Jan 26, 2009

ವಿಚಾರ ಮಂಟಪ: ಬರೆದ ನಾಲ್ವರಿಗೂ ಬಹುಮಾನಗಳು!

ವರ್ಷದ ಮೊದಲ ದಿನ ಬಂದ ಆಲೋಚನೆಯನ್ನು ಅಂದೇ ವಿಚಾರ ಮಂಟಪದಲ್ಲಿ ಮತ್ತು ನನ್ನ ಬ್ಲಾಗುಗಳಲ್ಲಿ ಪ್ರಕಟಿಸಿ, ಎರಡು ವಿಷಯಗಳಿಗೆ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಿದ್ದೆ. ಇದಕ್ಕೆ ಸಾಕಷ್ಟು ಪ್ರಚಾರ ಸಿಗಲಿ ಎಂದು ಒಂದೆರಡು ಗ್ರೂಪ್‌ಗಳಿಗೆ, ಸಮುದಾಯ ಬ್ಲಾಗ್‌ಗಳಿಗೆ ಮತ್ತು ಪೋರ್ಟಲ್‌ಗಳಿಗೆ ಕಳುಹಿಸಿದ್ದೆ. ದಟ್ಸ್‌ಕನ್ನಡ.ಕಾಮ್ ಮತ್ತು ಅವಧಿಯವರು ಆಹ್ವಾನವನ್ನು ಪೂರ್ಣವಾಗಿ ಪ್ರಕಟಿಸಿದ್ದರು ಮತ್ತು ಹಲವಾರು ದಿನಗಳ ಕಾಲ ತಮ್ಮ ಮುಖಪುಟದಲ್ಲಿ ಬಿಟ್ಟಿದ್ದರು. ಕೆಂಡಸಂಪಿಗೆಯವರು ದಿನದ ತಾಣದಲ್ಲಿ ಆ ಕುರಿತು ಬರೆದಿದ್ದರು. ಇವರೆಲ್ಲರಿಗೂ ನಾನು ಕೃತಜ್ಞ.

ಇದರ ಜೊತೆಗೇ, ಈ ಪ್ರಕಟಣೆಯನ್ನು ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡ-ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಿಗೂ ಕಳುಹಿಸಿದ್ದೆ. ಕೆಲವು ಪತ್ರಿಕೆಗಳಿಗೆ ಅವುಗಳ ಅಧಿಕೃತ ಇಮೇಯ್ಲ್ ಐಡಿಗಳಿಗೂ, ಮತ್ತೆ ಕೆಲವು ಪತ್ರಿಕೆಗಳಿಗೆ ಅವುಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರ ಲಭ್ಯವಿದ್ದ ಇಮೇಯ್ಲ್‌ಗಳಿಗೂ ಕಳುಹಿಸಿದ್ದೆ. ಉದಯವಾಣಿಯ ಮಿತ್ರರು ಮಾತ್ರ ’ಒಂದೆರಡು ದಿನದಲ್ಲಿ ಪ್ರಕಟಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದರು. ಮಿಕ್ಕವರು ಪ್ರಕಟಿಸರಬಹುದು, ಇಲ್ಲದೆಯೂ ಇರಬಹುದು.

ಇಷ್ಟೆಲ್ಲದರಿಂದ ಕನಿಷ್ಠ ಎರಡು-ಮೂರು ಸಾವಿರ ಓದುಗರಿಗೆ ವಿಷಯ ತಲುಪಿರುವುದರಲ್ಲಿ ಅನುಮಾನವಿಲ್ಲ. ಅದು ಇನ್ನೂ ಹಲವು ಪಟ್ಟು ಇರಬಹುದು. ಆದರೆ ಕಮ್ಮಿಯಂತೂ ಇರಲು ಸಾಧ್ಯವಿಲ್ಲ.

ಇನ್ನು, ನನ್ನ ತಲೆಮಾರಿನ ಸವಾಲುಗಳನ್ನು ಮತ್ತು ನಮ್ಮ ಸಂದರ್ಭದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ, ಈ ನನ್ನ ತಲೆಮಾರಿನೊಡನೆ ಒಂದು ಅನುಸಂಧಾನ ಏರ್ಪಡಲಿ ಅನ್ನುವುದು ನಾನು ಈ ಲೇಖನಗಳನ್ನು ಆಹ್ವಾನಿಸಲು ಇದ್ದ ಮೂಲ ಆಲೋಚನೆ. ಜೊತೆಗೆ ಈಗಿನ ಯುವಕ-ಯುವತಿಯರು ಒಂದು ಸಾಮಾಜಿಕ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಿದಾಗ ಅವರ ಪ್ರಬುದ್ಧತೆ-ತರ್ಕ-ಸಮತೋಲನ ಹೇಗಿರುತ್ತದೆ ಎಂದು ತಿಳಿದುಕೊಳ್ಳಲೂ ಸಹಾಯವಾಗುತ್ತದೆ ಎಂದುಕೊಂಡೆ. ಹಾಗೆಯೆ, ಒಂದು ವಿಷಯದ ಬಗ್ಗೆ ಈಗಿನ ನಮ್ಮ ಚಿಂತನೆಗಳನ್ನು ದಾಖಲು ಮಾಡಲು, ಚರ್ಚಿಸಲು, ಸಹಾಯವಾಗುತ್ತದೆ ಎಂದುಕೊಂಡೆ. ಆ ನಿಟ್ಟಿನಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಗೆ ಬಹುಮಾನದ ಮೊತ್ತವೂ ಗೌರವಯುತವಾಗಿತ್ತು. ಕನ್ನಡ ಪ್ರಭದ ಸಂಕ್ರಾಂತಿ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನದ ಮೊತ್ತವೆ ಒಂದು ಸಾವಿರ ರೂಪಾಯಿ. ಆ ಸ್ಪರ್ಧೆಯ ಸಮಾಧಾನಕರ ಬಹುಮಾನಕ್ಕೆ ಅರ್ಹರಾದವರಲ್ಲಿ ಕೆಲವು ಒಳ್ಳೆಯ ಹೆಸರುಗಳೆ ಇದ್ದವು. ಹಾಗಿದ್ದಾಗ, ಸೃಜನಶೀಲತೆ ಮತ್ತು ಕುಸುರಿಯನ್ನು ಬೇಡದ, ಆದರೆ ಸ್ವಲ್ಪ ಅಧ್ಯಯನ, ಒಂದಷ್ಟು ಪ್ರಬುದ್ಧ ಚಿಂತನೆ ಮತ್ತು ಸ್ವಲ್ಪ ಶಿಸ್ತನ್ನು ಬೇಡುವ ಇಲ್ಲಿಯ ಲೇಖನಗಳಿಗೆ ಒಂದು ಸಾವಿರ ರೂಪಾಯಿಯ ಪ್ರೋತ್ಸಾಹಕರ ಬಹುಮಾನ ಮತು 2500 ರೂಪಾಯಿಗಳ ಮೊದಲ ಬಹುಮಾನ ನನಗಂತೂ ಕಮ್ಮಿ ಅನ್ನಿಸುತ್ತಿಲ್ಲ. ಸ್ವತಃ ದಿನವೂ ಕೆಲಸಕ್ಕೆ ಹೋಗಿ, ತಿಂಗಳ ಸಂಬಳ ನೆಚ್ಚಿಯೇ ಬದುಕುತ್ತಿರುವ ನನಗೆ ಅದು ಗಣನೀಯ, ಗೌರವನೀಯ ಮೊತ್ತವಾಗಿಯೆ ಕಾಣಿಸುತ್ತದೆ. ಜೊತೆಗೆ ಕೊಟ್ಟಿದ್ದ ಸಮಯವೂ (25 ದಿನಗಳು) ಸಾಕಷ್ಟು ದೀರ್ಘವಾಗಿಯೆ ಇತ್ತು.

ಇದೆಲ್ಲದರ ಜೊತೆಗೆ ಐಟಿ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ, ಪುಟಗಟ್ಟಲೆ ಬ್ಲಾಗ್ ಬರೆಯುವ, ದಿನಕ್ಕೆ ಹತ್ತಾರು ಕಾಮೆಂಟ್‌ಗಳನ್ನು ಹಲವಾರು ಕಡೆ ಬಿಡುವ ಯುವಕ-ಯುವತಿಯರನ್ನೂ ಗಮನಿಸುತ್ತಾ ಬಂದಿದ್ದೆ. ಹಾಗಾಗಿ. ಇವರು ತಮ್ಮದೇ ವೃತ್ತಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಯೋಚಿಸಿರುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಎನ್ನುವ ಊಹೆ ನನ್ನದಾಗಿತ್ತು. ಜೊತೆಗೆ ಇದು ಆ ಫೀಲ್ಡ್‌ನಲ್ಲಿ ಗಂಭೀರವಾದ ಬೆಳವಣಿಗೆಗಳು ಆಗುತ್ತಿರುವ, ಅಲ್ಲಿ ಕೆಲಸ ಮಾಡುವ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ತಟ್ಟುತ್ತಿರುವ ಸಮಯ. ಆದರೆ ನೋಡಿ, ಒಂದೇ ಒಂದು ಲೇಖನ ಆ ವಿಭಾಗದಲ್ಲಿ ಬಂದಿಲ್ಲ. ಈ ವಿಚಾರಕ್ಕೆ ತಮಗನ್ನಿಸಿದ ಕಾರಣಗಳನ್ನು ಮಿತ್ರರು ಕಾಮೆಂಟ್ ಬಿಡುವುದರ ಮೂಲಕ ಹಂಚಿಕೊಳ್ಳಬಹುದು. ನಾನು ಸದ್ಯಕ್ಕೆ ಅದರ ಬಗ್ಗೆ ನನಗನ್ನಿಸಿದ್ದನ್ನು ಬರೆಯದಿರಲು ತೀರ್ಮಾನಿಸಿದ್ದೇನೆ. ನಮ್ಮ urban ಸಮಸ್ಯೆಗಳ ಕುರಿತಾದ ಚರ್ಚೆಗಳು ಮತ್ತು ಚಳವಳಿಗಳು ಹೇಗೆ ಮೊಳಕೆ ಒಡೆಯುವುದರಲ್ಲಿಯೆ ಸೋಲುತ್ತಿವೆ ಎನ್ನುವ ಆಲೋಚನೆಯೊಂದಿಗೆ ಅದನ್ನು ಅಲ್ಲಿಗೇ ಬಿಡುತ್ತೇನೆ. ಅನುಸಂಧಾನಕ್ಕೆ ಅವಸರವಿಲ್ಲ!

ಗ್ರಾಮ-ರೈತ-ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಲೇಖನಗಳು ಬಂದಿವೆ. ಅವುಗಳ ಪೂರ್ಣಪಾಠ ಇಲ್ಲಿವೆ:


ಪ್ರತಿ ವಿಷಯಕ್ಕೂ ಗರಿಷ್ಠ 6 ಲೇಖನಗಳಿಗೆ ಬಹುಮಾನ ಇರುವುದರಿಂದ ಮೇಲಿನ ಎಲ್ಲಾ ಲೇಖನಗಳಿಗೂ ಈಗ ನಗದು ಬಹುಮಾನ ಕೊಡಲಾಗುತ್ತದೆ. ಮೊದಲ ಬಹುಮಾನ ರೂ. 2500 ಮತ್ತು ಪ್ರೋತ್ಸಾಹಕರ ಬಹುಮಾನ ರೂ. 1000. ವಿವರಗಳನ್ನು ಫೆಬ್ರವರಿ 15 ರಂದು ಪ್ರಕಟಿಸಲಾಗುತ್ತದೆ.

ಮೇಲಿನ ವಿಷಯಗಳ ಮೇಲೆ ಈಗಲೂ ಲೇಖನ ಬರೆಯ ಬಯಸುವವರಿಗೆ ಈಗಲೂ ಬರೆಯಲು ಅವಕಾಶವಿದೆ. ಅವುಗಳನ್ನು ಅಂದಂದೇ ಪೂರ್ಣವಾಗಿ ವಿಚಾರ ಮಂಟಪದಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಅವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಮತ್ತೊಮ್ಮೆ ಈ ವಿಷಯಕ್ಕೆ ಪ್ರಚಾರ ಕೊಟ್ಟ, ಆಲೋಚಿಸಿದ, ಬರೆದ, ಎಲ್ಲರಿಗೂ ನಾನು ಕೃತಜ್ಞ.

No comments: