕಾರು 4-ವ್ಹೀಲರ್ ಆಗಿಲ್ಲದಿದ್ದಲ್ಲಿ, ಮತ್ತೆ ರಸ್ತೆಯ ಮೇಲಕ್ಕೆ ಬರುವುದು ಕನಸೇ ಸರಿ. ಸೆಲ್ ಫೋನ್ ಇದ್ದು, ಅದು ಕೆಲಸ ಮಾಡುತ್ತಿದ್ದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಆಗ ಮಾಡಬಹುದಾದದ್ದೇನೆಂದರೆ ಆ ರಸ್ತೆಯಲ್ಲಿ ಓಡಾಡುವ ಯಾರ ಕಣ್ಣಿಗಾದರೂ ಬೀಳುವ ಆಸೆಯಿಟ್ಟುಕೊಂಡು, ಹಾಕಿಕೊಂಡಿರುವ ಜಾಕೆಟ್ ಸಾಲದೆ ಇದ್ದರೆ ಚಾದರವನ್ನು ಹೊದ್ದಿಕೊಂಡು, ಕಾರಿನಲ್ಲಿರುವುದನ್ನು ತಿಂದುಕೊಂಡು, ಆದಷ್ಟು ಬೆಚ್ಚಗಿರಲು ಎಲ್ಲಾ ಪ್ರಯತ್ನ ಮಾಡುತ್ತ ಕಾಲ ತಳ್ಳುವುದು. ಅಲ್ಲೇನಾದರು ಮತ್ತೆ ಜೋರಾಗಿ ಹಿಮ ಸುರಿಯಲು ಪ್ರಾರಂಭವಾದರೆ ಐದತ್ತು ಅಡಿಗಿಂತ ಮುಂದಕ್ಕೆ ಏನಿದೆ ಎಂದೇ ಕಾಣಿಸುವುದಿಲ್ಲ. ರಸ್ತೆಯಿಂದ 20-30 ಅಡಿ ದೂರಕ್ಕೆ ಇಳಿದುಬಿಟ್ಟಿದ್ದರೆ ಕೆಲವೊಮ್ಮೆ ಆ ರಸ್ತೆಯಲ್ಲಿ ನಿಧಾನಕ್ಕೆ ಚಲ್ಲಿಸುವ ವಾಹನಗಳ ಕಣ್ಣಿಗೂ ಬೀಳುವುದು ಕಷ್ಟ. ಪರಮ ಅದೃಷ್ಟ ಹೀನತೆ ಎಂದರೆ ಅದೆ.

ಜೀವನವನ್ನು ಹಿಮ ಇಷ್ಟು ಕಠೋರವಾಗಿಸುವ ಭಾಗಗಳಿಂದ ಬಂದವರು ಬೇಕಾದಷ್ಟು ಮುಂಜಾಗರೂಕತೆ ತೆಗೆದುಕೊಂಡಿರುತ್ತಾರೆ. ಜೇಮ್ಸ್‌ನ ಅನುಭವ ಮತ್ತು ಆತನ ಹಿಂದಿನ ಪ್ರವಾಸಾನುಭವಗಳನ್ನು ನೋಡಿದರೆ ಇವೆಲ್ಲ ಗೊತ್ತಿರುವ ಸಾಧ್ಯತೆ ಇದ್ದೇ ಇದೆ. ಆದರೆ ಆತ ತಾನು ಹೋಗುತ್ತಿರುವ ರಸ್ತೆಯಲ್ಲಿ ಕಾರು ಸಿಕ್ಕಿಹಾಕಿಕೊಳ್ಳುವುದನ್ನು ಊಹಿಸಿರದೆ ಇರಬಹುದು. ಯಾಕೆಂದರೆ ಹಿಮ ಋತು ಈಗ ತಾನೆ ಪ್ರಾರಂಭವಾಗಿದೆ. ಆತ ಹೋದ ಭಾಗದಲ್ಲಿ ಇಲ್ಲಿಯತನಕ ಒಂದೆರಡು ಸಾರಿ ಮಾತ್ರ ಹಿಮ ಬಿದ್ದಿರಬಹುದು. ಬಿದ್ದದ್ದು ಕರಗಿ ಹೋಗಿರಬಹುದು. ಹಾಗೆಂದು ಧೈರ್ಯ ಮಾಡಿ ಹೋಗಿದ್ದೆ ಜೇಮ್ಸ್‌ನ ಸಾವಿಗೆ ಮತ್ತು ಆತನ ಕುಟುಂಬ ಅನುಭವಿಸಿದ ಆ 9 ದಿನಗಳ ನರಕಾನುಭವಕ್ಕೆ ಕಾರಣವಾಯಿತೇನೊ. ಎಷ್ಟೊ ಸಲ ನಮ್ಮ ಲೆಕ್ಕಾಚಾರಗಳು ಕೈಕೊಡುತ್ತವೆ. ಆದರೆ ಸಣ್ಣಪುಟ್ಟ ಎಂದು ಭಾವಿಸುವ ಇಂತಹವುಗಳೆ ಜೀವ ತೆಗೆಯುವ ದುಬಾರಿ ಲೆಕ್ಕಾಚಾರಗಳಾಗಿಬಿಡುವುದೊಂದು ದೌರ್ಭ್ಯಾಗ್ಯ.

ಅಮೇರಿಕ ಎಲ್ಲಾ ಕಾಲದಲ್ಲಿಯೂ ಸ್ವರ್ಗವೇನಲ್ಲ. ಇಲ್ಲೂ ಅಪಾಯಗಳಿವೆ. ಈ ದೇಶದಲ್ಲಿಯೂ, ಅರ್ಧ ಮೈಲಿ ದೂರದಲ್ಲಿರುವವನನ್ನು 40 ಕ್ಕೂಹೆಚ್ಚು ಜನ ಹಿಮದ ಮೇಲೆ ಓಡುವ ಸ್ನೋಮೊಬೈಲ್ ವಾಹನ ಬಳಸಿ, ಕುದುರೆಗಳನ್ನು ಉಪಯೋಗಿಸಿ, ಹೆಲಿಕಾಪ್ಟರ್ ಏರಿ, ಉಪಗ್ರಹಗಳ ಸಹಾಯ ಪಡೆದು, ಮೈಶಾಖವನ್ನು ಕಂಡುಹಿಡಿಯುವ ಹಾಟ್‌ಸ್ಪಾಟ್‌ನಂತಹ ಓದಿಬರೆದರೂ ಅರ್ಥವಾಗದಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿಯೂ ಎರಡು ದಿನಗಳ ನಂತರವಷ್ಟೆ ಕಂಡುಹಿಡಿಯಲು ಸಾಧ್ಯವಾಯಿತು. ಇದೇನೂ ಉತ್ಪ್ರೇಕ್ಷೆಯಲ್ಲ! ಪ್ರಕೃತಿಯ ಮುಂದೆ ಮಾನವ ಕುಬ್ಜಾತಿಕುಬ್ಜ, ಅಲ್ಲವೆ?

Dec 2, 2006

60 ಜನರಲ್ಲಿ ಒಬ್ಬನ ಬಳಿ AK-47

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 15, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇಲ್ಲಿನ ನ್ಯಾಷನಲ್ ಪಬ್ಲಿಕ್ ರೇಡಿಯೊ (NPR.org) ಅಮೇರಿಕದ ಪ್ರಗತಿಪರ, ಉದಾರವಾದಿ ಧೋರಣೆಯ, ಪಬ್ಲಿಕ್ ರೇಡಿಯೊ ಸ್ಟೇಷನ್‌ಗಳ ಸದಸ್ಯತ್ವ ಹೊಂದಿರುವ ಸ್ವತಂತ್ರವಾದ, ಲಾಭರಹಿತ ರೇಡಿಯೊ ಸಂಸ್ಥೆ. ಇಂತಹದೊಂದು ರೇಡಿಯೊ ನಮ್ಮ ದೇಶದಲ್ಲಿ ಬರಲು ಯಾವ ಕಾಲವಾಗುತ್ತದೊ ಗೊತ್ತಿಲ್ಲ. ಆದರೆ ಇಂತಹ ರೇಡಿಯೊದ ಅವಶ್ಯಕತೆ ಮಾತ್ರ ಪ್ರತಿ ದೇಶಕ್ಕೂ ಇದೆ. ಪ್ರಸ್ತುತ ವಿಷಯಗಳ ಬಗ್ಗೆ ಆಸಕ್ತಿ ಇರುವ ಇಲ್ಲಿನ ಕೆಲವು ಭಾರತೀಯರೂ ತಾವು ಕಾರು ಚಲಾಸುವಾಗ ಇದನ್ನು ಆಲಿಸಲು ಬಯಸುತ್ತಾರೆ.

ಈ ರೇಡಿಯೋದಲ್ಲಿ ಹೆಚ್ಚು ಕಮ್ಮಿ ಪ್ರತಿ ದಿನವೂ ಒಂದಲ್ಲ ಒಂದು ಪುಸ್ತಕದ ಬಗ್ಗೆ ಕಾಲು ಗಂಟೆ, ಅರ್ಧ ಗಂಟೆಯಾದರೂ ಮೌಲಿಕವಾದ ಕಾರ್ಯಕ್ರಮ ಇದ್ದೇ ಇರುತ್ತದೆ. ಪುಸ್ತಕ ಪರಿಚಯದ ಜೊತೆಗೆ ಲೇಖಕರ ಸಂದರ್ಶನ ಇರುವ ಕಾರ್ಯಕ್ರಮ ಅದು. ಎರಡು ವಾರದ ಹಿಂದೆ ಈ ಸಾರಿಯ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಪಡೆದ ಭಾರತೀಯ ಸಂಜಾತ ಇಂಗ್ಲಿಷ್ ಕಾದಂಬರಿಕಾರ್ತಿ ಕಿರಣ್ ದೇಸಾಯಿಯವರ ಸಂದರ್ಶನವಿತ್ತು. ಅದೇ ಕಾರ್ಯಕ್ರಮದಲ್ಲಿ ಬುಕರ್ ಪ್ರಶಸ್ತಿಗೆ ಸ್ವತಃ ಮೂರು ಸಲ ನಾಮಕರಣಗೊಂಡಿದ್ದ, ಕಿರಣ್‌ರ ತಾಯಿ ಅನಿತಾ ದೇಸಾಯಿಯವರೂ ಪಾಲ್ಗೊಂಡಿದ್ದರು. ಪ್ರತಿಭಾವಂತ ಅಮ್ಮ-ಮಗಳು ಪಾಲ್ಗೊಂಡಿದ್ದ ವಿಶಿಷ್ಠ ಕಾರ್ಯಕ್ರಮ ಅದು. ಈ ರೇಡಿಯೋದಲ್ಲಿ ಬರುವ ಸಂದರ್ಶನಗಳಲ್ಲಿ ಯಾವುದೆ ಚಮಚಾಗಿರಿ, ಹೊಗಳುವಿಕೆ, ಅನವಶ್ಯಕ ತೆಗಳುವಿಕೆ ಇರುವುದಿಲ್ಲ. ಆತ್ಮೀಯವಾದ, ಆದರೆ ನೇರವಾದ, ವಸ್ತುನಿಷ್ಠ ಸಂದರ್ಶನಗಳು ಅವು.

ಇತ್ತೀಚೆಗೆ ತಾನೆ ಅಮೇರಿಕದ ಲ್ಯಾರಿ ಕಹನೆರ್ ಎಂಬ ಪತ್ರಕರ್ತರು ಬರೆದಿರುವ "AK-47: The Weapon that Changed the Face of War" ಎಂಬ ಪುಸ್ತಕ ಪ್ರಕಟವಾಗಿದೆ. ಎನ್.ಪಿ.ಆರ್.ನಲ್ಲಿ ಕಳೆದ ವಾರ ಈ ಲೇಖಕರ ಸಂದರ್ಶನವಿತ್ತು. ಮಿಖಾಯಿಲ್ ಕಲೊಷ್ನಿಕೊವ್ ಎಂಬ ಸೋವಿಯತ್ ರಷ್ಯಾದ ಗನ್ ಡಿಸೈನರ್ 1947 ರಲ್ಲಿ ವಿನ್ಯಾಸ ಮಾಡಿದ ಆಟೊಮ್ಯಾಟ್ ಕಲೊಷ್ನಿಕೊವ್ - 47 ಎಂಬ ಆಯುಧ ಅಲ್ಲಿಂದೀಚೆಗೆ ಪ್ರಪಂಚದಲ್ಲಿನ ದೇಶದೇಶಗಳ ನಡುವಿನ ಯುದ್ದವನ್ನಷ್ಟೆ ಅಲ್ಲ, ಅನೇಕ ಅಂತರ್ಯುದ್ದಗಳ ದಿಕ್ಕುದೆಸೆಗಳನ್ನೆ ಬದಲಾಸಿದ ವಿವರಗಳು ಈ ಪುಸ್ತಕದಲ್ಲಿವೆ.

AK-47 ನ ಪ್ರಭಾವ ಎಷ್ಟಿದೆಯೆಂದರೆ, ಲೆಬನಾನ್‌ನ ಮುಸ್ಲಿಮ್ ಉಗ್ರಗಾಮಿಗಳ ರಾಜಕೀಯ ಸಂಸ್ಥೆಯಾದ ಹಿಜಬುಲ್ಲಾದ ಧ್ವಜದಲ್ಲಿ ಮಾತ್ರವಲ್ಲದೆ ಮೊಝಾಂಬಿಕ್ ದೇಶದ ರಾಷ್ಟ್ರಧ್ವಜದಲ್ಲಿಯೂ ಅದು ಸ್ಥಾನ ಪಡೆದುಕೊಂಡುಬಿಟ್ಟಿದೆ. ರ್ಯಾಪ್ ಸಂಗೀತದ ಹಾಡುಗಳು ಈ ಗನ್ನನ್ನು ವೈಭವೀಕರಿಸಿ ಹಾಡಿದ್ದರೆ, ಅನೇಕ ಭಾಷೆಗಳಲ್ಲಿನ ಗ್ಯಾಂಗ್‌ಸ್ಟರ್, ಆಕ್ಷನ್ ಮೂವಿಗಳಲ್ಲಿ ಕನ್ನಡದಲ್ಲಿ ಕತ್ತಿ-ಮಚ್ಚು-ಲಾಂಗು ಬಳಸುವ ಹಾಗೆ ಈ ಗನ್ನನ್ನು ಬಳಸಲಾಗಿದೆ. ನಮ್ಮದೆ ಕನ್ನಡದಲ್ಲಿ ಶಿವರಾಜ್ ಕುಮಾರ್ ನಾಯಕ ನಟರಾಗಿ AK-47 ಹೆಸರಿನ ಚಲನಚಿತ್ರದಲ್ಲಿ ನಟಿಸಿದ್ದಾರೆ. ಓಂ ಪ್ರಕಾಶ್‌ರ ನಿರ್ದೇಶನದ ಆ ಸಿನೆಮಾದ ಪೋಸ್ಟರ್‌ಗಳಲ್ಲಿ ಅರೆಬರೆ ಕತ್ತಲಿನಲ್ಲಿ ಶಿವಣ್ಣ ಕೇವಲ ಅಂಡರ್‌ವೇರ್‌ನಲ್ಲಿ ಬೆತ್ತಲೆಯಾಗಿ ಕುಳಿತಿರುವ ಚಿತ್ರ ಅನೇಕರಿಗೆ ಈಗಲೂ ಜ್ಞಾಪಕದಲ್ಲಿರಬಹುದು.

ಮಿಖಾಯಿಲ್ ಕಲೊಷ್ನಿಕೊವ್ ಕಮ್ಯುನಿಸ್ಟ್ ರಷ್ಯಾದ ಸೈನಿಕನಾಗಿದ್ದವನು. ಎರಡನೆ ವಿಶ್ವಯುದ್ದದಲ್ಲಿ ಜರ್ಮನ್ ಮತ್ತು ಅಮೇರಿಕದ ಆಟೊಮ್ಯಾಟಿಕ್ ಮೆನ್ ರೈಫಲ್‌ಗಳು ಅನೇಕ ಸಲ ನಿರ್ಣಾಯಕ ಪಾತ್ರ ವಹಿಸಿದ್ದವು. ಅವುಗಳ ಪ್ರಭಾವವನ್ನು ಆ ಮಹಾಯುದ್ದದ ಸಮಯದಲ್ಲಿ ಸ್ವತಃ ನೋಡಿದ್ದ ಕಲೊಷ್ನಿಕೊವ್ ತನ್ನ ತಾಯಿನಾಡಿನ ಸೈನಿಕರಿಗಾಗಿ 1947 ರಲ್ಲಿ ಈ ಆಟೊಮ್ಯಾಟಿಕ್ ಮೆಷಿನ್ ಗನ್ನನ್ನು ವಿನ್ಯಾಸಗೊಳಿಸಿದ. ಆಗ ಆತನ ವಯಸ್ಸು ಕೇವಲ 28 ಮಾತ್ರವಾಗಿತ್ತು. ಈ ಆಯುಧದ ಗುಣಲಕ್ಷಣಗಳಿಂದ ಪ್ರಭಾವಿತವಾದ ರಷ್ಯಾ ಅನೇಕ ವರ್ಷಗಳ ಕಾಲ ಇದರ ಸುದ್ದಿಯನ್ನು ರಹಸ್ಯವಾಗಿ ಇಟ್ಟಿತ್ತು. ಕೇವಲ ತನ್ನ ಸೈನಿಕರಿಗೆ ಮಾತ್ರ ಒದಗಿಸಿ, ತನ್ನ ದೇಶದಲ್ಲಿ ಮಾತ್ರ ಬಳಸುತ್ತಿತ್ತು.

ರಷ್ಯ ಮೊದಲ ಬಾರಿಗೆ ಅದನ್ನು ಹೊರಪ್ರಪಂಚಕ್ಕೆ ಪರಿಚಯಿಸಿದ್ದು 1956 ರಲ್ಲಿ. ಆಗ ಪೂರ್ವ ಯೂರೋಪಿನ ಹಂಗರಿ ದೇಶ ರಷ್ಯಾದ ಅಧೀನದಲ್ಲಿತ್ತು. ತಮ್ಮ ದೇಶದಲ್ಲಿನ ರಷ್ಯಾದ ಉಸ್ತುವಾರಿಕೆಯನ್ನು ವಿರೋಧಿಸಿ ಹಾಗು ನೈಜ ಸಮಾಜವಾದನ್ನು ಆಗ್ರಹಿಸಿ ಹಂಗರಿ ದೇಶದಲ್ಲಿನ ಜನ ಆ ವರ್ಷ ದಂಗೆಯೆದ್ದರು. ವಿದ್ಯಾರ್ಥಿಗಳಿಂದ ಆರಂಭವಾದ ಚಳವಳಿಗೆ ಸರ್ಕಾರಿ ನೌಕರರು, ಪೋಲಿಸರು, ಕೊನೆಗೆ ಸಶಸ್ತ್ರ ಸೈನಿಕರೂ ಸೇರಿಕೊಂಡು ಬಿಟ್ಟರು. ರಷ್ಯಾದ ಸೈನಿಕರಿಗೂ ಹಂಗರಿ ದೇಶದ ಸಶಸ್ತ್ರ ನಾಗರಿಕರಿಗೂ ಬುಡಾಪೆಸ್ಟ್ ನಗರದಲ್ಲಿ ಯುದ್ಧವೆ ಆರಂಭವಾಗಿಬಿಟ್ಟಿತು. ಪೂರ್ವ ಯೋರೋಪ್‌ನಲ್ಲಿ ತನ್ನ ನಿಯಂತ್ರಣ ತಪ್ಪುವುದು ರಷ್ಯಾಕ್ಕೆ ಬೇಕಿರಲಿಲ್ಲ. ಪರಿಸ್ಥಿತಿ ಕೈಮೀರಿದ್ದನ್ನು ಗಮನಿಸಿದ ರಷ್ಯಾದ ಆಗಿನ ಮುಖ್ಯಸ್ಥ ನಿಕಿಟಾ ಖ್ರುಶ್ಚೆವ್ AK-47 ಗಳ ಸಹಿತ ಕೆಂಪುಸೈನ್ಯವನ್ನು ಕಳುಹಿಸಿದರು. ರಕ್ತದ ನದಿಯೆ ಹರಿತು. ಹಂಗರಿ ಜನರ ಆ ಸ್ವಾತಂತ್ರ್ಯ ಹೋರಾಟದಲ್ಲಿ AK-47 ನ ಗುಂಡಿನ ಮಳೆಗೆ ಸಿಲುಕಿ ಹಂಗರಿಯ 50000 ನಾಗರಿಕರು ಸತ್ತರೆ ಕೇವಲ 7 ಸಾವಿರ ರಷ್ಯಾ ಸೈನಿಕರು ಸತ್ತರು. ಗೆದ್ದದ್ದು ಆಯುಧಗಳ ಸಂಖ್ಯಾಬಲವಲ್ಲ; ಗೆದ್ದದ್ದು AK-47 ಬಳಸಿದವರು ಎನ್ನುವುದು ಇಲ್ಲಿ ಸೂಕ್ತ.

ಅಲ್ಲಿಂದೀಚೆಗೆ ಈ ಆಯುಧಕ್ಕೆ ಸರ್ಕಾರಗಳು ಮಾತ್ರವಲ್ಲ ಅನೇಕ ಉಗ್ರಗಾಮಿ ಸಂಘಟನೆಗಳು, ಮಾಫಿಯಾ ಗುಂಪುಗಳು, ನಕ್ಸಲೀಯರು, ಎಲ್ಲರೂ ಗಿರಾಕಿಗಳೆ. ಬಹಳ ಬಲಶಾಲಿಯಾದ, ಅಪಾಯಕಾರಿಯಾದ ಈ ಆಯುಧವನ್ನು ಬಳಸುವುದು ಮಾತ್ರ ಬಹಳ ಸುಲಭವಂತೆ. ಟ್ರೈನಿಂಗ್ ಕೈಪಿಡಿಯ ಅವಶ್ಯಕತೆಲ್ಲ. ಕಾರಣ? ಆಪರೇಟ್ ಮಾಡಬೇಕಾದ ಭಾಗಗಳು ಕೆಲವೆ ಕೆಲವು. ಕುದುರೆ ಎಳೆದು ಹಿಡಿದುಕೊಂಡಿದ್ದಷ್ಟು ಹೊತ್ತೂ ಗುಂಡಿನ ಮಳೆಯೆ! ಮೂವತ್ತು ಗುಂಡಿನ ಒಂದು ಮ್ಯಾಗಝೈನ್ ಮೂರು ಸೆಕೆಂಡಿನಲ್ಲಿ ಖಾಲಿ! ಒಂದು ಕಿಲೊ ಮೀಟರ್ ದೂರದ ತನಕ ಯಾರು ಅಡ್ದ ಬಂದರೂ ಖಲಾಸ್! ಜೊತೆಗೆ, ಈ ಗನ್ನು ರಿಪೇರಿ ಆಗುವುದೆ ಅಪರೂಪವಂತೆ.

ಈಗ ಸುಮಾರು ಹದಿನಾಲ್ಕು ದೇಶಗಳು ವಿವಿಧ ಮಾದರಿಯ AK-47 ಅನ್ನು ಉತ್ಪಾದಿಸುತ್ತಿವೆಯಂತೆ. AK-56 ಚೈನಾ ಉತ್ಪಾದಿಸುವ ಮಾದರಿ. ಅದನ್ನೆ ಅಕ್ರಮವಾಗಿ ಸಿನೆಮಾ ನಟ ಸಂಜಯ್ ದತ್ ಹೊಂದಿದ್ದದ್ದು. ಕೆಲವು ಕಡೆ ಕಾಳಸಂತೆಯಲ್ಲಿ ಸಾವಿರ ಎರಡು ಸಾವಿರಕ್ಕೆ ಈ ಆಯುಧ ಸಿಗುತ್ತದಂತೆ. ಪ್ರಪಂಚದ ಜನಸಂಖ್ಯೆ 600 ಕೋಟಿ. ಈಗ ಉಪಯೋಗದಲ್ಲಿರುವ AK-47 ನ ಸಂಖ್ಯೆ ಸುಮಾರು 10 ಕೋಟಿ ಎಂದು ಅಂದಾಜು. ಅಂದರೆ 60 ಜನಕ್ಕೆ ಒಬ್ಬನ ಬಳಿ ಈ ಮೇಷಿನ್ ಗನ್ ಇದೆ ಎಂದಾಯಿತು! ಅನೇಕ ದೇಶಗಳಲ್ಲಿ ಖಾಸಗಿ ವ್ಯಕ್ತಿಗಳು ಈ ಆಯುಧವನ್ನು ಹೊಂದುವುದು ಅಕ್ರಮ. ಅದನ್ನು ಗಣನೆಗೆ ತೆಗೆದುಕೊಂಡರೆ ಕೆಲವು ದೇಶಗಳಲ್ಲಿ ಮೂರ್ನಾಲ್ಕು ಜನಕ್ಕೆ ಒಬ್ಬನ ಬಳಿ, ಚಿಕ್ಕ ಮಕ್ಕಳ ಕೈಯಲ್ಲೂ ಈ ಆಯುಧ ಇರುವುದರ ಕಾರಣ ಗೊತ್ತಾಗುತ್ತದೆ.

ಈಗಲೂ ಬದುಕಿರುವ ಕಲೊಷ್ನಿಕೊವ್ ಇದರಿಂದ ಏನೂ ದುಡ್ಡು ಮಾಡಲಿಲ್ಲ. ಯಾಕೆಂದರೆ ಅದು ಕಮ್ಯುನಿಸ್ಟ್ ಸರ್ಕಾರದ ಸೊತ್ತಾಗಿತ್ತು. ಆದರೆ ಆ ಗನ್ನು ತಂದುಕೊಟ್ಟ ಹೆಸರಿನಿಂದಾಗಿ ದೇಶವಿದೇಶಗಳ ಆಯುಧ ಮಾರಾಟದ ಮಳಿಗೆಗಳಲ್ಲಿ ಆತನೀಗ ಸೆಲೆಬ್ರಿಟಿ. ಅವನ ಹೆಸರಿನಲ್ಲಿ, ಅವನ ಚಿತ್ರವನ್ನು ಬಾಟಲಿನ ಮೇಲೆ ಹೊಂದಿರುವ ಕಲೊಷ್ನಿಕೊವ್ ವೋಡ್ಕಾ ಈಗ ರಷ್ಯಾದಲ್ಲಿ ಲಭ್ಯವಂತೆ! ತನ್ನ ಹೆಸರಿನ ಗನ್ನನ್ನು ಅನೇಕ ಕ್ರಿಮಿನಲ್‌ಗಳು, ಭಯೋತ್ಪಾದಕರು, ಉಗ್ರಗಾಮಿಗಳು ಅಕ್ರಮ ಕೆಲಸಗಳಿಗೆ ಉಪಯೋಗಿಸುವುದರ ಬಗ್ಗೆ ವಿಷಾದ ವ್ಯಕ್ತಪಡಿಸುವ ಆತ. 'ಗನ್ನುಗಳು ಯಾರ ಕೈಗೆ ಸಿಗುತ್ತವೆ ಎನ್ನುವುದಕ್ಕೆ ವಿನ್ಯಾಸಕಾರ ಜವಾಬ್ದಾರನಲ್ಲ. ಅವುಗಳ ಉತ್ಪಾದನೆ ಮತ್ತು ರಪ್ತನ್ನು ನಿಯಂತ್ರಿಸುವ ಜವಾಬ್ದಾರಿ ಸರ್ಕಾರಗಳದ್ದು,' ಎನ್ನುತ್ತಾನೆ. ಆದರೆ, ಎಲ್ಲಾ ಸರ್ಕಾರಗಳೂ ಎಲ್ಲಾ ಸಮಯದಲ್ಲಿಯೂ ಜವಾಬ್ದಾರಿಂದ, ಮುಂದಾಲೋಚನೆಂದ, ಜನಹಿತದ ಕೆಲಸಗಳನ್ನಷ್ಟೆ ಮಾಡಿದರೆ, ಪ್ರಪಂಚದಲ್ಲಿ ಇಷ್ಟೆಲ್ಲಾ ರಕ್ತಪಾತ, ದೌರ್ಜನ್ಯ, ಹಿಂಸೆ, ಅನ್ಯಾಯ, ಯುದ್ದಗಳು, ನಡೆಯುತ್ತಿದ್ದವೆ?