Aug 12, 2008

ಗಾಂಧಿ ಜಯಂತಿ ಕಥಾಸ್ಪರ್ಧೆ...

[ಈ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಅದು ಇಲ್ಲಿದೆ.]

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಮೂರು ತಿಂಗಳಾಗುತ್ತ ಬಂದಿದೆ. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಮತ್ತೆ ಐದು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ! ಬಹುಶಃ ಇನ್ನು ಏಳೆಂಟು ತಿಂಗಳಿನಲ್ಲಿ ಇಡೀ ದೇಶವೆ ಲೋಕಸಭೆಗೆ ತನ್ನ ಪ್ರತಿನಿಧಿಗಳನ್ನು ಚುನಾಯಿಸಲಿದೆ. ಈ ಚುನಾವಣೆಗಳಲ್ಲಿ ನಿಜವಾಗಲೂ ಆಗುವುದು ಏನು, ಜನರ ಮನಸ್ಥಿತಿ ಹೇಗೆ ವರ್ತಿಸುತ್ತದೆ, ಪ್ರಜಾಪ್ರಭುತ್ವ ಯಾವಯಾವ ಹಂತದಲ್ಲಿ ಹೇಗೆ ಬದಲಾಗುತ್ತದೆ, ಇತ್ಯಾದಿಗಳೆಲ್ಲ ಚುನಾವಣಾ ರಾಜಕೀಯವನ್ನು ಬಲ್ಲವರಿಗೆ ಚೆನ್ನಾಗಿ ಗೊತ್ತಿರುವ ಸಂಗತಿಯೆ. ಆದರೆ ಮಿಕ್ಕ ಬಹುಪಾಲು ಜನರಿಗೆ ಇವು ಅಷ್ಟಾಗಿ ಗೊತ್ತಾಗುವುದಿಲ್ಲ. ಯಾಕೆಂದರೆ ಅವರು ಓದುವ ಪತ್ರಿಕಾ ವರದಿಗಳಿಗೆ ಅಥವ ಟಿವಿ ಕಾರ್ಯಕ್ರಮಗಳಿಗೆ ಅವುಗಳದೇ ಆದ ಮಿತಿಯಿದೆ. ಈ ವರದಿಗಳು ಸರಳೀಕರಣಗೊಂಡು, ಸಾಮಾನ್ಯೀಕರಿಸಿಕೊಂಡು ಇರುತ್ತವೆ. ಆದರೆ ಒಂದು ಸಿನೆಮಾಗೆ ಆಗಲಿ, ಅಥವ ಒಂದು ಕತೆ-ಕಾದಂಬರಿಗೆ ಆಗಲಿ ಆ ಮಿತಿ ಇರುವುದಿಲ್ಲ. ಅವುಗಳ ಶಕ್ತಿ ಅವು ಯಾವುದೇ ಸಿದ್ಧಸೂತ್ರಗಳ ಹಂಗಿಲ್ಲದೆ, ಸಂಪಾದಕನ ಅಥವ ಒಂದು ಪತ್ರಿಕೆಯ ಅಥವ ಒಂದು ಮ್ಯಾನೇಜ್‌ಮೆಂಟಿನ ಧ್ಯೇಯಧೋರಣೆಯ ಹಂಗಿಲ್ಲದೆ ಸ್ವತಂತ್ರವಾಗಿ, ಸೃಜನಾತ್ಮಕವಾಗಿ ವಾಸ್ತವವನ್ನು ಕಟ್ಟಿಕೊಡುವುದರಲ್ಲಿ ಇರುತ್ತದೆ. ಹಾಗಾಗಿಯೆ ನಾನು ಹಾಲಿವುಡ್‌ನ ಅನೇಕ ನಿಜಜೀವಿತದ ಘಟನೆಗಳನ್ನು ಆಧರಿಸಿದ ಸಿನೆಮಾಗಳ ಅಭಿಮಾನಿ.

ಇಂತಹ ನೈಜ ವಾಸ್ತವವನ್ನು, ರಾಜಕೀಯ ಮತ್ತು ಅದು ಜನರನ್ನು ಪ್ರಭಾವಿಸುವ ರೀತಿಯನ್ನು, ರಾಜಕಾರಣದಲ್ಲಿನ ಭ್ರಷ್ಟತೆ, ಮೌಲ್ಯಗಳ ಅವನತಿ, ಮೌಲ್ಯಗಳನ್ನು ಕಳೆದುಕೊಂಡು ರಾಜಿಯಾದ ಜನ ಮತ್ತು ಅವರ ಪರಿಸ್ಥಿತಿಗಳನ್ನು, ರಾಜಿಯಾಗದೆ ಹೋದವರ ಕತೆ, ಚುನಾವಣೆ ಗೆಲ್ಲಲು ನಡೆಸುವ ತಂತ್ರಗಳು, ಈ ತಂತ್ರಗಳಿಂದ ಬದಲಾಗುವ ಜನಸಾಮಾನ್ಯರ ಜೀವನಗಳು, ಪಂಚಾಯಿತಿ ಮಟ್ಟದಲ್ಲೂ ನಡೆಯುವ ಭ್ರಷ್ಟತೆ, ಬದಲಾಗುವ ಅಥವಾ ಅಡ್ಡಡ್ಡ ಸೀಳಿಹೋಗುವ ಹಳ್ಳಿ ನಗರಗಳು, ಜಾತಿ ರಾಜಕಾರಣ, ಕೋಮುವಾದ, ಪ್ರತಿನಿಧಿಗಳು ಆಡುವ ಆಟಗಳು, ಬದಲಾಗುವ ಅವರ ಬಣ್ಣಗಳು, ಅದನ್ನು ಜನ ಒಪ್ಪಿಕೊಳ್ಳುವ ಬಗೆ ಮತ್ತು ಅದರ ಕಾರಣಗಳು, ಇತ್ಯಾದಿಗಳಂತಹ ಹಿನ್ನೆಲೆ ಹೊಂದಿರುವ ಸೃಜನಶೀಲ ಸಣ್ಣಕತೆಗಳ "ಗಾಂಧಿ ಜಯಂತಿ ಕಥಾಸ್ಪರ್ಧೆ" ಯನ್ನು "ವಿಕ್ರಾಂತ ಕರ್ನಾಟಕ" ವಾರಪತ್ರಿಕೆ ಆಯೋಜಿಸಿದೆ. ಬಹುಮಾನಗಳ ಪ್ರಾಯೋಜನ ನನ್ನದು. ವಿವರಗಳು ಈ ಕೆಳಕಂಡ ಚಿತ್ರದಲ್ಲಿದೆ. ನಿಮ್ಮಲ್ಲಿ ಒಬ್ಬ ಕತೆಗಾರ ಇದ್ದರೆ, ದಯವಿಟ್ಟು ಅಂತಹ ಕತೆ ಬರೆಯಿರಿ. ಅಥವ ನಿಮ್ಮ ಬಳಗದಲ್ಲಿ ಯಾರಾದರೂ ಅಂತಹವರು ಇದ್ದರೆ ಅವರಿಗೆ ದಯವಿಟ್ಟು ಈ ವಿವರಗಳನ್ನು ತಲುಪಿಸಿ.

ಮೊದಲ ಬಹುಮಾನ: ರೂ. 6000
ಎರಡನೆ ಬಹುಮಾನ: ರೂ. 4000
ಮೂರನೆಯ ಬಹುಮಾನ: ರೂ. 3000
ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ಕತೆ ತಲುಪಲು ಕೊನೆಯ ದಿನಾಂಕ: ಸೆಪ್ಟೆಂಬರ್ 15, 2008

ವಿಳಾಸ:

ವಿಕ್ರಾಂತ ಕರ್ನಾಟಕ 'ಕಥಾಸ್ಪರ್ಧೆ ವಿಭಾಗ'
ನಂ.30/1, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು- 560 004
ದೂರವಾಣಿ : 080-40129999, ಫ್ಯಾಕ್ಸ್: 080-40129979
ಇ-ಮೇಲ್ ವಿಳಾಸ: editor(at)vikrantakarnataka.com

No comments: