Nov 9, 2009

ನೆರೆ ಮತ್ತು ಪರಿಹಾರದ ರೀತಿ-ನೀತಿಯ ಕುರಿತಾಗಿ ಮಾತುಕತೆ...

ನೆರೆ ಬಂತು. ಅದರ ಹಿಂದೆಯೆ ಲಕ್ಷಾಂತರ ಜನರ ಬಾಳು ಬೀದಿಗೆ ಬಂತು. ನಾಡು ಮರುಗಿತು. ಹಲವರು ಪ್ರಾಮಾಣಿಕವಾಗಿಯೆ ತನು-ಮನ-ಧನದ ಸಹಾಯ ನೀಡಿದರು. ಸರ್ಕಾರವೆ ದೇಣಿಗೆ ಕೇಳಿಕೊಂಡು ಬೀದಿಗೆ ಬಂತು. ಪರಿಹಾರ ಕಾರ್ಯ ನಡೆಸಲು ಮತ್ತು ಆ ಮೂಲಕ ಪ್ರತಿಷ್ಠೆ ಬೆಳೆಸಿಕೊಳ್ಳಲು ಪೈಪೋಟಿ ಆರಂಭವಾಯಿತು. ನೆರೆ ಮತ್ತು ಇನ್ನೊಬ್ಬರ ನೋವು-ಅಸಹಾಯಕತೆ ಸಹ ದುರುಳರ ಆಟದಲ್ಲಿ ದಾಳವಾಯಿತು. ಪಣವಾಯಿತು.

ಇದು ಸಾಮಾಜಿಕ ಮತ್ತು ರಾಜಕೀಯ ನೆಲೆಯಲ್ಲಿ ಕರ್ನಾಟಕಕ್ಕೆ ನಾಚಿಕೆಗೇಡಿನ ಸಂದರ್ಭ. ಸದ್ಯದ ಸ್ಥಿತಿಗೆ ರಾಜಕಾರಣಿಗಳನ್ನು ದೂರುವುದು ಬಹಳ ಸುಲಭ. ಆದರೆ ಅದು ಆತ್ಮವಂಚನೆ ಕೂಡ. ಇಂತಹ ಮೃಗೀಯ ಅರಣ್ಯ ನ್ಯಾಯದ ಪರಿಸ್ಥಿತಿ ನಿರ್ಮಾಣದಲ್ಲಿ ತಮ್ಮ ಪಾಲೂ ಇರುವುದನ್ನು ಜನ ಮರೆಯಬಾರದು.

ಇಂತಹ ಕತ್ತಲ ಪರಿಸ್ಥಿತಿಯಲ್ಲಿ, ಬೆಳಕಿನ ಸಮಯಕ್ಕಾಗಿ ಒಂದು ಕೆಂಡ ಕಾಪಿಟ್ಟುಕೊಳ್ಳುವುದೆ ಪ್ರಯಾಸದ ಕೆಲಸ. ಪ್ಲೇಟೊ ಸ್ಥಾಪಿಸಿದ "ಅಕಾಡೆಮಿ"ಯನ್ನು ದೊರೆ ಜಸ್ಟೀನಿಯನ್ ಕ್ರಿ.ಶ. 529 ರಲ್ಲಿ ಮುಚ್ಚುವುದರೊಂದಿಗೆ ಯೂರೋಪಿನಲ್ಲಿ ಕಗ್ಗತ್ತಲ ಯುಗ ಆರಂಭವಾಯಿತು ಎಂದು ಕೆಲವರು ಆಭಿಪ್ರಾಯ ಪಡುತ್ತಾರೆ. ಆಧುನಿಕ ಮತ್ತು ಪ್ರಬುದ್ಧ ಚಿಂತನೆಗಳು ಕನ್ನಡದಲ್ಲಿ ನೆಲೆಕಂಡುಕೊಳ್ಳುವುದೆ ಕಷ್ಟವಾಗುತ್ತಿದೆ ಇತ್ತೀಚೆಗೆ. ಚಿಂತನೆ ಮತ್ತು ಮೌಲ್ಯಗಳು ಒಂದು ರೀತಿಯಲ್ಲಿ ಹಿಮ್ಮೊಗವಾಗಿ ಚಲಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲವು ಕಠಿಣ ಮತ್ತು ನೇರಪ್ರಶ್ನೆಗಳನ್ನು ಕೇಳಿಕೊಳ್ಳುವಂತಹ ಸಂದರ್ಭವನ್ನು ಬೆಂಗಳೂರಿನ "ಸಂವಹನ" ತಂಡ ನಿರ್ಮಿಸಿಕೊಂಡಿದೆ. ಈ ಗೋಷ್ಠಿ ನೆರೆ ಮತ್ತು ಪರಿಹಾರದ ಸುತ್ತಮುತ್ತ ಇದ್ದರೂ ಅಲ್ಲಿ ಕರ್ನಾಟಕದ ಹಾಲಿ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯೂ ವಿಮರ್ಶೆಗೆ ಒಳಗಾಗುವುದನ್ನು ನಾವು ಸಕಾರಣವಾಗಿಯೆ ಊಹಿಸಬಹುದು.ಈ ಕಾರ್ಯಕ್ರಮವನ್ನು ಪತ್ರಿಕೆಗಳು ಎಷ್ಟು ವಿಸ್ತಾರವಾಗಿ ವರದಿ ಮಾಡುತ್ತವೆಯೋ ಗೊತ್ತಿಲ್ಲ. ಹಾಗಾಗಿ, ಅಲ್ಲಿ ಚರ್ಚೆಗೆ ಒಳಪಡುವ ವಿಚಾರಗಳನ್ನು ಪೂರ್ಣಪ್ರಮಾಣದಲ್ಲಿ ಕೇಳಲಾಗದ ಖೇದ ನನ್ನದು.

ಈ ಕಾರ್ಯಕ್ರಮದ ಬಗ್ಗೆ ಪತ್ರಕರ್ತ "ದೇಸಿಮಾತಿ"ನ ದಿನೇಶ್ ಕುಮಾರ್ ಬರೆದಿರುವ ಲೇಖನ ಇಲ್ಲಿದೆ.

ಗೋಷ್ಠಿಯ ವಿವರಗಳು.

No comments: