Oct 23, 2007

ಬಹಿರಂಗ ಕಾಮಕೇಳಿಯಲ್ಲಿ ಜನ ಮತ್ತು ರಾಜಕಾರಣಿಗಳು - ಛೇ... ಛೀ... ಥೂ... ಅಯ್ಯೋ...

ಕಳೆದ ಹಲವಾರು ವಾರಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕಾರಣ ಕೇವಲ ಅರೆಮಬ್ಬಿನ ಕೋಣೆಯಲ್ಲಷ್ಟೆ ಕಾಣಸಿಗುವ ವಿಕೃತ ರಂಜನೆಯನ್ನು ಜನರಿಗೆ ಬಹಿರಂಗವಾಗಿ ನೀಡುತ್ತಿದೆ. ಆದರೆ ತಾವು ನೋಡುತ್ತಿರುವ ಈ ವ್ಯಭಿಚಾರದ ನಾಟಕ ತಾವೆ ಸೃಷ್ಟಿಸಿದ ಒಂದು ಅಂಕ ಮತ್ತು ಅದರಲ್ಲಿ ತಾವು, ತಮ್ಮ ಮನೆಯವರು, ತಮ್ಮ ಮುಂದಿನ ಪೀಳಿಗೆಯವರೂ ಪಾಲ್ಗೊಂಡಿದ್ದಾರೆ ಎನ್ನುವುದನ್ನು ಆ ಕ್ಷಣಿಕ ಉದ್ರೇಕೋನ್ಮತ್ತ ಸ್ಥಿತಿಯಲ್ಲಿ ಜನ ಮರೆತಿದ್ದಾರೆ.

ಯಾವ ಪಕ್ಷಕ್ಕೂ ಬಹುಮತ ನೀಡದೆ, "ನೀನು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು ಯೋಗ್ಯ" ಎಂಬ ಸಂದೇಶವನ್ನು ಜನ ಯಾವೊಬ್ಬನಿಗೂ ನೀಡದೆ ಇದ್ದಾಗ ಕರ್ನಾಟಕದ ಎಲ್ಲಾ ನಾಚಿಕೆಗೆಟ್ಟ ರಾಜಕಾರಣಿಗಳೆಲ್ಲ ತಾನೆ ಮುಖ್ಯಮಂತ್ರಿಯಾಗಲು ಯೋಗ್ಯ ಎಂದು ಮುಂದೆ ಬಂದುಬಿಟ್ಟರು. ಇಂತಹ ಬಹುಮತವಿಲ್ಲದ ಸ್ಥಿತಿಯಲ್ಲಿ ಮಂತ್ರಿಯೊ ಮುಖ್ಯಮಂತ್ರಿಯೊ ಆಗುವಾಗ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲದೆ ಈ ಭಂಢರು ಎಗ್ಗುಸಿಗ್ಗಿಲ್ಲದೆ ಅದಕ್ಕೆ ಜನಾಭಿಪ್ರಾಯ, ಸಿದ್ಧಾಂತ ಅಂತೆಲ್ಲ ಘೋಷಿಸಿ ಬಿಟ್ಟರು. ಜನ ಸುಮ್ಮನೆ ನೋಡುತ್ತ ನಿಂತರು.

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 1

ತನ್ನ ಕ್ಷೇತ್ರದ ಹೊರಗೆ ಮತ್ತೊಬ್ಬ ಕಾಂಗ್ರೆಸ್ಸಿಗನನ್ನು ಗೆಲ್ಲಿಸಲೂ ಯೋಗ್ಯತೆ ಇಲ್ಲದ ಕಾಂಗ್ರೆಸ್‌ನ ಅನೇಕ ಮುಖಂಡರು 224 ಶಾಸಕರನ್ನು ಪ್ರತಿನಿಧಿಸಬೇಕಾದ ಮುಖ್ಯಮಂತ್ರಿ ಹುದ್ದೆಯನ್ನು ಕೇವಲ ತಮ್ಮ ಸೀನಿಯಾರಿಟಿ ಮತ್ತು ಕಾಲು ನೆಕ್ಕುವ ನಿರ್ಲಜ್ಜ ಯೋಗ್ಯತೆಯ ಆಧಾರದ ಮೇಲೆ ತಮಗೂ ಹಕ್ಕಿದೆ ಎಂದು ಸಾಧಿಸುತ್ತಾರೆ. ಪಕ್ಷಾವಾರು ಲೆಕ್ಕಾಚಾರದಲ್ಲಿ ಜೆಡಿಎಸ್ ಶಾಸನಸಭೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೂ ಅದರ ನಾಯಕನಿಗೆ ತಾನೆ ಮುಖ್ಯಮಂತ್ರಿಯಾಗಬೇಕು. ತನ್ನ ಪಕ್ಷ ಮೊದಲೆರಡು ಸ್ಥಾನದಲ್ಲಿ ಇಲ್ಲದಿದ್ದರೂ ಅವರ ಪ್ರಕಾರ ತನ್ನನ್ನು ಮುಖ್ಯಮಂತ್ರಿ ಮಾಡದ ಜನ ಮತ್ತು ಪಕ್ಷ ವಿಶ್ವಾಸದ್ರೋಹಿಗಳು. ಪಕ್ಷ ಬಿಟ್ಟ ಅವರ ಹಿಂದೆ ಹೋಗಿದ್ದು ಕೇವಲ ಏಳು ಜನ ಮಾತ್ರ. ನಲವತ್ತು ಶಾಸಕರನ್ನು ಬೆನ್ನ ಹಿಂದೆ ಇಟ್ಟುಕೊಂಡವರೆಲ್ಲ ಸಮಗ್ರ ಕರ್ನಾಟಕದ ಪರಮೋಚ್ಚ ಪ್ರತಿನಿಧಿ. ಜಾತ್ಯತೀತ, ಕೋಮುವಾದ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಇವೆಲ್ಲ ತಮಗೆ ಬೇಕೆಂದಾಗ ಬದಲಾಯಿಸಿಕೊಳ್ಳಬಲ್ಲ ಆಟದ ನಿಯಮಗಳು. ಕಾಮಾತುರದಲ್ಲಿ ಮೂತಿಮುಖ ನೋಡದೆ ಸಂಗ ಮಾಡಿಬಿಟ್ಟು, ತೀಟೆ ತೀರಿದ ನಂತರ, "ಅಯ್ಯೋ, ನೀನು 'ಕುಂಕುಮ' ಇಟ್ಟುಕೊಂಡ ಹೊಲಸು ಎಂದು ಗೊತ್ತೇ ಇರಲಿಲ್ಲ," ಎಂದು ಹೇಳುವ ಸಮಯಸಾಧಕರೆಲ್ಲ "ಹಿಂದಿನ ಅರವತ್ತು ವರ್ಷಗಳಲ್ಲಿ ಯಾರೂ ಮಾಡಿರದಷ್ಟು ಕೆಲಸ ಮಾಡಿರುವ ಮಹಾನ್ ಸಾಧಕರು!" ನೈತಿಕತೆಯ ವಿಷಯಕ್ಕೆ ಬಂದರೆ, ಅದು ನಿಜವೆ.

ಅದು 1999 ರ ವಿಧಾನಸಭಾ ಚುನಾವಣೆಯ ಸಮಯ. ತಾನೆ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿಯ ಆ ಕುಂಕುಮಧಾರಿ ರಾಜ್ಯದಲ್ಲೆಲ್ಲ ತಮ್ಮನ್ನು ಬಿಂಬಿಸಿಕೊಂಡು ಬಂದರು. ವಿಶೇಷವಾದ ಸೂಟುಗಳನ್ನು ಸಹ ಹೊಲಿಸಿಕೊಂಡು ಬಿಟ್ಟಿದ್ದಾರೆ ಎಂಬ ಪುಕಾರಿತ್ತು. ನೋಡಿದರೆ ಅವರ ಕ್ಷೇತ್ರದ ಜನರೆ ಆ ಬಾರಿ ಅವರನ್ನು ಶಾಸಕರನ್ನಾಗಿ ಮಾಡಲಿಲ್ಲ. ಅವರ ಪಕ್ಷಕ್ಕೆ ಸಿಕ್ಕಿದ್ದು ಕೇವಲ 44 ಸ್ಥಾನಗಳು. 2004 ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಮೊದಲ ಸ್ಥಾನವೇನೊ ಬಂತು. ಆದರೆ ಅದು ಕೇವಲ ಮೂರನೆ ಒಂದು ಭಾಗದಷ್ಟು ಸ್ಥಾನಗಳು ಮಾತ್ರ. "ಮುಖ್ಯಮಂತ್ರಿ ಸ್ಥಾನ ಬೇಡ, ಕೊನೆಗೆ ಮಂತ್ರಿ ಸ್ಥಾನ ಕೊಟ್ಟರೂ ಪರವಾಗಿಲ್ಲ, ನಿಮ್ಮ ಪಕ್ಷಕ್ಕೆ ಬಂದುಬಿಡುತ್ತೇನೆ," ಎಂದು ಕೇವಲ ಇಪ್ಪತ್ತು ತಿಂಗಳ ಹಿಂದಷ್ಟೆ ಕಾಂಗ್ರೆಸ್ ಮತ್ತು ಜನತಾದಳಗಳೆರಡರ ಕಾಲಿಗೂ ಬಿದ್ದಿದ್ದರು. ಈಗಲೂ ವಂಚನೆ, ವಚನಭ್ರಷ್ಟತೆ ಎಂದೆಲ್ಲ ಹಾರಾಡುತ್ತ ತುಮಕೂರಿನಲ್ಲಿ ಭಾಷಣ ಬಿಗಿಯಲು ಕುಳಿತಿದ್ದರು. "ನಿಮ್ಮನ್ನೆ ಮುಖ್ಯಮಂತ್ರಿ ಮಾಡುತ್ತೇವೆ, ಬನ್ನಿ" ಎಂದದ್ದೆ ಬೆಂಗಳೂರಿನಿಂದ ಕೇವಲ 70 ಕಿ.ಮಿ. ದೂರದಲ್ಲಿರುವ ತುಮಕೂರಿನಿಂದ ಹೆಲಿಕಾಪ್ಟರ್‌ನಲ್ಲಿ ಓಡೋಡಿ ಬಂದರು. ತಮ್ಮ ನಾಲಿಗೆಯಿಂದ ಹೊರಳಿದ ವಾಕ್ಯವನ್ನು ಕೇಳಿರುವ ಲಕ್ಷಾಂತರ ಜನರಿಗೆ "ನನ್ನ ಮಾತನ್ನು ಮಾಧ್ಯಮದವರು ತಿರುಚಿದ್ದಾರೆ, ನಾನು ಹಾಗೆ ಹೇಳಿಯೆ ಇಲ್ಲ," ಎನ್ನುವವರಿಗೆಲ್ಲ ಇನ್ನೊಬ್ಬರ ವಚನಭ್ರಷ್ಟತೆಯ ಬಗ್ಗೆ, ವಿಶ್ವಾಸದ್ರೋಹದ ಬಗ್ಗೆ ಮಾತನಾಡುವಷ್ಟು ನಿರ್ಲಜ್ಜತೆ, ಅಹಂಕಾರ, ನೈತಿಕ ಹಕ್ಕು!

ಕ್ಷುದ್ರಮತಿಗಳ ಮತೀಯ ಸಂಘರ್ಷವನ್ನು ತಮ್ಮ ರಾಜಕಾರಣಕ್ಕೆ ಉಪಯೋಗಿಸುವ ಧರ್ಮಭ್ರಷ್ಟ ಪಕ್ಷದ ಬಗ್ಗೆ ಇನ್ನೊಂದು ಮಾತು. ಜನಾರ್ಧನ ರೆಡ್ಡಿಯನ್ನು ಅಮಾನತು ಮಾಡಿದ್ದೇವೆ ಅನ್ನುತ್ತಾರೆ; ಮೊನ್ನೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಪಕ್ಷದ ಮುಖಂಡತ್ವ ರೆಡ್ಡಿಯದೆ. ತನ್ನ ವ್ಯಭಿಚಾರದಿಂದಾಗಿ ಟೀವಿ ನೋಡುವ ಕನ್ನಡನಾಡಿನ ಚಿಕ್ಕಮಕ್ಕಳಿಗೂ ತಾನು ನಟಿಸಿರುವ ಬ್ಲೂಫಿಲಂ ಚಿತ್ರಗಳನ್ನು ತೋರಿಸಿದ ರೇಣುಕಾಚಾರ್ಯ ಎಂಬ ಕಾಮುಕಾಚಾರ್ಯರನ್ನು ತಮ್ಮ ಧಾರ್ಮಿಕ ಪಕ್ಷದಿಂದ ಅಮಾನತು ಮಾಡಿದ್ದೇವೆ ಅಂದಿದ್ದರು; ಆದರೆ ವಾರದ ಹಿಂದೆ ಅಧಿಕಾರದಾಹಿ ಯಡಿಯೂರಪ್ಪ ನಿಮಿಷಕ್ಕೊಂದು ಮಾತು ಹೇಳುತ್ತ ಟೀವಿಯವರ ಮುಂದೆ ಕಾಣಿಸಿಕೊಳ್ಳುತ್ತಿದ್ದಾಗ ಪ್ರತಿಸಲವೂ ಅವರ ಹಿಂದೆ ಬಾಡಿಗಾರ್ಡ್ ತರಹ ಕಾಣಿಸಿಕೊಳ್ಳುತ್ತಿದ್ದದ್ದು ಅದೇ ರೇಣುಕಾಚಾರ್ಯ. ಐದೂವರೆ ಕೋಟಿ ಜನರಿಗೆ ಹೀಗೆ ಹಿಮಾಲಯ ಗಾತ್ರದ ವಚನವಂಚನೆ ಮಾಡುತ್ತಿರುವ, ಅದನ್ನು ಸಮರ್ಥಿಸಿಕೊಳ್ಳುತಿರುವ ಈ ಜನರಿಗೆ ರಾಮನ ಬಗ್ಗೆ, ಬಸವಣ್ಣನ ಬಗ್ಗೆ, ವಚನಪರಿಪಾಲನೆ ಬಗ್ಗೆ ಮಾತನಾಡುವ ಪ್ರಾಥಮಿಕ ಯೋಗ್ಯತೆ ಇದೆಯೆ?

ಕೊಳಕರಿಗೆಲ್ಲ ಆರತಿ ಎತ್ತುವ ಹೆಂಗಸರು:

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಿಂದೆಂದಿಗಿಂತಲೂ ಹೆಚ್ಚು ಹಣವನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ. ಅದೇ ಮೂಲಕಾರಣವಾಗಿ, ಹಣದ ಹೊರತಾಗಿ ಮಿಕ್ಕ ಯಾವ ಯೋಗ್ಯತೆಯೂ ಇಲ್ಲದ ಸ್ಕೌಂಡ್ರಲ್‌ಗಳು, ರೋಗ್‌ಗಳೆಲ್ಲ ತಮ್ಮ ವೈಯಕ್ತಿಕ ಐಡೆಂಟಿಟಿಗಾಗಿ ಚುನಾವಣೆಗೆ ಇಳಿಯುತ್ತಿದ್ದಾರೆ. ಚುನಾವಣೆ ಬಂತು ಎಂದರೆ ಜನರಿಗೆ ಊರಹಬ್ಬ. ಅನೇಕರ ಮನೆಗಳು ಗುಂಡಿನ ಗಡಂಗುಗಳಾಗಿ ಬದಲಾಗಿ ಬಿಡುತ್ತವೆ. ಗಂಡಸರಿಗೆ ಯಥೇಚ್ಚವಾಗಿ ಗುಂಡು ತುಂಡಿನ ಸರಬರಾಜು. ಓಟಿನ ಭಿಕ್ಷೆ ಬೇಡುತ್ತ ಬರುವವನಿಗಾಗಿ ಕಾಯುತ್ತ ಕುಳಿತ ಗರತಿಯರು ಕೊಳಕರಿಗೆಲ್ಲ ಆರತಿ ಎತ್ತುತ್ತಾರೆ. ತಟ್ಟೆಯಲ್ಲಿ ಅವನು ಹಾಕಿದ ನೋಟು ನೂರು ರೂಪಾಯಿಯದೊ ಐದುನೂರು ರೂಪಾಯಿಯದೊ ಎಂಬ ಚಿಂತೆ ಈ ನಾರಿಯರಿಗೆ.
ತನ್ನ ಗಂಡ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ ನಡುಬೀದಿಯಲ್ಲಿ ಓಟು ಕೇಳುವ ಮತ್ತು ಆರತಿ ತಟ್ಟೆಗಳಿಗೆ ನೋಟು ಹಾಕುವ ತಲೆಹಿಡುಕ ಕೆಲಸ ರಾಜ್ಯದ ಮುಖ್ಯಮಂತ್ರಿಯ ಹೆಂಡತಿಯೆ ಮಾಡುತ್ತಿರುತ್ತಾಳೆ.

ಸುಮಾರು ನಲವತ್ತು ವರ್ಷದ ಹಿಂದೆ ಆಗಿದ್ದು ಇದು. ನನ್ನೂರಿನ ಆ ಹಿರಿಯರು ಸ್ವಾತಂತ್ರ್ಯದ ಸಮಯದಲ್ಲಿಯೆ ಕ್ರಿಯಾಶೀಲರಾಗಿದ್ದವರು. ತಮ್ಮ ಮುವ್ವತ್ತರ ವಯಸ್ಸಿಗೆಲ್ಲ ನಮ್ಮ ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿದ್ದವರು. ಅವರಿಗೆ ಕೊಡಬೇಕಿದ್ದ ಎಂ.ಎಲ್.ಎ. ಸೀಟನ್ನು ಕಾಂಗ್ರೆಸ್ ಪಕ್ಷ ಪಕ್ಕದ ರಾಜ್ಯದ ಮುಖ್ಯಮಂತ್ರಿಯ ಅಳಿಯನಿಗೆ ಕೊಟ್ಟುಬಿಟ್ಟಿತು. ಇವರು ಪಕ್ಷೇತರರಾಗಿ ನಿಂತರು. ಜಿದ್ದಾಜಿದ್ದಿಯ ಚುನಾವಣೆ ಅದು. ಕಾಂಗ್ರೆಸ್‌ನಿಂದ ಏನನ್ನು ನಿಲ್ಲಿಸಿದರೂ ಗೆಲ್ಲುತ್ತಿದ್ದ ಆ ಸಮಯದಲ್ಲಿ ಇವರು ಕಾಂಗ್ರೆಸ್‌ಗೆ ಸೋತಿದ್ದು ಕೇವಲ ಮೂರಂಕಿಯ ಮತಗಳ ಅಂತರದಿಂದ. ಆಗ ಗೆದ್ದ ಅಭ್ಯರ್ಥಿ ನನ್ನ ಕ್ಷೇತ್ರದ ಜನರನ್ನು ಕುರಿತು ಒಂದು ಮಾತು ಹೇಳಿದನಂತೆ: "ಈ ಕ್ಷೇತ್ರದವರು ದುಡ್ಡು ಕೊಟ್ಟರೆ ಹೆಂಡತಿಯರನ್ನು ಬೇಕಾದರೂ ಕೊಟ್ಟುಬಿಡುತ್ತಾರೆ."

ಹತ್ತು ತಿಂಗಳ ಹಿಂದೆ ಕರ್ನಾಟಕದಲ್ಲಿ ಒಂದು ಶಾಸಕ ಸ್ಥಾನಕ್ಕೆ ಚುನಾವಣೆ ಆಯಿತು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಅದು. ಸಿದ್ಧರಾಮಯ್ಯ ಹಲವಾರು ವರ್ಷಗಳಿಂದ ರಾಜಕೀಯದಲ್ಲಿರುವವರು. ಶುರುವಿನಲ್ಲಿ ಇವರದು ಹೋರಾಟದ ರಾಜಕೀಯವೆ. ಮಂತ್ರಿಯಾಗಿ ಹಲವಾರು ವರ್ಷ "ಸೇವೆ"ಯನ್ನೂ ಸಲ್ಲಿಸಿದ್ದಾರೆ. ಒಂದು ವರ್ಷಕ್ಕೂ ಹೆಚ್ಚಿನ ಕಾಲ ಉಪಮುಖ್ಯಮಂತ್ರಿ ಆಗಿದ್ದವರು. ಕರ್ನಾಟಕದ ಶಾಸನಸಭೆಯಲ್ಲಿ ಇವರಿಗಿಂತ ನೀಚರೂ, ಭ್ರಷ್ಟರೂ, ದುಷ್ಟರೂ, ಅವಿವೇಕಿಗಳೂ, ಅಜ್ಞಾನಿಗಳೂ, ಅನರ್ಹರೂ ಶಾಸಕರಾಗಿರುವಾಗ ಇವರೂ ಒಬ್ಬ ಶಾಸಕರಾಗಿ ಅಲ್ಲಿದ್ದರೆ ನಾಡಿಗೆ ಸ್ವಲ್ಪಮಟ್ಟಿಗೆ ಕ್ಷೇಮವೆ. ಆದರೆ, ಕೇವಲ ಜಾತಿಬಲದಿಂದ, ದುಡ್ಡಿನ ಬಲದಿಂದ, ಅಧಿಕಾರಪಕ್ಷ ಬಲದಿಂದ ಇವರೆದುರು ಚುನಾವಣೆಗೆ ನಿಂತ ಶಿವಬಸಪ್ಪನವರಿಗೆ ಸಂವಿಧಾನದತ್ತ ಹಕ್ಕಿನ ಯೋಗ್ಯತೆ ಬಿಟ್ಟರೆ ಶಾಸಕರಾಗಲು ಸಿದ್ಧರಾಮಯ್ಯನವರಿಗಿಂತ ಇನ್ಯಾವ ತರಹದ ಹೆಚ್ಚಿನ ಯೋಗ್ಯತೆ ಇತ್ತು ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಹತ್ತಾರು ಕೋಟಿ ರೂಪಾಯಿಗೂ ಹೆಚ್ಚಿನ ಹಣ ಹರಿಯಿತು ಎನ್ನುವ ಆ ಉಪಚುನಾವಣೆಯಲ್ಲಿ ಸಿದ್ಧರಾಮಯ್ಯ ಕೇವಲ 257 ಮತಗಳ ಅಂತರದಿಂದ ಸೋಲುತ್ತಾರೆ ಎಂದರೆ ಆ ಕ್ಷೇತ್ರದ ಜನ ಇನ್ನೆಂತಹ ಪ್ರಲೋಭನೆಗೆ, ನೈತಿಕ ಭ್ರಷ್ಟತೆಗೆ, ತಲೆಹಿಡುಕತನಕ್ಕೆ ಒಳಗಾಗಿರಬೇಡ? ಇಲ್ಲಿ ಸಿದ್ಧರಾಮಯ್ಯನವರೇನೂ ಕಮ್ಮಿ ಇಲ್ಲ. ಕಾಂಗ್ರೆಸ್‌ನಲ್ಲಿರುವ ಜಾತಿಬಲದ, ಹಣಬಲದ ಲೂಟಿಕೋರ ಭ್ರಷ್ಟರನ್ನೆಲ್ಲ ತಮ್ಮ ಕ್ಷೇತ್ರಕ್ಕೆ ಕರೆತಂದು ತಮ್ಮ ಪರ ಕೋಟ್ಯಾಂತರ ರೂಪಾಯಿ ಚೆಲ್ಲಲು ದಾರಿಮಾಡಿಕೊಡುತ್ತಾರೆ. ಕಾಂಗ್ರೆಸ್ಸಿನ ರಾಜ್ಯಘಟಕದ ಅಧ್ಯಕ್ಷರೆ ಕಾರಿನಲ್ಲಿ ಹತ್ತಾರು ಲಕ್ಷ ಕ್ಯಾಷ್‌ನೊಂದಿಗೆ ಸಿಕ್ಕಿ ಬೀಳುತ್ತಾರೆ. ವಾರೆವ್ಹಾ. ಜನರನ್ನು ಭ್ರಷ್ಟರನ್ನಾಗಿಸಲು ಸಮಬಲದ ಪೈಪೋಟಿ! ಅಷ್ಟೆಲ್ಲ ಕೋಟಿ ಹಣ ಆ ಒಂದೇ ಒಂದು ಕ್ಷೇತ್ರದಲ್ಲಿ ಹರಿಯಿತು ಅಂದರೆ ಆ ಕ್ಷೇತ್ರದ ಜನರಿಗೆ ಈ ತಲೆಹಿಡುಕರು ಎಷ್ಟೊಂದು ಸಲ ತಲೆ ನೀವಿರಬೇಡ? ಬಹುಶಃ ಅಲ್ಲಿ ಸೋತವರು ಕೊನೆಯಲ್ಲಿ ಹೀಗೆಯೂ ಹೇಳಿರಬಹುದಲ್ಲವೆ: "ಈ ಕ್ಷೇತ್ರದ ಜನ ತಮ್ಮ ಮನೆಯವರನ್ನು ಹರಾಜಿಗೆ ಇಟ್ಟು ಯಾರು ಹೆಚ್ಚಿಗೆ ದುಡ್ಡು ಕೊಡುತ್ತಾರೊ ಅವರಿಗೆ ಮಾತ್ರ ಕೊಡುತ್ತಾರೆ. ಮುಂದಿನ ಸಲ ಇನ್ನೂ ಹೆಚ್ಚಿನ ದುಡ್ಡಿನೊಂದಿಗೆ ಬಂದು ನಾವೆ ಮಜಾ ಮಾಡೋಣ!"

ಛೇ. ಇದನ್ನೆಲ್ಲ ನೋಡಿದರೆ ನಮ್ಮ ನಾಡಿನ ಅನೇಕ ಸಜ್ಜನರ ಮನೆಗಳು ಮನೆಯವರೆಲ್ಲ ವ್ಯಭಿಚಾರಕ್ಕೆ ಇಳಿದ ವೇಶ್ಯಾಗೃಹಗಳಾಗಿ ಪರಿವರ್ತನೆಯಾಗಿ ಬಿಟ್ಟಿವೆ ಎಂದರೆ ಅದು ಅಪಚಾರವೆ?

ಜೈಲಿಗೆ ಹೋಗದ ಗಣಿ ರೆಡ್ಡಿ ಅಂಡ್ ಕೊ ಅಥವ ಕುಮಾರಸ್ವಾಮಿ ಅಂಡ್ ಕೊ.:

ನಮ್ಮ ಪತ್ರಿಕೆಯ (ವಿಕ್ರಾಂತ ಕರ್ನಾಟಕ) ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿನ ನನ್ನ ಅಂಕಣ ಲೇಖನದ ಶೀರ್ಷಿಕೆ, "ಗೃಹಖಾತೆ ಎನ್ನುವುದು ಒಂದಿದೆಯೆ?" ಅದರಲ್ಲಿ ಆಗ ತಾನೆ ಹೊರಗೆ ಬಂದಿದ್ದ ಗಣಿ ಹಗರಣವನ್ನು ಕುರಿತು ಹೀಗೆ ಬರೆದಿದ್ದೆ: "(ಗಣಿ ಹಗರಣದ ವಿಡಿಯೊ ಸೀಡಿಗಳಲ್ಲಿರುವುದು) ನಿಜವಾದ ವಿಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಹಾಗಿದ್ದ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?"

ಈ ಹಗರಣ ಬಯಲಿಗೆ ಬಂದು ಈಗ ಒಂದು ವರ್ಷಕ್ಕೂ ಮೇಲಾಗಿದೆ. ಕುಮಾರಸ್ವಾಮಿ/ಚೆನ್ನಿಗಪ್ಪ/ಪ್ರಕಾಶ್ ಗುಂಪಿನ ಯಾರೊಬ್ಬರಿಗೂ ಮತ್ತು ಜನಾರ್ಧನ ರೆಡ್ಡಿಯ ಗುಂಪಿನ ಯಾರೊಬ್ಬರೂ ಜೈಲಿನಲ್ಲಿಲ್ಲ. ಯಾವ ತರಹದ ಕಾನೂನು, ಧರ್ಮ ಮತ್ತು ನೈತಿಕತೆಯ ಪಾಠವನ್ನು ನಾವು ನಮ್ಮ ಮಕ್ಕಳಿಗೆ ಮಾಡುತ್ತಿದ್ದೇವೆ ಎಂಬ ಕಿಂಚಿತ್ ನೋವೂ ಜನಮಾನಸದಲ್ಲಿ ಇದ್ದಂತಿಲ್ಲ. ಇದ್ದರೂ ಅದು ಸಾಂಘಿಕವಾಗಿ ಪ್ರಕಟವಾಗಿಲ್ಲ.

ಮಠಾಧೀಶರಿಗೆ ಈ ಅಧಿಕಾರ ಕೊಟ್ಟವರು ಯಾರು?

ಕರ್ನಾಟಕದ ಯಾವೊಬ್ಬ ಮೇಲ್ಜಾತಿಯ ಮಠಾಧೀಶರಾಗಲಿ ಇಲ್ಲಿಯವರೆಗೂ ಓಟು ಹಾಕಿರುವುದು ಸಂಶಯದ ವಿಚಾರ. ಜನಾಡಳಿತದ ಮೂಲಭೂತ ಪ್ರಕ್ರಿಯೆಯಲ್ಲಿಯೇ ಪಾಲ್ಗೊಳ್ಳದ ಇವರಿಗೆ ಹಸ್ತಾಂತರದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಒಂದೆರಡು ಜಾತಿಗಳ ಜನರಲ್ಲಿ ಜನವಿರೋಧಿ ಜಾತಿಭಾವನೆ ಪೋಷಿಸುವ, ಜಾತಿಮೂಲ ಹಿಡಿದು ಜನವಿಭಜನೆ ಮಾಡುವ ಇವರಿಗೆ ಸಮಗ್ರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೇಳುವ ಹಕ್ಕು ಬಂದಿದ್ದಾದರೂ ಹೇಗೆ? ಯಡಿಯೂರಪ್ಪನವರಿಗಾದ ಸ್ಥಿತಿ ಸಿದ್ಧರಾಮಯ್ಯನವರಿಗೊ, ಖರ್ಗೆಗೊ ಆಗಿದ್ದರೆ ಅವರು ಈ ರೀತಿ ಮಾತನಾಡುತ್ತಿದ್ದರೆ? "ನೀವು ಮಾಡಿದ್ದು ನನಗಿಷ್ಟವಾಗಿಲ್ಲ" ಎಂದು ನೇರವಾಗಿ ಹೇಳಲಾಗದ ಸಿದ್ಧಗಂಗಾ ಸ್ವಾಮಿಗಳು ಯಡಿಯೂರಪ್ಪನವರ ಸ್ಥಾನದಲ್ಲಿ ಕೆ.ಎಸ್. ಈಶ್ವರಪ್ಪ ಇದ್ದಿದ್ದರೆ ಧರ್ಮಯಾತ್ರೆ ಎಂಬ ಭೀಕರ ಜೋಕ್‌ಗೆ ಆಶೀರ್ವಾದ ಮಾಡುತ್ತಿದ್ದರೆ? ದಸರಾ ಉದ್ಘಾಟನೆಯನ್ನು ನಿರಾಕರಿಸುವುದಕ್ಕೆ ಈ ಶತಾಯುಷಿಗಳು ರಾಜಕಾರಣಿಗಳ ತರಹ ಆರೋಗ್ಯದ ಕಾರಣ ನೀಡುತ್ತಿದ್ದರೆ? ಕುಮಾರಸ್ವಾಮಿಯ ಬದಲಿಗೆ ಒಕ್ಕಲಿಗನಲ್ಲದ ಮತ್ತೊಬ್ಬ ಮುಖ್ಯಮಂತ್ರಿ ಆಗಿದ್ದಿದ್ದರೆ ಬಾಲಗಂಗಾಧರ ಸ್ವಾಮಿಗಳು ಇಷ್ಟೆಲ್ಲ ರಾದ್ಧಾಂತಗಳ ನಡುವೆ ದಸರಾ ಉದ್ಘಾಟನೆಗೆ ಒಪ್ಪಿಕೊಳ್ಳುತ್ತಿದ್ದರೆ?

ಕರ್ನಾಟಕದ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ ಮುಕ್ಕಾಲು ಕೋಟಿಯ ಆಸುಪಾಸು ಎನ್ನುತ್ತದೆ ಆಗೀಗ ಪ್ರಕಟಗೊಳ್ಳುವ ಜಾತಿವಾರು ಸಂಖ್ಯೆ. ಆದರೆ ಈ ಮಧ್ಯೆ ಕೆಲವು ಲಿಂಗಾಯತ ಮುಖಂಡರು ಎರಡೂವರೆ ಕೋಟಿ ಲಿಂಗಾಯತರಿಗೆ ಮೋಸ, ಮೂರೂವರೆ ಕೋಟಿ ಲಿಂಗಾಯತರಿಗೆ ಮೋಸ ಎನ್ನುತ್ತಿದ್ದಾರೆ. ಆ ಅಸಂಬದ್ಧ ಸುಳ್ಳುಹೇಳಿಕೆಗಳನ್ನು ಕೆಲವು ಪತ್ರಿಕೆಗಳು ಪ್ರಕಟಿಸಿಯೂ ಬಿಟ್ಟಿವೆ. ಜಾತಿಜಾತಿ ಎನ್ನುವ ಈ ಸಂಕುಚಿತ ಕೋಮುವಾದಿಗಳಿಗೆ ಕನಿಷ್ಟ ತಮ್ಮ ಜಾತಿಯ ಜನ ಈಗ ಎಷ್ಟಿದ್ದಾರೆ ಎನ್ನುವ ಸಾಮಾನ್ಯಜ್ಞಾನವೂ ಇಲ್ಲ. ಇನ್ನು ಇವರಿಗೆ ನಿಜಕ್ಕೂ 800 ವರ್ಷಗಳ ಹಿಂದಿನ ಬಸವಣ್ಣನ ಬಗ್ಗೆ ಗೊತ್ತಿದೆಯೆ? ಹೋಗಲಿ, "ಹುಸಿಯ ನುಡಿಯಲು ಬೇಡ" ಎಂದ ಆತನ ಬಗ್ಗೆ ಕನಿಷ್ಟ ಗೌರವವಾದರೂ ಈ ಬಸವದ್ರೋಹಿಗಳಿಗೆ ಇದೆಯೆ?

ಹೀನ ಸಂದರ್ಭದಲ್ಲಿ ನಾವು:

ಈಗ ಒಂದು ನಿಮಿಷ ಯೋಚನೆ ಮಾಡೋಣ. ಈ ಪರಿಸ್ಥಿತಿಯನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಳ್ಳದೆ ಭಾರತದ ಹಿನ್ನೆಲೆಯಲ್ಲಿಯೇ ನೋಡೋಣ. ಪ್ರಜಾಪ್ರಭುತ್ವದ ಅರ್ಥವೇ ಗೊತ್ತಿಲ್ಲದ, ರಾಷ್ಟ್ರೀಯತೆಯ ಪರಿಕಲ್ಪನೆಯೇ ಇಲ್ಲದ, ಸ್ವರಾಜ್ಯದ ಹೊಣೆಯೇ ಬೇಕಿಲ್ಲದ ಬಹುಸಂಖ್ಯಾತ ಸ್ವಾರ್ಥ ಜಾತಿವಾದಿ ಜನಸಮೂಹ ನಮ್ಮದು ಎಂದರೆ ಅದು ತಪ್ಪಾಗುತ್ತದೆಯೆ? ಇಡೀ ಪ್ರಪಂಚದ ಯಾವ ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ನಿಮಗೆ ಈ ಮಟ್ಟದ ನೀಚ, ಲಜ್ಜೆಗೇಡಿ, ನಿರ್ಲಜ್ಜ, ಸ್ವಾರ್ಥ, ಜವಾಬ್ದಾರಿಹೀನ, ಜಾತಿವಾದಿ, ಕೋಮುವಾದಿ ರಾಜಕಾರಣಿಗಳು ಮತ್ತು ಅವರನ್ನು ಚುನಾಯಿಸುವ ಜನರು ಕಾಣ ಸಿಗುತ್ತಾರೆ? ಹೌದು. ನಮಗಿಂತ ಕೆಟ್ಟ ವ್ಯವಸ್ಥೆಗಳು ಇವೆ. ಅನೇಕ ದೇಶಗಳಲ್ಲಿ ಈಗಲೂ ಸರ್ವಾಧಿಕಾರಗಳಿವೆ; ಮಿಲಿಟರಿ ಆಡಳಿತಗಳಿವೆ; ಕಮ್ಯುನಿಸ್ಟ್ ಆಡಳಿತಗಳಿವೆ; ರಾಜಸತ್ತೆಗಳು ಇವೆ. ಆದರೆ ಪ್ರಶ್ನೆ ಅವುಗಳ ಬಗ್ಗೆ ಅಲ್ಲ. ಬೆದರಿಕೆಯಿಲ್ಲದ, ತಮಗೆ ಬೇಕಾದವರನ್ನು ಮುಕ್ತವಾಗಿ ಚುನಾಯಿಸುವ ಸ್ವಾತಂತ್ರ್ಯ ಇರುವ ನಮ್ಮಂತಹ ಎಷ್ಟು ದೇಶಗಳಲ್ಲಿ ರಾಜಕಾರಣಿಗಳು ನಮ್ಮವರಂತೆ ನಿರ್ಲಜ್ಜರೂ, ಭ್ರಷ್ಟರೂ, ಅನೈತಿಕ ಕ್ರಿಮಿಗಳೂ ಆಗಿರುತ್ತಾರೆ?

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 2

ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ, ನಮ್ಮನ್ನು ನಾವು ಆಳಿಕೊಳ್ಳಲಾಗದ, ವಸಾಹುತುಶಾಹಿಯ ಸಂಕೇತವಾದ ರಾಷ್ಟ್ರಪತಿ ಆಳ್ವಿಕೆಗೆ ಕಳೆದ ಮುವ್ವತ್ತಾರು ವರ್ಷಗಳಲ್ಲಿ ನಾಲ್ಕು ಸಲ (1971/1977/1989/2007) ಕರ್ನಾಟಕ ಒಳಗಾಗಿದೆ. ಈ ಸತ್ಯ ನಾವು ನಿಜಕ್ಕೂ ಸ್ವರಾಜ್ಯಕ್ಕೆ ಅರ್ಹರೆ ಎನ್ನುವ ಪ್ರಶ್ನೆಯನ್ನು ಪದೆಪದೆ ಎತ್ತುತ್ತದೆ. ಇದರಷ್ಟೆ ಗಂಭೀರ ಸ್ಥಿತಿ ಇನ್ನೊಂದಿದೆ. ಅದು, ನಾವು ಆರಿಸಿ ಕಳುಹಿಸುವ ಜನರು ನೀಡುವ ಆಡಳಿತಕ್ಕಿಂತ ಅವರಿಲ್ಲದ ಈ ರಾಷ್ಟ್ರಪತಿ ಆಡಳಿತವೆ ಕಡಿಮೆ ಭ್ರಷ್ಟಾಚಾರದ, ಅಷ್ಟಿಷ್ಟು ಸಜ್ಜನಿಕೆ ಉಳ್ಳಆಡಳಿತ ಎನ್ನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇವೆ. ಹಾಗೆಯೆ, ಮುಂದಿನ ವರ್ಷದ ಚುನಾವಣೆಯಲ್ಲಿ ಜನರಿಗೆ ಉತ್ತಮ ಪರ್ಯಾಯವೂ ಇಲ್ಲ ಎಂದರೆ ಅದು ದುರ್ದೈವ ಮಾತ್ರವಲ್ಲ ವಾಸ್ತವವೂ ಹೌದು. ಛೇ. ಆಧುನಿಕ ಶಿಕ್ಷಣದ ಹಾಗೂ ಮುಂದುವರೆದ ಸಮಾಜ ಮತ್ತು ದೇಶಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ನಾವು ನಿಜಕ್ಕೂ ಒಂದು ಹೀನ ಸಂದರ್ಭದಲ್ಲಿ ಬದುಕುತ್ತಿದ್ದೇವೆ ಮತ್ತು ಅದಕ್ಕೆ ನಾವೆ ಕಾರಣರು ಎಂದರೆ ಅದು ತಪ್ಪಾಗುತ್ತದೆಯೆ?

ದಕ್ಷಿಣ ಆಫ್ರಿಕಾದ ವರ್ಣಭೇದ ಸಮಾಜದ ಹಿನ್ನೆಲೆಯಲ್ಲಿ ರಚಿತವಾದ ಒಂದು ಅಸಾಮಾನ್ಯ ಕಾದಂಬರಿಯ ಹೆಸರು "Cry, The Beloved Country". ಅದರದೆ ಗುಂಗಿನಲ್ಲಿರುವ ನನಗೆ ಈಗ ಅನ್ನಿಸುತ್ತಿರುವುದು, "Cry, The Beloved Karnataka".

Oct 11, 2007

ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?

(ವಿಕ್ರಾಂತ ಕರ್ನಾಟಕ - ಅಕ್ಟೋಬರ್ 12/19, 2007 ರ ಸಂಚಿಕೆಯಲ್ಲಿನ ಬರಹ)

2003 ರ ಆದಿಭಾಗದಲ್ಲಿ 48 ರೂಪಾಯಿಗೆ ಒಂದು ಅಮೇರಿಕನ್ ಡಾಲರ್ ಸಿಗುತ್ತಿತ್ತು. ಆದರೆ ಇವತ್ತು 40 ರೂಪಾಯಿಗೇ ಒಂದು ಡಾಲರ್ ಸಿಗುತ್ತಿದೆ. ಪೆಟ್ರೋಲಿಯಮ್ ತೈಲ, ಯಂತ್ರೋಪಕರಣಗಳು, ರಸಗೊಬ್ಬರ, ರಾಸಾಯನಿಕ, ಮುಂತಾದವುಗಳನ್ನು ವಿದೇಶಗಳಿಂದ ಕೊಳ್ಳುವ ಭಾರತಕ್ಕೆ ಈ ಲೆಕ್ಕಾಚಾರದಲ್ಲಿ ಉಳಿತಾಯವೆ ಆಗುತ್ತಿದೆ. ಇದು ಯಾವ ಲೆಕ್ಕಾಚಾರದಲ್ಲಿ ಉಳಿತಾಯ ಎಂದು ತಿಳಿದುಕೊಳ್ಳಬೇಕಾದರೆ ಬೆಲೆಯಲ್ಲಿ ಏರಿಳಿತಗಳನ್ನು ಕಂಡಿರುವ ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಬಿಟ್ಟು ಏರಿಳಿತಗಳನ್ನು ಕಂಡಿರದ ಒಂದು ವಸ್ತುವಿನ ಮೇಲೆ ರೂಪಾಯಿಯ ಮೌಲ್ಯ ವೃದ್ಧಿಯನ್ನು ಅಳೆಯೋಣ. 2001 ರ ಕೊನೆಯಲ್ಲಿ ಬಿಡುಗಡೆಯಾದ ಮೈಕ್ರೊಸಾಫ್ಟ್ ಕಂಪನಿಯ ವಿಂಡೋಸ್ XP ಆಪರೇಟಿಂಗ್ ಸಿಸ್ಟಮ್‌ನ ಆವತ್ತಿನ ಬೆಲೆ 199 ಡಾಲರ್ ಆಗಿದ್ದರೆ, ಇವತ್ತಿನ ಬೆಲೆಯೂ 199 ಡಾಲರ್ರೆ. ಆದರೆ 2003 ರಲ್ಲಿ ಭಾರತದಲ್ಲಿ ಇದನ್ನು ಕೊಳ್ಳಲು 9500 ರೂಪಾಯಿ ಕೊಡಬೇಕಿದ್ದರೆ, ಇವತ್ತು ಅದನ್ನು ಕೊಳ್ಳಲು ನಾವು ತೆರಬೇಕಾದ ಬೆಲೆ ಕೇವಲ 8000 ರೂಪಾಯಿ ಅಷ್ಟೆ. ಹೀಗೆ, ಏರಿಳಿತ ಕಂಡಿರದ ವಿದೇಶಿ ವಸ್ತುಗಳು ಇವತ್ತು ಅಗ್ಗವಾಗಿವೆ. ಇನ್ನು ಅಗ್ಗವಾದ ವಸ್ತುಗಳು ಮತ್ತೂ ಅಗ್ಗವಾಗಿದ್ದರೆ, ತುಟ್ಟಿಯಾದ ವಸ್ತುಗಳು ಅಮೇರಿಕದವರಿಗೆ ಆಗಿರುವಷ್ಟು ಶೇಕಡಾವಾರು ಪ್ರಮಾಣದಲ್ಲಿ ನಮಗೆ ತುಟ್ಟಿಯಾಗಿಲ್ಲ.


ಲೇಖನದ ವಿಡಿಯೊ ಪ್ರಸ್ತುತಿ


ನಮ್ಮ ಮೌಲ್ಯ ಹೆಚ್ಚುತ್ತಿದೆ ಎನ್ನುವುದು ಯಾರಿಗೆ ಆಗಲಿ ಅಭಿಮಾನದ ವಿಚಾರ. ಅದೂ ದೇಶಕ್ಕೆ ಸಂಬಂಧಿಸಿದ ಇಂತಹ ವಿಚಾರಗಳಲ್ಲಿ ಬಹಳಷ್ಟು ಜನ ಭಾವುಕರಾಗಿ ಯೋಚಿಸುವುದೆ ಹೆಚ್ಚು. ಡಾಲರ್‌ಗೆ ಎದುರಾಗಿ ರೂಪಾಯಿಯ ಬೆಲೆ ಹೆಚ್ಚುತ್ತಿದೆ ಎಂದ ಮಾತ್ರಕ್ಕೆ ರೂಪಾಯಿಯ ಬೆಲೆ ಹೆಚ್ಚಾಯಿತು ಎಂದೇನೂ ಅಲ್ಲ. ಡಾಲರ್ ಅಪಮೌಲ್ಯಕ್ಕೊಳಗಾದರೂ ರೂಪಾಯಿಯ ಬೆಲೆ ಹೆಚ್ಚಾಗುತ್ತದೆ. ಈಗಿನ ಸದ್ಯದ ಸ್ಥಿತಿಯಲ್ಲಿ ಆಗಿರುವುದೂ ಇದೆ. ಯಾಕೆಂದರೆ, ಮತ್ತೊಂದು ಪ್ರಮುಖ ಜಾಗತಿಕ ಕರೆನ್ಸಿಯಾದ ಯೂರೊ ಲೆಕ್ಕದಲ್ಲಿ ರೂಪಾಯಿಯ ಮೌಲ್ಯ ಇಳಿಮುಖವಾಗಿದೆ. 2003 ರಲ್ಲಿ ಐವತ್ತು ರೂಪಾಯಿಗೆ ಒಂದು ಯೂರೊ ಸಿಗುತ್ತಿತ್ತು. ಆದರೆ ಇವತ್ತು ಒಂದು ಯೂರೊಗೆ ಐವತ್ತೈದೂವರೆ ರೂಪಾಯಿ ತೆರಬೇಕು.

ಕಳೆದ ಒಂದೆರಡು ವರ್ಷಗಳಲ್ಲಿ ಡಾಲರ್‌ನ ಎದುರು ರೂಪಾಯಿ ಮೌಲ್ಯ ಹೆಚ್ಚಾಗಿರುವುದರಿಂದ ಆಮದಿನ ವಿಚಾರದಲ್ಲಿ ದೇಶಕ್ಕೆ ಒಳ್ಳೆಯದೆ ಆಗಿದೆ. 2006 ರಲ್ಲಿ ಭಾರತ 112 ಶತಕೋಟಿ ಡಾಲರ್‌ಗಳಷ್ಟು ಉತ್ಪನ್ನಗಳನ್ನು ರಫ್ತು ಮಾಡಿದ್ದರೆ, 188 ಶತಕೋಟಿ ಡಾಲರ್‌ಗಳಷ್ಟು ಬೆಲೆಯ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದನ್ನೆ ಇವತ್ತಿನ ಲೆಕ್ಕಾಚಾರದಲ್ಲಿ ಲೆಕ್ಕ ಹಾಕಿದರೆ, ನಮ್ಮ ಆಮದಿನ ಪ್ರಮಾಣ ಜಾಸ್ತಿ ಇರುವುದರಿಂದ ನಾವು ಕಳೆದ ವರ್ಷ ಕೊಂಡುಕೊಂಡ ಸಾಮಾನುಗಳನ್ನು ಈ ವರ್ಷ ಇನ್ನೂ ಕಮ್ಮಿ ಬೆಲೆಗೆ ಕೊಳ್ಳಬಹುದು. ಹಾಗೆಯೆ ನಮ್ಮ ಆಮದು-ರಪ್ತು ಮಧ್ಯೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ. ಅಂದರೆ ದೇಶದಿಂದ ಹೊರಗೆ ಹೋಗುವ ನಿವ್ವಳ ದುಡ್ಡಿನ ಪ್ರಮಾಣ ಕಮ್ಮಿಯಾಗುತ್ತದೆ.

ಆದರೆ, ಇದು ಮೇಲೆ ಹೇಳಿದಷ್ಟು ಸರಳ ಅಲ್ಲ. ಇಲ್ಲಿ ಸಮಸ್ಯೆಯೂ ಇದೆ. ಕಳೆದ ವರ್ಷ ನಮ್ಮ ಬೆಂಗಳೂರಿನ ಸುತ್ತಮುತ್ತಲ ಗಾರ್ಮೆಂಟ್ ಫ್ಯಾಕ್ಟರಿಯವರಿಗೆ ಐದು ಜೊತೆ ರೆಡಿಮೇಡ್ ಬಟ್ಟೆಗಳಿಗೆ 4600 ರೂಪಾಯಿ ಕೊಡುತ್ತಿದ್ದ ಅಮೇರಿಕದವರು ಈಗ ಕೊಡುವುದು 4000 ರೂಪಾಯಿ ಮಾತ್ರ. ಕಳೆದ ವರ್ಷ ಒಂದು ಸಾಫ್ಟ್‌‌ವೇರ್ ಪ್ರಾಜೆಕ್ಟ್‌ಗೆ 20 ಸಾವಿರ ಡಾಲರ್ ಎಂದಿದ್ದ ಅಮೇರಿಕನ್ ಕಂಪನಿಯೊಂದು ಪ್ರಾಜೆಕ್ಟ್ ಮುಗಿದ ನಂತರ ಯಾವುದೇ ಚೌಕಾಸಿ ಮಾಡದೆ 20 ಸಾವಿರ ಡಾಲರ್‌ಗೆ ಚೆಕ್ ಕೊಟ್ಟಿತು ಎಂದಿಟ್ಟುಕೊಳ್ಳೋಣ. ಆದರೆ ಸುಮಾರು ಒಂಬತ್ತು ಲಕ್ಷ ರೂಪಾಯಿ ಬರುತ್ತದೆ ಎಂದು ಲೆಕ್ಕ ಹಾಕಿದ್ದ ಭಾರತದ ಕಂಪನಿಗೆ ಈಗ ಬರುವುದು ಎಂಟು ಲಕ್ಷ ಮಾತ್ರವೆ. ಮೊದಲೆ ಹೇಳಿದಂತೆ ಇಲ್ಲಿ ಯಾರೂ ಬೆಲೆಯಲ್ಲಿ ಚೌಕಾಸಿ ಮಾಡಿಲ್ಲ. ಆಗಿರುವ ಚಮತ್ಕಾರವೆಲ್ಲ ಕರೆನ್ಸಿಯಲ್ಲಿಯ ಏರಿಳಿತದಲ್ಲಿ ಮಾತ್ರ.

ಇಂತಹ ಸ್ಥಿತಿಯಲ್ಲಿ ಹತ್ತಾರು ಲಕ್ಷ ಜನರಿಗೆ ಉದ್ಯೋಗ ನೀಡಿರುವ ಐಟಿ ಕಂಪನಿಗಳ ಮತ್ತು ಗಾರ್ಮೆಂಟ್ ಕಂಪನಿಗಳ ಸ್ಥಿತಿ ಏನಾಗುತ್ತದೆ ಎನ್ನುವುದೆ ಗಂಭೀರವಾದ ವಿಷಯ. ಲಾಭವೆ ಮುಖ್ಯವಾಗಿರುವ, ವರ್ಷಕ್ಕೆ ಶೇ.30 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವ ಐಟಿ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಸ್ಟಾಕ್‌ಮಾರ್ಕೆಟ್‌ನಲ್ಲಿ ಟ್ರೇಡ್ ಮಾಡುತ್ತಿರುವ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಸತ್ಯಂ, ಮುಂತಾದ ಕಂಪನಿಗಳು ಯಾವಾಗಲೂ ಗಣನೀಯ ಪ್ರಮಾಣದ ಲಾಭ ತೋರಿಸುತ್ತಿರಲೇ ಬೇಕು. ಇಲ್ಲದಿದ್ದರೆ ಅವುಗಳ ಷೇರಿನ ಬೆಲೆ ಇಳಿಯುತ್ತ ಹೋಗುತ್ತದೆ. ಹಾಗೆ ಆಗದೆ ಇರುವಂತೆ ಅವರು ನೋಡಿಕೊಳ್ಳಬೇಕಾದರೆ ತಮ್ಮ ಖರ್ಚುಗಳನ್ನು ಕಮ್ಮಿ ಮಾಡಿಕೊಳ್ಳಬೇಕು. ಪ್ರಾಜೆಕ್ಟ್ ಇಲ್ಲದಿದ್ದರೆ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳಲೇ ಬಾರದು. ಈಗಾಗಲೆ ಪ್ರಾಜೆಕ್ಟ್ ಇಲ್ಲದೆ ಕುಳಿತಿರುವ ತನ್ನ ನೌಕರರನ್ನು ಕೆಲಸದಿಂದ ತೆಗೆಯಬೇಕು. ತಾವು ಒಪ್ಪಿಕೊಂಡ ಕೆಲಸವನ್ನು ತಮಗಿಂತ ಕಮ್ಮಿಗೆ ಬೇರೆ ಯಾರಾದರೂ ಮಾಡಿದರೆ (ಹೊರದೇಶವಾದರೂ ಸರಿ) ಅವರಿಗೆ ಔಟ್‌ಸೋರ್ಸ್ ಮಾಡಬೇಕು. ತಮ್ಮಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ಥಿತಿ ಉತ್ತಮವಾಗುವ ತನಕ ಸಂಬಳ ಜಾಸ್ತಿ ಮಾಡಬಾರದು. ಅವರಿಗೆ ಕೊಡುತ್ತಿರುವ ಕೆಲವು ಸೌಲಭ್ಯಗಳನ್ನು ತೆಗೆಯಬೇಕು.

ನಮ್ಮ ಐಟಿ ಕಂಪನಿಗಳು ಇವೆಲ್ಲವನ್ನೂ ಮಾಡಿದರೆ ಮಾತ್ರ ಅವರ ಸ್ಟಾಕ್ ಬೆಲೆ ಹಾಗೆ ಇರುತ್ತದೆ. ಐಟಿ ಕಂಪನಿಗಳು ಅದನ್ನು ಮಾಡಿಯೂ ತೀರುತ್ತವೆ. ಐದಾರು ವರ್ಷದ ಹಿಂದೆ ಇಂತಹುದೆ ಸ್ಥಿತಿ ಬಂದಿದ್ದಾಗ ಭಾರತದ ಪ್ರಸಿದ್ಧ ಐಟಿ ಕಂಪನಿಯೊಂದು ಕಕ್ಕಸು ಕೋಣೆಯಲ್ಲಿ ಸುರುಳಿ ಒದಗಿಸುವುದನ್ನೆ ನಿಲ್ಲಿಸಿಬಿಟ್ಟಿತು. ಕಛೇರಿಯಲ್ಲಿ ಇರುವುದೆಲ್ಲ ಪಾಶ್ಚಾತ್ಯ ಮಾದರಿಯ ಕಮೋಡ್‌ಗಳು; ಒರೆಸಿಕೊಳ್ಳಲು ಕಾಗದವೆ ಇಲ್ಲ! ಆಗ ಆ ಕಂಪನಿಯೇನೂ ನಷ್ಟದಲ್ಲಿರಲಿಲ್ಲ. ಆಗಲೂ ನೂರಾರು ಕೋಟಿ ಲಾಭ ಮಾಡುತ್ತಿತ್ತು. ಅಷ್ಟಿದ್ದರೂ, ಕಾಗದಸುರುಳಿ ಕೊಡದೆ ಇರುವುದರಿಂದ ವರ್ಷಕ್ಕೆ ಎಷ್ಟೊಂದು ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ ಎಂಬ ಲೆಕ್ಕ ಬೇರೆ ಕೊಟ್ಟಿತು ಅದು ತನ್ನ ನೌಕರರಿಗೆ. ಸ್ಟಾಕ್ ಮಾರ್ಕೆಟ್ ಹೋದ ಕಾರಣದಿಂದಾಗಿ ನೂರಾರು ಕೋಟಿ ರೂಪಾಯಿಗಳ ನಗದು ಹಣ ಹೊಂದಿರುವ ಐಟಿ ಕಾರ್ಖಾನೆಗಳದೆ ಈ ಗತಿಯಾದರೆ ಇನ್ನು ಬಹುಪಾಲು ಕೌಟುಂಬಿಕ ಯಜಮಾನಿಕೆಗಳಲ್ಲಿಯೆ ನಡೆಯುವ ಗಾರ್ಮೆಂಟ್ ಕಾರ್ಖಾನೆಗಳ ಗತಿ ಏನಾಗಬಹುದು?

ರೂಪಾಯಿಯ ಮೌಲ್ಯ ಹೆಚ್ಚಾಗಿರುವುದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಐಟಿ ಕಂಪನಿಗಳು ತಮ್ಮ ವಿದೇಶಿ ಗ್ರಾಹಕರೊಡನೆ ಚೌಕಾಸಿಗೆ ಇಳಿಯಬಹುದು. ಅದರಲ್ಲೂ ಬಹುಮುಖ್ಯ ಪ್ರಾಜೆಕ್ಟ್‌ಗಳನ್ನು ಭಾರತಕ್ಕೆ ಔಟ್‌ಸೋರ್ಸ್ ಮಾಡಿರುವ ವಿದೇಶಿ ಕಂಪನಿಗಳು ಈ ಚೌಕಾಸಿಗೆ ಒಪ್ಪಿಕೊಳ್ಳಲೂ ಬಹುದು. ಯಾಕೆಂದರೆ ಅವರಿಗೆ ರಾತ್ರೊರಾತ್ರಿ ಇನ್ನೊಂದು ದೇಶಕ್ಕೆ ಈ ಪ್ರಾಜೆಕ್ಟ್‌ಗಳನ್ನು ಸಾಗಿಸಲು ಆಗುವುದಿಲ್ಲ. ಆದರೆ ಇದೇ ಮಾತನ್ನು ಗಾರ್ಮೆಂಟ್ ಕಾರ್ಖಾನೆಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ನಮಗಿಂತ ಕಮ್ಮಿ ಬೆಲೆಗೆ ಬಟ್ಟೆಬರೆ ಹೊಲಿದು ಕೊಡಲು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ ಮುಂತಾದ ನಮ್ಮ ಅಕ್ಕಪಕ್ಕದ ದೇಶಗಳೆ ಇವೆ. ಇನ್ನು ಈ ಗಾರ್ಮೆಂಟ್ ಕಂಪನಿಗಳ ಲಾಭವೂ ಸಾಫ್ಟ್‌ವೇರ್ ಕಂಪನಿಗಳಿಗೆ ಇದ್ದಂತೆ ಶೇ. 30-40 ರ ರೇಂಜಿನಲ್ಲಿ ಇರುವುದು ಸಂಶಯ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಅವರಿಗೆ ಲಾಭದ ಪ್ರಮಾಣ ಕಡಿಮೆ ಆಗಿ, ಕೆಲವರಿಗೆ ಸರಿದೂಗಿಸಿಕೊಂಡು ಹೋಗುವುದೆ ಕಷ್ಟವಾಗಿ ಬಿಟ್ಟಿರಬಹುದು. ಈಗಾಗಲೆ ಕೆಲವೊಂದು ಕಡೆ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ನೌಕರರನ್ನು ತೆಗೆಯುತ್ತಿದ್ದಾರೆ ಎಂಬ ಸುದ್ದಿಗಳು ಬರಲು ಆರಂಭವಾಗಿವೆ. ಭಾರತೀಯ ಟೆಕ್ಸ್‌ಟೈಲ್ ಉದ್ಯಮದ ಒಕ್ಕೂಟ ಸಂಸ್ಥೆ ಏರಿರುವ ರೂಪಾಯಿಯಿಂದಾಗಿ ಹೊಸ ಉದ್ಯೋಗ ಸೃಷ್ಟಿಯಾಗುವುದಿರಲಿ, ಇರುವವರಲ್ಲಿಯೆ 2.72 ಲಕ್ಷ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುತ್ತಿದೆ. ಕೆಳಮಟ್ಟದಲ್ಲಿ, ಬಡವರಲ್ಲಿ, ಹೆಚ್ಚಿನ ವಿದ್ಯಾಭ್ಯಾಸ ಇಲ್ಲದ ಜನವರ್ಗದಲ್ಲಿ ಸದ್ದಿಲ್ಲದ ಕ್ರಾಂತಿ ಉಂಟು ಮಾಡುತ್ತಿದ್ದ ಗಾರ್ಮೆಂಟ್ ಉದ್ಯಮಕ್ಕೆ ಬರಲಿರುವ ದಿನಗಳು ಅಷ್ಟೇನೂ ಚೆನ್ನಾಗಿಲ್ಲ. ರೂಪಾಯಿಯ ಮೌಲ್ಯ ಮತ್ತೆ ಕಮ್ಮಿಯಾಗಿ ನಮ್ಮ ರಫ್ತು ಉತ್ಪನ್ನಗಳು ಅಗ್ಗವಾದರೂ ಈ ಉದ್ಯಮಕ್ಕೆ ಹೊರಗಿನ ದೇಶಗಳಲ್ಲಿ ಪೈಪೋಟಿ ಇದ್ದೇ ಇದೆ.

ಹೀಗೆ, ರೂಪಾಯಿಯ ಬೆಲೆ ಹೆಚ್ಚಾಗಿದ್ದರಿಂದ ನಮ್ಮ ದೇಶದ ಉತ್ಪನ್ನಗಳು ಬೇರೆ ದೇಶದವರಿಗೆ ತುಟ್ಟಿಯಾಗುತ್ತವೆ, ಇಲ್ಲವೆ ಇನ್ನು ಮೇಲೆ ನಮ್ಮವರು ಬಹಳ ಕಮ್ಮಿ ಲಾಭಾಂಶ ಇಟ್ಟುಕೊಳ್ಳಬೇಕು. ಇಂತಹ ಸ್ಥಿತಿಯಲ್ಲಿ ಹೊಸ ಉದ್ಯೋಗಗಳು ಬೇಗ ಸೃಷ್ಟಿಯಾಗುವುದಿಲ್ಲ. ಇಂತಹ ಸ್ಥಿತಿ ಬರಬಾರದು ಎಂದೇ ಚೀನಾ ದೇಶ ತನ್ನ ಯೆನ್ ಮೌಲ್ಯ ಜಾಸ್ತಿ ಇದ್ದರೂ ಅದು ಕೃತಕವಾಗಿ ಕಮ್ಮಿಯಿರುವಂತೆ ನೋಡಿಕೊಂಡಿದ್ದರು. ಹಾಗಾಗಿಯೆ ಚೀನಾದ ಉತ್ಪನ್ನಗಳು ಹೊರಗಿನವರಿಗೆ ಯಾವಾಗಲೂ ಅಗ್ಗ.

ಈಗ ನಮ್ಮವರು ಅದೇ ದುಡ್ಡಿಗೆ ಹೆಚ್ಚು ಸಾಮಾನುಗಳನ್ನು ಹೊರದೇಶಗಳಿಂದ ಕೊಂಡುಕೊಳ್ಳಬಹುದು. ಇದು ಜೀವನಾವಶ್ಯಕ ವಸ್ತುಗಳ ವಿಚಾರಕ್ಕೆ ಆದರೆ ದೇಶಕ್ಕೆ ನಷ್ಟವೇನಿಲ್ಲ. ಆದರೆ ಲಕ್ಷುರಿ ಸಾಮಾನುಗಳನ್ನು ಆಮದು ಮಾಡಿಕೊಳ್ಳುತ್ತ ಹೋದರೆ, ವಿದೇಶಗಳಲ್ಲಿ ಮೋಜು ಉಡಾಯಿಸುವುದು ಅಗ್ಗ ಎಂದುಕೊಂಡು ಓಡುತ್ತಿದ್ದರೆ ಅದರಿಂದ ದೇಶಕ್ಕೆ ಅಪಾಯವೆ ಹೆಚ್ಚು. ಜಾಗತೀಕರಣ, ಬಡವರು-ಬಲ್ಲಿದರು, ಎಮ್.ಎನ್.ಸಿಗಳ ಶೋಷಣೆ ಎಂದೆಲ್ಲ ಬಾಯಿಬಡಿದುಕೊಳ್ಳುವವರೆ ಬೆಂಜ್ ಕಾರು ಕೊಳ್ಳುವ ದೇಶ ನಮ್ಮದು. ಹೀಗಿರುವಾಗ ನಮ್ಮಲ್ಲಿ ದುಡ್ಡಿರುವವರೆಲ್ಲ ಇನ್ನು ಮುಂದೆ ದೇಶದಲ್ಲಿ ತಯಾರಾಗುವ ಮಾರುತಿ, ಟಾಟಾ, ಬಿಪಿಎಲ್ ಬಿಟ್ಟು ಅದೇ ಬೆಲೆಗೆ ಸಿಗುವ ಬಿಎಮ್‌ಡಬ್ಲ್ಯು, ಮರ್ಸಿಡಿಸ್, ಸೋನಿ ಕೊಳ್ಳುತ್ತಾರೆ. ಇಂತಹ ಚಾಳಿ ಹೆಚ್ಚಾದರೆ ರೂಪಾಯಿಯ ಮೌಲ್ಯ ಹೆಚ್ಚಾಗಿದ್ದರಿಂದ ದೇಶಕ್ಕೆ ಯಾವ ರೀತಿಯಿಂದಲೂ ಒಳ್ಳೆಯದಾದಂತಾಗುವುದಿಲ್ಲ. ಇದರಿಂದ ನಮ್ಮ ದೇಶದ ಒಳಗಿನ ಜನರಿಗೆ ಉದ್ಯೋಗ ನಷ್ಟವಾಗುತ್ತ ಹೋಗುತ್ತದೆ.

ಆದರೆ, ಈ ಸ್ಥಿತಿ ಮತ್ತೊಂದು ತಿರುವಿಗೆ ಕಾರಣವಾದರೆ ಅದರಿಂದ ಒಳ್ಳೆಯದೂ ಆಗಬಹುದು. ವಿದೇಶದ ಜನರಿಗೆ ಬಟ್ಟೆ ಹೊಲಿಯುವುದರ ಬದಲು ನಮ್ಮವರು ದೇಶದೊಳಗಿನ ಜನರಿಗೇ ಬಟ್ಟೆ ಹೊಲಿದುಕೊಡಬಹುದು. ಉತ್ತಮ ಗುಣಮಟ್ಟದ ಬಟ್ಟೆ ಆಗ ಕಮ್ಮಿ ಬೆಲೆಗೆ ಸಿಗಬಹುದು. ಅಮೇರಿಕದ ಕಂಪನಿಗಳತ್ತ ಮುಖ ಮಾಡಿರುವ ಸಾಫ್ಟ್‌ವೇರ್ ಕಂಪನಿಗಳು ನಮ್ಮ ದೇಶಕ್ಕೆ ಅಗತ್ಯವಾದ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಲು ಮುಂದಾಗಬಹುದು. ಹೊರಗಿನಿಂದ ಬರುವ/ಹೋಗುವ ಹಣದ ಪ್ರಮಾಣ ಕಮ್ಮಿಯಾಗಿ ಬಂಡವಾಳ ದೇಶದ ಒಳಗೇ ಹರಿಯುವ ಸಾಧ್ಯತೆ ಹೆಚ್ಚಾಗಬಹುದು. ಒಟ್ಟಿನಲ್ಲಿ ರಫ್ತು-ಆಮದು ಕೇಂದ್ರಿತ ಆರ್ಥ ವ್ಯವಸ್ಥೆಯ ಪರದೇಶಿ ಅವಲಂಬನೆ ಕಮ್ಮಿಯಾಗಬಹುದು. ಆದರೆ ಅದನ್ನು ಕಾಲವೆ ಹೇಳಬೇಕು.

ಒಟ್ಟಿನಲ್ಲಿ ಇದೊಂದು ರೀತಿಯ ವಿಚಿತ್ರ ಸ್ಥಿತಿ. ಕೆಲವರು ರೂಪಾಯಿಯ ಮೌಲ್ಯ ಹೆಚ್ಚಾಗಿದ್ದರಿಂದ ಒಳ್ಳೆಯದಾಯಿತು ಎನ್ನುತ್ತಿದ್ದರೆ ಮತ್ತೆ ಕೆಲವರು ಅದರಿಂದ ಕಷ್ಟದ ದಿನಗಳು ಬರಲಿವೆ ಎನ್ನುತ್ತಿದ್ದಾರೆ. ಹೆಚ್ಚಾಗಬೇಕು ಎಂದು ಬಯಸಿದರೆ ಕೆಲವೊಂದು ಉದ್ಯಮಗಳು ನಷ್ಟಕ್ಕೆ ಸಿಲುಕುತ್ತವೆ. ಅಲ್ಲಿ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಕಮ್ಮಿಯಾಗಲಿ ಎಂದು ಬಯಸಿದರೆ ಪೆಟ್ರೋಲ್‌ನಂತಹ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ವಿದೇಶಗಳ ಮೇಲಿನ ಅವಲಂಬನೆ ಜಾಸ್ತಿಯಾಗುತ್ತದೆ. ರೂಪಾಯಿ ಬೆಲೆ ಜಾಸ್ತಿಯಾಗಿದ್ದಕ್ಕೆ ಸಂತೋಷ ಪಡುತ್ತಿರುವವರ ಸಂತಸ ಸಕಾರಣ ಎನ್ನುವಂತಿಲ್ಲ. ಕಮ್ಮಿಯಾಗಲಿ ಎಂದು ಬಯಸುವವರನ್ನು ಸಂಶಯದ ದೃಷ್ಟಿಯಿಂದ ನೋಡದೆ ಇರಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಆರ್ಥಿಕ ವಿಚಾರಗಳು ಹೆಚ್ಚೆಚ್ಚು ಚರ್ಚೆಯಾಗುವುದಂತೂ ನಿಜ. ಆ ಸಮಯದಲ್ಲಿ ಏನೇ ಆಗಲಿ ಅದರಿಂದ ದೇಶಕ್ಕೆ ಒಳ್ಳೆಯದಾಗಲಿ ಎಂದು ಬಯಸುವುದಷ್ಟೆ ನಾವು ಜನಸಾಮಾನ್ಯರು ಮಾಡಬಹುದಾದದ್ದು.

ಅಥವ, ಇನ್ನೇನಾದರೂ ಮಾಡುವುದು ಇದೆಯೆ?

Oct 4, 2007

ಚೀನಾದಲ್ಲಿ ಜೀವಿಸಲು ಕಾರಣಗಳೆ ಇಲ್ಲವಂತೆ ?!

(ವಿಕ್ರಾಂತ ಕರ್ನಾಟಕ - ಅಕ್ಟೋಬರ್ 5, 2007 ರ ಸಂಚಿಕೆಯಲ್ಲಿನ ಬರಹ)

"ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ." ಹೀಗೆಂದು ಸಾರಾಸಗಟಾಗಿ ಬರೆದ ವಾಕ್ಯವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಮೊದಲ ಪುಟದಲ್ಲಿ ನೋಡಿ ನಿಜಕ್ಕೂ ಗಾಬರಿಯಾಯಿತು. 132 ಕೋಟಿ ಜನರ, ಜನಸಂಖ್ಯೆಯ ದೃಷ್ಟಿಯಿಂದ ಪ್ರಪಂಚದಲ್ಲಿಯೆ ಅತಿ ದೊಡ್ಡ ದೇಶವಾದ ಚೀನಾದ ಅಷ್ಟೂ ಜನರನ್ನು ಕಾರಣಗಳಿಲ್ಲದ ಬದುಕುತ್ತಿರುವ ಜನ ಎಂದು ಭಾವಿಸುವುದು ಕೇವಲ ಅಮಾನವೀಯ ಮಾತ್ರವಲ್ಲ ಜೀವವಿರೋಧಿಯೂ ಸಹ, ಅಲ್ಲವೆ?

ರವೀಂದ್ರ ಭಟ್ಟ ಎನ್ನುವವರು ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು. ಆಗಸ್ಟ್‌ನಲ್ಲಿ ಕರ್ನಾಟಕದ ಶಾಸಕರ ಎರಡು ತಂಡಗಳು ಚೀನಾ ಪ್ರವಾಸ ಮಾಡಿದ್ದು ನಿಮಗೆ ನೆನಪಿರಬಹುದು. ಆ ಪ್ರವಾಸವನ್ನು ಕವರ್ ಮಾಡಲು ಪ್ರಜಾವಾಣಿ ವತಿಯಿಂದ ನಿಯುಕ್ತರಾದವರು ಭಟ್ಟರು. ಶಾಸಕರ ಪ್ರವಾಸದ ಬಗ್ಗೆ, ಅಲ್ಲಿ ಶಾಸಕರು ಮೊಬೈಲ್ ಸಿಮ್‌ಕಾರ್ಡ್ ದೊರಕಿಸಿಕೊಂಡ ಬಗ್ಗೆ, ಕನ್ನಡದ ಕುಟುಂಬವೊಂದು ಶಾಸಕರಿಗೆ ಭಾಷೆಯ ಮತ್ತು ಇಡ್ಲಿಸಂಬಾರ್‌ನಂತಹ ಭಾರತೀಯ ಊಟತಿಂಡಿಯ ವಿಚಾರಕ್ಕೆ ಸಹಾಯ ಮಾಡುತ್ತಿರುವ ಬಗ್ಗೆ ಇವರು ಚೀನಾದಿಂದಲೆ ಪ್ರಜಾವಾಣಿಗೆ ಬರೆಯುತ್ತಿದ್ದ ನೇರಪ್ರಸಾರದ ವರದಿಗಳನ್ನು ಮುಂಚೆಯೇ ಓದಿದ್ದೆ. ಅವರು ಬರೆದದ್ದೆಲ್ಲವೂ ಬಹಳ ಮಟ್ಟಿಗೆ Human Interest Stories. ಆದರೆ ರಾಜ್ಯದ ಜನತೆಯ ಖರ್ಚಿನಲ್ಲಿ ಪ್ರವಾಸ ಹೋಗಿದ್ದ ಶಾಸಕರ ಮೂಲ ಉದ್ದೇಶವಾಗಿದ್ದ ಚೀನಾದ ಅಭಿವೃದ್ಧಿಯನ್ನು ಕುರಿತಾಗಿ ಶಾಸಕರು ಕಲಿತದ್ದನ್ನಾಗಲಿ, ಕಲಿಯಲು ಪ್ರಯತ್ನಿಸಿದ್ದಾನ್ನಾಗಲಿ ಭಟ್ಟರು ಬರೆದದ್ದು ಕಂಡುಬರಲಿಲ್ಲ. ಇದಕ್ಕೆ ಕಾರಣ ಅವರು ಬರೆಯದೆ ಇರುವುದಾಗಿರಬಹುದು ಅಥವ ಆ ಲೇಖನ ನನಗೆ ಕಾಣಸಿಗದೆ ಹೋಗಿದ್ದೂ ಆಗಿರಬಹುದು.

ಆದರೆ, ಪ್ರವಾಸ ಮುಗಿದ ನಂತರ ಭಟ್ಟರು ತಮ್ಮ ಇಡೀ ಪ್ರವಾಸದ ಅನುಭವವನ್ನು, ಗ್ರಹಿಕೆಯನ್ನು ಸಾಪ್ತಾಹಿಕ ಪುರವಣಿಯ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಎದ್ದು ಕಾಣುವುದು, "ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ," "ಚೀನಾದಲ್ಲಿ ವೈವಿಧ್ಯತೆಯೆ ಇಲ್ಲ, ಅದರಿಂದಾಗಿ ಅಲ್ಲಿ ಜೀವನಾಸಕ್ತಿಯೇ ಇಲ್ಲ," "ಭಾರತದಲ್ಲಿಯ ಭಾಷಾ ವೈವಿಧ್ಯದಿಂದಾಗಿ ಹಾಗೂ ಜಾತಿವ್ಯವಸ್ಥೆಯಿಂದಾಗಿ ಇಲ್ಲಿ ಜೀವನೋತ್ಸಾಹ ಉಕ್ಕಿ ಹರಿಯುತ್ತಿದೆ," "ಅಲ್ಲಿ ದೇವಸ್ಥಾನ ಎಂಬುದಿಲ್ಲ, ಇರುವುದೆಲ್ಲ ಸ್ಮಾರಕಗಳೆ ಹಾಗೂ ಅಲ್ಲಿ ಇಂಗ್ಲಿಷ್ ಕಲಿತವರು ಕ್ರೈಸ್ತ ಮತವನ್ನೂ ಸ್ವೀಕರಿಸುತ್ತಿದ್ದಾರೆ," "ಅಲ್ಲಿ ಕುಟುಂಬ ವ್ಯವಸ್ಥೆಯೆ ಹದಗೆಟ್ಟು ಹೋಗಿದೆ," ಎನ್ನುವಂತಹ ಭಾರತ ಮತ್ತು ಚೀನಾದ ಸಾಮಾಜಿಕ ಸ್ಥಿತಿಗತಿಗಳನ್ನು ತುಲನೆ ಮಾಡುವ ಖಡಾಖಂಡಿತ ಮಾತುಗಳು.

ಲೇಖನದ ವಿಡಿಯೊ ಪ್ರಸ್ತುತಿ

ಕಳೆದ ಆರು ವರ್ಷಗಳಿಂದ ಚೀನಾ ಮೂಲದ ನಾಲ್ಕಾರು ಜನರೊಡನೆ ಸ್ವತಃ ಒಡನಾಡಿದ ಅನುಭವವುಳ್ಳ, ಕೆಲಸದ ಪ್ರಯುಕ್ತ ಒಂದಿಬ್ಬರೊಡನೆ ಪ್ರತಿದಿನವೂ ವ್ಯವಹರಿಸಬೇಕಾದ ಅಗತ್ಯತೆ ಇರುವ ನನಗೆ ಭಟ್ಟರ ಲೇಖನ ಪಕ್ಕಾ Racist ಮಾತ್ರವಲ್ಲ, ದುರುದ್ದೇಶಪೂರಿತವಾದ, ಅವರಿಗಷ್ಟೆ ಗೊತ್ತಿರಬಹುದಾದ ದ್ವೇಷಮಯ ಕಾರಣಗಳಿಂದ ಪ್ರೇರಿತವಾದದ್ದು ಎನ್ನಿಸಿತು.

ಇಷ್ಟೇ ಅಪಾಯಕಾರಿಯಾದದ್ದು ಜಾತಿವಾದಕ್ಕೆ ಭಟ್ಟರು ಕೊಡುತ್ತಿದ್ದ ನೇರ ಸಮರ್ಥನೆ. 'ಭಾರತದಲ್ಲಿಯ ಜೀವನೋತ್ಸಾಹಕ್ಕೆ ಇಲ್ಲಿರುವ ಜಾತಿವೈವಿಧ್ಯತೆಯೂ ಒಂದು ಪ್ರಮುಖ ಕಾರಣ' ಎನ್ನುವ ನೂತನ-ಸಂಶೋಧನೆಯನ್ನು ಎರಡು ಕಡೆ ಒತ್ತಿ ಹೇಳುತ್ತಾರೆ. ಇವರ ಪ್ರಕಾರ ಜಾತಿವೈವಿಧ್ಯ ಹಾಗೂ ಭಾಷಾವೈವಿಧ್ಯಗಳಿಲ್ಲದ ಸಮಾಜ ಮತ್ತು ದೇಶಗಳಲ್ಲಿ ಜೀವನೋತ್ಸಾಹ ಇಲ್ಲ ಮತ್ತು ಅಲ್ಲಿನ ಜನಕ್ಕೆ ಜೀವಿಸಲು ಕಾರಣಗಳೂ ಇಲ್ಲ.

ಕನ್ನಡದ ಪತ್ರಕರ್ತರಾಗಿರುವ ರವೀಂದ್ರ ಭಟ್ಟರಿಗೆ ಚೀನಾದಲ್ಲಿಯ ಬಹುಸಂಖ್ಯಾತ ಜನ ಮಾತನಾಡುವ ಮ್ಯಾಂಡರಿನ್ ಭಾಷೆಯಾಗಲಿ, ಅಥವ ಕ್ಯಾಂಟೊನಿಸ್ ಭಾಷೆಯಾಗಲಿ ಗೊತ್ತಿರುವ ಸಾಧ್ಯತೆ ಕಡಿಮೆ ಎಂದು ಭಾವಿಸಿಕೊಳ್ಳುತ್ತ ಹೇಳಬಹುದಾದರೆ, ಅವರು ಕನಿಷ್ಠ ಒಂದೆರಡು ಚೀಣೀ ಕುಟುಂಬಗಳೊಡನೆ ಒಡನಾಡಿರುವ ಸಾಧ್ಯತೆಗಳೂ ಇಲ್ಲ ಎಂದುಕೊಳ್ಳಬಹುದು. ಅಷ್ಟಕ್ಕೂ ಅವರು ಹೋಗಿದ್ದದ್ದು ನಮ್ಮ ಸರ್ಕಾರದ ಖರ್ಚಿನಲ್ಲಿ ಮತ್ತು ಬಹುಶಃ ಅಲ್ಲಿನ ಸರ್ಕಾರದ ಅತಿಥಿಯಾಗಿ. ಈ ತರಹದ "ಅಧಿಕೃತ ಪ್ರವಾಸ" ದಲ್ಲಿ ಆಗಬಹುದಾದ ಅನುಭವಗಳ ಆಧಾರದ ಮೇಲೆಯೆ 132 ಕೋಟಿ ಜನಸಂಖ್ಯೆಯ ಚೀನಾದಲ್ಲಿ "ಕುಟುಂಬ ವ್ಯವಸ್ಥೆಯೆ ಹದಗೆಟ್ಟು ಹೋಗಿದೆ" ಎನ್ನುವುದು ಅಹಂಕಾರದ ಮಾತಷ್ಟೆ ಅಲ್ಲ, ಅದು ಓದುಗರಿಗೂ ಮಾಡುವ ಅಪಚಾರ ಮತ್ತು ಮೋಸ.

ಈ ಲೇಖನವನ್ನು ಓದಿದ ಮಾರನೆಯ ದಿನವೆ ನಾಲ್ಕು ವರ್ಷಗಳ ಹಿಂದೆಯಷ್ಟೆ ಚೀನಾದಿಂದ ಅಮೇರಿಕಕ್ಕೆ ಬಂದಿರುವ ನನ್ನ ಸಹೋದ್ಯೋಗಿಯನ್ನು ಕಾಫಿಗೆ ಕರೆದುಕೊಂಡು ಹೋಗಿ, "ಚೀನಾದಲ್ಲಿಯ ಕುಟುಂಬ ವ್ಯವಸ್ಥೆ ಮತ್ತು ನಿಮ್ಮ ಕೆಲವು ಕೌಟುಂಬಿಕ ವಿಚಾರಗಳನ್ನು ಹೇಳಿ," ಎಂದೆ. ನಾನು ಕಳೆದ ಸಾರಿ ಒಬ್ಬನೆ ಭಾರತಕ್ಕೆ ಬಂದಿದ್ದಾಗ ನಮ್ಮ ಮನೆಗೂ ಬಂದು ನನ್ನ ಹೆಂಡತಿಯನ್ನೂ, ಪುಟ್ಟ ಮಗುವನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದ ಆಕೆಗೆ ನನ್ನ ಬಗ್ಗೆ ಬಹಳ ವಿಶ್ವಾಸವಿದೆ. ಹಾಗಾಗಿ ಆಕೆ ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ಮುಕ್ತವಾಗಿ ಹೇಳಿದಳು. ತನಗೆ ಹೇಳಲು ಗೊತ್ತಾಗದೆ ಇದ್ದದ್ದನ್ನು ತನ್ನ ಇನ್ನೊಬ್ಬ ಚೀಣೀ ಸ್ನೇಹಿತೆಯನ್ನು ಕರೆದು ಆಕೆಯಿಂದ ಹೇಳಿಸಿದಳು. ಆಕೆ ಎರಡನೆಯ ತಲೆಮಾರಿನ ಚೀಣೀ ಕ್ರೈಸ್ತಳು. ಮದುವೆಯಾಗಿರುವುದು ಬೌದ್ಧ ಮತದ ಮೂಲದವನನ್ನು. ನಮ್ಮಲ್ಲಿಯ ಅಂತರ್ಜಾತೀಯ ವಿವಾಹಕ್ಕೆ ಎದುರಾಗುವ ಅಡ್ಡಿಗಳ ಹಿನ್ನೆಲೆಯಲ್ಲಿ 'ಚೀನಾದಲ್ಲಿ ಕ್ರೈಸ್ತರು ಬೌದ್ಧ ಮತದವರನ್ನು ಮದುವೆಯಾಗಲು ಸಮಾಜ ಅಡ್ಡಿ ಮಾಡುವುದಿಲ್ಲವೆ' ಎಂದು ಕೇಳಿದೆ. ಅದಕ್ಕೆ ಆಕೆ ನನ್ನತ್ತ ಕನಿಕರದಿಂದ ನೋಡಿದಳು! ಅವರಿಬ್ಬರೊಡನೆ ಮಾತನಾಡಿದ ಮೇಲೆ ನನಗೆ ಭಟ್ಟರ ಬಗ್ಗೆ ಮತ್ತು ಅವರ ದುರುದ್ದೇಶಪೂರಿತ, ಪೂರ್ವಗ್ರಹಪೀಡಿತ, ಅರೆಬರೆ ಸುಳ್ಳುಗಳ ಲೇಖನದ ಬಗ್ಗೆ, ಮತ್ತು ನಮಗೆ ಓದಲು ಸಿಗುವ ಲೇಖನಗಳ ಖಚಿತತೆಯ ದುರದೃಷ್ಟತೆಯ ಬಗ್ಗೆ ಕನಿಕರ ಹೆಚ್ಚುತ್ತ ಹೋಯಿತು.

ಭಟ್ಟರ ಹಾಗೆ ಪ್ರವಾಸ ಹೋಗಿಬಂದವರು ಬರೆದದ್ದನ್ನು ಸಾಮಾನ್ಯವಾಗಿ ಬಹಳಷ್ಟು ಜನ ಮುಗ್ಧ ಓದುಗರು ಪ್ರಶ್ನಿಸದೆ ಒಪ್ಪಿಕೊಂಡು ಬಿಡುತ್ತಾರೆ. ಇವೆಲ್ಲವೂ ಇನ್ನೊಂದು ದೇಶದ ಬಗ್ಗೆ ಲೇಖಕರೊಬ್ಬರು ನೀಡುತ್ತಿರುವ ಸಾಂಸ್ಕೃತಿಕ ಮತ್ತು ಚಾರಿತ್ರಿಕ ದಾಖಲೆಗಳು. ಓದುಗರು ಇಂತಹ ಲೇಖನಗಳ ಆಧಾರದ ಮೇಲೆ ಒಂದು ಇಡೀ ಸಮುದಾಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಾರೆ. ಹಾಗಾಗಿಯೆ ಇಂತಹ ಲೇಖನಗಳನ್ನು ಬರೆಯುವಾಗ ಬರಹಗಾರರು ಬಹಳ ಎಚ್ಚರಿಕೆಯಿಂದ ಇರಬೇಕು. ಇದೇ ಲೇಖನ ಇಂಗ್ಲಿಷಿನಲ್ಲಿಯೊ, ಅಂತರ್ಜಾಲದಲ್ಲಿಯೊ ಬಂದಿದ್ದರೆ ಅದರ ಸರಿತಪ್ಪುಗಳ ಬಗ್ಗೆ ಯಾರಾದರೂ ಪ್ರತಿಕ್ರಿಯಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂತಹ ಸಂದರ್ಭಗಳಲ್ಲಿ ಕೊನೆಗೆ ನಿಲ್ಲುವುದು ಅದರ ಸರಿತಪ್ಪುಗಳ ಚರ್ಚೆಯ ಅಂತಿಮ ಮಾತು. ಆದರೆ ಕನ್ನಡದ ಪತ್ರಿಕೆಗಳ ಮಟ್ಟಿಗೆ ಹೇಳಬಹುದಾದರೆ ಇಂತಹ ವಿಷಯಕ್ಕೆ ನಾವು ದುರದೃಷ್ಟವಂತರು. ಯಾರೂ ಪ್ರತಿಕ್ರಿಯಿಸದೆ ಹೋಗುವ ಸಂಭವ ಹೆಚ್ಚಿರುವಾಗ ಲೇಖಕನ ಅರೆಬರೆ ಮಾತುಗಳೆ ಅಂತಿಮ ಸತ್ಯವಾಗಿ ಬಿಡುತ್ತದೆ.

ಇದನ್ನೆಲ್ಲ ನಮ್ಮವರು ಗಮನಿಸುವುದು ಯಾವಾಗ?

ಪ್ರಜಾವಾಣಿಯಲ್ಲಿಯ ರವೀಂದ್ರ ಭಟ್ಟರ ಲೇಖನ:
http://www.prajavani.net/Content/Sep162007/weekly2007091445995.asp


ಪ್ರಜಾವಾಣಿಗೆ ನಾನು ಬರೆದ ಪ್ರತಿಕ್ರಿಯೆ:
http://www.prajavani.net/Content/Sep232007/weekly2007092246923.asp